ನಾವ್ ಯಕ್ಷಗಾನ ಬಯಲಾಟ ಆಡಿದ್ ಕಥಿ - ಭಾಗ ೧
NATARAJA UPADHYA·24 MARCH 2016 reads
Photo Courtesy: Sudesh Shetty, Brahmavara
ನಂಗ್ ೨ನೇ ಕ್ಲಾಸ್ ಮುಗ್ದ್ ಬೇಸ್ಗೆ ರಜದಲ್ ಆದ್! (ಅಂದಾಜ್ ೧೯೭೧).
ನಮ್ ಪಕ್ಕದ್ಮನಿ ಗಣಪಯ್ಯ ಉಪಾಯ್ದರ್ ಮನಿಯವ್ರ್ ಆಟ ಆಡ್ಸ್ತ್ರ್ ಅಂತ್ ಸುದ್ದಿ! ನಾನ್ ಇನ್ನೂ ಆಟ ಅಂದ್ರ್ ಸರಿ ಗೊತ್ತಿಲ್ದವ! ಆಟ ನಾ ಸರಿ ಕಾಂಬ್ದ್ ನನ್ ಬದ್ಕಲ್ ಇದೇ ಮೊದ್ಲ್!!
ಆಟದ್ ದಿನ ಮನಿ ಹತ್ರ್ ಬೈಲಿಗ್ ಬಂದ್ ನಿಂತೆ, ಏನೂ ಗಲಾಟಿ ಇಲ್ಲದ್ ಒಂದ್ ಮೆರ್ವಣಿಗಿ ನಿಧಾನ ಹೊಳಿ ಸಂಕ ದಾಟಿ ಬತ್ ಇತ್, ಇಲ್ ಕಾಂಬುಕ್ ನಿಂತ್ ಕೇರಿಯವ್ರ್ ಗಲಾಟಿಯೇ ಜಾಸ್ತಿ ಇತ್, ಮಂದರ್ತಿ ಮ್ಯಾಳ ಅಂತ್ ಗೊತ್ತಾಯ್ತ್. ಮೆರ್ವಣಿಗೆ ಹತ್ರ ಬಂದಾಂಗ
ಕಾಂತೆ, ಸುಮಾರ್ ೩೦-೪೦ ಜನ ಇಪ್ರ್, ಒಂದಷ್ಟ್ ಜನ ಬೀಳಲ್ ಮಾಡಿದ್ ತೊಟ್ಲಿಗಂತ್ ದೊಡ್ ಪೆಟ್ಟಿಗೆ ಹೊತ್ತೀರ್,
ಮ್ಯಾಳದ್ ಪೆಟ್ಟಿಗಿ ಅಂತ್ ಗೊತ್ತಾಯ್ತ್!
ನಾ ಮನಿಗ್ ಹೋಯ್ ಮೀಯುದ್ ಇತ್ಯಾದಿ ನನ್ ಕೆಲ್ಸ ಮುಗ್ಸ್ಕಂಡ್ ಸುಮಾರ್ ೧೧ ಗಂಟಿಗ್ ಪಕ್ಕದ್ ಆಟ ಆಡ್ಸುವವ್ರ್ ಮನಿಗ್
ಹೋದೆ. ಹೆಚ್ಚಿನವ್ರ್ ಉದ್ದಕ್ ಚಾಪಿಲ್ ಬಿದ್ಕಂಡ್ ಮಲ್ಕಂಡೀರ್, ಮನಿ ಚಾವ್ಡಿ ಜಗಲೀಲ್ ಸುಮಾರ್ ಜನ,
ಇತ್ ಹೆಬ್ಬಾಗಿಲ್ ಚಾವ್ಡಿಲ್ ಸ್ವಲ್ಪ ಜನ! ಮಲ್ಕಂಡವ್ರಿಗ್ ತೊಂದ್ರಿ ಕೊಡ್ಬಡಿ ಅಂತ್ ದೊಡ್ಡವ್ರ್ ಕಣ್ ಕೈ ಬಾಯ್ ಸನ್ನಿ ಮಾಡಿ ಹೇಳದ್ದಕ್ ದೂರದಿಂದ ಎಲ್ಲಾ ಕಂಡದ್, ಅಲ್ಲೇ ಹತ್ರ ಅಶ್ವಥ್ ಮರದ್ ಕೆಳ್ಗ್ ಮೂರ್ ಮೂರ್ ಕಲ್ ಇಟ್ಟ್ ದೊಡ್ಡ್ ಒಲಿಗ್ಳನ್ ಮಾಡಿ ಅಡ್ಗಿ ತಯಾರಿ ಆತ್ ಇತ್,
ಮ್ಯಾಳದ್ ಅಡ್ಗಿ ಭಟ್ರೇ ಮಾಡುದ್, ಅಮ್ಮ ಹೇಳು ನಳಪಾಕ ಅಂಬುದ್ ನೆನಪಾಯ್ತ್! ನಮ್ಮ್ ಕಣ್ ಎಲ್ಲ ಅಂಗ್ಳದ್ ಮೇಲ್ ಹೋಯ್ತ್,
ಜಾಗವೇ ಇಲ್ದಿದ್ದಾಂಗ್ ಮ್ಯಾಳದ್ ಅಸ್ಟೂ ವ್ಯಾಷದ್ ಬಟ್ಟಿ,
ಪಟ್ಟಿ ಬಿಸ್ಲಲ್ ಒಣಸುಕ್ ಒಂದಿಬ್ರ್ ಮ್ಯಾಳದ್ ಪೆಟ್ಗಿಯಿಂದ್ ತೆಗ್ದ್ ತೆಗ್ದ್ ಹರಡತಿದ್ರ್, ನ್ಯಾಲಿಲ್ ನೇತಾಕ್ತಿದ್ರ್,
ವ್ಯಾಷದ್ ಸಾಮಾನ್ ಎಲ್ಲ ಸಲ್ಪ್ ಹಳ್ತ್ ಆದ್ರೂ ಕನ್ನಡಿ ಕನ್ನಡಿ ಇದ್, ಚಿನ್ನದ್ ಜರಿ ಇದ್ ಹೊಳಿತ್ತಿತ್, ಅದನ್ನೇ ಕಾಂತಾ ನಿತ್ಕಂತ್!
