Monday, April 25, 2016

ಪರಶುರಾಮಸೃಷ್ಟಿಯ ನಿತ್ಯಕಥನ - ಪಾನಉ - ೦೧೨ - ದೊಂದಿ ಮಾನವರು

ಪರಶುರಾಮಸೃಷ್ಟಿಯ ನಿತ್ಯಕಥನ - ಪಾನಉ - ೦೧೨ - ದೊಂದಿ ಮಾನವರು

(ಹಿಂದೆ ದೊಂದಿಯಾಟದ ದೊಂದಿಯ ಸುತ್ತಲಿನ ಸೊಬಗನ್ನು ಈ ಕೆಳಗಿನ ಕೊಂಡಿಯಲ್ಲಿ ವರ್ಣಿಸಿ ಬರೆದ ನಂತರ ಅದರ ಮೆಲುಕು ಮತ್ತೆ ಇಲ್ಲಿ ಈ ರೀತಿಯಾಗಿ!


ದೀವಟಿಗೆಯ ಆಟ ದೊಂದಿಯಾಟವಾಯಿತು. ಮಂಗಳೂರಿನ ದೊಂದಿಯಾಟದ ಸುತ್ತ ವಾಟ್ಸ್ಯಾಪ್ ಸಮೂಹ ಹುಟ್ಟಿತು. ದೊಂದಿಯಾಟ ಬರುತ್ತಲೇ ಹೋಗುತ್ತಲೇ ಇರುವಾಗ, ಈ ಸಮೂಹದಲ್ಲಿ ಸಮಾನ ಮನಸ್ಕರ ಒಂದು ಸಂಘಟನೆ ರೂಪುಗೊಂಡು ಬೆಳೆಯುತ್ತಲೇ ಇದೆ, ಸಮಾನ ಅಭಿರುಚಿಗಳ ಸುತ್ತ ಮಾಹಿತಿ, ವಿಷಯ ವಿನಿಮಯ ಮತ್ತು ಚರ್ಚೆಗಳು ನಡೆಯುತ್ತಲೇ ಇರುವಾಗ ದೊಂದಿಯ ಸುತ್ತಲಿನ ಹೊಸ ಅರ್ಥಗಳ ಸಾಧ್ಯತೆಯನ್ನು ನಾ ಹುಡುಕಹೊರಟೆ. ಈ ನಿಟ್ಟಿನಲ್ಲಿ ನಾ ಕಂಡುಕೊಂಡದ್ದು, ಧ್ಯೇಯೋದ್ದೇಶಗಳಿಗಿಂತ ಹೆಚ್ಚಿನ ತುಡಿತ ಇಲ್ಲಿ ಸಮಾನ ಮನಸ್ಸು ಮತ್ತು ಹೃದಯದ್ದು, ಆದರ ಸುತ್ತಲೂ ಸಂಬಂಧಿಸಿದ ಎಲ್ಲಾ ಧನಾತ್ಮಕ ತುಡಿತಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ.

ಹಾಗಾಗಿ ನಾನು ದೊಂದಿಯ ಅರ್ಥ ಬಿಟ್ಟು, "ದೊಂದಿಮಾನವ" ನ ಪರಿಕಲ್ಪನೆಗೆ ಹೊರಡುವುದು ಅನಿವಾರ್ಯ.

"ದೊಂದಿ" ಗೆ ನಾನು ಕೊಟ್ಟ ಅರ್ಥ ಆಧ್ಯಾತ್ಮಿಕ ತಳಹದಿಯದ್ದು, ಆದರೆ ಅದಕ್ಕೂ ಮೀರಿದ್ದು. ಆಧ್ಯಾತ್ಮಿಕ ಅರ್ಥವನ್ನು ಸಾರಲು "ಜ್ಯೋತಿ" ಯಾ "ದೀಪ"ದ ಪರಿಕಲ್ಪನೆ ಸಾಕು, ಅದು "ಬೆಳಕು". ಆದರೆ ಇದು ದೊಂದಿ. ದೊಂದಿ ಬೆಳಕನ್ನೂ ಹೊಂದಿದ್ದು, ಅದನ್ನೂ ಮೀರಿದ್ದು. ದೀಪ ಸೌಮ್ಯದಲ್ಲಿ ಬೆಳಗಿದರೆ, ದೊಂದಿ ಹೊತ್ತಿ ಉರಿಯುವಂತಹದ್ದು. ದೊಂದಿಯ ಉರಿಯಲ್ಲೂ ಶಾಂತಿಯ ಜೊತೆಜೊತೆಗೇ ಜೀವನೋತ್ಸಾಹದ ದಣಿವರಿಯದ ನಾಟ್ಯದ ನಿರಂತತೆ ಇದೆ. ದೊಂದಿ ಬರೇ ಬೆಳಕನ್ನು ಕೊಡುವುದಲ್ಲ, ಉರಿಯುತ್ತಲೇ, ಉರಿಯನ್ನು ಹಚ್ಚುತ್ತಾ ಹೋಗುವುದು. ಬೆಳಕನ್ನು ಮೀರಿದ ಉರಿಯ ಜ್ವಾಲೆ ವಾಸ್ತವದ  ಕುರಿತಾಗಿ ಶರಣಾಗತಿಯ ವಿನಮ್ರ ಸ್ವೀಕಾರವಿದ್ದರೂ ಜೀವನೋತ್ಸಾಹ, ಅಭಿವ್ಯಕ್ತಿ ಮತ್ತು ಅಭಿಯಾನಗಳ ಕ್ಷಾತ್ರವನ್ನೂ ಸಾರುತ್ತಿದೆ.


ದೊಂದಿಯ ಜ್ವಾಲೆಯಿಂದ ಆವರಿತ ರಂಗಸ್ಥಳವು, ಅಲ್ಲಿ ನಡೆಯುವ ವಿಧವಿಧದ ಆಟವು ದೊಂದಿಯ ಜ್ವಾಲೆಗೆ ಹೆಚ್ಚಿನ ಅರ್ಥವನ್ನು ತರುತ್ತದೆ. ಇಲ್ಲಿ ಕಾಲಚಕ್ರದ ರಥದ ನಿರಂತರ ಅಭಿಯಾನದಲ್ಲಿ ನಡೆವ ದೇವರ ರಥೋತ್ಸವದ ಆಚರಣೆ ಇದೆ, ಈ ರಥೋತ್ಸವದಲ್ಲಿ ಹಳೆಯದು ಮತ್ತು ಹೊಸದು ಎರಡಕ್ಕೂ ಸಮಾನ ಪುರಸ್ಕಾರ ಇದೆ. ಕಾಲಚಕ್ರದ ರಥದ ತಳ್ಳುವಿಕೆಯಲ್ಲಿ ಎಲ್ಲಾ ಸ್ಥಳೀಯ ಬೇಧಗಳನ್ನು ಮೀರಿದ ಕೈಗಳು ಮಿಲಾಯಿಸುವ ಕಾವ್ಯವಿದೆ. ರಥೋತ್ಸವದ ನಿರಂತರತೆಯ ಕುರಿತ ಅಘೋಷಿತ ಮುಡಿಪು ಇದೆ. ಒಂದು ರಥೋತ್ಸವ ದಿಂದ ಇನ್ನೊಂದಕ್ಕೆ ಸಾಗುತ್ತಾ ಹೊಸ ಚಿಗುರು ಹಳೇ ಬೇರುಗಳ ಹೊಸ ಪಾಕದ ಕುರಿತಾಗಿ ನಿರಂತರ ತಪಸ್ಸು, ತಾಲೀಮು ಇದೆ.  ಎಲ್ಲಾ ಅಭಿವ್ಯಕ್ತಿಗಳು ಸೇವೆಯ ರೂಪದಲ್ಲಿ ಸಾಗುತ್ತಿರುವುದರಿಂದ ಸೇವಕನಾಗದೇ ಸಲ್ಲುದೇ ಅಂತರಿಕ್ಷದಲ್ಲೇ ಕಣ್ಣಿಟ್ಟು ಹಾರಾಡುವವರ ಕಾಣಿಗೆ ಏನೂ ಕಾಣಿಸದಂತೆ ಎಲ್ಲವೂ ನಡೆಯುತ್ತಿದೆ. ಸೇವಾ ಮನೋಭಾವದವರ ಅನೌಪಚಾರಿಕ ಕೂಡಾಟ ಎಂದಿಗೂ ನಡೆಯುತ್ತಲೇ ಇದೆ, ಸದ್ದು ಗದ್ದಲವಿಲ್ಲದೇ!

ದೊಂದಿ ಸುತ್ತಲೂ ಸೇವೆಗೈಯುವವರೇ ದೊಂದಿಮಾನವರು. ಒಳಗಿನ ದೊಂದಿಯ ಪ್ರಖರತೆ, ಹೊರಗಿನ ಚರ್ಯೆಯಲ್ಲಿ ಕಾಣಸಿಗದು, ದೊಂದಿ ಮಾನವರೆಲ್ಲ ಸೇರಿ ಮಾಡುವ ಸಾಹಸವು ಲಂಕಾದಹನದಂತೆ ಋಣಾತ್ಮಕವನ್ನು ದಹದಹಿಸಿ ಧನಾತ್ಮಕತೆಯ ವಿಜಯಪತಾಕೆಯನ್ನು ಹಾರಿಸುವುದನ್ನು ನೋಡಿದಾಗಲೇ ಈ ದೊಂದಿಮಾನವರೊಳಗಿನ ದೊಂದಿ ರಂಗಸ್ಥಳದ ಮೇಲಿನ ದೊಂದಿಗೂ ಮೀರಿ ಉರಿಯುವುದರ ಅನುಭವ ಸಿಗುತ್ತದೆ.

ದೊಂದಿ ಮಾನವನ ಒಳಗಿನ ಉರಿ, ಹೊರಗಿನ ಅಭಿಯಾನದ ಸಹಕಾರದ ಅಭಿವ್ಯಕ್ತಿಯ ನಡುವೆ ಆತನ ಮುಖ ನಿರ್ವಿಕಾರ ಮತ್ತು ಶಾಂತ. ಎಲ್ಲವೂ ಅಭಿವ್ಯಕ್ತಿಯ ಸುತ್ತಲಿನ ದೊಂದಿಯಾಟದಲ್ಲೇ ಸ್ಪಷ್ಟವಾಗಿ, ಕರಾರುವಕ್ಕಾಗಿ ವ್ಯಕ್ತ. ಸಹನೆಯ ಸಾಕಾರ ಮತ್ತು ಶಾಂತಿಪ್ರಿಯನಾದರೂ ನಮ್ಮ ವಾಸ್ತವದ ಅನ್ಯಾಯಗಳ ಕುರಿತು ಒಳಒಳಗೇ ಉರಿಯುತ್ತಾ ವೇದನೆಯಲ್ಲಿರುವವ. ವೇದನೆಯು ಹೆಚ್ಚಿದಂತೆ ಬರುವ ಕೋಪವನ್ನು ದೊಂದಿಯಾಟದಂತ ಅಭಿಯಾನದಲ್ಲಿ ತರ್ಪಣವಿಟ್ಟು ಘನತೆಯಲ್ಲಿ ನಿರ್ವಹಿಸಿ ಕೈತೊಳೆದುಕೊಳ್ಳುವವ.

ದೊಂದಿಮಾನವ ವಯಕ್ತಿಕವಾಗಿ ಯಾರಿಗೂ ಸಲ್ಲುವನಲ್ಲ, ಆದರೆ ಇಡೀ ಮನುಕುಲಕ್ಕೆ ಸಲ್ಲುವತ್ತ ವಿಶ್ವಮಾನವತೆಯ ತಳಹದಿಯಲ್ಲಿ ಯಾರಿಗೂ ಸಲ್ಲಬಲ್ಲವ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಷಯಗಳಲ್ಲಿ ಗೋಡೆಗಳಿಲ್ಲದೇ ಸಂಕಲನವನ್ನು ತರಬಲ್ಲವ.

ದೊಂದಿಮಾನವನದ್ದು ಮನುಷ್ಯತ್ವ ಮೀರಿದ ಸ್ಥಿತಿ ಮತ್ತು ನಡೆ. ದೈವಿಕತೆ, ಮನುಷ್ಯತ್ವ, ಮಕ್ಕಳಾಟಿಕೆ, ಪುರುಷತ್ವ, ಸ್ತ್ರೀಲಾಲಿತ್ಯ, ಯೋಜಕತ್ವ, ಸಾಮಾಜಿಕ ಕಳಕಳಿ, ನಾಗರಿಕ ಸಮಾಜದ ಜವಾಬ್ದಾರಿ, ಧನಾತ್ಮಕ ವಿಷಯಗಳ ಕುರಿತು ಅಭಿಯಾನ ಮತ್ತು ಆವಿಷ್ಕಾರ, ವಾಸ್ತವ ನೆಲೆ, ಸದಾ ಕನಸಿಗೆ ಕೈಗೂಡುವ ಸಾಧ್ಯತೆಗಳ ಸುತ್ತಲಿನ ಯೋಜನೆ, ಯೋಜನೆಗಳ ಸುತ್ತಲಿನ ಸಹಕಾರ ಮತ್ತು ಸಹಯೋಗ, ದೊಂದಿಯಾಟದಂತಹ ವಿಜಯಗಳ ನಂತರ ಮತ್ತೆ ಚೌಕಿಗೆ ಬಂದು ಇನ್ನೊಂದು ಕನಸಿನ ಕೂಸಿನ ಸುತ್ತ ಮತ್ತೆ ತಲೆಕೆಡಿಸಿಕೊಂಡು ಒದ್ದಾಡುವತ್ತ ಮತ್ತೆ ತಹತಹ!

ದೊಂದಿಮಾನವ, ಇಂದಿನ ಮಾನವ ಮತ್ತು ಮುಂದಿನ ಸುಧಾರಿತ ಮಾನವನ ನಡುವಿನ ವಿಕಾಸದ ಸರಪಳಿಯ ಅತೀ ಮುಖ್ಯ ಕೊಂಡಿ!

"ದೊಂದಿ ಬೆಳಕು" ಎಂಬ ವಾಟ್ಸ್ಯಾಪ್ ಸಮೂಹದಲ್ಲಿ ಈ ದೊಂದಿಮಾನವರು ಸಾಕಷ್ಟು ಕಲೆತಿದ್ದಾರೆ. ಸಾವಿರಗಟ್ಟಲೆ ಇನ್ನಷ್ಟು ಸೇರುವತ್ತ ಈ ಸಮೂಹ ಬೆಳೆಯಲಿಕ್ಕಿದೆ! ದೊಂದಿಮಾನವನ ಗಾಥೆ ಇನ್ನು ಶುರುವಷ್ಟೇ, ಇನ್ನೂ ಮುನ್ನುಡಿಯಲ್ಲಿದೆ! ಮಹಾಕಾವ್ಯವಾಗಿ ಹರಿದು ಮೊಳಗಲಿದೆ!

ಬನ್ನಿ, ದೊಂದಿಮಾನವರಾಗೋಣ! ದೊಂದಿಮಾನವರಾಗುವವರು, ಅಪರಿಮಿತ ದೊಂದಿ ಮಾನವ, ಮಹಾಲಿಂಗ ಭಟ್ಟರನ್ನು ಸಂಪರ್ಕಿಸಿ!



Friday, April 22, 2016

ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ - ಭಾಸ್ಕರ ಬಂಗೇರ - ಬಿಲಿಂಡರನ್ನ್ ಕಾಂಬುಕ್ ಬೇಗ್ ಹೊಯ್ಡಿ ಅಕಾ.