ಮತ್ ಊಟಕ್ ಮನಿಗ್ ಬಂದವ್ರ್ ಕಾಂಬುಕ್ ಹೋದ್ ಸಾಯಂಕಾಲ ಆರ್ ಘಂಟಿಗೆ, ಗದ್ದಿಲ್ ಕೇಳಿ ಹೊಡಿವ್ ಚಂಡಿ ಶಬ್ದ ಕೇಂತ್ ಇತ್, ಗದ್ದಿಲ್ ಎಂತ್ ಇತ್ ಅಂತ್ ನಮ್ಗ್ ಗೊತ್ತಿಲ್ಲ, ಯಾರೂ ಕರ್ಕಂಡೂ ಹೋಯಿಲ್ಲ, ಇಲ್ ಆಟ ಆಪೋರ್ ಮನಿಗ್ ಬಂದ್ರೆ,
ಎಲ್ಲರಿಗು ಜೀವ್ ಬಂದ್ ಎದ್ದ್ ಕೂತಿರ್! ಚಾಪಿ ಮ್ಯಾಲೇ ಕೂತಿದ್ರ್ ಆದ್ರ್ ಲವಲವಿಕಿ ಅಷ್ಟ್ ಇಲ್ಲ,
ಕೆಲವ್ರ್ ಎಲಿ ಅಡಿಕಿ ಹಾಕ್ಕಂಡ್ ಜಗೀತಾ ಜಾನ್ಸ್ತಾ ಕೂತಿರ್! ಹೆಚ್ಚಿನವ್ರ್ ಕಪ್ ಬಣ್ಣ, ಎಲ್ಲಾ ದೊಡ್ಡ್ ಹಣಿ ಕಾಂಬಂಗ್ ಹೆಂಗ್ಸರಾಂಗ್ ಒಂದ್ ಮುಡಿ ಜುಟ್ ಬಿಟ್ಕಂಡ್ ಕೂತಿರ್,
ಕೆಲವ್ರ್ ಎಣ್ಣಿ ಹಾಕಿ ಕೂದ್ಲ್ ಬಾಚ್ಕಂಡ್ ಕಟ್ಕಂತಿದ್ರ್! ಇತ್ ಹೆಬ್ಬಾಗಿಲ್ ಬದಿ ಒಂದಷ್ಟ್ ಜನ ರಾತ್ರಿ ಉಂಬುಕ್ ಅಂಗಳದಲ್ ಕೂತಿರ್,
ಬಾಳಿ ಎಲಿಲ್ ಕೊಚ್ಚಕ್ಕಿ ಗಂಜಿ ಸುರ್ದ್ರ, ಕೆಂಪ್ ಕಾಯ್ ಗೊಜ್ ಹಾಕಿರ್, ಉಪ್ ಹಾಕಿರ್, ಉಂಬವ್ರ್ ಎಲ್ಲಾ ಸರೀ ಸುರ್ದ್ ಸುರ್ದ್
ಉಂಡ್ರ್, ನಮ್ಗೂ ಉಂಬಾಂಗ್ ಅನ್ಸ್ತ್, ಗಂಜಿ ಚಟ್ನಿ ಪರಿಮಳದಲ್, ಕತ್ಲಿ ಆಪು ಸುರುವಾಯ್ತ್, ಆಟಕ್ ಹೋಯ್ಕಲೆ, ಮನಿಗ್ ಬಂದೆ.
ರಾತ್ರಿ ೯ ಗಂಟಿ ಒಳ್ಗೇ ಹೊಳಿ ಬದಿ ಇಪ್ ಗದ್ದಿಲ್ ರಂಗಸ್ಥಳ ಇದ್ದಲ್ ಹೋಯ್ ಮುಂದ್ ಹೋಯ್ ಕೂತ್ಕಂಡದ್, ಲೈನಿಂದ್ ತಕ್ಕಂಡದ್ ಕರೆಂಟ್ ಬೆಳ್ಕ್ ಟೂಬ್ಲೈಟಿದ್ ಇತ್, ಒಂದೆರೆಡ್ ಪೆಟ್ರೊಮ್ಯಾಕ್ಸ್ ಕೂಡಾ ಇತ್ (ಕರೆಂಟ್ ಹೋರೆ), ಯಾರೋ ಅದ್ಕ್ ಆಗಾಗ್ಳಿಗ್ ಪುಸ್ ಪುಸ್ ಅಂತ ಗಾಳಿ ಹಾಕುವಾಗ್ಳಿಗ್ ಅವ್ರ್ ಕುಂಡಿನೂ ಮೇಲೆ ಕೆಳ್ಗ್ ಹೋಪುದ್ ಕಾಂಬುವಷ್ಟ್
ಪುರ್ಸೊತ್ ನಂಗೆ. ರಂಗಸ್ಥಳದ್ ಆಚಿಈಚಿ ಎಣ್ಣಿ ಹಾಕಿದ್ ದೊಡ್ ಕಬ್ಣದ್ ಹಣತಿಲ್ ನೆಣಿಲ್ ದೀಪ ಜೋರ್ ಉರೀತ್ ಇತ್. ರಂಗಸ್ಥಳ ಅಂದ್ರ್ ನಾಲ್ಕ್ ಕಂಬ ನಟ್ ಮಾವಿನ್ ತುಂಡಿ ಅಡ್ಡ ಕಟ್ಟಿದ್, ಹಿಂದ್ ಒಂದ್ ಹಡಿಮಂಚ, ಈ ಬದಿಲ್ ಚಂಡಿಯವ್ರ್ ಕೂತಿರ್, ನಾವ್ ಹೋಯ್ ಕೂತ್ಕಂಬಷ್ಟಕ್ ಒಬ್ರ್ ಭಾಗವತ್ರ್ ಬಂದ್ ಕೂತ್ ಸಂಗೀತ ಹೇಳು ಸುರುಮಾಡಿರ್, ಚಿನ್ನದ್ ಗುಂಡಿನ್ ಸರ,
ಕೆಂಪ್ ಮುಂಡಾಸ್, ಕಿವಿಗ್ ಚಿನ್ನದ್ ದೊಡ್ ಟಿಕ್ಕಿ, ಕೈಗ್ ಬೆಳ್ಳಿ ಕಡ್ಗ, ಬಿಳೀ ಅಂಗಿ ಮತ್ ಧೋತಿ, ಕಣ್ಣ್ ಅಂಚೂರ್ ವಡ್,
ಸ್ವರ ಸ್ವಲ್ಪ ಗೊಗ್ಗರ್, ನಾವ್ ಮಕ್ಳಿಗೆಲ್ಲ ನಗಿ ಬಂದ್ ಬಾಗ್ವತ್ರಿಗ್ ಕುಸಾಲ್ ಮಾಡ್ತಾ ಕೂತ್ಕಂತ್,
ನಮ್ಮನ್ ಯಾರ್ ಗಮನಿಸಿಯವ್ರೇ ಇಲ್ಲ, ಇಲ್ದೀರ್ ಒಂದ್ ಬೈಗಳ ಸಿಕ್ಕೇ!
(ಅವರು ಮಹಾನ್ ಭಾಗವತ ವಿಠಲ್ ಗೋರ್ಪಾಡಿಯವರು ಎಂಬುದು ನಮ್ಗ್ ಗೊತ್ತಿಲ್ಲ, ಅವರ ಯೋಗ್ಯತೆ ನಮಗೇನು ಗೊತ್ತು,
ಅವರ ಸ್ವರ ಆವಾಗಲೇ ಕೈಕೊಟ್ಟಿತ್ತು, ನಮ್ಮ ಮಕ್ಕಳಾಟಿಕೆಯ ಮಂಗನಾಟಕ್ಕೆ ಅವರಲ್ಲಿ ಕ್ಷಮೆ ಕೇಳ್ತೇನೆ!)
ಭಾಗ್ವತ್ರ್ ಪಕ್ ಮದ್ಲಿಗಾರ್ರ್, ಭಾಗವತ್ರ್ ಮತ್ ಮದ್ಲಿಯವ್ರ್ ಮಧ್ಯ ಹಿಂದೆ ಹಾರ್ಮಣಿಯವ್ನ್ ಒಬ್ಬ,
ಅವ ನಿದ್ದಿ ಕೂರ್ತಾ ಬಾರ್ಸುವಾಂಗ್ ಇತ್ತ್, ಪದ್ಯ ಸುರುವಾಗ ಭಾಗ್ವತ್ರ್ ಹಾರ್ಮಣಿ ಕೈಯಲ್ ದೂಡಿ ದೂಡಿ ಜೋರ್ ಮಾಡಿ ಕೊಡ್ತಿದ್ರ್, ನಿದ್ದಿ ಕೂರುವವ ಸಲ್ಪ ನೆಟ್ಟಗಾಗ್ತಿದ್ದ, ಪುರ್ಸೊತ್ ಇಲ್ಲಂಬಾಂಗ್ ಹಾರ್ಮಣಿಗ್ ಗಾಳಿ ಹಾಕ್ತಿದ್ದ, ಅದ್ ಉಂಯ್ ಉಂಯ್ ಅಂತ್ ಬೊಬ್ಬಿ ಹಾಕಿ ಭಾಗ್ವತ್ರ ಬೊಬ್ಬಿಗ್ ಸರಿ ಹೋತಿತ್! ಭಾಗ್ವತ್ರ್ ಹಿಂದ್ ಪರ್ದಿ ಇಲ್ಲ, ಹಡಿಮಂಚದ್ ಸುತ್ ನಿಂತ್ ಜನವೇ ಪರ್ದಿ ಇದ್ದಾಂಗ್! ಈ ಜನಿಗೂ ಬ್ಯಾಜಾರ್ ಇಲ್ಲ, ಇಡೀ ರಾತ್ರಿ ನಿತ್ಕಂಡೇ ಕಾಂಬುವವರ್,
ಅದೂ ವ್ಯಾಷದ್ ಮುಕ್ಳಿ ಕಾಂತಾ ಹಿಂದಿಂದ, ಕಾಲ್ ನೋವ್ ಬಪ್ಪಾಂಗ್! ಆಟ ಮುಂದುವರ್ದಾಂಗ್ ಹಡಿಮಂಚದ್ ತುದಿಗ್ ಜಾಗ ಸಿಕ್ಕಲ್ ಎಲ್ಲ ಹಾರ್ಮಣಿಯವ್ನ್ ಸುತ್ತ ೩-೪ ಜನ ಬೂಲ ಬೆಚ್ಚದ್ ಬಿಟ್ರೆ
ಮತ್ತೆಲ್ಲರೂ ನಿತ್ಕಂಡೇ ಕಾಂಬುದ್!