ಭಾಸ್ಕರ ಬಂಗೇರ
ಕುಂ ದಾಪ್ರ ಕನ್ನಡ!
ಒಂದು
ತಾಲೂಕು ಹಾಗು ಅದರ
ಸುತ್ತಮುತ್ತಲಿನ ಕೆಲವೇ
ಕಿಲೋಮೀಟರುಗಳಿಗೆ
ಸೀಮಿತವಾದ ಈ
ಆಡುಭಾಷೆಯನ್ನು ಹಲವಾರು
ರೀತಿಯಲ್ಲಿ ಬೆಳೆಸುವ ಹಾಗು
ಮುಂದಿನ ತಲೆಮಾರಿಗಾಗಿ ಜತನದಿಂದ ಕಾಪಿಡುವ ಕಾರ್ಯಗಳು
ಸಾಕಷ್ಟು ನಡೆಯುತ್ತಿವೆ. ತಂತ್ರಜ್ಞಾನ ಬೆಳೆದಂತೆ ಹಾಸ್ಯಲೇಪಿತ
ಮಾತುಗಳು, ಲೇಖನಗಳು, ದೃಶ್ಯಾವಳಿಗಳ ಮೂಲಕ ಕುಂದಾಪ್ರ
ಕನ್ನಡವನ್ನು ಕಡತಡಿಯ ಆಚೆಗೂ ಪರಿಚಯಿಸುವ ಹಾಗು ಬೆಳೆಸುವ
ಪ್ರಯತ್ನಗಳು ಕೂಡ ಯಶ ಕಂಡಿವೆ. ಅದಕ್ಕೆ ಹೊಸ ಸೇರ್ಪಡೆಯಾಗಿ ಕಳೆದ
ವರ್ಷ “ಗರ್ ಗರ್ ಮಂಡ್ಲ” ಎನ್ನುವ ಸಂಪೂರ್ಣ ಕುಂದಾಪ್ರ ಕನ್ನಡದ
ಭಾಷೆಯನ್ನು ಬಳಸಿರುವ ಸಿನೆಮಾ ಬಿಡುಗಡೆಯಾಗಿ ಕರಾವಳಿಯಲ್ಲಿ
ಧೂಳೆಬ್ಬಿಸಿತ್ತು. ಈಗ ಅದೇ ತಂಡ ಬಿಲಿಂಡರ್ ಎನ್ನುವ ಮತ್ತೊಂದು
ಚಿತ್ರದೊಂದಿಗೆ ನಮ್ಮ ಮುಂದೆ ಬಂದಿದೆ. ನಾನು ಕಂಡ ಕುಂದಾಪ್ರ
ಕನ್ನಡ ಸಿನೆಮಾ ಬಿಲಿಂಡರ್ ವಿಮರ್ಶೆಯನ್ನು ಕುಂದಾಪ್ರ ಕನ್ನಡಲ್ಲೇ
ಬರೆದಿದ್ದೇನೆ. ನನ್ನ ಅನಿಸಿಕೆ ಹೀಗಿದೆ..
ಬಲಾ ಆದ್ದ್ ಮಕ್ಕಳ್ ಕಟಕಟ ಬಟಾಣಿ ಜಗದಂಗ್ ಮಾತಾಡು, ಹುಲ್
ಸುಡಿನ್ ಹಡ್ಮಂಚಕ್ ಬೆಚ್ಚಿ ಜೆಪ್ವಂಗ್ ಕೇಡಿಗಳಿಗ್ ಹ್ವಡು, ಅಬ್ಬಿನ್ ನೆನಪ್
ಮಾಡ್ಕ ಒಳಗೊಳಗೆ ಮರ್ಕು ಹೀರೋ, ಶ್ಯಾಮಂತಿ ಹೂಗಿನ್
ರಾಶ್ಯಂಗ್ ಪಿಳಿಪಿಳಿ ಕಣ್ಣ್ ಬಿಡ್ತ ನೆಗಾಡು ಮಲ್ಲಿಗಿ ಮಿಟ್ಟಿ ಕಂಡಂಗ್
ಕಣ್ಣಂಗೇ ಮಿಣ್ಣಕ್ ಚೂಂಪ್ ಬಾಣ ಬಿಟ್ಟ್ ಜೀವ್ ತೇಗು ಹಿರೋಯಿಣಿ,
ಜೀವ್ ನೆರಿದಿದ್ ಮಕ್ಕಳ್ ಸೊಡ್ಡ್ ಕಂಡ್ ಕೂಡ್ಲೇ ಚಿರ್ರೋ ಅಂದ್
ಕೂಗ್ತಾ ಕುಮ್ಚಟ್ ಹಾರುವಂಗ್ ಇಪ್ಪು ಕೇಡಿಗಳ್, ಕೌಳ್ ಚಿಪ್ಪ್ ಹೊಡಿ
ಆಯ್ ದವಡಿ ಮೇಲ್ ದಾಮ್ ಬೀಳ್ವಂಗ್ ನೆಗಾಡ್ಸು ಜೋಕ್, ಆಪ್ರೆಶನ್ ಆದ್ದ್
ಹೊಲಗಿ ಕಟ್ಟನ್ ತೆಗಿದೆ ಇದ್ದರಿಗೂ ಟಕರು ಟಕರು ಟಾವ್ ಟಾವ್ ಅಂದೇಳಿ
ಕೊಣಿಕ್ ಅಂಬಂಗ್ ಆಪು ಪದ್ಯ, ಒಂದೊಂದ್ ಸಲ ಕ್ಯಾಮರ
ಅಲ್ಲಾಡದಂಗು ಓಹ್ ಇದ್ ನಮ್ಮುರೆಯಾ ಅಂದ್ ಸ್ವಾಸ್ ಬಿಡುವಂಗ್
ಆಪು ಚೆಂದದ್ ಶೂಟಿಂಗ್.. ಹ್ವಾಯ್ ಒಂದ್ ಪಿಚ್ಚರಂಗ್ ಇನ್ ಯಂತ
ಕಿಚ್ಚಿಡದ್ ಬೇಕ್ ಮರ್ರೆ? ನೆರ್ಮನಿ ಸಮನೂಟಕ್ಕೊ ಬಯ್ಕಿ ಮದಿಗೋ ನಮ್ಮನಿ
ಬಾಗ್ಲ್ ಹಯ್ಕ ಒಬ್ರನ್ನು ಬಿಡದೆ ಎಲ್ಲ ಹ್ವಾತ್ತಲೇ ಹಾಂಗೆ ಬಿಲಿಂಡರ್
ಪಿಚ್ಚರಿಗೂ ಶಿಶುಮಗಿನಿಂದ ಹಳಿಕೊಯ್ಡಿನ್ವರಿಗೂ ಎಲ್ಲರೂ ಆರಾಮ್ಸೆ
ಕಾಣ್ಲಕ್.
ಟಾಕೀಸಲ್ ಕೂಕಂಡಲ್ಲ್ ಮಳ್ಗಾಲ್ದಂಗ್ ಅಳಿಕಡ್ಲಿಂದ ನೀರೆಲ್ಲ ಕಡ್ಲಿಗ್
ರಪ್ಗುಟ್ಕ ಹ್ವಾಪು ತರ ಬೇಗರ್ ಇಳ್ಕ ಹ್ವಾತಿಪತ್ತಿಗೆ ನಾಕ್ ಹನಿ
ಕಣ್ಣೀರು ಮೂಗ್ ಮತ್ ಕೆನ್ನೆ ಮದ್ಯ ಗುಟ್ಟಗ್ ಜಾರಿ ತ್ವಡಿ ಮೇಲ್ ಬಿದ್ರೆ
ಯಾರಿಗು ಹೇಳುಕ್ ಹೊಯ್ಬೇಡಿ. ಅಬ್ಬಿ ಮಕ್ಕನ್ ಕತಿಗೆ ಕರ್ಗದೆ ಇಪ್ಪು
ಕಲ್ಲ್ ಎದಿ ಯಾರದ್ದಾರು ಇತ್ತಾ ಹೇಳಿ. ಅಪ್ಪ ಅಬ್ಬಿ ಇಲ್ದೆ ಬೆಳ್ದ್ ಮಕ್ಕಳ್
ಕಷ್ಟನ್ ಬಾರಿ ಸೂಕ್ಷ್ಮದಂಗ್ ಹೇಳು ಜ್ವತಿಗೆ ಕಷ್ಟಕ್ ಯಾರಾರು
ಆಯೇ ಆತ್ರ್ ಅಂಬುದನ್ನು ಈ ಪಿಚ್ಚರ್ ಹೇಳತ್ತ್. ಗೂಡಿಂದ್ ಹೆರ್ಗ್ ಬಿದ್ದ್
ಹಕ್ಕಿ ಮರಿ ಎಲ್ಲೆಲ್ಲ ಸುತ್ತಿ ಮತ್ತದೇ ಗುಬ್ಬಿ ಗೂಡಿಗ್ ಹ್ವಾಪು ಕತಿಯೇ
ಬಿಲಿಂಡರ್. ಅದ್ರ್ ಮದ್ಯ ಹಡಿಪಳ್ದಿ ಗಂಡ್ ಮಾಡು ಕೈಕೊಚ್ಚ್,
ಯಾರದ್ದೋ ಸೀಂತ್ರಿ ಕೆಲ್ಸವೆಲ್ಲ ಹೀಂಗ್ ಬಂದ್ ಹಾಂಗ್
ಹ್ವಾತ್ತ್.
ಎದ್ರ್ ಇಪ್ಪು ಮನ್ಸರನ್ ನಂಬದೆ ಯಾರೋ ಬರದ್ದ್ ಜಾತ್ಕ ನಂಬ್ಕಂಡ್,
ಅವ್ರ್ ಹೇಳು ಹುಟ್ಕತಿ ಕೇಂಡ್ ಎಷ್ಟ್ ಮನಿ ಹಾಳಾಯ್ತ್ ಅಂಬುದ್
ಗುತಾಯ್ಕರೆ ನೀವ್ ಬಿಲಿಂಡರ್ ಪಿಚ್ಚರ್ ಕಾಣ್ಕ್. ಈ ಪುರಾತತ್ವ
ಇಲಾಖೆಯರೆಲ್ಲ ಹಳಿ ಕಾಲದ್ ಮೂರ್ತಿ, ಶಂಖ, ಮುತ್ತ್ ಮತ್ತ್
ಇನ್ನೆಂತೆಂತದೋ ಕಿಚ್ಚಿಡದ್ದನ್ನೆಲ್ಲ ಹುಡಕ್ತ ಇಪ್ಪುದ್ ನಮ್ಗ್ ಗುತಿತ್.
ಅದಕ್ಕ್ ಪಾರಿನ್ನಂಗ್ ಕುಯ್ಡ್ ಕಾಸ್ ಜೋರ್ ಸಿಕ್ಕತ್ತ್ ಅಂದೇಳಿ
ಸುಲಬ್ದಂಗ್ ದುಡ್ಡ್ ಮಾಡುಕ್ ಹೊರ್ಟರೆಲ್ಲ ಹೀಂಗಿಂದೆಲ್ಲ ಹುಡಕ್ತ
ಮಂಡಿವಡು ಕೆಲ್ಸ ಮಾಡ್ತ್ರ್. ಅದಕ್ಕೆ ಅಬ್ಬಿ ಮಗನ್ ಕತಿ, ಗಮ್ಮತ್ತಿನ್ ಲವ್,
ಜೋಕ್, ಪದ್ಯವೆಲ್ಲ ಸೇರ್ಸಿ ಚೆಂದದ್ ಚಿತ್ರಕತಿ ಮಾಡಿರ್ ನಮ್ ರವಿ
ಬಸ್ರೂರು. ಕೋಳಿಮರಿನ್ ಹದ್ದ್ ಕಚ್ಕ ಹ್ವಾಪು ಸ್ಪೀಡಂಗೆ ಪರ್ದಿಯಂಗ್
ಸೀನ್ ಅಂಬುದ್ ಓಡ್ತ್ ಇರತ್ತ್. ಕೇಡಿಗಳೆಲ್ಲ ಹಿರೋಯಿಣಿಗ್ ಓಡಸ್ಕ ಬಂದ್
ಹೋಳಿ ಬಣ್ಣ ಹಾಕುದ್ ಒಂದ್ ಸಲ ಬತ್ತ್. ಆರೇ ಇಡಿ ಪಿಚ್ಚರೆ ಕ್ವಾಲೆಜಂಗ್
ಸೀರಿ ದಿನ ಮಾಡದಲ್ ಎಲ್ ಕಂಡ್ರು ಬಣ್ಣ ತೋರುದಿಲ್ಯ ಹಾಂಗೆ
ಬಣ್ಬಣ್ಣ ಆಯಿ ಬಾರಿ ಸಾಪಾಯ್ ಬಂದಿತ್.
ಬಿಲಿಂಡರಿದ್ ಮೇಸ್ತ್ರಿಗಳಾದ ರವಿ ಬಸ್ರುರ್.. ಈ ಜನಿನ್
ಬಗ್ಗೆ ಯಂತ ಅಂದೇಳಿ ಹೇಳುದ್ ಮರ್ರೆ. ಕತಿ, ಚಿತ್ರಕತಿ,
ಪದ್ಯ ಬರದ್ದು ಇವ್ರೆ. ಪದ್ಯಕ್ಕ್ ಪೀಂಪಿರ್ಕಿ, ಡೋಲ್,
ಬೇಂಡಿನ್ ಶಬ್ದ ಕೊಟ್ಟರು ಇವ್ರೆ ಕಾಣಿ. ಹಾಡದ್ದ್,
ಕೊಣದ್ದ್, ಉಯ್ದಾಡ್ಕಂಡದ್ದ್, ಮರ್ಕದ್ದ್ ಎಲ್ಲದು ಇವ್ರೆ
ಮಾಡದ್ದ್ ಹ್ವಾಯ್. ಆರು ಎಲ್ಲದನ್ನು ಬಾರಿ ಲಾಯ್ಕ್
ಮಾಡಿರ್. ಇನ್ ಹಿರೋಯಿಣಿ ಶೀಜಾ ಶೆಟ್ಟಿ ಮೊದಲ್
ಮುಂಚ್ ದೊಡ್ಡ್ ಪರ್ದಿ ಮೇಲ್ ಬಂದ್ರು ನಾಚ್ಕಣದೆ
ನಾಚ್ಕಂಬು ಆಕ್ಟಿಂಗೆಲ್ಲ ಚೆಂದ ಮಾಡಿ ಮಾಡಿರ್. ಕಳ್ಳ್
ಕಣ್ಣಂಗೆ ಕಾಂಬುದ್, ಪುಸಕ್ಕ್ ಅಂದೇಳಿ
ನೆಗಾಡುದೆಲ್ಲ ಅಯ್ಯಬ್ಯಾ ಬಾರಿ ಚೆಂದ ಬಾರಿ
ಚೆಂದ. ಇನ್ ನಮ್ ರಘು ಪಾಂಡೇಶ್ವರ ಮತ್ತ್ ಮಾಧವ
ಕಾರ್ಕಡ ಬಾರಿ ನೆಗಾಡಸ್ತ್ರ್. ರಪ್ಪ ಎದ್ರ್ ಸಿಕ್ರೆ ಸ್ವಾಸ್
ಕಟ್ಟದಂಗ್ ಆಪು ಕೇಡಿಗಳಲ್ ಚಂದ್ರಶೇಖರ್ ಬಸ್ರೂರು,
ವಿಜಯ್ ಬಸ್ರೂರು, ಓಂ ಗುರು ಬಳ್ಕೂರು ನಟ
ಭಯಂಕರರು ಮರ್ರೆ. ಮತ್ತೆ ಲಕ್ಷ್ಮಿ ಅಲೆವೂರು,
ಪ್ರಭಾಕರ್ ಕುಂದರ್, ಕಿರಣ್ ದಾನಪ್ಪನವರ್, ನಟರಾಜ್ ವಿ.
ಎನ್ ಸಹ ತಮ್ಗ್ ಕೊಟ್ಟದ್ದನ್ ಅಚ್ಕಟ್ಟಾಯ್ ಮಾಡಿರ್.
ಎಲ್ಲದರೋಟ್ಟಿಗೆ ಹೇಳ್ಲೇ ಬೇಕಾದ್ದ್ ಸಚಿನ್ ಬಸ್ರೂರ್
ಕ್ಯಾಮರ ಕೆಲ್ಸ. ನಮ್ಮೂರನ್ ಎಷ್ಟ್ ಚೆಂದ ಮಾಡಿ
ತೋರ್ಸಿರಂದ್ರೆ ನಾಕ್ ಜನಿಗ್ ಹ್ವಾ ಕಾಣ್ ನಂಬದಿ
ಹ್ಯಾಂಗ್ ಇತ್ತ್ ಅಂದ್ ಜಾಪ್ ಮಾಡುಕ್ ಆತ್ತ್. ಕೆಲವ್ ಸಲ ಅವ್ರ್
ಕ್ಯಾಮರನ್ ಕಾಕಿ ಬೆನ್ನಿಗ್ ಕಟ್ಟಿ ಶೂಟಿಂಗ್ ಮಾಡ್ಸಿರೋ ಏನೋ
ಅನ್ಸತ್ತ್.
ಪಿಚ್ಚರಂಗ್ ಲಾಯ್ಕ್ ಆಯ್ದೆ ಇಪ್ಪುದ್ ಯಂತದು ಇಲ್ಯ? ಇತ್ತ್ ಮರ್ರೆ.
ನಂಗ್ಯಾಕೋ ಹೊಡ್ಕಂಬುದ್ ಸ್ವಲ್ಪ ಕಮ್ಮಿ ಇದ್ದಿರೆ ಬಿಲಿಂಡರಿಗ್
ಇನ್ನು ಕಳಿ ಕಟ್ತಿದಿತ್ ಅನಸ್ತ್. ಜೋಕೆಲ್ಲ ಬಾರಿ ಲಾಯ್ಕ್ ಬಂದಿತ್ ಆರೇ
ಇನ್ನು ಸ್ವಲ್ಪ ಕತಿ ಒಟ್ಟಿಗೆ ನೆಗಾಡುದನ್ನು ಸಮಾ ಹದ ಮಾಡಿ ಕಲ್ಸಿರೆ
ಒಳ್ಳೆದಿತ್ತೋ ಏನೋ ಅನಸ್ತ್. ಮೂಲ ಅಬ್ಬಿಗ್ ನಾಕ್ ಮಾತ್ ಇದ್ದಿರೆ
ಇನ್ನೆರಡ್ ಹನಿ ಕಣ್ಣೀರ್ ಜಾಸ್ತಿ ಬೀಳ್ತಿತ್ತೋ ಏನೋ ಅಂಬಂಗ್ ಆಯ್ತ್.
ಇದನ್ನೆಲ್ಲ ಬರ್ದು ಒಂದ್ ಮಾತ್ ಹೇಳ್ಕಾತ್ತ್ ಮರ್ರೆ, ದುಡ್ಡ್ ಮಾಡುಕ್
ಮಾಡದ್ ಪಿಚ್ಚರ್ ಅಲ್ಲಾ ಇದ್. ರವಿ ಬಸ್ರೂರಿಗೆ ಪುರಸೋತ್ತೆ ಇಲ್ದಶ್ಟ್
ಬೇರೆ ಕೆಲ್ಸ ಇತ್ತ್. ಆ ಗ್ವಾಯ್ಗುಲ್ಲಂಗು ನಮ್ ಬಾಶಿ ಮೇಲಿನ್
ಗೊಬ್ರದ್ ಹೆಡ್ಗಿ ಪ್ರೀತಿಗ್ ಇದನ್ನೆಲ್ಲ ಮಾಡುದ್ ಅವ್ರ್. ಬಾಷಿ ಬರ್ದರೆಲ್ಲ
ಪಿಚ್ಚರ್ ಮಾಡುವತಿಗ್ ನಮ್ಮುರಿಂದ್ ಇಷ್ಟ್ ಚೆಂದದ್ ಬಾಶಿಯಂಗು ಯಾಕ್
ಪಿಚ್ಚರೆಲ್ಲ ಬಪ್ಪುಕಾಗ ಅಂದೇಳಿ ಎದಿಗ್ ತಕಂಡ್ ಮಾಡದ್ದ್ ಪಿಚ್ಚರಿದ್.
ಕೂಡ್ ಕುಟುಂಬ ಸಮೇತ ಒಂದ್ ಗಳ್ಗಿ ಎಲ್ಲರು ಬಿಲಿಂಡರನ್ನ್ ಕಂಡ್ಕ
ಬನಿ. ಇದ್ ಗೆದ್ರೆ ಇದಕ್ಕಿಂತ ದೊಡ್ಡ್ ಪಿಚ್ಚರೆಲ್ಲ ನಮ್ಗು ನಿಮ್ಗು
ಇನ್ಮುಂದ್ ಕಾಂಬುಕ್ ಸಿಕ್ಕತ್ತ್. ಬಿಲಿಂಡರನ್ನ್ ಕಾಂಬುಕ್ ಬೇಗ್
ಹೊಯ್ಡಿ ಅಕಾ.

Monday, April 18, 2016

ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ - ಸುರೇ೦೧೧ - ಸದೀ ಮಾಸ್ತ್ರು ಒಂದು ಕಿರು ಕಥೆ

ಸದೀ ಮಾಸ್ತ್ರು ಒಂದು ಕಿರು ಕಥೆ
ಸುರೇ೦೧೧
ಪರಶುರಾಮ ಕಿರು ಕಥನಗಳ ಭಾಗವಾಗಿ
ಸದೀ ಮಾಸ್ತ್ರು ಒಂದು ಕಿರು ಕಥೆ
(ನನ್ನ ಧ್ವನಿ ಹಾಗೂ ಧಾಟಿಯಲ್ಲಿ, ಮತ್ತು ಸ್ಟೈಲಿನಲ್ಲಿ)

(Author)


ಇದುವರೆಗೆ ನೀವೆಲ್ಲಾ ಸದೀ ಮಾಸ್ತ್ರು ಭಾಗ-೧, ಭಾಗ-೨, ಭಾಗ-೩ಗಳನ್ನ ಶ್ರೀಯುತರಾದ ಮಂಟಪ ನಟರಾಜ ಉಪಾಧ್ಯರು ಬರೆದದ್ದನ್ನ ಓದಿದಿರಿ . ಅವರು ಕುಂದಾಪುರ ಭಾಷೆಯಲ್ಲಿ ಬಹಳ ಅಂದರೆ ಅತೀ ಉತ್ತಮವಾಗಿಯೇ ಬರೆದಿರುವುದರಲ್ಲಿ ಸಂದೇಹವೇ ಇಲ್ಲ. ಬರಡು ಬಂಜರ ಭೂಮಿಯಲ್ಲಿ ನೀರಿನ ಸೆಲೆಯನ್ನ ಕಂಡಂತೆ, ಅದನ್ನ ಓದಿದ ಪ್ರತೀಯೊಬ್ಬರಿಗೂ ಅನ್ನಿಸುತ್ತೆ. ಈ ಪ್ರಶಂಷೆ ಅತಿಷಯೋಕ್ತಿ ಅನ್ನಿಸದು ಅಂತ ನನ್ನ ಭಾವನೆ. ಯಾವುದೇ ಒಬ್ಬ ವ್ಯಕ್ತಿಯ ವೈಯುಕ್ತಿಕ ಜೀವನದ ರೀತಿ, ನೀತಿಯನ್ನ ಬೇರವರಿಗೆ ರುಚಿ ಹತ್ತುವ ಹಾಗೆ ಬರೆಯುವುದು, ಅದೊಂದು ಉತ್ತಮವಾದ ಕಲೆ ಎಂದು ನಾನು ಭಾವಿಸುತ್ತೇನೆ. ಅದನ್ನ ಅಕ್ಷರ ಸಹ, ಶ್ರೀಯುತರಾದ, ಮಂಟಪ ಚಂದ್ರಶೇಖರ ಉಪಾಧ್ಯರ ನಾಲ್ಕನೇ ಪುತ್ರರಾದ ಶ್ರೀ ನಟರಾಜ ಉಪಾಧ್ಯರು ಬರೆದು ತೋರಿಸಿದರು. ಅದಕ್ಕಾಗಿ ನಾನು ಎಸ್ಟು ಧನ್ಯವಾದಗಳನ್ನ ಹೇಳಿದರೂ ಅದು ಕಮ್ಮಿಯೇ. ಇರಲಿ. ಆದರೆ, ಅವರು ಬರೆದದ್ದು ನನಗೆ ಪ್ರಚೋದನೆ ಸಿಕ್ಕಿದ ಹಾಗಾಯಿತು. ಅವರೇನೋ "ಕುಂದಾಪ್ರ ಭಾಷೆಯೇ ಸರಿ ಬರ್ದ, ಕನ್ನಡ ಬರುಕೇ ಬರ್ದ, ಈ ಬಿಕ್ನಾಶಿ ಬೇವರ್ಸಿ ಇಸ್ಟ್  ಕುಂದಗನ್ನಡದಲ್ಲಿ ಬರೀ ಬೇಕೆಂದರೆ, ಇನ್ನು ಬೇರವರು, ಅವರುಗಳ ವಿಷಯವನ್ನ ಚೆನ್ನಾಗಿ ತಿಳಿದವರು ಯಾಕೆ ಬರೆಯಲು ಮುಂದೆ ಬರಬಾರದೆಂದು ತಮ್ಮನ್ನ ತಾವೇ ಬೈದ ಹಾಗೆ, ಬೇರವರಿಗೆ ಬರೆಯಲು ಪ್ರೋತ್ಸಾಹ ಕೊಡುವಂತೆ ಪ್ರಚೋದನೆ ಸಿಗಲೀ ಎಂಬರ್ಥದಲ್ಲಿ ಆ ಶಬ್ದಗಳ ಬಳಕೆಯನ್ನ ಮಾಡಿದ್ದು ಅವರ ಬುಧ್ಧಿವಂತಿಕೆ, ಶ್ರೀಮಂತಿಕೆ ಹಾಗೂ ಸರಳವಂತಿಕೆಯ ಮನೋಭಾವವಗಳನ್ನ ತೋರಿಸುತ್ತೆ. ಅದು ಏನೇ ಇರಲಿ, ನಾನಂತೂ ಅವರು ಬರೆದದ್ದರಿಂದ, ಅದೂ ನಮ್ಮ ಅಪ್ಪಯ್ಯನ ಬಗ್ಗೆ ಇಸ್ಟೊಂದು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು  ನಾನು ಕೂಡಾ ಅವರು ಹಾರಿದಂತಹ ನಮ್ಮೂರ ಅರಬ್ಬೀ ಸಮುದ್ರಕ್ಕೆ ಎದೆಗುಂದದೆ, ಎದೆಯನ್ನ ಮುಂದೆ ಮಾಡಿ ಹಾರಿದೆ. ಎಸ್ಟೊಂದರೂ ನಮ್ಮ ನೆರೆಮನೆಯವನಲ್ಲವೇ? ಹಾಗೆ ಸಮುದ್ರಕ್ಕೆ ಹಾರಿದವನು, ಈಗ ಈಜಾಡುತ್ತಿರುವೆ. ಮಧ್ಯ, ಮಧ್ಯದಲ್ಲಿ ಮುಳುಗುತ್ತಲೂ ಇರುವೆ ಎನ್ನುವ ಭಾಸವೂ ಆಗುತ್ತಿರುತ್ತದೆ. ಅದೇನೇ ಇರಲಿ, ಶ್ರೀಯುತ ನಟರಾಜ ಉಪಾಧ್ಯರಿಗೆ ತಿಳಿಯದ ಕೆಲವೊಂದು ವಿಚಾರಗಳನ್ನ ತಮ್ಮ ಮುಂದೆ ಪ್ರಸ್ತುತ ಪಡಿಸಲು ನಾನೀಗ ಹೊರಟಿದ್ದೇನೆ. ಇದಕ್ಕೆಲ್ಲಾ ನಿಮ್ಮಗಳ ಜಟಿಲ ಪ್ರೋತ್ಸಾಹ ಸಿಗುತ್ತೇ ಅನ್ನುವ ಅಟಲ ವಿಶ್ವಾಸ ಹಾಗೂ ಧೈರ್ಯವೂ ಇದೆ ಅನ್ನಿ! ಒಬ್ಬ ವ್ಯಕ್ತಿಯ ವೈಯುಕ್ತಿಕ ವಿಚಾರಕ್ಕೆ ಕಥೆಯ ರೂಪವನ್ನ ಕೊಡುವುದು ಬಹಳ ಕಸ್ಟ. ಈ ನಿಟ್ಟಿನಲ್ಲಿ ಶ್ರೀಯುತರಾದ ನಟರಾಜ ಉಪಾಧ್ಯರು ಮಾಡಿದ ಸಾಹಸಕ್ಕೆ, ನನ್ನ ಅನಂತಾನಂತ ವಂದನೆಗಳು. ಅವರು ಹೀಗೆಯೇ ಬರೆದು ಒಂದು ಪುಸ್ತಕವನ್ನೇ ತರಲಿ ಹಾಗೂ ಆಪುಸ್ತಕಕ್ಕೆ ಮತ್ತು ಅವರು ಬರೆದ ಪರಿಶ್ರಮಕ್ಕೆ ತಕ್ಕುದಾದ ಫಲ ಆ ದೇವರು ನೀಡಲೀ ಅಂತ ನಾನು ಆದೇವರನ್ನ ಹಾಗೂ ಇಸ್ಟದೇವತೆಯನ್ನ ಪ್ರಾರ್ಥಿಸುತ್ತೇನೇ ವಿನಹ, ಮತ್ತೇನೂ ನಾನು ಮಾಡಲು ಸಾಧ್ಯವಿಲ್ಲ.