ನಾವ್ ರಂಗಸ್ಥಳದ್ ಮುಂದ್ ಮಕ್ಳೇ ಒಂದ್ ಐವತ್ ಜನ, ಕುತ್ಗಿ ಮ್ಯಾಲ್ ಮಾಡಿ ಕಂಡ್ ಕುತ್ಗಿ ನೋವ್ ಬಂದ್ರೂ ಕಾಂಬುದ್
ಬಿಡುದಿಲ್ಲ. ಮೊದ್ಲ್ ಒಬ್ಬ ಕ್ವಾಡಂಗಿ ಬಂದ, ಕ್ವಾಡಂಗಿ ಆದ್ರೂ ಪಾಪದವನಾಗ್ ಬಂದ್ ಒಂದಿಷ್ಟ್ ಅವ್ನಿಗ್ ಕುಸಿ ಬಂದಾಂಗ್ ಕುಣ್ದ
ಹೋದ, ಅವನ್ ನಾಮವೇ ಎದ್ ಕಾಣ್ತಿತ್! ಕಡಿಗ್ ಎರ್ಡ್ ಬಾಲಗೋಪಾಲ್ರ್ ಬಂದ್ರ್, ಸಣ್ ಸಣ್ಣವ್ರೇ,
ಒಟ್ಟಿಗೆ ಕುಮ್ಚಟ್ ಹಾರ್ಕಂತ ಕುಣ್ದ್ರ್, ಗಣಪ್ತಿ ಪೂಜಿ ಮಾಡಿರ್, ಮುದ್ ಮುದ್ದಾಗಿದ್ರ್, ಆದ್ರ್ ಮುಖದ್ ಮೇಲ್ ಒಂದ್ ಭಾವ್ನಿ ಇಲ್ಲ,
ಮಾಡುದನ್ ಅಚ್ಚ್ಕಟ್ಟಲ್ ಮಾಡಿ ಹೋರ್. ಅವ್ರಾದ್ರ್ ಮೇಲ್ ಎರಡ್ ಸ್ತ್ರೀವೇಷದವ್ರ್ ಬಂದ್ರ್, ಒಂದೇ ಬಣ್ಣದ್ ಸೀರಿ ಉಟ್ಟೀರ್,
ರಂಗಸ್ಥಳದ್ ಸುತ್ ಒಟ್ಟಿಗೆ ಉರುಟ್ ಉರೂಟ್ ಕುಣುದ್, ಬಾರೋ ರಂಗ ಅಂತ ಕೈ ಮಾಡಿ ಕರುದ್, ನಾವ್ ಕೂತಿತ್ ಅಲ್ಲ,
ಹಿಂತಿರಿಗಿ ನಾವ್ ಕಾಂಬುದ್ ಯಾರ್ರನ್ ಕರೀತ್ರ್ ಅಂತ್, ಕರ್ದ್ ಕೂಡ್ಲೆ,
ಕೊಕ್ಕನಕ್ಕಿ ಹಾಂಗ್ ಕುತ್ತಿಗೆ ಆಬದಿ ಈಬದಿ ಮಾಡಿ ಶ್ಯಾಳಿ ಮಾಡುದ್, ಕುಣು ಮದ್ಲ್, ಅವ್ರ್ ಸೀರಿ, ಸೆರಗ್, ಕೈ ಬಳಿ ಪದೇ ಪದೇ ಸರಿ ಮಾಡ್ಕಂಬದ್ ಇವೆಲ್ಲ ಒಂದ್ ವಿಶೇಷ ಆಯ್ ಕಾಂತ್, ಅದೂ ಸುಮಾರ್ ಸರಿ, ಕಾಲ್, ಮುಂಗೈ ಕಂಡ್ರ್ ಸರೀ ಗೊತ್ತಾತ್ ಗಂಡ್ಸ್ರೇ ವ್ಯಾಷ ಮಾಡಿದ್ ಅಂತ, ಮುಖ ಮತ್ ಶ್ಯಾಳಿ ಮಾತ್ರ ಹೆಂಗಸ್ರ್ ಹಾಂಗೆ.
ಸ್ತ್ರೀವೇಷದವ್ರ್ ಒಳ್ಗ್ ಹೋದ್ ಮ್ಯಾಲ್ ಭಾಗವತ್ರ್ ಸ್ವರ ಏರ್ತ್, ಒಡ್ಡೋಲಗ ಸುರು ಆಯ್ತ್,
ಒಂದ್ ಮ್ಯಾಳದ್ ಪೆಟ್ಟಿಗೆ ಹೊರುವವರೇ ಇಬ್ರ್ ಮಂಡ್, ಗಡಿಬಿಡಿ ಬಿಳಿ ಟವೆಲ್ ಮುಂಡಾಸ್, ಗಿಡ್ಡಕೈ ಅಂಗಿಲ್ ಬಂದ್ ಪರ್ದಿ ಹಿಡ್ದ್ರ್, ಅದರ್ ಮೇಲ್ ಮಂದರ್ತಿ ಮ್ಯಾಳ ಮತ್ತು ಅಮ್ಮನವ್ರ್ ಹೆಸ್ರಿತ್, ಒಡ್ಡೋಲಗದವ್ರ್ ಪರ್ದಿ ಹಿಂದ್ ಒಬ್ಬೊಬ್ಬರೇ ಬಂದ್ ಕುಣ್ದ್ರ್,
ಕಡಿಗ್, ಪರ್ದಿ ಉದ್ದ ಮಾಡಿ ಐದೂ ಜನ ಪರ್ದಿ ಹಿಂದ್ ಕುಣ್ದ್ ನಾಟಕ ಮಾಡಿ ಪರ್ದಿ ಒಂದೇ ಸರಿ ಕೆಳ್ಗ್ ಬಂದ್ ಎಲ್ಲ ಮುಖ ತೋರ್ಸಿರ್, ಸರೀ ಎಲ್ಲರನ್ ಕಾಂಬುದೊರ್ಳಗೆ ಪರ್ದಿ ಮ್ಯಾಲ್ ಮಾಡಿ ಮತ್ತಷ್ಟ್ ಕುಣ್ದ್, ಮತ್ತ್ ಪರ್ದಿ ಕೆಳಗ್ ಮಾಡ್ಕಂಡೇ ಕುಣ್ದ್ರ್ , ಭಾಗ್ವತ್ರ್ ಚಂದ್ರಂಗೆ ಅಂತ್ ಪದ ಹೇಳ್ವಾಗ್ ಚೆಂದ್ರನ್ ಚಿತ್ರ ಬಿಡ್ಸಿ ಆಕಾಸ ತೋರ್ಸಿರ್, ಮ್ಯಾಲ್ ಕಾಂತ್, ಚಂದ್ರ ಇರ್ಲಿಲ್ಲ,
ಅಮಾಸಿ ಹತ್ರ ಬಂದಿತ್. ಕಡಿಗೆ ಪರ್ದಿ ತೆಗೆದ್ ಒಬ್ಬೊಬ್ಬರೇ ತೈ ತೈ ತೈ ಅಂತ್ ಕುಣ್ದ್ ಗದ್ದಿ ರಂಗಸ್ಥಳ ಇನ್ನಷ್ಟ್ ಸಮತಟ್ ಮಾಡಿರ್. ಕಡಿಗ್ ಎಲ್ಲಾ ಕುಣ್ತ ಮುಗ್ದ್ ರಾಜ ಸಿಂಹಾಸನದ್ ಮೇಲ್ ಕೂತ್ಕಂಡ, ಅವ ಕೂತ್ಕಂಡದ್ ಒಂದ್ ಮರದ್ ಸಣ್ಣ್ ಗಾಡಿ,
ಹಗ್ಗ ಹಾಕಿ ಕಟ್ಟಿ ಇಟ್ಟದ್, ಸಲ್ಪ ಬೂಲ ಹಾಂಗ್ ಹೀಂಗ್ ಮಾಡಿರೆ ಅಲ್ಗಾಡತ್, ಅರೆ, ಇಷ್ಟ್ರವರಿಗ್ ಇದನ್ ಸರಿ ಕಾಣ್ಲೇ ಇಲ್ಲಲೇ
ಅಮಿಗೆ. ರಾಜ ಮಾತಾಡಿ ಹೋದ್ ಮ್ಯಾಲೆ, ರಕ್ತಚಂಗ ಅಂಬ್ ಒಬ್ಬ ರಾಕ್ಷಸ ಬಂದ್, ಭಾರೀ ಹೆದ್ರಿಕೆ ಹುಟ್ಸುವ್ ವೇಷ,
ಮಕ್ಕಳನ್ನೂ ಕುಣಿತಾ ಸಲ್ಪ ಹೆದ್ರಿಸಿಯಾ. ಒಳ್ಳೆ ಗತ್, ಸ್ವರ (ಕೋಡಿ ಶಂಕರ ಕಲಾವಿದ ಇರಬಹುದು). ನಾರದ್ರು ಬಂದ್ರು, ಮೊದ್ಲ್ ಬಂದ್ ರಾಜನಿಗೆ ಒಳ್ಳೆ ಹೆಂಡ್ತಿ ಇತ್ ತಕಂಬಾ ಅಂತ್. ನಂಗ್ ವಿಚಿತ್ರ ಅನ್ಸ್ತ್! ಈ ನಾರದ್ರು ನಾವ್ ಬ್ರಾಂಬ್ರಿಗಿಂತ್ ಮ್ಯಾಲ್
ಇರಕ್, ಬೇರೆ ಮತ್ ಪದೇ ಪದೇ "ನಾರಾಯಣ ನಾರಾಯಣ" ಅಂತ್ತ್ರ್, ಈ ಅಧಿಕ ಪ್ರಸಂಗ ಯಾಕ್ ಬೇಕ್ ಅವ್ರಿಗೆ ಅಂತ್, ಬಹುಶ:
ರಾಕ್ಷಸ ಅಲ್ಲ್ ಹೋಯ್ ಸಾಯ್ತನಾ ಅಂತ ಅಂದ್ ಹೇಳುಹಾಂಗೂ ಇಲ್ಲಾ, ಈ ರಕ್ತಚಂಗನೇ ಆ ರಾಜನಿಗಿಂತ್ ಗಟ್ಟಿ ಇದ್ದ.
ಸರಿ ರಕ್ತಚಂಗನೇ ಗೆದ್ದ, ರಾಜ ಸತ್ ಬಿದ್ದ, ರಾಣಿ ಅರ್ಮನಿ ಬಿಟ್ ಓಡೀಳ್, ಒಂದ್ ಮರ್ಕಿಳ್ ಕಾಣಿ,
ನಾವೂ ಕೂಡ ಮಕ್ಳ್ ಅಷ್ಟ್ ಮರ್ಕುದಿಲ್ಲ, ನಾವ್ ಮರ್ಕಿರೆ ಅರ್ಧಕ್ಕರ್ಧ ನಾಟ್ಕವೇ,
ಇವ್ಳ್ ನಾಟ್ಕದಲ್ಲಿದ್ರೂ ಆ ನಮೂನಿ ಮರ್ಕಿದ್ ಕಂಡ್ ಬ್ಯಾಜಾರ ಆಯ್ತ್, ನಾರದರ್ ಮೇಲ್ ಸುಮಾರ್ ಸಿಟ್ ಬಂತ್.