ಈಗ ನೀವುಗಳು ಪಾರಂಪಳ್ಳೀ ಸುಬ್ರಾಯ ಉಪಾಧ್ಯರು ಎನ್ನುವ ಹೆಸರು ಅಳಿಸೆ, ಮುಂದೆ ಪರಿವರ್ತಿತಗೊಂಡಂತಹ  “ಸದೀಮಾಸ್ತ” ರ ಬಗ್ಗೆ ಇನ್ನು ಹೆಚ್ಚು, ಹೆಚ್ಚಿನ ವಿವರಗಳನ್ನ ನನ್ನಿಂದ ನೀವುಗಳು ಈ ಕಥೆಯ ಮೂಲಕ ನೋಡಲಿಕ್ಕಿರುವಿರಿ. ಶ್ರೀಯುತರಾದ ಸುಬ್ರಾಯ ಉಪಾಧ್ಯರು ಹೇಗೆ ಸದಿಯ ಮಾಸ್ತರು ಆದರು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದಕ್ಕೆ ಮೊತ್ತ ಮೊದಲ ಕಾರಣ ಮಾಸ್ಟ್ರು ಕೃಷ್ಣ ಉಪಾಧ್ಯರ ಉದಾರ ಮನೋಭಾವನೆ. ಇಲ್ಲಾಂದ್ರೆ, ಹೋಟೆಲ್ಲಿಗೆ ಹೋಗಿ, ಮಾಣಿಯಂತೆ ಕೆಲಸವನ್ನ ಮಾಡುತ್ತಿದ್ದಂತಹ  ಈ “ಸದಿಯನನ್ನ”, ನಮ್ಮ ಅಜ್ಜ ಹೇಳಿದಮೇರೆಗೆ ಬೆಂಗಳೂರಿನಿಂದ ,ಎಂಕ್ಟೈಯ್ಯನ ಮನೆ ಕೃಷ್ಣ ಉಪಾಧ್ಯರು ಊರಿಗೆ ಕರೆತಂದಿರಬೇಕಾದರೆ ಅದು ಎಸ್ಟು ಕಸ್ಟ ಅಂತ ನಮಗೆ ಗ್ಒತ್ತು. ಕಾರಣ ಹೋಟೇಲಿನಲ್ಲಿ ಉಣ್ಲಿಕ್ಕೆ, ಜಿಲೇಬಿ (ನಮ್ಮ ತಂದೆಯ ಅತೀ ಇಸ್ಟವಾದ ಸಿಹಿ ತಿಂಡಿ. ಹಾಗೆ ನೋಡಿದರೆ ಅವರಿಗೆ ಸಿಹಿಗಳೇ ಜಾಸ್ತಿ ಇಸ್ಟ. ಪಾಯಸವನ್ನು ಮಾಡಿದರೂ ಸಾಮಾನ್ಯವಾಗಿ ಮಿಶ್ರಣ ಮಾಡುವ ಬೆಲ್ಲ ಸಾಕಾಗದೇ ಇನ್ನಸ್ಟು ಮುದ್ದೆ ಬೆಲ್ಲ ಅವರೆದುರು ಹಾಕಲೇ ಬೇಖು. ಇಲ್ಲಾಂದ್ರೇ, ಅವರ ಬಟ್ಟಲಿಗೆ ಹಾಕಲೇ ಬೇಕು.) ಪುಕ್ಕಟೆಯಾಗಿ ಹೊಡೆಯಲಿಕ್ಕೆ ಯಾವ ಅಡ್ಡೀ ಆತಂಕಗಳೂ ಇಲ್ಲ. ಅಂತಹವರನ್ನ ನಮ್ಮ ವರಟು, ಹಟಮಾರಿತನದ ಅಜ್ಜೈಯ್ಯ, ಅವರನ್ನ ಬೆಂಗಳೂರಿಗೆ ಅಟ್ಟಿ, ಕರೆಸಿ, ಗುಡ್ಡೀ ಶಾಲೆಯಲ್ಲಿ (ಇದೊಂದು ಪ್ರೈವೇಟ್ ಶಾಲೆ. ಪಾಪ ಈಗ ಮಕ್ಕಳಿಗಾಗಿ ಈ ಶಾಲೆಯ ಮುಕ್ತೇಷರಾದ ಶ್ರೀಯುತ ಸುಬ್ರಹ್ಮಣ್ಯ ಉಪಾಧ್ಯರು, ಮಾಸ್ಟ್ರ (ಕೃಷ್ಣ ಉಪಾಧ್ಯರು-ಈಗ ಅವರು ಇಲ್ಲ ಅನ್ನಿ.) ಹಿರೇ ಮಗ ಹಾಗೂ ರಿಟಾಯರ್ಡ್ ಪ್ರಾಂಶುಪಾಲ , ಕೋಟ ಜೂನಿಯರ್ ಕಾಲೇಜ್, ಅವರು ಈಗ ಒದ್ದಾಡುವುದನ್ನ ನೋಡಿದರೆ ನನಗೇ ಅಯ್ಯೋ ಪಾಪ ಅನ್ನಿಸುತ್ತೆ. ೩೦೦ ಮಕ್ಕಳಿಂದ, ೭ ಜನ ಅಧ್ಯಾಪಾಕರಿಂದ ತುಂಬಿ ತುಳುಕುತ್ತಿರುವ ಶಾಲೆಯಲ್ಲೀಗ ಬರೇ ೪೦-೫೦ ಮಕ್ಕಳು, ಒಬ್ಬ ಟೀಚರ್! ಅವರ ಸಂಬಳಕ್ಕೂ ಊರವರೊಡನೆ ವಂತಿಕೆ ಹಾಕಬೇಕು.! ಕೆಲಸವನ್ನ ಕೊಟ್ಟಿರುವುದು ಅವರ ದೊಡ್ಡತನವನ್ನ ಸೂಚಿಸುತ್ತೆ. ಅಂತೆಯೇ ನಮ್ಮ ಅಪ್ಪನೂ ಕೂಡ ಈ ಪಡೆದಂತಹ ದೇಣಿಗೆಯನ್ನ ಬಡ್ಡೀ ಸಮೇತವಾಗಿ, ಅವರ ಸಂಸಾರದವರಿಗೆ ಚುಕ್ತ ಮಾಡಿರುತ್ತಾರೆ ಎಂಬುದು ನನಗೆ ಅಥವಾ ನಮಗೆ ಒಂದು ಹೆಮ್ಮೆಯ ವಿಷಯವೇ ಸರಿ. ಹೇಗೆಂದರೆ ಏನು? ಅಂತ ನೀವುಗಳು ಕೇಳಬಹುದು. ಅದು ಹೀಗೆ. ಮಾಸ್ಟ್ರು ಮನೆಯಲ್ಲಿ ನಡೆಯುವಂತಹ ಯಾವುದೇ ಮದುವೆ, ಉಪನಯನ , ವಡ್ಡಂತಿ ಉತ್ಸವ ಹೀಗೇ ಯಾವುದೇ ಸಮಾರಂಭಗಳನ್ನ ನಮ್ಮ ಅಪ್ಪಯ್ಯ ಚಾಚೂ ತಪ್ಪದೆ ಹೋಗಿ ಅದನ್ನ ಒಳ್ಳೇ ರೀತಿಯಲ್ಲಿ ನೆರವೇರುವಂತೆ ನಿಗ್ರಹಿಸುತ್ತಿದ್ದರು. ಮಾಸ್ಟ್ರು ಸತ್ತ ಮೇಲೂ, ಶ್ರೀಯುತ ರಂಗಯ್ಯ ನಾವಡರು ಆ ಹೊರೆಯನ್ನ ತೆಗೆದುಕೊಳ್ಳುವವರೆಗೂ ನಮ್ಮ ಅಪ್ಪಯ್ಯನದ್ದೇ ಘುರಿಕಾರತ್ವ ಎಂದರೆ ತಪ್ಪಾಗದು.(ಇಲ್ಲಿ ಅಪ್ಪೈಯ್ಯನ ಯಾನಾರ ತೊಟ್ಟಂಬೀ ಘುರಿಕಾರ ಪೋಂಕೇ ಅನ್ನುವ ಪದ ನನಗೆ ಜ್ನಾಪಕಕ್ಕೆ ಬರುತ್ತೇ ನೋಡಿ!.) ಅಸ್ಟೊಂದು ಶ್ರಧ್ಧೆ ಹಾಗೂ ಅವರ ಮೇಲಿಟ್ಟ ಅಚಲವಾದ ಭಕ್ತಿ! ಆದರೆ ಇದು ನಮ್ಮ ಅಪ್ಪೈಯ್ಯನದ್ದು ಸ್ವಲ್ಪ ಜಾಸ್ತಿಯೇ ಆಯ್ತೋ ಅಂತ ಅನ್ನಿಸುತ್ತೇ ನನಗೆ. ಕಾರಣ ನಾನ್ ತಾನೇ ಹೆಚ್ಚಿಗೆ ಅವರ ಜೊತೆಯಲ್ಲಿ ಊರಲ್ಲಿ ಇದ್ದವ!  ನಮ್ಮ ಅಪ್ಪಯ್ಯ ಮಾತ್ರ ಶಾಲೆಯಲ್ಲಿ ಒಳ್ಳೇ ಶ್ರದ್ಧೆಯಿಂದ, ಪೂರ್ತಿ ತಮ್ಮ ಶಕ್ತಿಯನ್ನ ಹಾಕಿ ಕೆಲಸ ಮಾಡಿ ಹೆಸರನ್ನ ತರಿಸಿಕೊಟ್ಟರಲ್ಲದೆ, ಅತೀ ಹೆಚ್ಚು ಮಕ್ಕಳು ಆ ಬ್ಯಾಳಿ ಗುಡ್ಡಿ ಶಾಲೆಗೆ ಬರುವ  ಹಾಗೆ ಮಾಡಿದ್ದು ಇನ್ನೊಂದು ರೀತಿಯಲ್ಲಿ ಮಾಸ್ಟ್ರು ಕೃಷ್ಣ ಉಪಾಧ್ಯರ ಕುಟುಂಬಕ್ಕೆ ಇವರಿಂದ ಒಳ್ಳೇ ಕಪ್ಪ ಸಂದಾಯವೇ ಸರಿ!. ಏನೇ ಇರಲಿ, ಈ ಸದಿಯ (ಆಂಗ್ರೇಜಿಯಲ್ಲಿ ನಿಕ್ ನೇಮ್ ಅನ್ತಾರಲ್ಲಾ ಹಾಗೆ ಇವರಿಗೂ ಪ್ರೀತಿಯಿಂದ ಈ ಹೆಸರಿನಿಂದ ಕರೆಯುತ್ತಿದ್ದದ್ದು) ಎನ್ನುವ ಹೆಸರು ಹೋಗಿ ಕ್ರಮೇಣ ಪ್ರಸಿಧ್ಧವಾದ, ಗೌರವಿತರಾದ “ಸದಿಯ ಮಾಸ್ತರ್” ಆದರು! ಅದೂ ಈ ಹಳ್ಳಿಯಲ್ಲಿ! ಹಾಗೂ ಬ್ಯಾಳಿ ಗುಡ್ಡಿಯಲ್ಲಿ!  ಈಗ ಇವರ ಬಾಲ್ಯದ ಕಥೆಗೆ ಬರೋಣ.

ಸದಿಯ ಹಾಗೂ ಒಬ್ಬರೇ ಅಕ್ಕನಾದ ಭೀಮಕ್ಕ ಅಥವಾ ಭೀಮಜ್ಜಿ(ನಮಗೆಲ್ಲಅಂದರೇ ಇಡೀ ಊರವರಿಗೆ ಕೂಡಾ!) ಓಟ್ಟೊಟಿಗೆ ಬೆಳೆದವರು. ಈ ಭೀಮಕ್ಕನ ಮೇಲೆ ಎಲ್ಲಿಲ್ಲದ ಪ್ರೀತಿ ಈ ಸದಿಯನಿಗೆ (ಕ್ಷಮಿಸಿ ಮಗನಾಗಿ ಇಲ್ಲಿ ಏಕವಚನದಲ್ಲಿಯೇ ಬರೆಯುತ್ತಿರುವೆನು. ತಪ್ಪು ತಿಳಿಯದಿರಿ) ಈ  ಭೀಮಕ್ಕನ ಪುರಾಣ ಬೆಳಿಗ್ಗೆ ೪ ಗಂಟೆಗೆ ತನ್ನ ತಮ್ಮನ ಹತ್ತಿರ ಶುರುವಾಯಿತೆಂದರೆ ಅದು ಕೊನೆಗಾಗುವುದು ಬೆಳಿಗ್ಗೆ ೬ ಗಂಟೆಗೇ. ಅದೂ ನಮ್ಮ ಅಮ್ಮ ವಾಗಮ್ಮ ಬಯ್ಯುವರೆಗೆ ಆ ಪುರಾಣ ಈ ಸದಿಯನ ಹತ್ತಿರ ನಡೆಯುತ್ತಾ ಇರುತಿತ್ತು. ಆ ಪುರಾಣದಲ್ಲಿ ಹೆಚ್ಚಿನದ್ದು ಭೀಮಕ್ಕನ ಮಗ ಸೋಮಯ್ಯ ಮೈಯ್ಯರ ಮತ್ತು ಅವರ ಹೆಂಡತಿ ಗಂಗಮ್ಮನದ್ದೇ ಜಾಸ್ತಿ ಇರುತಿತ್ತು. ಭೀಮಕ್ಕನು ಬಹು ಬೇಗ ಮುಂಡಿಯಾಗಿದ್ದಳು. ಆದರೆ ನಮ್ಮ ಅಜ್ಜಯ್ಯನಿಗೆ ಅವರೊಬ್ಬರು ಮಗನಿಗಿಂತಲೂ ಹೆಚ್ಚಿಗೆ!  ಭೀಮಜ್ಜಿ ಹೇಳಿದ್ದು ಪರಮಜ್ಜನಿಗೆ ವೇದ ವಾಕ್ಯ. ಜಾಸ್ತಿ ಯಾಕೆ, ಪಾರಂಪಳ್ಳಿ, ಪಡುಕೆರೆಯಲ್ಲಿರುವ ,ನಮ್ಮ ಮೂಲ ಮನೆಯ ಇಡೀ ಅಡುಗೆ ಮನೆಯನ್ನ ಕಟ್ಟಿದವರೇ ಭೀಮಜ್ಜಿ. ಅದೂ ಅವರ ಸ್ವಂತ ಖರ್ಚಿನಲ್ಲಿ! ಇವರ ಗಂಡ ಆ ಕಾಲದಲ್ಲಿ ಸರ್ವೇಯರ್ ಆಗಿದ್ದರಂತೆ. ನೂರು ಚಿನ್ನದ ನಾಣ್ಯಗಳನ್ನೂ ಕಲೆ ಹಾಕಿದ್ದರೆಂದು ನಮ್ಮ ಅಪ್ಪನ ವರದಿ! ಅದು ಸುಳ್ಳಾಗಿರಲಿಲ್ಲ ಅನ್ನಿ. ಈ ಸಂಗ್ರಹಿಸಿದಂತಹ ನಾಣ್ಯಗಳು , ಮನೆಯನ್ನ ಅಳಿದು ಕಟ್ಟುವಾಗ, ಮನೆಯ ಹಳೆಯ ಗೋಡೆಯೊಳಗೆ ಸಿಕ್ಕಿತು ಅಂತ ನಮಗ್ ಸಿಕ್ಕಿದ ವರದಿಯಲ್ಲುಂಟೂ ಅನ್ನಿ! ಆ ನಾಣ್ಯಗಳಲ್ಲಿ, ನಮ್ಮ ಅಪ್ಪೈಯ್ಯ ೪ ನಾಣ್ಯಗಳನ್ನ ದುಡ್ಡು ಕೊಟ್ಟು ಕೊಂಡಿದ್ದರು. ಮತ್ತೆ ೨೫ ನಾಣ್ಯಗಳು ಸೋಮೈಯ್ಯ ಮೈಯ್ಯರ , ಅಂದರೆ ಭೀಮಜ್ಜಿಯ ಏಕ ಮಾತ್ರ ಪುತ್ರರ ಮಗಳ ಮದುವೆಗೆ ಸೊಂಟದ ಪಟ್ಟಿಯಿಂದ ಹಿಡಿದು, ಒಡವೆಗಳವರೆಗೆ ಖರ್ಚನ್ನ ಮಾಡಿದರಂತೆ!. ಮತ್ತುಳಿದ ನಾಣ್ಯಗಳ ಕಥೆ ಏನಾಯಿತೋ ಅಂತಾ ಈಗ ಕೇಳಿದರೆ ಅವರ ಯಾರೊಬ್ಬಮಕ್ಕಳಿಗೂ ಗೊತ್ತಿಲ್ಲವಂತೇ! ಬಿಡಿ ನಮಗೇಕೇ? ಬೇರವರ ಮನೆ ವಿಚಾರ? ಭೀಮಜ್ಜಿ ಗಂಡ ಸತ್ತ ಮೇಲೆ, ನಮ್ಮ ಪಡುಕೆರೆಯಲ್ಲಿರುವ ಅನಾದಿ ಮನೆಯಲ್ಲಿಯೇ, ಮನೆಕೆಲಸದಿಂದ ಹಿಡಿದು, ಗದ್ದೆ ಕೆಲಸದವರೆಗೆ ಹಾಗೂ ಸಮುದ್ರಕ್ಕೆ ಜಿಗಿದು ಬಳಿದುಕೊಂಡು ಬರುವಂತಹ ಸಾಮಾನುಗಳನ್ನ ಹಿಡಿದು ತರುವವರೆಗೆ ನಮ್ಮಜ್ಜ ಪರಮಜ್ಜನಿಗೆ ಊರುಗೋಲಾಗಿದ್ದರಂತೆ! ನಮ್ಮ ಊರಿನಲ್ಲಿರುವ ಹಳೇ ಮನೆಯಲ್ಲಿರುವ ಅಡುಗೇ ಮನೆಯನ್ನ ಕಟ್ಟಿಸಲೂ ಭೀಮಜ್ಜಿಯೇ ಕಾರಣೀಭೂತಳಂತೆ. ಹೆಚ್ಚೇಕೆ? ಅದು ಅವಳದ್ದೇ ದುಡ್ಡಂತೆ. ಪರಮಜ್ಜನ ಹಳೇ ಮನೆಯ ಮೇಲಿನ ಉಪ್ಪರಿಗೆಯವರೆಗೆ ಒಂದು ಕೊಗ್ಳ ಕಂಬವನ್ನ ಹಾಕಿರುವುದು ನೀವೆಲ್ಲಾ ಇವತ್ತಿಗೂ ನಮ್ಮ ಊರಿಗೆ ಹೋದಲ್ಲಿ ನೋಡಬಹುದು. ಏನೇ ಇರಲಿ, ಪರಮಜ್ಜ ಕಟ್ಟಿದಂತಹ ಮಣ್ಣಿನ ಮನೆಯ ವಿಚಾರವನ್ನ ಮಾತನಾಡಿದಾವಾಗ, ಇಲ್ಲಿ ಬಂತು ನೋಡಿ ನಮ್ಮ ಪರಮಜ್ಜನ ವಿಚಾರ. ಸದಿಯ ಮಾಸ್ತರ ಬಗ್ಗೆ ಹೇಳಬೇಕೆಂದರೆ, ಅವರ ಅಪ್ಪ, ಅಂದರೆ ನಮ್ಮ ಅಜ್ಜ, ಪರಮಜ್ಜನ ಬಗ್ಗೆ ಹೇಳಲೇ ಬೇಕು.