ಆಟ ಮುಂದುವರಿತ್, ನಾರದರ್ ಮತ್ ಬಂದ್ರ್ ರಕ್ತಚಂಗನಲ್, ನೋಡ್ ಆ ರಾಣಿ ಇನ್ನೂ ಅಲ್ ಕಾಶಿಲ್ ಇದ್ದಾಳ್, ಬಸ್ರಿ ಈಗ,
ಮಗು ಹುಟ್ಟುದ್ರಲ್ ಲಗಾಡಿ ತೆಗಿ ಅಂತ್. ಈ ನಾರದ್ರ್ ಈ ಪಾಟಿ ಡೇಂಜರ್ ಮನ್ಸ ಅಂತ್ ಗೊತ್ತೇ ಇರ್ಲ್ಲಿಲ್ಲ!
ಈ ಸರಿ ರಕ್ತಚೆಂಗ ಅವ್ನ್ ತಂಗೀನೂ ಕರ್ಸಿಯ, ಅವ್ಳ್ ರಕ್ಕಸಿ, ರಕ್ತಚೆಂಗನಿಗಿಂತ ದೊಡ್ಡ್ ಸ್ವರ, ಆದ್ರ್ ಯಾಕೋ ಅಷ್ಟ್ ಹೆದ್ರಿಕಿ ಆತ್ತಿಲ್ಲ,
ಬಹುಶ: ಅವ್ಳಿಗಿಂತ್ ದೊಡ್ಡ್ ಮೊಲಿ ಅವಳ್ ಎದಿ ಮೇಲ್ ಇಪ್ಪುದ್ ತಮಾಶಿ ಆಯ್ ಕಾಂತಿತ್.
ಇಬ್ರೂ ಕಾಶಿಗ್ ಹೋಯ್ ರಾಣಿನ್ ಎರ್ಡೂ ಬದಿಯಿಂದ್ ಬೆರ್ಸಕಂಡ್ ಹೋರ್, ರಾಣಿ ಕೈಯಲ್ಲೇ ಪಿಂಡ ಹಿಡ್ಕಂದ್ ಸುಮಾರ್
ತಪ್ಸ್ಕಂಡ್ಳ್, ನಾವೂ ಕೂಗಿ ಕೂಗಿ ಅಲ್ ಓಡ್ ಇಲ್ ಓಡ್ ಅಂತ್ ಹೇಳಿ ಅಳಿಲುಸೇವಿದ್ ಸಹಾಯ ಮಾಡ್ತ್, ಆದ್ರ್ ಪಾಪ,
ಇಬ್ರಿಬ್ರ್ ಅಡ್ಡ ಹಾಕಿ ಸಿಕ್ ಹಾಕಂಡ್ಲ್, ಅವ್ರ್ ಎಳ್ದ್ರ್, ಇವ್ಳ್ ಪಿಂಡನ್ ನೆಲಕ್ ಹಾಕಿಳ್, ಎಂತ ದುರಂತ!
ಆಶ್ಚರ್ಯ! ಪಿಂಡ ಇಬ್ಬಡ್ಲ್ ಹಣ್ ಒಡೆದ್ ಹೋದಾಂಗ್ ಹೋದ್ರೂ ಒಬ್ಬ ರುದ್ರಕೋಪ ಅಂಬವ ಹುಟ್ಟಿಬಂದ, ಅವ ಮಗು ಆರೂ ಕಾಂಬುಕ್ ೧೩-೧೫ ವರ್ಷದವ್ನ್ ಹಾಂಗ್ ಇದ್ದ,
ಒಳ್ಳೆ ಶಿವಭಕ್ತನಾಂಗ್ ಅಡ್ಡನಾಮ ಹಾಕಂಡ್ ಚಂದಿಪ್ಪ, ಒಂದ್ ಕೊಣ್ದ ಕಾಣಿ ಸಲ್ಪ ಅಲ್ಲ, ರಕ್ತಚಂಗನ್ ಕೊಂದೇ ಹಾಕ್ಯ,
ಅವನ್ ತಂಗಿ ಕ್ಷಮೆ ಕೇಳಿ ಅವನ್ ಆಳ್ ಆದ್ಳ್, ಮಗ ಅಮ್ಮ ಕಣ್ಣೀರ್ ಹಾಕ್ಕಂತ ಒಟ್ಟಾದಕ್ಕೆ ಒಂದ್ ನೆಮ್ಮದಿ ಬಂತ್,
ಈ ನಾರದ್ರ್ ಹೆದ್ರಿಕೆ ಸಲ್ಪ ಕಮ್ಮಿ ಆಯ್ತ್!