ಇವರ ಹೆಸರು ಪರಮೇಷ್ವರ ಉಪಾಧ್ಯರು. ಇವರು ಬಹಳ ಕಟ್ಟು ನಿಟ್ಟಿನ, ಸಿಟ್ಟಿನ ಮನುಷ್ಯರು ಹಾಗೂ ಬಹಳ ಕಸ್ಟವಾನಿಗಳು. ಪೂಜೆ ಪುನಸ್ಕಾರದಲ್ಲಿ ಎತ್ತಿದ ಕೈ. ಗ್ರಾಮದ ದೇವತೆಯಾದ ಇಸ್ಟದೇವತೆಗೆ ೧೦೮ ಗಾಯತ್ರೀ ಮಂತ್ರವನ್ನ ಹೇಳಿ ಒಂದು ಚಂಬು ನೀರನ್ನ ಪ್ರತೀ ದಿನವೂ ಹಾಕುವುದೆಂದರೆ, ನಮ್ಮ ಅಜ್ಜ ಪರಮಜ್ಜ ಮಾತ್ರ! ಆ ಪಾರಂಪಳ್ಳೀ , ಪಡುಕೆರೆಯಲ್ಲಿ!. ಆದರೆ ಒಂದೊಮ್ಮೆ, ಗ್ರಾಮ ಪಟೇಲರು, ಕೇರಳದ ಮಲೆಯಾಳೀ ಮಂತ್ರವಾದಿಯನ್ನ ಕರೆದು ಇಸ್ಟದೇವತೆಯ ಬಗ್ಗೆ ಪ್ರಶ್ನೆಯನ್ನ ಕೇಳಿದಾವಾಗ, ಆ ಮಂತ್ರವಾದಿ, ಹೀಗೆ ಹೇಳಿದ:-
" ನಿಮ್ಮಲ್ಲಿ ಯಾರೋ ಒಬ್ಬರು ದೇವರಿಗೆ ಗಾಯತ್ರೀ ಮಂತ್ರವನ್ನ ಹೇಳಿ, ನೀರನ್ನ ಹಾಕುವುದರಿಂದ, ದೇವರ ಕಳೆ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ" ಅಂದನಂತೆ.!"
ಅದು ಯಾರೂ ಎಂದು ಪಟೇಲರು ಯೋಚಿಸಿದಾವಾಗ, ಇದು ಪರಮಜ್ಜನ ಕೆಲಸ ಅಂತ ಗೊತ್ತಾಯುತು. ಒಂದು ದಿನ ಅವರು ಪೂಜೆಯಲ್ಲಿ ಕುಳಿತ್ತಿದ್ದಾವಾಗ, ಪಟೇಲರು ತಮ್ಮ ಇಬ್ಬರು ಆಪ್ತರಿಗೆ "ಅವನ ರೆಟ್ಟೆಯನ್ನ ಹಿಡಿದು ಆಚೆ ದಬ್ಬಿರೋ" ಅಂದರಂತೆ.
ಮುಂದೊಂದು ದಿನ ಇದೇ ರೀತಿ ಶ್ರಿಯುತರಾದ ಕಾಫಿಪುಡಿ ನಾರಾಯಣ ಉಪಾಧ್ಯರು ದಕ್ಕೆ ಬಲಿಯಲ್ಲಿ, ಪಟೇಲರನ್ನ ಎರಡೂ ಕೈಯಿಂದ ಹಿಡಿದು ದೇವಸ್ತಾನಕ್ಕೆ ಕರೆದೊಯ್ದಿದ್ದರು. ಇದು ಏಕೆಂದರೆ ಅವರು ನಾನು ಬರುವುದಿಲ್ಲ ಎಂದು ಹಠ ಮಾಡಿದ್ದಕ್ಕೆ. ಅವರು ಬಾರದೆ ಇಸ್ಟ ದೇವತೆಗೆ ಮಂಗಳಾರತಿ ಆಗುತ್ತಿಲ್ಲ. ಇರಲಿ ಈ ಕಥೆ ಬೇಡ ಈಗ. ಕಾರಣ ಇದನ್ನ ನಾನು ಆವಾಗಲೇ ನಿಮಗೆ ಈ ಬಗ್ಗೆ ಹೇಳಿರುತ್ತೇನೆ. ಪಟೇಲರು ಹೀಗೆ ಹೇಳಿದ್ದೇ ತಡ, ಆ ವ್ಯಕ್ತಿಗಳು ನಮ್ಮ ಅಜ್ಜ ಪೂಜೆಯನ್ನ ಮಾಡುತ್ತಿದ್ದವರ ರೆಟ್ಟೆಯನ್ನ ಹಿಡಿದು ಹೊರಗೆ ಎಳೆದು ಹಾಕಿದರು. ಇದನ್ನ ಸಹಿಸದ ನಮ್ಮ ಅಜ್ಜ, ಪರಮಜ್ಜ, ತಂಬಿಗೆ ನೀರನ್ನ ಮರಳಿನ ಮೇಲೆ ಸಂಪೂರ್ಣ ಸುರಿದು, ನೀವು ಹಾಳಾಗಿ ಹೋಗಿ ಅಂತ ಶಾಪ ಕೊಟ್ಟರಂತೆ. ಆ ಉರಿ ಬಿಸಿಲಿನಲ್ಲಿ, ಅದೂ ಮಟ ಮಟ ಮಧ್ಯಾಹ್ನದಲ್ಲಿ, ಸುಡುತ್ತಿರುವ ಹೊಯಿಗೆಯಲ್ಲಿ, ಸಿಟ್ಟಿನಲ್ಲಿ ಬೇಗನೆ ಒಂದು ಬಿಳಿ ಬೆಣಚು ಕಲ್ಲನ್ನೊಂದು ಹಿಡಿದು, ಮನೆಗೆ ಬಂದು, ಸದಿಯನಿಗೆ, ಹೇಳಿದರು:-ಇನ್ನು ಮುಂದೆ ಇದೇ ಇಸ್ಟದೇವತೆ ಎಂದು ಮನೆಯಲ್ಲಿಯೇ ದೇವರ ಗೂಡಿನಲ್ಲಿಟ್ಟು ಪೂಜೆಯನ್ನ ಮಾಡಿ. ಅದಕ್ಕಾಗಿ ನೀವುಗಳು ದೇವರ ಗುಡಿಗೆ ಹೋಗುವ ಅಗತ್ಯವಿಲ್ಲ ಅಂದರು. ಮರುದಿನದಿಂದ, ನಮ್ಮ ಅಜ್ಜೈಯ್ಯನು, ಆ ಕಲ್ಲನ್ನೇ ಇಸ್ಟದೇವತೆಯೆಂದು ಪೂಜಿಸತೊಡಗಿದರು. ಆದರೆ ಮುಂದೆ ಏನಾಯಿತೆಂದರೆ, ಇಬ್ಬರು ರೆಟ್ಟೆಯನ್ನ ಹಿಡಿದು ಹೊರಗೆ ಹಾಕಿದಂತಹ ಆ ಇಬ್ಬರಲ್ಲಿ ಒಬ್ಬರಿಗೆ ಲಕ್ವ ಹೊಡೆದು, ಕೊನೆಗೆ ಅವರಿಗೆ ಬ್ರಹ್ಮಾವರಕ್ಕೆ ಹೋಗಿ ಪಾರಿವಾಳದ ಎಣ್ಣೆಯನ್ನ ತಂದು ಮೊಸ್ಸೇಜ್ ಮಾಡಲು ನಮ್ಮ ಅಪ್ಪ ಸದಿಯ ಮಾಸ್ತರೇ ಬೇಕಾಯಿತು.! ಅವರ ಮನೆ ಸುಮಾರು ೧೫ ವರುಷಗಳ ಕಾಲ ಭೂತ ಬಂಗ್ಲೆಯಂತೆ ಇದ್ದಿತ್ತು. ಇನ್ನೊಬ್ಬರು ದೈವಾಧೀನರಾದರೆಂದು ವದಂತಿ. ಇದನ್ನ ಯಾಕೆ ಹೇಳಿದೆನೆಂದರೆ, ನಮ್ಮ ಅಜ್ಜನ ಮಾತು ಬಹಳ ಸತ್ಯವಾಗಿ ನಡೆಯುತ್ತಿತ್ತಂತೆ. ಇದಕ್ಕೆ ಅವರು ಮಾಡುವ ಶ್ರಧ್ಧೆಯ ಪೂಜೆಯೇ ಕಾರಣವಂತೆ ಅಂತ ಅಪ್ಪಯ್ಯ ಹೇಳುತ್ತಿದ್ದರು. ಇವರ ಸಿಟ್ಟು ನೆತ್ತಿಯ ಮೇಲೆಯೇ ಇರುತ್ತದಂತೆ. ಈಗ ಅದೇ ಸಿಟ್ಟು ನನಗೆ ಬಂದಿದೆ ಅಂತ ಅಮ್ಮ ಮತ್ತು ಅಪ್ಪಯ್ಯ ಹೇಳುತ್ತಿದ್ದರು. ಇದನ್ನ ನೀವು ಜ್ನಾನ ಪೀಠ ಪುರಸ್ಕರಿತ, ಶ್ರೀ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಅಥವಾ ಮರಳಿ ಮಣ್ಣಿಗೆ ಪುಸ್ತಕದಲ್ಲಿ ವ್ಯಕ್ತವಾಗಿದೆಯಂತೆ. ಅದರಲ್ಲಿ ನಮ್ಮ ಅಜ್ಜನು ಬೇಲಿಯ ಮೇಲೆ ಇರುವಂತಹ ಸರ್ಪದ ಹೆಡೆಯಾಕಾರದಲ್ಲಿ ಬೆಳೆದಿರುವ ಸರ್ಪಕಳ್ಳೀ ಮುಳ್ಳಿನಿಂದ ನಮ್ಮ ಅಜ್ಜಿ ಕಾವೇರಮ್ಮನಿಗೆ ಆ ಸಿಟ್ಟು ಬಂದಾವಾಗ ಹೊಡೆದಿರುವುದು ಉಲ್ಲೇಖಗೊಂಡಿದೆಯಂತೆ. ನಾನಿನ್ನೂ ಆ ಪುಸ್ತಕವನ್ನ ಓದಬೇಕಸ್ಟೆ. ಮೊನ್ನೆಯ ದಿನ ತೆಗೆದುಕೊಂಡು ಬಂದಿದೆ. ಆದರೆ ನಮ್ಮ ಮನೆಯನ್ನ ಕ್ಲೀನ್ ಮಾಡುವ ನಿಟ್ಟಿನಲ್ಲಿ, ನಮ್ಮ ಎರಡೂ ಹೆಣ್ಣು ಮಕ್ಕಳಿಗೆ ಕನ್ನಡ ಬಾರದ ಕಾರಣ, ಎಲ್ಲಾ ನನ್ನ ಕನ್ನಡ  ಪುಸ್ತಕಗಳನ್ನ (ಅದರಲ್ಲಿ ಶಿವರಾಮ ಕಾರಂತರ ಪುಸ್ತಕ ಮೂಕಜ್ಜಿಯ ಕನಸುಗಳು ಹಾಗೂ ಮರಳಿ ಮಣ್ಣಿಗೆಯೂ ಇತ್ತು. ಅದನ್ನ ಕೇಜಿಗೆ ರೂಪಾಯಿ ೨೦ ರಂತೆ ಹಳೆ ಪುಸ್ತಕ, ಹಳೆ ಸಾಮಾನೂ ಅಂತ ರಸ್ತೆಯಲ್ಲಿ ಕೂಗುತ್ತಾ ಬರುವಂತಹ ವ್ಯಕ್ತಿಗೆ ಮಾರಿದರು ಅಂದರೆ ಇವರನ್ನ ಏನನ್ನಬೇಕು? ಇವರ ಕಥೆ ಹಾಗೇ ಇರಲಿ. ನಮ್ಮ ಅಪ್ಪೈಯ್ಯನಿಗೆ ಮಾತ್ರ, ಅವರಮ್ಮನ ತಾಳ್ಮೆಯ ಗುಣ ಬಂದಿದೆ ಅಂತ ನಮ್ಮ ಭೀಮಜ್ಜೀ ಹೇಳುತ್ತಿದ್ದರು. ಅದಿರಲಿ, ನಮ್ಮ ಅಪ್ಪಯ್ಯ ಮಾತ್ರ ಆ ಕಾಲದಲ್ಲಿ ಕುಂದಾಪುರ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಸುಮಾರು ೯ ವರುಷಗಳ ಕಾಲ ಬುಕ್ ಬೈಂಡಿಂಗ್ ಮಾಡುತ್ತಿದ್ದರಂತೆ. ಅವರ ಜೊತೆಯಲ್ಲಿ ಕುಂದಾಪುರ ಖ್ಯಾತ ಜ್ಯೋತಿಷ್ಯಗಳಾದ ಯಜ್ನ ಹೊಳ್ಳರೂ ಇದ್ದರಂತೆ. ಆದ್ದರಿಂದ ಅವರಿಗೂ ನಮ್ಮ ಅಪ್ಪಯ್ಯನಿಗೂ ಗಳಸ್ಯ-ಕಂಠಸ್ಯ. ಅವರ ಮಗನಾದ ದಿವಂಗತ ಸೂರ್ಯ ಹೊಳ್ಳರೂ ನನ್ನ ಆಪ್ತ ಸ್ನೇಹಿತರಾಗಿದ್ದರೆನ್ನೀ. ಇದು ಹಾಗೇ ಇರಲಿಇರಲಿ ಈಗ.

ಕೊನೆಗೆ ಒಂದು ದಿನ ನಮ್ಮ ಅಪ್ಪಯ್ಯ ಬೆಳಿಗ್ಗೆ ಎದ್ದು ಬೆಂಗಳೂರಿಗೆ ಪದ್ರಾಡ್ (ಓಡೀ ಹೋದರು). ಇದನ್ನ ನಮ್ಮ ಸೂಲ್ಕನಡಿ ಗೆದ್ದೆಯಲ್ಲಿ ಕೆಲಸವನ್ನ ಮಾಡುತ್ತಿದ್ದ ಭೀಮಜ್ಜಿ ನೋಡಿತಂತೆ. ಣೋದಿ, ಯೋ ಸದಿಯಾ ಎಲ್ಲಿಗೋಡ್ ಹೋಗುತ್ತೀಯಾ? ಮಹಾರಾಯಾ ಎಂತ ಬೊಬ್ಬೆ ಇಟ್ಟಿತಂತೇ ಅದೇ ಗದ್ದೆಯಲ್ಲಿ. ಇದನ್ನ ನೋಡಿದ ಅಪ್ಪೈಯ್ಯ,  ಭೀಮಜ್ಜಿಯ ಹತ್ತಿರ ಬಂದು, ಅಪ್ಪಯ್ಯನಿಗೆ ನಾನು ಹೋದ ಮೇಲೆ ಹೇಳು ಅಂತ ಬೆಂಗಳೂರಿನ ಅವೆನ್ಯೂ ರೋಡಿನಲ್ಲಿರುವ ಒಂಟೀ ರಾಮನ ಹೋಟೆಲ್ಲಿಗೆ ಕೆಲಸಕ್ಕೆ ಬಂದರಂತೆ. ಅಲ್ಲಿ ಸ್ವಲ್ಪ ಕಾಲ ಕೆಲಸವನ್ನ ಮಾಡಿ, ಆ ಮೇಲೆ ಬಳೇ ಪೇಟೆ ಕೃಷ್ಣಭವನದಲ್ಲಿ ಸೇರಿಕೊಂಡರು. ಇವರೊಂದಿಗೆ ಈಗಿನ ಮೆಜೆಸ್ಟಿಕ್ನಲ್ಲಿರುವ ರಾಮಕೃಷ್ಣ ಲೋಡ್ಜಿನ ಮಾಲಿಕರಾದ, ಐರೋಡಿಯ ಕಾಡ ಅಲ್ಸೇಯವರು, ಸಿದ್ದಿ ಕಟ್ಟೆ ರಾಮ ಅಲ್ಸೇರು , ಶೇಷಪ್ಪ ಹೊಳ್ಳರು ಹಾಗೂ ಇನ್ನಿತರರು ಇರುತ್ತಿದ್ದರಂತೆ. ಅಲ್ಲಿ ಹಲವು ವರುಷಗಳ ಕಾಲ ಕೆಲಸವನ್ನ ಮಾಡುತ್ತಿದ್ದರಂತೆ. ಇಲ್ಲಿನ ಕೆಲವು ಅನುಭವಗಳನ್ನ ಅವರು ಹೇಳಿದ್ದು ಕೇಳಿದರೆ ನಮಗೂ ಮೈ ರೋಮಾಂಚನವಾಗುತ್ತೆ. ಒಂದೊಮ್ಮೆ ಕೋಂಪಿಟಿಷನ್ನಲ್ಲಿ ೪೪ ಜಿಲೇಬಿಯನ್ನ ತಿಂದು ಆಮೇಲೆ ಪೂರಾ ವಾಂತಿ ಮಾಡಿದ್ದರಂತೆ. ಕುದುರೆ ರೇಸಿಗೆ ಹೋಗಿ ರೂಪಾಯಿ ೧೦ ಹಾಕಿ ೨೦ ಮಾಡಿದ್ದು ಆಮೇಲೆ ಅಲ್ಲಿಗೆ ಹೋಗಲು ನಿಲ್ಲಿಸಿದ್ದರಂತೆ. ಅಸ್ಟೇಕೆ ಪ್ರತಿಜ್ನೆಯನ್ನೇ ಮಾಡಿದ್ದರಂತೆ. ಇವರು ಕಾಣಲು ಸೊಣಕಲು ಇದ್ದರೂ ಊಟ ತಿಂಡಿಯಲ್ಲಿ ಬಕಾಸುರನೇ ಆಗಿದ್ದರು!. ಈ ಹೆಸರನ್ನ ಈಗ ನನಗೂ ಮನೆಯಲ್ಲಿ ಹೇಳುತ್ತಾರೆನ್ನಿ! ಆದರೆ ಎಸ್ಟೇ ತಿಂದರೂ ಅವರಿಗೆ ಹೊಟ್ಟೆ ಬರುತ್ತಿರಲಿಲ್ಲ. ಇದಕ್ಕೆ ಕಾರಣ ಬೆಳಿಗ್ಗೆ, ಅಂದರೆ ಬ್ರಾಹ್ಮ್ಯ ಮುಹೂರ್ಥದಲ್ಲಿ ಬರೀ ಕಾಲಿನಲ್ಲಿ ಗದ್ದೆಗಳಿಗೆ ಸುತ್ತು ಹಾಕಿ ಸುಮಾರು ೪ ರಿಂದ ೫ ಕಿಲೋಮೀಟರ್ ನಡೆಯುತ್ತಿದ್ದರು. ಬೆಳಿಗ್ಗೆ ಎದ್ದು ಕೊಚ್ಚಕ್ಕಿ ಗಂಜಿಯನ್ನ ಊಟ ಮಾಡಿ ಶಾಲೆಗೆ ಹೋಗುತ್ತಿದ್ದರು. ಮಧ್ಯಾಹ್ನ ಒಂದು ಗಂಟೆಗೆ ಊಟ ಮಾಡಿದ್ದು, ಒಂದೂ ಮುಕ್ಕಾಲು ಗಂಟೆಯವರೆಗೆ ನಿದ್ದೆ ಮಾಡಿದ್ದು, ಆ ಮೇಲೆ ಶಾಲೆಗೆ ಹೋಗುತ್ತಿದ್ದರು. ಸಾಯಂಕಾಲ, ಶಾಲೆಯಿಂದ ಬಂದ ಮೇಲೆ ಸಾಲಿಗ್ರಾಮ ಪೇಟೆಗೆ ತಪ್ಪದೆಯೇ ಹೋಗುತ್ತಿದ್ದರು. ರಾತ್ರಿ ೮ ಗಂಟೆಗೆ ಊಟ ಮಾಡಿದ್ದು, ೮.೩೦ ಗೆ ನಿದ್ದೆಗೆ ಶರಣು ಹೋಗುತ್ತಿದ್ದರು!.ಇದು ಅವರ ದೈನಂದಿನ ಕ್ರಮವಾಗಿತ್ತು! ಈ ಒಂದು ಶಿಸ್ತು ಕೊನೆಯವರೆಗೆ ಪಾಲನೆ ಮಾಡಿಕೊಂಡು ಬಂದಿದ್ದರು. ಈವಾಗಲೂ ನಮ್ಮ ಅಣ್ಣ ತಮ್ಮಂದಿರಲ್ಲಿ ಈ ಶಿಸ್ತನ್ನ ನೀವುಗಳು ಕಾಣಬಹುದು. ನಮ್ಮಲ್ಲಿ ಊಟವಿದ್ದಲ್ಲಿ , ಅಂದರೆ ಯಾವುದೇ ಸಮಾರಂಭಗಳಿದ್ದಲ್ಲಿ ಠಣ್ ಎಂದು ೧ ಗಂಟೆಗೆ ಬಾಳೆ ಎಲೆ ಬೀಳುತ್ತದೆ. ಅದು ಸುಮಾರು ೧೯೫೦ಯಿಂದಲೇ ಶುರುವಾದಂತಹ ಒಂದು ಶಿಸ್ತು ಬದ್ಧವಾದ ಕ್ರಮ. ಇದು ಹೀಗೇ ಇರಲಿ. ಈ ಹೋಟೆಲ್ಲಿನಲ್ಲಿರುವ ಖುಷಿಯಿಂದಿರುವ ಈ ಸದಿಯ ಮಾಸ್ತರನ್ನ ಹೇಗೆ ಊರಿಗೆ ಕರೆದು ಗುಡ್ಡೀ ಶಾಲೆಗೆ ಸೇರಿಸಿದರೆಂದು ಈಗ ತಿಳಿಯೋಣ. ಈ ಕೃಷ್ಣ ಭವನ್ನಿಂದ, ಎಂಕ್ಟೈಯ್ಯನ ಮನೆ ಈಗಿನ ವಿವೇಕಾ ಜೂನಿಯರ್ ಕಾಲೇಜಿನ ನಿವ್ರತ್ತ ಪ್ರಾಧ್ಯಾಪಕರಾದ, ಶ್ರೀಯುತರಾದ ಶ್ರೀಧರ ಉಪಾಧ್ಯ ಹಾಗೂ ಅವರ ಅಣ್ಣ ಮಹಾಬಲೇಷ್ವರ ಉಪಾಧ್ಯರ ತಂದೆಯವರಾದ ದಿವಂಗತ ಕೃಷ್ಣ ಉಪಾಧ್ಯರು ನಮ್ಮ ಅಜ್ಜನ ಹೇಳಿಕೆಯ ಮೇರೆಗೆ ಬೆಂಗಳೂರಿಗೆ ಬಂದು ಊರಿಗೆ ಕರೆದುಕೊಂಡು ಹೋದರಂತೆ. ಇವರನ್ನ ಮಾಸ್ಟ್ರು ಕೃಷ್ಣ ಉಪಾಧ್ಯರು ಮಾಡಿದಂತಹ ಗುಡ್ಡೀ ಶಾಲೆಗೆ ರೂಪಾಯಿ ೫.೦೦ ಪ್ರತೀ ತಿಂಗಳ ಸಂಬಳಕ್ಕೆ ಸೇರುವಂತೆ ಮಾಡಿದರು. ಆ ಮೇಲೆ ಇವರು ಟೀಚರ್ ಹುದ್ದೆಗೆ ಟ್ರೈನಿಂಗನ್ನ ಪಡೆದು ಪೂರ್ತಿಯಾಗಿ ಪ್ರಾಧ್ಯಾಪಕರಾಗಿ ಒಂದನೇ ಕ್ಲಾಸಿನಲ್ಲಿ ಪಾಠವನ್ನ ಹೇಳುತ್ತಿದ್ದರು.

ಇವರ ಇನ್ನೊಂದು ವಿಶೇಷವೇನೆಂದರೆ ಪೂರ್ತಿಯಾಗಿ ತಮ್ಮ ಕಾರ್ಯದಲ್ಲಿ ಮಗ್ನನಾಗುವುದು ಹಾಗೂ ಇವರಲ್ಲಿರುವ ಹೊರಹೊಮ್ಮುವಂತಹ ಬಹುಮುಖ ಪ್ರತಿಭೆ. ಇವರಲ್ಲಿ ಹಾಡು ಹೇಳುವ, ಕಥೆ ಹೇಳುವ ಹಾಗೂ ಬರೆಯುವ, ನಾಟಕವನ್ನ ಬರೆಯುವ ಹಾಗೂ ನಿರೂಪಿಸುವ, ನೃತ್ಯವನ್ನ ಹೇಳಿಕೊಟ್ಟು ಮಕ್ಕಳನ್ನ ವಾರ್ಷಿಕೋತ್ಸವದಲ್ಲಿ ಕುಣಿಸುವಂತಹ, ಭಜನೆಯನ್ನ ಹಾಡುವಂತಹ ಹಲವು ಪ್ರತಿಭೆಗಳು ಇರುತ್ತಿದ್ದವು. ಇವಿಸ್ಟೂ ಜನರನ್ನ ರಮಿಸಿ ಹೆಸರನ್ನ ಗಿಟ್ಟಿಸುವ ಹಾಗೂ ಎಲ್ಲರೂ ಸದೀ ಮಾಸ್ತರ್ , ಸದೀ ಮಾಸ್ತರ್ ಅಂತ ಹೇಳಲೀ ಅನ್ನುವ ಒಂದು ದುರಾಸೆಯೂ ಒಳಗೊಳಗೇ ಇರುತ್ತಿರುವುದೇ ಇವರ ಬಹುಮುಖ ಪ್ರತಿಭೆ ಅರಳಲು ಕಾರಣವಾಯಿತು. ಇವರ ಮಕ್ಕಳೆಲ್ಲರನ್ನೂ  ಈ ಕಾರ್ಯದಲ್ಲಿ ನಮ್ಮ ಅಪ್ಪಯ್ಯ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಶಾಲಾ ವಾರ್ಷಿಕ ಹಬ್ಬದಲ್ಲಿ, ಹಿರಣ್ಯ ಕಷ್ಯಪುವಿನ ನಾಟಕ, ಸತ್ಯ ಹರಿಚಂದ್ರನ ನಾಟಕ ಇವರದ್ದು ಬಹಳ ಹೆಸರುವಾಸಿ ಆಯಿತು. ಇವರ ಮಗ ಸುರೇಂದ್ರನು, ಅಜ್ಜಿ ವೇಷ, ಸತ್ಯ ಹರಿಶ್ಚಂದ್ರನ ಪಾತ್ರ, ಹಿರಣ್ಯ ಕಷ್ಯಪುವಿನ ಪಾತ್ರ, ಹೆಣ್ಣೀನ ವೇಷ ಹೀಗೆ ವಿವಿಧ ಪಾರ್ಟನ್ನ ಹಾಕಿದ್ದು ಬಹಳ ಹೆಸರುವಾಸಿಯಾದನೆಂದರೆ ಅದು ಅತಿಷಯವಾಗದು. ಅದೇ ನಮ್ಮ ರಮೇಶಣ್ಣನು ಹನುಮಂತನ ವೇಷದಲ್ಲಿ ಮಿಂಚಿದನಂತೆ. ಇದರಿಂದಾಗಿ ಸದೀ ಮಾಸ್ತರ ಮಕ್ಕಳೂ ಕೇರಿಯಲ್ಲಿ, ಊರಿನಲ್ಲಿ ಹೆಸರುವಾಸಿಯಾದರು. ಊಟಕ್ಕೆಲ್ಲಿಯಾದರೂ ಹೋದಲ್ಲಿ, "ಓ ಇವನು ಸದೀ ಮಾಸ್ತರ ಮಗ ಅಲ್ಲವಾ" ಅಂತ ಒಂದು ರೂಪಾಯಿ ಹೆಚ್ಚಿಗೆ ದಕ್ಷಿಣೆಯನ್ನ ಕೊಡುತ್ತಿದ್ದರು. ಅದನ್ನ ಆ ಮೇಲೆ ಮನೆಗೆ ಬಂದಾವಾಗ , ಅಪ್ಪಯ್ಯ ತೆಗೆದುಕೊಳ್ಳುತ್ತಿದ್ದರು. ಕಾರಣ ನನ್ನ ಹೆಸರಿನಿಂದ ನಿನಗೆ ಹೆಚ್ಚಿಗೆ ದಕ್ಷಿಣೆ ಕೊಟ್ರಪ್ಪಾ, ಅಂತ!. ಇದು ಕೂಡ ಬಡತನಕ್ಕೆ ಒಂದು ನಿದರ್ಷನ. ಏಕೆಂದರೆ ಸದೀ ಮಾಸ್ತರ ಹತ್ತಿರ ಇರುವುದು ಬರೇ ಮೂರು ಮುಡಿ ಗದ್ದೆಮಾತ್ರ!. ಆದರೆ ಇವರ ಸಮಯದಲ್ಲಿ, ಅದನ್ನ ಐದು ಮುಡಿಗೆ ಏರಿಸಿದರು. ಅದು ಹೇಗೆಂದರೆ, ಶಾಲೆಯ ಸಂಬಳವಲ್ಲ. ಇವರಿಗೆ ಒಂದು ಚಟವಿತ್ತು. ಅದೇನೆಂದರೆ, ಚಿನ್ನವನ್ನ ಅಡ ಇಟ್ಟುಕೊಂಡು ಅದರ ಮೇಲೆ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ನಮ್ಮೂರ ಶೂದ್ರರೂ, ಮೊಗೇರರೂ ಹಾಗೂ ಬ್ರಾಹ್ಮಣರೂ, ಬೇಧ ಭಾವವಿಲ್ಲದೇ ಇವರ ಹತ್ತಿರ ಬಂದು ಸಾಲವನ್ನ ತೆಗೆದುಕೊಂಡು ಹೋಗುತ್ತಿದ್ದರು. ಅದು ಒಂದು ವೇಳೆ ಮೂಲಕ್ಕೆ ಬಡ್ಡೀ ಸೇರಿ ತೀರಿಸಲು ಅವರಿಗೆ ಕಸ್ಟವಾದಲ್ಲಿ, ಅಡವಿಟ್ಟ ಮಾಲು ಸದೀ ಮಾಸ್ತರಿಗೇ!. ಇದೇ ರೀತಿ ಪಾತ್ರಗಳನ್ನೂ ಅಡವಿಟ್ಟುಕೊಂಡು ದುಡ್ಡು ಕೊಡುತ್ತಿದ್ದರು. ಹೀಗೆ ಇವರ (ನಮ್ಮ)ಮನೆಯಲ್ಲಿ ೫೦೦ ಅಡಿ ಸಂತರ್ಪಣೆ ಮಾಡುವಸ್ಟು ಪಾತ್ರಗಳು ಇರಲು ಕಾರಣ. ನಾಲ್ಕು ಅಕ್ಕಿ ಹಪ್ಪಳ ಇಡುವಸ್ಟು ತಾಮ್ರದ ದೊಡ್ಡ ಹಂಡೆಗಳು ನಮ್ಮ ಮನೆಯಲ್ಲಿದ್ದವು. ಈಗ ಅದು ಎಲ್ಲಿಗೆ ಹೋಯಿತೆಂದು ಮಾತ್ರ ಕೇಳಬೇಡಿ.! ಅದೂ ನಮಗೂ ಬೇಡ ಬಿಡಿ. ಆದರೆ ನಮ್ಮ ಅಪ್ಪಯ್ಯನ ಕಸ್ಟ ಹೀಗುಂಟೂ ಅಂತ ಹೇಳಿದೆ ಅಸ್ಟೆ. ಹೀಗೆ ಸೆಣ್ಸಿಗೆ ಒಂದು ಮುಡಿ ಹೆಚ್ಚು ಭತ್ತ ಬೆಳೆದು, ಬಡ್ಡಿಗೆ ಕೊಟ್ಟು ದುಡ್ಡನ್ನ ಇಮ್ಮಡಿ ಮಾಡಿದ್ದು, ಮನೆಯಲ್ಲಿ ಹದಾ ಖರ್ಚನ್ನ ಮಾಡುತಿದ್ದದ್ದು ಇವರು ಪೈಸಾ, ಪೈಸಾ ಜೋಡಿಸಿದ್ದನ್ನ ನೋಡಿದರೆ, ಜೀವನ ಎಸ್ಟು ಕಸ್ಟ ಅಂತ ಈಗ ನಮಗೆ ತಿಳಿಯುತ್ತದೆ. ಆದರೆ ಇದನ್ನೇ ಜನರು ಸದಿಯ ಮಾಸ್ತರು ಕಂಜೂಸ್ ಅಂತ ಹೇಳಿದ್ದೂ ನನ್ನ ಕಿವಿಗೆ ಬಿದ್ದಿದೆ. ಆದರೆ ಈ ಹೇಳಿದ ವ್ಯಕ್ತಿಗಳು ಏನೂ ಧಾರಾಳಿಗಳಲ್ಲ ಅಂತ ನಿಮಗೆ ನಾನು ಹೇಳುತ್ತೇನೆ. ಊರಿನಲ್ಲಿ ಕೆಲವರು ಬೇರವರಿಗೆ ಹೇಳಲೋಸುಗ ಇರ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.ಆದರೆ ನಮ್ಮ ಅಪ್ಪಯ್ಯ ವ್ಯರ್ಥ ಖರ್ಚನ್ನ ಯಾವಾಗಲೂ ಮಾಡಲಾರರು ಹಾಗೂ ತಮ್ಮ ಮಕ್ಕಳಿಗೆ ಮಾಡಲು ಬಿಡುವುದಿಲ್ಲ.

ಈ ಬಡ್ಡೀ ವ್ಯವಹಾರ ಬಹಳ ತಪ್ಪು ಅಂತ ತಿಳಿಯಲು ಅವರು ಸುಮಾರು ೬೦ ವರುಷಗಳನ್ನೇ ತೆಗೆದುಕೊಂಡರೆಂದರೆ ಸಖೇದಾಸ್ಚರ್ಯ ಪಡಬೇಕಿಲ್ಲ! ಕಾರಣ ಇವರು ಆ ಕಾಲದಲ್ಲಿ ಸಂಸಾರವನ್ನ ಸಾಗಿಸುವುದೇ ಬಹಳ ಕಸ್ಟಕರವಾಗಿತ್ತು. ಆವಾಗಲೇ ಇವರು ಸುಮಾರಿಗೆ ಮೂರು ಮುಡಿ ಗದ್ದೆಯಿಂದ,  ೫ ಮುಡಿ ಗದ್ದೆಯನ್ನ ಬೆಳೆಗೆ ಅಳವಳಿಸಿಕೊಂಡಿದ್ದರು. ವರ್ಷಕ್ಕೆ ಮೂರು ಬೆಳೆಯನ್ನ ತೆಗೆಯುತ್ತಿದ್ದರು. ಮಕ್ಕಳ ಮದುವೆಯೂ ಸುಮಾರಿಗೆ ಮುಗಿಯುತ್ತಾ ಬಂದಿತೆಂದರೆ ತಪ್ಪಾಗದು. ನನ್ನ ಹಾಗೂ ನನ್ನ ತಂಗಿ ಶಾಂತಳ ಮದುವೆ ಮಾತ್ರ ಉಳಿದಿತ್ತು. ಕೊನೆಗೆ, ಮಾಡಿದ ತಪ್ಪಿಗೆ ಪ್ರಾಯಸ್ಚಿತ್ತವಾಗಿ ಹಾಗೂ ಪರಿಹಾರಾರ್ಥವಾಗಿ ಇದಕ್ಕೊಂದು ಶಾಂತಿಯನ್ನ ಮಾಡಿ, ಸುಮಾರು ೩೦೦ ಜನರಿಗೆ ಊಟವನ್ನ ಹಾಕಿ, ಬ್ರಾಹ್ಮಣರಿಗೆ ಕೈ ನೀಡಿ ದಕ್ಷಿಣೆಯನ್ನ ಕೊಟ್ಟಿದ್ದರು. ಸಮಾರಂಭದ ಅಂತ್ಯದಲ್ಲಿ ಇವರೊಂದು ಸಣ್ಣ ಭಾಷಣ ಮಾಡಿದ್ದು, ಅದರಲ್ಲಿ ತನ್ನ ಈ ತಪ್ಪನ್ನ ಸಾರ್ವಜನಿಕರ ಸಮಕ್ಷಮದಲ್ಲಿ ತೋಡಿಕೊಂಡಿದ್ದು, ಇನ್ಮೇಲೆ ಈ ವ್ಯವಹಾರಕ್ಕೆ ತಿಲಾಂಜಲಿಯನ್ನ ಕೊಟ್ಟಿದ್ದೇನೇ ಎಂದರು. ಈ ಮಾಡಿದಂತಹ ತಪ್ಪನ್ನ ಪಬ್ಲಿಕನಲ್ಲಿ ಒಪ್ಪಿಕೊಳ್ಳಲು ಎಸ್ಟು ಮಂದಿಗೆ ಎದೆಗಾರಿಕೆ ಉಂಟೆಂದು ನೀವೇ ಯೊಚಿಸಿ! ಅದಕ್ಕೆ ಗುಂಡ್ಮಿ ಸೋಮಯ್ಯ ಮೈಯರು, ಅರ್ಥಾತ್, ನಮ್ಮ ಭಾವಯ್ಯನವರು, ಭೀಮಜ್ಜಿಯ ಏಕೈಕ ಪುತ್ರರು ಹಾಗೂ  ಅಪ್ಪಯ್ಯನ ಏಕೈಕ ಸೋದರ ಅಳಿಯನವರು ಈ ರೀತಿ ನುಡಿದಿದ್ದರು. " ಕಾಣ್, ಮಾವ ಮಾಡಿದ ಪಾಪಕ್ಕೆ ಈಗ ಕೈ ಎಳ್ದೆಳ್ದು ದಕ್ಷಿಣೆ, ದಾನ ಕೊಡ್ತಾನೆ. ಈ ತರ ಮಾಡಿದರೆ ಬೇರವರಿಗೂ ತೊಂದರೆ ಆದೀತು ಅಂತ ಅವನಿಗೆ ಅನ್ನಿಸಲೇ ಇಲ್ಲ!" ಅಂತ ಅಂದದ್ದುಈಗಲೂ ನನಗೆ ಜ್ನಾಪಕ್ಕಿದೆ. ಇದನ್ನ ಅಪ್ಪಯ್ಯನಿಗೆ ಹೇಳಿದರೆ ಹ್ಹಹ್ಹಹ್ಹಹಹಾ ಅಂತ ನಕ್ಕು ಸೋಮೈಯ್ಯಾ ಹಾಗೀ ಬಿಡಪ್ಪಾ ಅಂತ ಸುಮ್ಮನಿರುತ್ತಿದ್ದರು.