ನಾನ್ ಆಟಕ್ ಕೂತವ ಮತ್ ಏಳ್ಲೇ ಇಲ್ಲ, ಒಂದ್ ಸರಿ ದೂರ ಗದ್ದಿ ಅಂಚಿಗೆ ಸಾರ ಹಾಕಿ ಬಂದದ್ ಬಿಟ್ರೆ, ಚೌಕಿಗೂ ಹೋಯಲ್ಲ,
ಗರ್ಗರ್ ಮಂಡ್ಲ, ಮುಂಡಕ್ಕಿ ನೆಲ್ಗಡ್ಲಿ ಅಂಗ್ಡಿ ಎಲ್ಲಾ ಇದ್ರೂ ಸೀದಾ ಬಂದ್ ಕೂತ್ಕಂಡೆ, ಈಗ ರುದ್ರಕೋಪ ದೊಡ್ಡವ ಆಯಿದ್ದ,
ಸಲ್ಪ ಹಳ್ತಾದಂಗ್ ಕಂಡ, ಆದ್ರೆ ಒಳ್ಳೆ ಜಾಪ್, ಸಲ್ಪ ಒಡೆದ್ ಹೋದ್ ಸ್ವರ, ಎಲಿ ಅಡ್ಕಿ ಹಾಕಿದ್ ಬಾಯ್, ಕಾಲ್ ಮೇಲ್ ಕಾಲ್ ಹಾಕ್ಕಂಡ್ ಒಂದ್ ಕಾಲ್ ಸಣ್ಣಕ್ ಕುಣ್ಸ್ಕಂಡ್ ಸಣ್ಣ ನಗಿ ಇಟ್ಕಂಡ್ ಜಾಪಲ್ ಮಾತ್ ಆಡ್ತ, ಕರೆಂಟ್ ಹೋಗಿ (ಲೋಕಲ್ ಫ್ಯೂಸ್ ಹೋಗಿದ್ದಿರಬಹುದು) ಪೆಟ್ರೊಮ್ಯಾಕ್ಸ್ ದೀಪದಲ್ ಅವ್ನ್ ವೇಷ ಲಾಯ್ಕ್ ಕಾಂತಿತ್, ಅಯಸ್ಕಾಂತದ್ ಹಾಂಗ್ ಒಂದ್ ಎಳ್ತ ಇತ್ ಅವ್ನ್ ವ್ಯಾಷ ಕಾಂಬುದ್ರಲ್! ಹತ್ರ್ ಇದ್ದವ್ರ್ ಹೇಳ್ದ್ರ್, ಅವ ಮೊಳವಳ್ಳಿ ಹೆರಿಯ,
ದೊಡ್ಡ್ ಕಲಾವಿದ ಅಂತ್! ಜಾಪಲ್ಲಿ ಪದ್ಯ ಎತ್ತಿ ಕುಣದ್ ಎಲ್ಲಾ ಲಾಯ್ಕಿತ್,
ಎದ್ರ್ ಒಬ್ಳ್ ಚಿತ್ರಾಕ್ಷಿ ಅಂತ್ ಗಂಧರ್ವ ಲೋಕದಿಂದ ಬಂದ್ವಳು (ಕಲಾವಿದ ಯಾರು ಗೊತ್ತಿಲ್ಲ, ಅರಾಟೆ ಇರಬಹುದು).
ಇಬ್ಬರೂ ಸೇರಿ ಶ್ಯಾಳಿ (ಶೃಂಗಾರ) ಮಾಡು ಸುರುಮಾಡಿದ್ರ್, ನಂಗ್ ರುದ್ರಕೋಪ ಹುಟ್ಟಿ, ರಕ್ತಚೆಂಗ ಸತ್,
ಗದ್ದಿಗ್ ಸಾರ ಹಾಕಿದ್ ನೆಮ್ಮದಿಲ್ ಇವ್ರ್ ಶ್ಯಾಳಿ ತಾಗ್ದೇ ಸಲ್ಪ ನಿದ್ದಿ ಕೂರ್ತ್!
ಒಂದ್ಸರಿ ಎಚ್ಚರ ಆಯ್ತ್, ಕರೆಂಟ್ ಬಂದಿತ್, ಭಾಗ್ವತರ್ ಬದ್ಲಾಗಿ ಆಟದ್ ಹೊಡ್ತ ಜೋರ್ ಇತ್, ಮೀನಾಕ್ಷಿ ಎಂಬುವವಳ್ ಬಂದಿದ್ಲ್,
(ಕೋಟ ವೈಕುಂಠ ಇರಬಹುದೇ?) ಕಸಿವೇಷ ಹಾಕ್ಕಂಡ್, ಸರೀ ಕುಣಿತಿದ್ಲ್, ಚೆಂಡಿಯವ್ರ್ ಹೊಟ್ಟಿಹೋಪಾಂಗ್ ಬಾರ್ಸ್ತಿದ್ರ್, ಒಳ್ಳೇ ಸ್ವರ,
ಮಿಡುಕುದ್ ಲಾಯ್ಕೆ, ಯಾವ್ ಗಂಡಿಗ್ ಕಮ್ಮಿ ಇಲ್ಲ, ಹೆಣ್ಣಿಗೂ ಕಮ್ಮಿ ಇಲ್ಲ, ಹೆಣ್ ಅಂದ್ರ್ ಹೀಂಗ್ ಇರ್ಕ್ ಅನ್ಸ್ತ್,
ಆ ಚಿತ್ರಾಕ್ಷಿ ಹಾಂಗ್ ಶ್ಯಾಳಿ ಮಾಡುರ್ ಬ್ಯಾಡ ಅನ್ಸ್ತ್ (ನಾ ನಿದ್ದಿ ಮಾಡಿ ಮೇಲ್ ಹಳೀ ಪ್ರಸಂಗದಲ್ ಮತ್ ಏನ್ ಏನ ಆಯ್ತ್,