ನಾನು ಹುಟ್ಟಿದಾವಾಗ ಬಹುಷ್ಯ ನಮ್ಮ ಅಜ್ಜ ತೀರಿಕೊಂಡ ಹಾಗಿತ್ತು. ಕಾರಣ ನಮ್ಮ ಅಜ್ಜನ ನೆನೆಪು ನನಗಿಲ್ಲ. ಆದರೆ ಅವರ ಸತ್ತದ್ದು ಒಂದು ವಿಚಿತ್ರದ ಸನ್ನಿವೇಷವೆಂದು ಆ ಕಥೆಯನ್ನ ನಮಗೆಲ್ಲಾ ಅಪ್ಪಯ್ಯ ಹೇಳುತ್ತಿದ್ದರು. ಅದೊಂದು ಬಹಳ ವಿಶೇಷ ಸಾವು. ಪರಮಜ್ಜನದ್ದು ಭೀಷ್ಮ ಮರಣ! ಅದೊಂದು ಇಛ್ಛಾಮರಣವಾಗಿತ್ತು. ಇಲ್ಲಿ ಅದರ ಕಥೆಯನ್ನ ಹೇಳ್ತೇನೆ ಕೇಳಿ. ಬೆಳಿಗ್ಗೆ ಬೆಳಿಗ್ಗೆ ಓ ಸದಿಯಾ ಬೇಗ ಗಂಜೀ ಊಟ ಮಾಡು. ಅಪ್ಪಯ್ಯ ಏಕೆ ಅಂತ ಈ ಮಗ, ಸದಿಯ ಕೇಳಿದಾವಾಗ, ನೀ ಸುಮ್ನೆ ಮಾತ್ನಾಡದೆ ಹೋಗಿ ಊಟ ಮಾಡಿ ಬಾರ ಅಂತ ಜೋರು ಮಾಡಿದ್ರು. ಊಟವಾದ ಮೇಲೆ ಮಾಸ್ಟ್ರು ಕೃಷ್ಣ ಉಪಾಧ್ಯರನ್ನ ಕರೆದುಕೊಂಡು ಬಾ. ಕೋಡಿ ಕನ್ಯಾಣಕ್ಕೆ ಹೋಗಿ, ಆ ಯಜ್ನ ಮಾಸ್ಟ್ರಿಗೆ ಬರ ಹೇಳು. ಅವರು ಬಂದ ಮೇಲೆ ತೊರವೇ ರಾಮಾಯಣದ ಸುಂದರ ಕಾಂಡವನ್ನ ಓದಲು ಹೇಳಿದರು. ಈ ಯಜ್ನ ಮಾಸ್ಟ್ರು ಯಾರೂ ಅಂತ ಕೇಳ್ತೀರಾ? ಇವರು ನಮ್ಮ ಅಪ್ಪಯ್ಯನ ಜೊತೆಯಲ್ಲಿಯೇ ಗುಡ್ಡಿ ಶಾಲೆಯಲ್ಲಿ ಮಾಸ್ಟ್ರು ಆಗಿದ್ದರು.  ಇವರು ಕ್ಲಾಸಿನಲ್ಲಿ ನಿದ್ದೆ ಹೋಗುವುದು ಜಾಸ್ತಿ! ಅವರು ಮಳೆಗಾಲದಲ್ಲಿ ತಮ್ಮ ಮಕ್ಕಳಾದ ಶೇಷ ಹಾಗೂ ಶೀನರನ್ನ ಕರೆದುಕೊಂಡು ಮನೆ ಮನೆಗೆ ಹೂವಿನ ಕೋಲನ್ನ ಮಾಡುತ್ತಿದ್ದರು. ಎಲ್ಲರ ಮನೆಗೆ ಅವರು ಹೋಗುತ್ತಿರಲಿಲ್ಲ. ಕೇರಿಯ, ಹಾಗೂ ಊರಿನ ಕೆಲವೊಂದು ಮನೆಗೆ ಮಾತ್ರ ಹೋಗಿ, ಅವರು ಕೊಡುವ ದುಡ್ಡಿನಿಂದ ಹಾಗೂ ಶಾಲೆಯವರು ಕೊಡುತ್ತಿರುವ ಕಡಿಮೆ ಸಂಬಳದಿಂದ ಅವರ ಸಂಸಾರ ಸಾಗಬೇಕಿತ್ತು. ಇದೂ ಕೂಡ ಪರಷುರಾಮ ಕ್ಷೇತ್ರದಲ್ಲಿ ಹೇಗೆ ಜೀವನೋಪಾಯವನ್ನ ಮಾಡುತ್ತಿದ್ದರೆನ್ನುವುದು ನಿಮಗೆ ತಿಳಿಯುತ್ತದೆ. ಸಂಸಾರವನ್ನ ತೂಗಿಸಿಕೊಂಡು ಹೋಗುವುದು ಬಹಳ ಕಸ್ಟ. ಎಸ್ಟೇ ದೂರವಿದ್ದರೂ ಊಟಕ್ಕೆ ನಡೆದುಕೊಂಡೇ ಹೋಗುತ್ತಿದ್ದರು. ನಮ್ಮ ಅಪ್ಪ ಪಡುಕೆರೆಯಿಂದ ಉಡುಪಿಗೆ ಸಮುದ್ರದ ಬದಿಯಲ್ಲಿ ನಡೆದುಕೊಂಡು ಕೋಡಿಯಲ್ಲಿ ಬರುವ ಅಳಿವೆಯನ್ನ ಹಾರಿಕೊಂಡು ಬೊಜ್ಜದ ಊಟಕ್ಕೆ ಹೋಗುತ್ತಿದ್ದರಂತೆ. ನಮ್ಮ ಮನೆಯಿಂದ ಉಡುಪಿಗೆ ಸುಮಾರು ೩೦ ಕಿಲೋ ಮೀಟರ್ ದೂರವಿದೆ. ನಾನು ಕೂಡಾ ನಮ್ಮ ಮನೆಯಿಂದ ಕಾಳವಾರ ಷೃಷ್ಠಿಗೆ, ಹಬ್ಬದ ಊಟಕ್ಕೆ ಹೋಗುತ್ತಿದ್ದೆನು. ನಮ್ಮದೊಂದು ದೊಡ್ಡ ಗುಂಪೇ ಇದ್ದಿತ್ತು. ಅದು ಸುಮಾರು ೨೦-೨೫ ಕಿಲೋ ಮೀಟರ್ ದೂರವಿರುತಿತ್ತು. ಇರಲಿ, ಈಗ ಮುಖ್ಯ ಸಮಾಚಾರಕ್ಕೆ ಬರೋಣವೇ. ನಮ್ಮ ಅಜ್ಜಯ್ಯನ ಅಪ್ಪಣೆಯ ಮೇರೆಗೆ ನಮ್ಮ ಅಪ್ಪಯ್ಯನ ಬಲ ತೊಡೆಯ ಮೇಲೆ ತಲೆಯನ್ನ ಇಟ್ಟು ಸುಂದರ ಕಾಂಡವನ್ನ ಕೇಳ ತೊಡಗಿದರು. ಈ ಮಧ್ಯೆ ಮಾಸ್ಟ್ರು ಕೃಷ್ಣ ಉಪಾಧ್ಯರು ಬಂದರು. ಅವರನ್ನ ಕರೆದು ಅವರ ಕೈ ಮೇಲೆ ನಮ್ಮ ಅಪ್ಪಯ್ಯನ ಕೈಯನ್ನ ಇಟ್ಟು, ನನ್ನ ಅಸ್ತಿಯನ್ನ ನಾ ಸತ್ತ ಮೇಲೆ ಕಾಶಿಯಲ್ಲಿರುವ ಗಂಗಾ ನದಿಗೆ ವಿಸರ್ಜನೆಯನ್ನ ಮಾಡುತ್ತೇನೆ ಎಂದು ಆಶ್ವಾಸನೆಯನ್ನ ತೆಗೆದುಕೊಂಡರು. ಕೊನೆಗೆ ಗಂಗೆಯ ನೀರನ್ನ ಬಾಯಿಗೆ ಹಾಕಲು ಹೇಳಿದರು.  ಎರಡು ಬಿಂದು ಗಂಗೆಯ ನೀರು ಅವರ ಬಾಯಿಗೆ ಬಿದ್ದದ್ದೇ ತಡ, ಅವರು ಸ್ವರ್ಗ ವಾಸಿಯಾದರು.! ಆಶ್ಚರ್ಯ! ಎಂತಹ ಮರಣ! ಸಾಮಾನ್ಯವಾಗಿ ಪುಣ್ಯರಿಗೇ ಬರುವಂತಹ ಮರಣ ಇದು ಎಂದು ನೆರೆದಿದ್ದವರೆಲ್ಲಾ ಆಡುತ್ತಿದರಂತೆ.

ಇನ್ನೊಂದು ವಿಚಾರವನ್ನ ನಿಮ್ಮ ಮುಂದಿಡಬೇಕೆಂದಿರುವೆ. ಅದೇನೆಂದರೆ, ನಾವುಗಳು ಕಮಲಶಿಲೆಯ ಚೋಣುಮನೆ ಉಪಾಧ್ಯಾರಂತೆ. ಅಲ್ಲಿ ನಮಗೆ ಅಡಿಗಳು (ಇದು ಸುಮಾರು ೧೯೬೦ರ ಇಸವಿಯಲ್ಲಿ ನಡೆದದ್ದು. ಅವರಿಗೆ ನಾಲ್ಕು ಮದುವೆ ಆಗಿತ್ತಂತೆ. ನಾವು ಹೋದಾವಾಗ್, ಅವರದ್ದು ನಾಲ್ಕನೇ ಮದುವೆ. ಮದುಕ, ಎಡಬೆಟ್ಟಿನ ನೆಂಟಸ್ಥಿಕೆಯನ್ನ ಮಾಡಿದ್ದ!. ) ಅದೇನೇ ಇರಲಿ, ನಾವು ಚೋಣು ಮನೆ ಉಪಾಧ್ಯರು ಹೋಗಿ ಮಂಟಪ ಉಪಾಧ್ಯರು ಆದವ್ರಂತೆ ಎಂದು ಮೊನ್ನೆ ಮೊನ್ನೆ ಕಮಲಶಿಲೆಗೆ ಭೇಟಿ ಕೊಟ್ಟಾವಾಗ ಪ್ರಧಾನ ಅರ್ಚಕನೊಬ್ಬ ನನಗೆ ಮತ್ತು ನನ್ನ ದೊಡ್ಡಣ್ಣನಿಗೆ ಹೇಳಿದ. ನಮಗೆ ಇದು ಹೌದೆಂದು ಅನ್ನಿಸಿತು. ಕಾರಣ ನಮಗೂ ಮಂಟಪದ ನಮ್ಮ ದೊಡ್ಡಪ್ಪ, ಚಿಕ್ಕಪ್ಪರಿಗೆ ತಲಾ ೧೧ ಎಕ್ರೆ ಜಮೀನು ಕಮಲಶಿಲೆಯಲ್ಲಿದ್ದಿತ್ತು. ಅದಕ್ಕಾಗಿ ವರ್ಷಕ್ಕೆ ಒಂದು ಮುಡಿ ಅಕ್ಕಿಯ ರಂಗಪೂಜೆಯನ್ನ ಅಮ್ಮನವರಿಗೆ ಮಾಡಿಸಬೇಕಿತ್ತು. ಕೊನೆಗೆ ಈ ವಕ್ಕಲು ಮಸೂದೆ ಬಂದು ನಾವೆಲ್ಲರೂ ಸೇರಿ (ಅಂದರೆ ಸುಮಾರು ೧೪ ಜನರಿದ್ದರು) ಈ ಗದ್ದೆಯನ್ನ ಅಲ್ಲಿಯ ಶೆಟ್ಟರಿಗೆ ಬಿಟ್ಟು ಕೊಟ್ಟು, ದೇವಿಗೆ ಕೈ ಮುಗಿದು ಬಂದೆವು. ಆವತ್ತಿನಿಂದ ದೇವಿಗೆ ರಂಗಪೂಜೆಯನ್ನ ಮಾಡುವುದು ನಿಂತು ಹೋಯಿತು. ಆದರೆ ಅದು ನಮ್ಮ ಎರಡನೇ ಅಣ್ಣನ ಮಗ ಗಣೇಷನು,ತನ್ನ ೫ನೇ ವರ್ಷದಲ್ಲಿ ತೀರಿಕೊಂಡಾವಾಗ, ಜ್ಯೋತಿಷ್ಯಗಾರರೊಬ್ಬರಿಂದ ನೀವು ಒಂದು ದೇವಿಗೆ ಹರಕೆಯನ್ನ ಮಾಡುವುದು ನಿಲ್ಲಿಸಿದ್ದೀರಿ ಎಂದು ಹೇಳಿದಾವಾಗ ಗೊತ್ತಾಯುತು ಈ ವಿಚಾರ. ಹಾಗೆ ಆತನೂ ಕಮಲಶಿಲೆಗೆ ಹೋಗತೊಡಗಿದ. ಅಂತೆಯೇ ನಾವೂ ಕೂಡ ಅವನನ್ನೇ ಅನುಸರಿಸಿದೆವು. ಆದರೆ ಈಗಲೂ ನಾವುಗಳು ಆ ದೇವಿಯ ಭೇಟಿಯನ್ನ ಊರಿಗೆ ಹೋದಲ್ಲಿ, ವರ್ಷಕ್ಕೊಮ್ಮೆ ಮಾಡಲು ಮರೆಯುವುದಿಲ್ಲ. ಈ ಭಾರಿಯಂತೂ ಬಹಳ ಜೋರು. ಶ್ರೀಯುತರಾದ ಸಚ್ಚಿದಾನಂದ ಛಾತ್ರರು ವಿಶೇಷ ಸೇವೆಯನ್ನ ಕೊಟ್ಟಂತಹ (ರೂಪಾಯಿ ೫೦೦.೦೦ ಮತ್ತು ಹೆಚ್ಚಿಗೆ) ಜನರಿಗೆ ಕಮಲ ಶಿಲೆಯ ದುರ್ಗಾ ಮಾತೆಯ ಎದಿರುಗಡೆ ನಿಲ್ಲಿಸಿ, ಮಲ್ಲಿಗೆ ಹಾರವನ್ನ  ಹಾಕಿ, ರೇಶ್ಮೆ ಶಾಲನ್ನ ಹೊದಿಸಿ, ಊಟ ಮಾಡಿಸಿ, ಒಳ್ಳೇ ಉಪಚಾರದೊಂದಿಗೆ ಕಳುಹಿಸಿದರೆಂದರೆ ನೀವುಗಳು ನಂಬುವಿರಾ?. ಇದು ಆ ದೇವಿಯ ಆಟ. ನಂಬಿದವರನ್ನ ಬಿಡುವುದೇ ಇಲ್ಲ.

ಆ ಮೇಲೆ ಆಶ್ವಾಸನೆ ಕೊಟ್ಟಂತೆ, ನಮ್ಮ ಅಪ್ಪಯ್ಯ, ಅಮ್ಮ, ಭೀಮಜ್ಜಿ, ಸೋಮೈಯ್ಯ ಮೈಯ್ಯರು, ಹಾಗೂ ಮಠದ ಮೋಟ್ ಕಿಸ್ಟೈಯ್ತಾಳರನ್ನೂ  ಸೇರಿಸಿ ಕಾಶಿಗೆ ಕರೆದುಕೊಂಡು ಹೋಗಿ, ನಮ್ಮ ಅಜ್ಜಯ್ಯನ ಅಸ್ತಿಯನ್ನ ವಿಸರ್ಜನೆಯನ್ನ ಮಾಡಿ ಬಂದರಂತೆ. ನಮ್ಮ ಅಜ್ಜಯ್ಯನ ಗುಣವೇ ಈಗ ನನ್ನಲ್ಲಿದೆ ಎಂದು ನಮ್ಮ ಅಮ್ಮ ಹಾಗೂ ಅಪ್ಪಯ್ಯ ಹೇಳಿತ್ತಿದ್ದ ನೆನಪು. ಅದೇನೇ ಇರಲಿ, ನಮ್ಮ ಅಪ್ಪಯ್ಯ ಅವರ ಕಾಲದಲ್ಲಿ ಅಜ್ಜ ಮಾಡಿಟ್ಟ ಆಸ್ತಿಗಿಂತ ಹೆಚ್ಚಿಗೆ ಮಾಡಿರುವಂತಹ ಆಸ್ತಿಯನ್ನೆಲ್ಲಾ ಮಾರಿ ಆ ಹಣವನ್ನ ಸ್ಥಿರವಾದ ಡೆಪಾಸಿಟ್ ಇಟ್ಟು ಬಹಳ ಸಂತೋಷಗೊಂಡರು. ಅದು ಬೇರೆ ನಮ್ಮ ಎರಡನೇ ಅಣ್ಣಯ್ಯ ಶ್ರೀ ರಮೇಶ ಉಪಾಧ್ಯರು ದೇವರ ತಲೆಯ ಮೇಲೆ ಹೋವು ಆದರೂ ತಪ್ಪಿ ಹೋದೀತು, ಆದರೆ ಆತ ತಿಂಗಳು ತಿಂಗಳು ಕಳುಹಿಸುವಂತಹ ರೂಪಾಯಿ ೪೦.೦೦ (ನಲವತ್ತು) ರೂಪಾಯಿ ಮಾತ್ರ ಆತ ರಿಟಾಯರ್ಡ ಆಗುವವರೆಗೂ ತಪ್ಪಿಸಲಿಲ್ಲ. ಅದೇ ಆತನನ್ನ ಈವಾಗ ನಡೆಸುತ್ತಿದ್ದದ್ದೆಂದರೆ ತಪ್ಪಾಗದು. ಗಂಡು ಮಕ್ಕಳಿಗೆ ಉತ್ತಮ ನೆಂಟಸ್ಥಿಕೆಯನ್ನ ಮಾಡಿಸಿ ಅದರಲ್ಲೂ ಹೆಸರನ್ನ ಗಳಿಸಿದರೆಂದರೆ ಅತಿಶಯೋಕ್ತಿ ಅನ್ನಿಸದು. ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಸದಿಯ ಮಾಸ್ತರೊಬ್ಬರು ಬಹಳ ಚಿರಪರಿಚಿತ ಹಾಗೂ ಪ್ರಸಿದ್ಧಿಯನ್ನ ಪಡೆದಂತಹ  ವ್ಯಕ್ತಿಯಾದರು. ಸೆಣ್ಸಿಗೆ ಒಂದು ಮುಡಿ ಭತ್ತವನ್ನ ಬೆಳೆದು ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಬೇಸಾಯದಲ್ಲಿ ಹೆಸರನ್ನ ಗಳಿಸಿದರು. ನಮ್ಮ ಪಡುಕೆರೆಗೆ ಜಬ್ಬಾದ ಮರದ ಸಂಕದ ಬದಲಿಗೆ ಕಲ್ಸಂಕ ಬರಲೂ ಹಾಗೂ ನಮ್ಮ ಮನೆಯವರೆಗೆ ರಸ್ತೆ ಬರಲು ನಮ್ಮ ಗದ್ದೆಗಳನ್ನ ಶೂದ್ರರ ಗದ್ದೆಗಳೊಂದಿಗೆ ಬದಲಾಯಿಸಿಕೊಂಡು ಪುಕ್ಕಟೆಯಾಗಿ ರಸ್ತೆ ಮಾಡಲೋಸುಗೆ ಬಿಟ್ಟುಕೊಟ್ಟರು. ನಮ್ಮ ೪ ಘನಾ ಗದ್ದೆಗಳು ರಸ್ತೆ ಮಾಡುವುದಕ್ಕೆ ಹೋದವು ಅಂತ ಪಸ್ಚಾತ್ತಾಪ ಪಟ್ಟಿಲ್ಲ. ಹೀಗೆ ಮಾಡದಿದ್ದಲ್ಲಿ, ನಮಗೆ ರಸ್ತೆ ಬರುತ್ತಿರಲಿಲ್ಲ. ಇದು ಎಸ್ಟು ಜನರಿಗೆ ತಿಳಿದಿದೆ ಹೇಳಿ? ಸೇತುವೆಗೆ ಪೂಜೆ ಮಾಡಿದವರೂ ನಮ್ಮ ಅಪ್ಪೈಯ್ಯ ಮತ್ತು ಅಮ್ಮನೇ ಅನ್ನಲಿಕ್ಕೆ ನನಗೆ ಹೆಮ್ಮೆಯನ್ನಿಸುತ್ತೆ!

ಇನ್ನು ರಾಮ ಭಜನೆಯಲ್ಲಿ ಇವರದ್ದೇ ಮೇಲುಗೈ. ಪಡುಕೆರೆ ತಂಡಕ್ಕೆ ಇವರೇ ಮುಖ್ಯಸ್ತರು. ಇವರು "ರಾಮ ರಕ್ಸಿಸೋ, ಪ್ರೇಮದಿಂದಲೀ, ಕಾಮಿತಾರ್ಥ ಫಲವನ್ನಿತ್ತ ಭೂಮಿ ಝಾಪತೇ" ಅಂತ ಅತೀ ಏರಿನ ಧ್ವನಿಯಲ್ಲಿ ಹೇಳಿದೆರೆಂದರೆ, ರಾತ್ರಿಯಲ್ಲಿ ಪಡುಕೆರೆಯಲ್ಲಿ ಹಾಡಿದಂತಹ ಪದ್ಯ, ಗುಂಡ್ಮೀ ಗ್ರಾಮಕ್ಕೆ ಕೇಳುವಂತಿತ್ತು.

ಅದೇ "ನಚ್ಚೇನ ಚರಿತಾ ನಂದೀ ತಾತೈಯ್ಯ ತೈಯ್ಯ" "ನಚ್ಚೇನ ಚರಿತಾ ನಂದೀ ತಾತೈಯ್ಯ ತೈಯ್ಯ"
 "ನಾರದಗಾರದ ವೈರೀ ಗಾವೇ, ತುಂಬರು ವೀರಬಜಾವೇ" ಎನ್ನುವ ಪದ್ಯ ಬಹಳ ಪ್ರಸಿದ್ಧಿ ಆಯಿತು.

ಅತೀ ಎತ್ತರದ ಸ್ವರದಲ್ಲಿ ಹಾಡುವಂತಹ "ನೋಡು ನೋಡೂ ಗೋಪೀ ನಿನ್ನಾ ಮಗನ ಲೂಟೀಯಾ’ ಎನ್ನುವ ಪದವು ಅವರ ನೆಚ್ಚಿನ ಪದವಾಗಿ ಹೊರ ಹೊಮ್ಮಿತು.
“ರಾಮನಮೋ ಕೃಷ್ಣನಮೋ, ರಾಮನಮೋ, ಸೀತಾರಾಮನಮೋ”
ಕೃಷ್ಣನಮೋ, ಕೃಷಣನಮೋ, ಕೃಷ್ಣನಮೋ ರಾಧಾ ಕೃಷಣನಮೋ”
ಅನ್ನುವ ಪದಾ ಕೂಡ ಇವರದ್ದೇ ಸಿಕ್ಕಾ ಬಿದ್ದಿತು!.

ಇವರ ಆರತಿ ಹಾಡು ಎಲ್ಲರಿಗೂ ಚಿರ ಪರಿಚಿತವಾಯಿತು. ಕೊನೇ ಕೊನೆಗೆ, ಹೋಯ್ ಸದೀ ಮಾಸ್ಟ್ರೇ, ನೀವ್ ಆ ಆರತೀ ಪದ ಹೇಳಿ ಕಾಂಬಾ ಅನ್ನ ತೊಡಗಿದರು. ಅದೇನೆಂದರೆ

ಹೃದಯ ಕಮಲವೆಂಬ ಹರಿವಾಣದೊಳಗಿರ್ದ,
ಸದಾಮಲ್ ಭಕ್ತಿ ಹೃದಯಾ ತೈಲದಿ
ಪದುಮನಾಭನ ನಾಮವೆಂಬ ಜ್ಯೋತಿಯ  ಬೆಳಗಿದೆ,
ಮುದದಿಂದ ಜ್ನಾನದಾರತಿ ಎತ್ತಿರೆ
ರಾಮಚಂದ್ರನಿಗಾರತೀ ಎತ್ತಿರೇ
ಯಾವುದೇ ಭಜನೆಯಲ್ಲಿ ಇದು ಇವರಿಗೇ ಮೀಸಲು.

ಎಲ್ಲೆಯಾದರೂ ಊಟಕ್ಕೆ ಹೋದಲ್ಲಿ (ಅಪರ ಕ್ರಿಯೆಯ ಊಟವಲ್ಲ, ಅಪರ ಕ್ರಿಯೆಯಾದಲ್ಲಿ ವೈಕುಂಠದ ದಿನ ಹೇಳುತ್ತಿದ್ದರು) "ವಿದ್ಯಾ ರತ್ನಂ, ಸರಸಿಜನಿತ್ಯಂ, ಧ್ಯಾನ ರತ್ನಂ ತುರಂಗೋ.....’
ವಾಛಾ ರತ್ನಂ, ಪರಮ ಪದವೀ ಯೋಗ ರತ್ನಂ ಮೃಗಾಕ್ಷೀ..."
“ಅಂಭೋ ರತ್ನಂ ಪರಮ ಪದವೀ, ಭೂರ್ಭ್ವಾ ರತ್ನಂ ಕನಕಶಿಖರೀ
ಭೂಪಾ ರತ್ನಂ ವಿವೇಕಾಹಾಆ ಆಆಆಆಆ ಅನ್ನುವ ಚೂರ್ಣಿಕ ( ಊಟದಲ್ಲಿ ಪಾಯಸವು ಬಂದಾವಾಗ ಹಾಡೂವಂತಹ ನಾಲ್ಕು ಲೈನಿನ ಶ್ಲೋಕ) ಬಹಳ ಪೇಟೆಂಟ್ ಆಯಿತು. ಅದನ್ನ ಈಗ ಸದೀ ಮಾಸ್ತರ ಕಿರೀ ಮಗನಾದ ಸುರೇಂದ್ರ ಉಪಾಧ್ಯರು ಹಾಡುತಿದ್ದಾರೆ. ಇವರಿಗೆ ತಂದೆಯದ್ದೇ ಎಲ್ಲಾ ಗುಣಗಳು ಬಂದಿವೆಯೆಂದು ನಮ್ಮ ಅಡುಗೆಗೆ ಪ್ರಸಿದ್ಧಿಯಾದ ಚಿತ್ರಪಾಡಿ ಗ್ರಾಮದ ಕಾಡ್ ಮಧ್ಯಸ್ಥರ ಮಗ ನರಸಿಂಹ ಮಧ್ಯಸ್ಥರು ಮೊನ್ನೆ ನಮ್ಮ ಮೊನೆಯಲ್ಲಿ ನಡೆದಂತಹ ಅಮ್ಮನ ಶ್ರಾಧ್ಧದಲ್ಲಿ ಹೇಳುತ್ತಿದ್ದರಂತೆ. ಅವರ ಎಲ್ಲಾ ಗುಣವಿಶೇಷಗಳೂ ಈಗ ಇವರಲ್ಲಿ ಗುಣದಿಷೆಯಾಗಿ ಬಳುವಳಿಯಾಗಿ ಬಂದಿವೆ ಎಂದರೆ ಅದು ಒಂದು ಉತ್ತಮವಾದ ಅನುದಾನವೇ ಸರಿ. ಇದು ಅಪ್ಪೈಯ್ಯನ ಆಶೀರ್ವಾದವೆಂದರೂ ತಪ್ಪಾಗದು. ಸುರೇಂದ್ರ ಉಪಾಧ್ಯರೂ ಕೂಡ ೧೪ ವರುಷಗಳ ಕಾಲ ದೇನಾ ಬ್ಯಾಂಕಿನಲ್ಲಿ ಪ್ರಾಧ್ಯಾಪಕರಾಗಿ, ಹಾಗೂ ಪ್ರಾಂಶುಪಾಲರಾಗಿ ಐ.ಟಿ. ಇನ್ಸ್ಟಿಟ್ಯೂಟನ್ನ ಕಾಂಡೀವಲೀ ಮುಂಬೈನಲ್ಲಿ ೧೯೯೭ ರಲ್ಲಿ ಸ್ಥಾಪನೆಯನ್ನ ಮಾಡಿದ್ದಲ್ಲದೆ ಅಲ್ಲಿಯೇ ೭ ವರುಷಗಳು ಕಂಪ್ಯೂಟರಿನಲ್ಲಿ ಬ್ಯಾಂಕಿನ ಕಾರಖೂನನಿಂದ ಹಿಡಿದು ಜನರಲ್ ಮೇನೇಜರ್ ವರೆಗೆ ಟ್ರೈನಿಂಗ್ ಕೊಟ್ಟೂ ಬಹಳ ಹೆಸರುವಾಸಿಯಾಗಿದ್ದರು. ಹಾಗೂ ಕೋಲಕತ್ತ ಮತ್ತು ನಯೀ ದೆಹಲೀ ಟ್ರೈನಿಂಗ್ ಸೆಂಟರಿನಲ್ಲಿ ಕೆಲಸವನ್ನ ಮಾಡಿದ್ದು, ಸುಮಾರು ಮತ್ತುಳಿದ ೨೦೦೦ ಜನರನ್ನ ಕಂಪ್ಯೂಟರಿನಲ್ಲಿ , ಸಾಲವನ್ನ ಕೊಡುವಲ್ಲಿ, ರಿಟೈಲ್ ಕ್ಷೇತ್ರದಲ್ಲಿ ಪಳಗಿಸಿದ್ದಾರೆನ್ನುವುದು ಬಹಳ ಹೆಮ್ಮೆಯ ವಿಷಯವೇ. ಅವರಿಗೂ ದೇನಾ ಬ್ಯಾಂಕಿನಲ್ಲಿ ಒಂದು ವಿಶೇಷ ಸ್ಥಾನ ಮಾನ ಉಂಟು. ಅವರೂ ರೇಕಿ ಮಾಸ್ಟರ್ ಕೂಡಾ. ಅವರು ಅಕ್ಯೂಪ್ರೆಸರ್ ಪ್ರೇಕ್ಟೀಷನರ್ ಕೂಡ. ಅವರಲ್ಲಿಯೂ ಅಪ್ಪನ ಥರಾ ಕಥೆ, ಕವನ, ನಾಟಕ ಬರೆಯುವ ಕಲೆಯೂ ಇದೆ!. ಅವರೂ ಕೂಡ ಕರ್ಣಾಟಕ ಸಂಘದ ಕಾರ್ಯದರ್ಷಿಗಳಾಗಿ ರಾಜಕೋಟ್, ಅಹ್ಮೆದಾಬಾದ್, ಸೂರತ್ ಹಾಗೂ ಕೋಲ್ಕತ್ತದಲ್ಲಿ ಸುಮಾರು ೧೨ ವರುಷಗಳ ಕಾಲ ಕೆಲಸವನ್ನ ಮಾಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುವಲ್ಲಿ , ಡೈರೆಕ್ಟ ಮತ್ತು ಏಕ್ಟ್ ಹಾಗೂ ಪಾರ್ಟಿಸಿಪೇಟ್ ಮಾಡುವಲ್ಲಿ ಬಹಳ ಹೆಸರನ್ನ ಗಳಿಸಿದ್ದರು. ಇವರ ಇನ್ನೊಂದು ವಿಶೇಷತೆ ಏನೆಂದರೆ ಹವ್ಯಾಸಿ ಜ್ಯೋತಿಷಿಯಾಗಿ, ಜನಶ್ರೀ ಟಿ.ವಿ ಹಾಗೂ ಈ.ಟಿವಿ. ಕಲರ್ಸ್ ಕನ್ನಡ ಚಾನಲ್ನಲ್ಲಿ ಬಂದಿರುತ್ತಾರೆ. ವರ್ಷ ಭವಿಷ್ಯ ೨೦೧೬ನ್ನ, ತಾರೀಕು ೩೦/೧೨/೨೦೧೫ ರಂದು ಸಂಜೆ ೬ ಗಂಟೆಯಿಂದ ೭ ಗಂಟೆಯವರೆಗೆ ಈ.ಟೀವಿ ಕಲರ್ಸ್ ಕನ್ನಡದಲ್ಲಿ ಕೊಟ್ಟಿದ್ದರು. ಹೀಗೆ ಮಾತಿನಲ್ಲಿ, ಕಲೆಯಲ್ಲಿ, ಸಂಗೀತದಲ್ಲಿ, ಭಜನೆಯಲ್ಲಿ, ಚೂರ್ಣಿಕದಲ್ಲಿ, ನಾಟಕದಲ್ಲಿ, ಕಥೆಯಲ್ಲಿ ಎಲ್ಲಾ ತರದ ಕಾರ್ಯಕ್ರಮಗಳಲ್ಲಿ ಇವರು ತಮ್ಮ ತಂದೆಯವರ ಹೆಸರನ್ನ ಜನಗಳ ಬಾಯಿಯಲ್ಲಿ ಪುನರುಚ್ಚರಿಸುವ ಹಾಗೆ ಮಾಡಿರುವುದು, ಇದೊಂದು ಗೋಡ್ ಗಿಫ಼್ಟೇ ಸರಿ. ಹೆಗ್ಗಳಿಕೆ ಅಲ್ಲ, ವಿಚಾರವನ್ನ ಬೇರವರಿಗೆ ತಿಳಿಸುವಿಕೆ ಮತ್ತು ಅರುಹುವಿಕೆ!. ಅಹಂಕಾರ ಅಲ್ಲ ಮತ್ತು ಬೇಕೂ ಇಲ್ಲ!, ಹಾಗೂ ಅವರಲ್ಲಿ ಕೊಂಚವೂ ಇಲ್ಲ. ಅವ್ರು ಬರೇ ನೆಲದ ಮೇಲೂ ಮಲಗಲು ಕಲಿತಿದ್ದರು ಹಾಗೂ ಮಲಗುತ್ತಾರೆ. ದಿಂಬು ಕೊಟ್ಟರೂ ಮಲಗುತ್ತಾರೆ, ಇಲ್ಲಾಂದರೂ ಮಲಗುತ್ತಾರೆ. ನಡೆದು ಹೋಗಲೂ ಗೊತ್ತಿದೆ. ಕಾರನ್ನ ಡ್ರೈವ್ ಮಾಡಿ ಸಂಚರಿಸಲೂ ಗೊತ್ತಿದೆ. ಯಾವ ಕೆಲಸಕ್ಕೂ ಸೈ. ಅಳುಕಿಲ್ಲ, ಭಯವಂತೂ ಮೊದಲೇ ಇಲ್ಲ! ಮತ್ತೇ ಇದ್ದದನ್ನ ಇದ್ದ ಹಾಗೇ ಹೇಳುವಂತಹ ಪ್ರಚಂಡವಾದ ಧೈರ್ಯವೂ ಅವರಲ್ಲಿ ಇದೆ. ಒಂದು ರೀತಿಯ ಕ್ರಾಂತಿಕಾರಿ ವ್ಯಕ್ತಿ. ಇವರೊಬ್ಬರು ಅಜಾತ ಶತ್ರುಗಳೆಂದರೆ ತಪ್ಪಾಗದು.ಕಾರಣ ಇಸ್ಟೇ. ಇವರು ಯಾರೊಬ್ಬರಿಗೂ ಹಾಳನ್ನ ಮಾಡಿದವರಲ್ಲ. ಇಸ್ಟರವರೆಗೆ ಸುಮಾರು ೮೦೦೦ ಜನರಿಗೆ ಪುಕ್ಕಟೆಯಾಗಿ ಜಾತಕವನ್ನ ಹೇಳಿದ್ದಾರೆಂದರೆ ನೀವುಗಳು ನಂಬುತ್ತೀರಾ?. ಇವರು ಒಂದು ೮ ಮದುವೆಗಳನ್ನೂ ಮಾಡಿದ್ದಾರೆ. ಒಂದು ಪೈಸಾ ತೆಗೆದುಕೊಳ್ಳಲಿಲ್ಲ. ಆದರೆ ಕೆಲವರಿಗೆ ಕ್ರತಜ್ನತೆಯೇ ಇಲ್ಲ!. ಒಂದು ಥೇಂಕ್ಸ್ ಕೂಡಾ ಇಲ್ಲ!. ಅದಿರಲಿ, ಆ ಮದುವೆಗೆ ಆಮಂತ್ರಣವನ್ನ ಕೊಡಲೂ ಗೊತ್ತಿಲ್ಲ!. ಕೆಲವೊಂದು ಬಾರಿ ಅನ್ನಿಸುತ್ತದೆ. ಈ ಜನರಿಗೆ ಉಪಕಾರವನ್ನ ಮಾಡಬೇಕೇ? ಅವರ ಮಕ್ಕಳು ಮದುವೆ ಆಗದೇ ಹಾಗೆಯೇ ಕೊಳೆಯಲೀ ಅನ್ನುವ ಮನೋಭಾವನೆಯೂ ನನ್ನಲ್ಲಿ ಬರುತ್ತದೆ. ಇರಲಿ. ಈ ಸೇವೆಗೆ ನನಗೆ ಮಾತ್ರ ಹೆಸರೂ ಮತ್ತು ನೆಮ್ಮದಿಯನ್ನೂ ಕೊಟ್ಟಿದೆ ಎಂದರೆ ಅದು ಸುಳ್ಳಲ್ಲ!.  ಅಂದರೆ , ಈ ಮಟ್ಟಿಗೆ ನಮ್ಮ ತಂದೆಯವರ ರಕ್ತ ಸಂಚಾರ ನನ್ನ ದೇಹದಲ್ಲಿಯೂ ಹರಿಯುತ್ತದೆ ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ  ಈ ಮೂಲಕ ಅರಹುವಿಕೆ. ಅಸ್ಟೆ, ಮತ್ತು ಅವರಲ್ಲಿಯೂ ಇದೆ ಅನ್ನಿ.  ಏನೇ ಇರಲಿ, ಜನಗಳ ಪ್ರೀತಿಯ ಸದಿಯ,  ಸದಿಯ ಮಾಸ್ತರೆನಿಸಿಕೊಂಡರು. ಕೋಟ ಹದಿನಾಲ್ಕು ಜನರಲ್ಲಿ ಬಹಳ ಹೆಸರನ್ನ ತೆಗೆದುಕೊಂಡರು. ಯಾವುದೇ ಸಮಾರಂಭದಲ್ಲಿ ಇವರದ್ದೇ ಉಪಚಾರವಿರುತ್ತಿತ್ತು. ಇವರದ್ದೇ ಕಣ್ಣಿನ ಹದ. ಅದು ಎಸ್ಟರ ವರೆಗೆಂದರೆ, ಊಟಕ್ಕೆ ೨೦೦ ಜನರೇ ಬರಲಿ ಇಲ್ಲಾ ೧೦೦೦ ಜನರೇ ಬರಲಿ, ಆ ಸದೀ ಮಾಸ್ತರನ್ನ ಕರೀರಪ್ಪ ಅನ್ನುತ್ತಿದ್ದರು. ಅವರು ಹೇಳಿದ ಮೇಲೆ ಸೈ. ಬೇರೆ ಯೋಚಿಸಬೇಕಿಲ್ಲ ಅನ್ನುವಸ್ಟು ಇವರ ಕಣ್ಣೀನ ಅಂದಾಜು. ಕಡಿಗೆ ಪಲ್ಯಕ್ಕೆ ೨ ಅಥವಾ ೪ ಕಡಿಗೆ ಬೇಕಿತ್ತೆಂದರೆ ಅದು ಅಸ್ಟೇ ಸಾಕಿತ್ತು! ಸೌತೇ ಕಾಯಿ ೨೫ ಕತ್ತರಿಸು ಹುಳಿ ಹೋಳು ಮಾಡಲು ಹೇಳಿದರೆಂದರೆ ಅದು ಬ್ರಾಹ್ಮಣರ ಊಟ ಮುಗಿದು, ಶೂದ್ರರಿಗೂ ಹಂಚಲು ಸಾಕಾಗುತ್ತಿತ್ತು! ಇನ್ನೊಂದು ವಿಶೇಷವೇನೆಂದರೆ ಮದುವೆಯನ್ನ ಕೂಡಾ ಇವರು ಮಾಡಿಸುತ್ತಿದ್ದರು. (ಇದು ಶ್ರಿ ಸುರೇಂದ್ರ ಉಪಾಧ್ಯರಲ್ಲಿಯೂ ಬಂದಿದೆ. ಅವರು ಈವರೆಗೆ ಸುಮಾರು ೮ ಮದುವೆಗಳನ್ನ ಮಾಡಿಸಿದ್ದಾರೆ. ಒಂದು ವೇಸ್ಟಿ ಇಲ್ಲ, ಒಂದು ಗೌರವ ಇಲ್ಲ ಹಾಗೂ ದಕ್ಷಿಣೆ ಇಲ್ಲ. ಅದೊಂದು ಸಮಾಜ ಸೇವೆ ಮಾತ್ರ!) ಇಲ್ಲಿ ನನಗೆ ನೆನಪು ಆಗುವುದು ಅಪ್ಪೈಯ್ಯ ಮಾಡಿದಂತಹ ಈ ಕೆಳಗಿನ ಸ್ವಾರಸ್ಯಕರವಾದ ಮದುವೆ!

ಒಂದೊಮ್ಮೆ ಇವರು ಎಡಬೆಟ್ಟಿನ ನಮ್ಮ ಅಜ್ಜೈಯ್ಯನ (ನಮ್ಮ ಅಮ್ಮನ ಅಪ್ಪಉಪ್ಪಿನಕುದ್ರೂ ಅನಂತೈಯ್ಯ ಐತಾಳರು) ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಅರ್ಧ ಊಟದಲ್ಲಿ ಇವರಿಗೆ ಉಪ್ಪುಂದಕ್ಕೆ ಕರೆ ಬಂದಿತು. ಅದೇನೆಂದರೆ "ಉಪ್ಪುಂದ ಶ್ರೀಯುತರಾದ .............ಹೊಳ್ಳರು (ಈಗ ಅವರು ಇಲ್ಲ) ಒಂದು ಬಿಳೀ ವೇಸ್ಟಿಯನ್ನ ಹೊದೆದುಕೊಂಡು, ಕವುಂಚ್ ಮಲಗಿದ್ದರಂತೆ. ನೀವು ಬರಬೇಕಂತೆ" ಅಂತ. ತಟ್ಟನೆ ಕೈ ತೊಳೆದು ಉಪ್ಪುಂದಕ್ಕೆ ಹೊರಟರು. ಅದು ಎಡಬೆಟ್ಟಿನಿಂದ ಸುಮಾರು ೩೦ ಕಿಲೋ ಮೀಟರ್ ದೂರದಲ್ಲಿತ್ತು. ಅಲ್ಲಿಗೆ ಹೋಗಿ ನೋಡಿದಾವಾಗ, ಅವರು ಮಾತನಾಡುವುದೇ ಇಲ್ಲ. ಅವರ ಹೆಂಡತಿ ನೋಡಿ ಅವರು ಹೆಣ್ಣನ್ನ ನೋಡಿ ಬಂದು ಹೀಗೆಯೇ ಮಲಗಿದ್ದರು. ನೀವೇ ಈಗ ಅವರನ್ನ ಮಾತನಾಡಿಸಿ ಎಬ್ಬಿಸಿ ಅಂತ ಗೋಳಾಡಿದರು. ಅದು ಮತ್ತೇನಿಲ್ಲ. ಮಾಸ್ಟ್ರ ಕೃಷ್ಣ ಉಪಾಧ್ಯರ ಎರಡನೆ ಮಗಳನ್ನ ಇವರ ಮಗನಿಗೆ ನಮ್ಮ ಅಪ್ಪಯ್ಯನೇ ಮಾಸ್ಟ್ರು ಮನೆ ಹೆಬ್ಬಾಗಿಲಿನಲ್ಲಿ ತೋರಿಸಿದ್ದರು. ಅವಳು ಮಾಸ್ಟ್ರು ತರ ಬಹಳ ಬೆಳ್ಳಗೆ. ಆದರೆ ಈ ............. ಹೊಳ್ಳರ ಅಭಿಪ್ರಾಯದಂತೆ, ಸದೀ ಮಾಸ್ತರು ಹುಡುಗಿಗೆ ಪೌಡರ್ ಹಾಕಿ ತೋರಿಸಿದ್ರು ಅಂತ ಆಪಾದನೆ. ನಮ್ಮ ಅಪ್ಪಯ್ಯನಿಗೆ ತಡೆಯಲಾಗಿಲ್ಲ. ಹೋಯ್, ಹೊಳ್ಳರೇ, ನನ್ನ ಹೆಸರು ಇಡೀ ಕೋಟ ಹದಿನಾಲ್ಕು ಗ್ರಾಮದಲ್ಲಿ ಬಹಳ ಪ್ರಸಿದ್ಧಿ. ನಾನು ನಿಮಗೆ ಹಾಗೆ ಮಾಡುವವನಲ್ಲ. ನಿಮಗೆ ಶಾಂತಿಯಾಗಬೇಕೆಂದರೆ, ನಾನು ಇನ್ನೊಮ್ಮೆ ಹುಡುಗಿಯನ್ನ ತೋರಿಸುವೆ. ಬನ್ನಿ ಅಂತ ಮರು ದಿನಕ್ಕೇ ಮುಹೂರ್ತವನ್ನ ಇಟ್ಟರು. ಸರೀ ಎಲ್ಲರೂ ಬಂದರು. ಎಲ್ಲರೂ ಮಾಸ್ಟ್ರು ಮನೆ ಹೆಬ್ಬಾಗಿಲಿನಲ್ಲಿ ಕುಳಿತಿದ್ದರು. ಆವಾಗ, ನಮ್ಮ ಅಪ್ಪಯ್ಯ, ಮಗಾ "......." ಅಂತ ಹೆಸರನ್ನ ಹೇಳಿ ಬಾವಿ ಕಟ್ಟೆಗೆ ಹೋಗಿ ಸೋಪಿನಲ್ಲಿ ಕಾಣುವ ಹಾಗೆ ಮುಖವನ್ನ ತೊಳೆದುಕೊಂಡು ಸೀದಾ ಹೆಬ್ಬಾಗಿಲಿಗೇ ಬಾ ಎಂದು ಎಲ್ಲರ ಎದಿರಿನಲ್ಲಿಯೇ ಗಟ್ಟಿಯಾಗಿ ಕೂಗಿ ಹೇಳಿದರು. ಅವಳು ಹಾಗೆಯೇ ಮಾಡಿ, ಹೆಬ್ಬಾಗಿಲಿಗೆ ಬಂದು ಕುಳಿತದ್ದು ನೋಡಿ , ಪಾಪ ................. ಹೊಳ್ಳರಿಗೆ ಬಹಳ ನಾಚಿಕೆ ಆಯಿತು. ನಮ್ಮ ಅಪ್ಪೈಯ್ಯನವರಲ್ಲಿ ಕ್ಷಮೆ ಕೇಳಿ, ಕೊನೆಗೆ ಉಪ್ಪುಂದದ ಗಂಡೀನ ಮನೆಯ ದಿಬ್ಬಣ ಮಾಸ್ಟ್ರು ಮನೆ ಮದುವೆಗೆ ನಮ್ಮ ಮನೆಯಿಂದಲೇ ಹೊರಡುವ ಹಾಗೆ ಆಯಿತು!. ಹೀಗೆ ಹಲವಾರು ವಿಚಿತ್ರಗಳನ್ನೂ ನಮ್ಮ ಅಪ್ಪಯ್ಯ ಎದಿರಿಸಿದ್ದರು.