ನಾ ಎಷ್ಟ್ ಹೊತ್ ನಿದ್ದಿ ಮಾಡ್ಯೆ ಎಲ್ಲ ಅಂತ್ ಕೇಂಬುಕೆ ಪುರ್ಸುತ್ತೇ ಆಯ್ಲಿಲ್ಲ). ಈ ಮೀನಾಕ್ಷಿ ಏನ್ ಕಮ್ಮಿ ಇಲ್ಲ,
ದೇವತೆಗಳ್ ಮೇಲ್ ಯುದ್ಧ ಮಾಡಿ ಗೆದ್ ಕಡಿಗ್ ಶಿವನ್ ಗಣದ್ ಮೇಲ್ ಯುದ್ಧ, ಎಲ್ಲಾ ಗಣ್ಗಳ್ ಬಂದ್ರ್,
ನಂದಿ ಬಂದಾಗ್ಳಿಗ್ ಕೋಡ್ ಹೊಯ್ದ್ ಹೊಯ್ದ್ ಹಾಕಿ ನಾವೆಲ್ಲ ಸ್ವಲ್ಪ ಚೆಲ್ಲಾಪಿಲ್ಲಿ ಆಯ್ತ್, ನಂದಿ ಸೋತ್ ಮಲ್ಕಂಡ್ ಮೇಲ್,
ವೀರಭದ್ರ ಬಂದ, ದೊಂದಿ ಹಿಡ್ಕಂಡ್, ಅವ್ನಿಗ್ ಮುಂಡಕ್ಕಿ ಬಾಳೆಲಿಗ್ ಹಾಕಿ ಕೊಟ್ರ್, ಸರಿ ಮುಕ್ಕಿ ತಿಂದ, ಏನೂ ಉಪ್ಯೋಗ ಬರ್ಲಿಲ,
ಅವನೂ ಸೋತ್ ಹೋದ, ಸುಬ್ರಹ್ಮಣ್ಯ ಬಂದ, ಸಣ್ಣಕ್ಕಿದ್ದ, ಅವ್ನತ್ರೂ ಆಯ್ಲಿಲ್ಲ, ಗಣಪತಿ ಬಂದ,
ಅವ ಬಪ್ಪೂ ರೀತಿಲ್ ಅವ್ನತ್ರೂ ಆತಿಲ್ಲೆ ಅಂತ್ ನಮ್ಗ್ ಮೊದ್ಲೇ ಗೊತ್ತಾಯ್ತ್!
ಕೊನೆಗ್ ಪರ್ದಿ ಅಡ್ಡ ಇಟ್ಟ್ ಬಂದ್ ನಿಂತ್ ಈಶ್ವರನೇ ಬಂದ, ಒಳ್ಳೇ ವ್ಯಾಶ, ಗತ್ತಿನ್ ಮಾತ್, ತೋರ್ ಬೆರ್ಳ್ ಆಕಾಶದಲ್ ಕೊಣ್ಸ್ತಾ,
(ಉಡುಪಿ ಬಸವ ಕಲಾವಿದ) ನಾ ಮಾತ್ ಎಂತ ಕಿಮಿಗ್ ಹಾಕ್ಕಂಡ್ಲ,
ಈಶ್ವರನ್ ಕುತ್ತಿಗ್ಲ್ ಎಷ್ಟ್ ಪ್ಲಾಸ್ಟಿಕ್ ರುಂಡ ಇತ್ ಲೆಕ್ಕ ಮಾಡ್ತ ಕೂತ್ಕಂಡೆ,
ಮತ್ ಆ ರುಂಡದ್ ಮುಖ ಕಣ್ಕಂಡ್ ಇವ್ರ್ ಯಾರೂ ನಮ್ಮೂರ್ ಬದಿ ಅವ್ರ್ ಅಲ್ಲ, ಎಲ್ಲಿನವ್ರ್ ಅಂತ್ ಆಲೋಚ್ನಿ ಮಾಡ್ತಾ ಕೂತ್ಕಂಡೆ,
ಕಡಿಗೂ ಮೀನಾಕ್ಷಿ ಸೋತ್ ಅವ್ರಿಬ್ರೂ ಮದಿ ಆಯಿತ್, ಮೀನಾಕ್ಷಿಗ್ ಈ ಈಶ್ವರ ಸಲ್ಪ ಹಳಬ ಅನ್ಸ್ತ್, ದೇವ್ರ್ ವ್ಯವಹಾರ,
ಮಾತಾಡುವಾಂಗಿಲ್ಲ! ಭಾಗ್ವತ್ರ್ ಮದ್ಲಿಯವ್ರ್ ಎದ್ ನಿತ್ಕಂಡ್ ಮಂಗಳ ಪದ್ಯ ಆಯಿ ಆಟ ಮುಗಿತ್.
ದಕ್ಕಿತೋ ದಕ್ಕಿತು ಅಂತ ವೀಳ್ಯ ಕೊಡುವತಿಗೆ ಸೂರ್ಯ ಮೂಡ್ತಿತ್,
ನಾವ್ ಮಂಡಿ ಧೂಳ್ ಕೊಡ್ಕಂತಾ ಮನಿ ಬದಿ ಕಾಲೆಳ್ಕಂಡ್ ಮೈ ಎಳ್ಕಂಡ್ ಹೋಯ್ತ್!
ಮ್ಯಾಳದ್ ಚೆಂಡಿ ಬಾರ್ಸುವವ್ರ್ ಊರ್ ಬಿಟ್ ಹೋರೂ ಕಿಮಿಯೊಳ್ಗ್ ಗಟ್ಟಿ ಚೆಂಡಿ ಬಾರ್ಸುದ್ ನಿಲ್ಲುಕ್ ಸುಮಾರ್ ದಿನ ಬೇಕಾಯ್ತ್!
------ ಮುಂದುವರಿದು ಮುಂದಿನ ಕಂತಿನಲ್ಲಿ ಮುಕ್ತಾಯ!

No comments:
Post a Comment