ಇನ್ನೊಂದು ಇವರ ಎರಡನೇ ಮಗಳ ಮದುವೆಯ ವಿಚಾರವಾಗಿಯೇ ನಡೆಯಿತು. ಅದೇನೆಂದರೆ, ಗಂಡು ೩೧ ಹೆಣ್ಣುಗಳನ್ನ ನೋಡಿ ಬಿಟ್ಟಿರುವುದು ಇವರಿಗೆ ತಿಳಿಯಿತು. ಗಂಡಿಗೆ ಕೆಲಸವೇನೆಂದರೆ ಕರೀಂ ನಗರದ ಹೋಟೆಲ್ಲಿನಲ್ಲಿ ಸಪ್ಪ್ಲೈ ಮಾಡಿಕೊಂಡಿರುವ ಅಥವಾ ಕೇಶಿಯರ್ ಆಗಿ ಕೆಲಸವನ್ನ ಮಾಡುತ್ತಿದ್ದರು. ಹುಡುಗಿಯನ್ನ ಸಾಲಿಗ್ರಾಮದಲ್ಲಿರುವ ಬಳೆಗಾರನ ಅಂಗಡಿಯ ಮುಂದೆ ತೋರಿಸುವ ಯೋಜನೆಯನ್ನ ಮಾಡಿಕೊಂಡಿದ್ದರು. ಆದರೆ ಈ ಮುಂಚೆ ಗಂಡಿಗೆ ನಮ್ಮ ಅಪ್ಪೈಯ್ಯ, ಅರ್ಧ ಗಂಟೆ ಭಾಷಣವನ್ನ ಬಿಗಿದರು. ಅದರಲ್ಲಿ ಮುಖ್ಯವಾದದ್ದೇನೆಂದರೆ, ಹೋಯ್, ನೀವು ಬರೀ ಹುಳಿಯಾವ್ಲಕ್ಕಿ, ಉಪ್ಪಿಟ್ಟು ತಿನ್ನುತ್ತಾ ಹೋದಲ್ಲಿ, ಹುಡುಗಿಯರನ್ನ ನೋಡುತ್ತಾ ಹೋದಲ್ಲಿ ಅವರ ತಂದೆ-ತಾಯಿಯರ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಿದ್ದೀರಾ? ಅಲ್ಲಾ ನೀವು ನನ್ನ ಹುಡುಗಿಯನ್ನ ಮದುವೆ ಮಾಡ್ಬೇಕೆಂದು ನಾನು ಹೇಳುವುದಿಲ್ಲ! ಅಂತ ಇವರ ಭಾಷಣವನ್ನ ಮುಗಿಸಿದ್ದರು. ಇವರ ಮಾತನ್ನ ಕೇಳಿ ಅವರು ಕೊನೆಯಲ್ಲಿ, ನನ್ನ ಅಕ್ಕನನ್ನೇ ಒಪ್ಪಿ ಮದುವೆಯಾದರು. ಆ ಮೇಲೆ, ನಮ್ಮ ಅಪ್ಪಯ್ಯನೇ ಹಣವನ್ನ (ರೂ.೨೫೦೦.೦೦) ಹಾಕಿ ಮಹಾರಾಸ್ಟ್ರದಲ್ಲಿ ಹೋಟೇಲನ್ನ ಇಟ್ಟುಕೊಡಲು ಕಾರಣೀಭೂತರಾದರೆನ್ನಿ!. ಇದಕ್ಕೂ ಸದೀ ಮಾಸ್ತರ ಕಥೆಗೂ ಏನು ಸಂಬಂಧವೆಂದು ಕೇಳಿದಲ್ಲಿ, ನಾನು ಹೇಳುವುದು ಇಸ್ಟೆ. ನಮ್ಮ ಅಪ್ಪಯ್ಯ ಮಾಡಿರುವ ಕೆಸವೆಲ್ಲಾ ಹಾಗೆಯೇ. ಬಹಳ ಯೋಚಿಸಿಯೇ ಮಾಡುತ್ತಿದ್ದರು. ಇವತ್ತಿಗೂ ಯಾವ ಮದುವೆಯೂ ಸದೀ ಮಾಸ್ಟ್ರೂ ಮಾಡೀ ಹಾಳಾಯಿತೆನ್ನುವ ಅಪವಾದ ಇಡೀ ಊರಿನಲ್ಲಿಯೇ ಇಲ್ಲ. ಉಲ್ಟಾ ಉದ್ಧಾರವೇ ಆಗಿದೆ ಅನ್ನಿ!.

ಇನ್ನೊಂದು ಮದುವೆಯ ಕಥೆ ಇಲ್ಲಿ ಹೇಳಲೇ ಬೇಕು. ಇದು ನಮ್ಮ ಕಟ್ಟಿದೇವರ ಪೂಜೆಯನ್ನ ಮಾಡುತ್ತಿರುವಂತಹ ಶ್ರೀಯುತರಾದ ಸಣ್ಣಯ್ಯ ಉಪಾಧ್ಯರ ಎರಡನೇ ಪುತ್ರಿಯ ಮದುವೆ. ಅವರಿಗೆ ಮದುವೆ ಸ್ವಲ್ಪ ಲೇಟ್ ಆಗಿತ್ತೆಂದರೆ ಅದು, ಇವತ್ತಿನ ಕಾಲಕ್ಕೆ ಲೇಟ್ ಅಲ್ಲವೇ ಅಲ್ಲ. ಆದರೆ ವಿಚಿತ್ರ್ವೇನೆಂದರೆ ನಮ್ಮ ಕಟ್ಟಿದೇವರಲ್ಲಿ ನಡೆಯುತ್ತಿರುವಂತಹ ದೈವ ಪೂಜೆಯಲ್ಲಿ ಇಡೀ ಒಂದು ದೊಡ್ಡ ತಾಮ್ರದ ಚಂಬು ತಣ್ಣೀರನ್ನ ಗಟಗಟನೆ ಕುಡಿಯುತ್ತಿದ್ದಳು. ಅವಳಿಗೆ ಕೆಲವೊಮ್ಮೆ ಜನಗಳನ್ನ ನೋಡಿದಲ್ಲಿ ದರ್ಷನದ ತರಹ ಬರ್ತಿತ್ತು!. ಒಂದು ವಿಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಳು!. ಅದನ್ನ ನಮ್ಮ ಅಪ್ಪಯ್ಯ ನೋಡಿ, ಸಣ್ಣಾ, ಈ ಹುಡುಗಿಗೆ ಮದುವೆ ಮಾಡು. ಎಲ್ಲಾ ಸರಿ ಹೋಗುತ್ತೆ ಅಂದರು. ಆದರೆ ತಿಳಿದವರು ಇವಳಿಗೆ ಗಂಡನ್ನ ಕೊಡುತ್ತಿರಲಿಲ್ಲ. ಅದಕ್ಕಾಗಿ ಬಹಳ ದೂರ ಹೋಗಬೇಕಿತ್ತು. ಸರಿ.  ಅಲ್ತಾರದ ಹತ್ತಿರ( ಮೂಡಿನೂರು) ಒಬ್ಬ ಗಂಡು ಇರುವುದು ಇವರುಗಳಿಗೆ ತಿಳಿಯುತು. ಆ ಹುಡುಗನನ್ನ ನೋಡಲು, ನಮ್ಮ ಅಪ್ಪನೇ ಸೈಕಲ್ ತೆಗೆದುಕೊಂಡು ಹೋಗಿ ನೋಡಿಕೊಂಡು ಇವರ ರೆಕಮೆಂಡೇಷನ್ನನ್ನ ಕೊಟ್ಟರು.ಹಾಗೆ ಹೋದಾವಾಗ, ಅಲ್ಲಿಯೇ ಹತ್ತಿರ ಇರುವ ಹೊಳೆಯಲ್ಲಿ ಸೈಕಲ್ಲೂ ಬಿದ್ದು, ಇವರೂ ಕೂಡ ಬಿದ್ದು ಗಾಯವನ್ನ ಮಾಡಿಕೊಂಡರಂತೆ! ಸರಿ ಆ ಹುಡುಗಿಗೆ ಮದುವೆ ಆಯಿತು. ಆದ ಮೇಲೆ ಎಲ್ಲಾ ಕಾಹಿಲೆಗಳು ಸರಿ ಹೋಗಿ ಈಗ ಅವಳು  ಮೂರು ಹೆಣ್ಣು ಮಕ್ಕಳ ತಾಯಿ. ಇಬ್ಬರು ವಿದೇಶದಲ್ಲಿದ್ದರೆ ಒಬ್ಬಳು ಇಲ್ಲಿಯೇ ಇರುವಳು. ಎಲ್ಲಾ ಇಂಜಿನೀರ್ಸ್. ಇನ್ನೇನು ಬೇಕಪ್ಪಾ? ಇದನ್ನೆಲ್ಲಾ ಯಾತಕ್ಕೆ ನಿಮಗೆ ಹೇಳುತ್ತಿದ್ದೇನೆಂದರೆ, ನಮ್ಮ ಅಪ್ಪೈಯ್ಯನೂ ಮದುವೆಯನ್ನ ಮಾಡಲು ಎಸ್ಟೊಂದು ಕಸ್ಟವನ್ನ ಪಡುತ್ತಿದ್ದರೂ ಅಂತ, ಅಸ್ಟೆ.

ಮತ್ತೊಂದು ಇಂಟರೆಸ್ಟಿಂಗ್ ಕಥೆ ನಮ್ಮ ಗ್ರಾಮದ ಪಟೇಲರ ಮನೆಯಲ್ಲಿ ನಡೆಯಿತು. ಅವರು ಒಂದು ಹುಬ್ಬಳ್ಳೀ  ಎಮ್ಮೆಯನ್ನ ಕಟ್ಟಿದ್ದರು. ಅದು ಒಳ್ಳೇ ೧೦ ಸಿದ್ದೆಗಿಂತ ಹೆಚ್ಚಿಗೆ ಹಾಲನ್ನ ಕೊಡೂತ್ತಿರುವ ಎಮ್ಮೆ. ಆದರೆ ಬೆಳಿಗ್ಗೆ ಕರೆಯಲು ಹೋದಾವಾಗ, ಒಂದು ಸಿದ್ದೆ ಹಾಲು ಕೂಡಾ ಇರುತ್ತಿರಲಿಲ್ಲ!. ಅವರಿಗೆ ತಲೆ ಬಿಸಿ ಆಯಿತು. ಆವಾಗಿನ ಕಾಲದಲ್ಲಿ ಸುಮಾರು ರೂಪಾಯಿ ೪೦೦ ಕೊಟ್ಟು ತೆಗೆದುಕೊಂಡು  ಬಂದಂತಹ ಎಮ್ಮೆ. ಅದನ್ನ ನಮ್ಮ ಈ ಸದೀ ಮಾಸ್ತರ ಹತ್ತಿರ ಹೇಳಿದರು. ಆಗ ನಮ್ಮ ಅಪ್ಪಯ್ಯ, ನೋಡೂ ಮಾಬ್ಲಾ ( ಪಟೇಲರ ಎರಡ್ನೇ ಪ್ರಾಧ್ಯಾಪಕ ಮಗ), ನೀನು ಬೆಳಿಗ್ಗೆ ೩ ಗಂಟೆಗೆದ್ದು ಹಟ್ಟಿಯನ್ನ ಕಾಯ್ಬೇಕು. ಯಾರಾದರೂ ಎಮ್ಮೆ ಕರೆಯಲು ಬರಬಹುದು. ನಾಳೆ ಈ ಕೆಲಸವನ್ನ ಮಾಡ್ಬೇಕು ಅಂತ ಹೇಳಿದರು. ಸರಿ ಇವರ ಮಾತಿನಂತೆ, ಮಾಬ್ಲ ಉಪಾಧ್ಯರು (ಈಗ ಅವರಿಲ್ಲ) ಬೆಳಿಗ್ಗೆ ೩ ಗಂಟೆಗೆ ಹಟ್ಟಿಯಲ್ಲಿ ಯಾರಿಗೂ ಕಾಣದ ಹಾಗೆ ಅಡುಗಿ ಕುಳಿತಿದ್ದರು. ಸರಿಯಾಗಿ ೩.೩೦ ಕ್ಕೆ ಒಂದು ದಪ್ಪದ ಹೆಂಗಸು ಬಂದು ಎಮ್ಮೆ ಕರೆಯಲು ಕುಳಿತಿತು. ಥಟ್ಟನೆ ಎದ್ದು ಹೋಗಿ ರೆಟ್ಟೆಗೆ ಕೈ ಹಾಕಿ ಹಿಡಿದು ಮನೆಯ ಅಂಗಳದಲ್ಲಿರುವ ತೆಂಗಿನ ಮರಕ್ಕೆ ಕಟ್ಟಿಹಾಕಿ ಸಾರ್ವಜನಿಕರ ಸಮಕ್ಷಮದಲ್ಲಿ ಒಂದು ಬೆತ್ತದಿಂದ ಛಡೀ ಏಟನ್ನ ಕೊಡುತ್ತಿದ್ದರು. ಆ ಮೇಲೆ ಅವರ ಹೆಸರ್ ಕಳ್ಳೀ .....ಯಮ್ಮ ಅಂತಲೇ ಆಯಿತು. ಅದು ಬಿಡಿ. ಆದರೆ ಈ ಸದೀ ಮಾಸ್ತರ ಚಾಣಕ್ಯನ ಬುದ್ಧಿಯಿಂದಾಗಿ, ಇವರ ಮನೆ ಎಮ್ಮೆಯು ಮುಂದಿನ ದಿನಗಳಲ್ಲಿ ೧೧ ಸಿದ್ದೆ ಹಾಲನ್ನ ಕೊಡುವಂತಾಯಿತು. ಆವತ್ತಿನಿಂದ ಊರ ಪಟೇಲರಿಗೂ ನಮ್ಮ ಅಪ್ಪಯ್ಯನಿಗೂ ಎಲ್ಲಿಲ್ಲದ ನಂಟು.

ಇಲ್ಲಿ ನಿಮಗೆಲ್ಲಾ ಅವರ ಸಮಕಾಲೀನ ವ್ಯಕ್ತಿಗಳ ಹೆಸರನ್ನ ಕೊಡಬೇಕೆಂದಿರುವೆ ಹಾಗೂ ಇವರಿಗೆ ಸಮಾಜದಲ್ಲಿ ಸ್ಥಾನ, ಮಾನ ಕೊಟ್ಟಂತಹ ಗಣ್ಯರಿಗೆ ಒಂದು ಧನ್ಯವಾದಗಳನ್ನ ಹೇಳಬೇಕೆಂದಿರುವೆ.

ಸಣ್ಣಯ್ಯ ಉಪಾಧ್ಯರು, ಪಾತ್ರಿ ವಿಷ್ಣುಮೂರ್ತಿ ಉಪಾಧ್ಯರು, ಪಟೇಲರ ಮನೆ ಗೋವಿಂದ ಉಪಾಧ್ಯರು, ಪಟೇಲ ಪರಮೇಷ್ವರ ಉಪಾಧ್ಯರು, ಮಾಸ್ಟ್ರು ಮನೆ ಕೃಷ್ಣ ಉಪಾಧ್ಯರು, ಎಂಕ್ಟೈಯ್ಯನ ಮನೆ ಕೃಷ್ಣ ಉಪಾಧ್ಯರು, ಮೀಸೆ ಶೀನ ಉಪಾಧ್ಯರು, ಅನಂತೈಯ್ಯ ಮಾಸ್ತರು, ತೆಂಕಿನ ಕೇರಿ ಗಣಪಯ್ಯ ಉಪಾಧ್ಯರು, ಅಂತಣ್ಣ ಉಪಾಧ್ಯರು, ಪಟೇಲರ ಮನೆ ವಾಸ ಉಪಾಧ್ಯರು, ಮಂಟಪ ಕಿಸ್ಟುಪಾಧ್ಯರು, ಅಂಗಡೀ ರಾಮ ಉಪಾಧ್ಯರು, ಶೇಶಾದ್ರಿಪುರ ನಾರಾಯಣ ಉಪಾಧ್ಯರು, ಮಂಟಪ ಶೀನ ಉಪಾಧ್ಯರು, ತೋಂಟಕೇರಿ ಸದಾಶಿವ ಉಪಾಧ್ಯರು, ಪಾರಂಪಳ್ಳಿ ರಾಮ ಭಟ್ಟರು, ಪಾರಂಪಳ್ಳಿ ಅನಂತಯ್ಯ ಉಪಾಧ್ಯರು, ಪಾರಂಪಳ್ಳಿ ವಾಸುದೇವ ಉಪಾಧ್ಯರು, ವೈಟ್ರು ಕಿಟ್ಟು ಉಪಾಧ್ಯರು, ಪೋಸ್ಟ್ ಮಾಸ್ಟರ್ ಶಂಕ್ರ ಮಧ್ಯಸ್ಥರು, ಜನ್ನ ಮಧ್ಯಸ್ಥರು, ವೆಂಕಪ್ಪಯ್ಯ ಮಧ್ಯಸ್ಥರು, ಪಾರಂಪಳ್ಳಿ ಯಜ್ನ ಮಯ್ಯರು, ರಾಮಚಂದ್ರ ಹೇರ್ಳೆಯವರು, ಸೂರ್ಯನಾರಾಯಣ ಹೇರ್ಳೆಯವರು, ಬಚ್ಚ ಭಟ್ಟರು, ಕಿಟ್ಟ ಭಟ್ಟರು, ಜನ್ನ ಭಟ್ಟರು, ವೀಣಾ ರಾಮಚಂದ್ರ ಐತಾಳರು, ಅಡುಗೇ ವಿಷ್ಣುಮೂರ್ತಿ ಐತಾಳರು, ಹೊಸಮನೆ ವಿಷ್ಣುಮೂರ್ತಿ ಉಪಾಧ್ಯರು, ಗುಂಡ್ಮೀ ಸೋಮಯ್ಯ ಮೈಯರು, ಗುಂಡ್ಮೀ ನರಸಿಂಹ ಮೈಯ್ಯರು, ಗುಂಡ್ಮಿ ಶಂಕ್ರ ಉಪಾಧ್ಯರು, ಗುಂಡ್ಮಿ ಲಕ್ಷ್ಮೀನಾರಾಯಣ ಉಪಾಧ್ಯರು,  ಕನ್ಯಾಣ ತಮ್ಮಯ್ಯ ಐತಾಳರು, ವಾಸಯ್ಯ ಐತಾಳರು, ಮೋಟ್ ಕಿಸ್ಟೈತಾಳರು, ಮಾಸ್ತರು ಯಜ್ನ ಐತಾಳರು, ಕೋಡಿ ಶಿವೈ ನಾವಡರು, ಕೋಡಿ ಶಿವ್ರಾಮ ನಾವಡರು, ದೋಣಮ್ಮನ ಮನೆ ಲಕ್ಷ್ಮಿನಾರಾಯಣ ಉಪಾಧ್ಯರು (ಇವರು ನಮ್ಮ ಅಪ್ಪನಿಗೆ ಮಾವನಾಗ ಬೇಕು.) ಕೋಡಿ ವೆಂಕ್ಟ್ರಮಣ ಉಪಾಧ್ಯರು, ಕೋಡೀ ಶೇಷಪ್ಪ ಉಪಾಧ್ಯರು (ಇವರ ಮೆನ್ಯಲ್ಲಿಯೇ ಅಪ್ಪೈಯ್ಯನು ಎರಡು ವರ್ಷಗಳ ಕಾಲ ತ್ಮ್ಮ ಬಾಲ್ಯವನ್ನ ಕಳೆದಿದ್ದರು. )ಕೋಡಿ ಉಡುಪರು, ಕೋಡಿ ಮಾಧವ ಕಾರಂತರು ಹಾಗೂ ನರಸಿಂಹ ಕಾರಂತರು, ಕೋಡಿ ಶೇಶಪ್ಪ ಉಪಾಧ್ಯರು, ಚಿತ್ರಪಾಡಿ ಗಣಪಯ್ಯ ಐತಾಳರು, ಬಾಳಕುದ್ರು ರಾಮ ಹೊಳ್ಳರು, ಚಿತ್ರಪಾಡಿ ಪರಮೇಷ್ವರ ಉರಾಳರು, ಯಜ್ನ ಉರಾಳರು, ಸಣ್ಣ ಉರಾಳರು, ಕಾರ್ಕಡ ಗಂಗಾಧರ ಐತಾಳರು, ಕಾರ್ಕಡ ಮಹಾಬಲ ನಕ್ಷತ್ರಿಗಳು ಹಾಗೂ ಭಜನೆಯ ಮಹಾಬಲ ಉಪಾಧ್ಯರು, ಎಡಬೆಟ್ಟು ಲಕ್ಷ್ಮೀನಾರಾಯಣ ಐತಾಳರು, ನಾರಾಯಣ ಹೊಳ್ಳರು, ಮುಂಡಾಸ್ ಹೇರ್ಳೆಯವರು ಹೀಗೆ ಹೇಳುತ್ತಾ ಹೋದಲ್ಲೀ ಈ ಪಟ್ಟಿ ಉದ್ದವಾಗಿ ಹೋಗುತ್ತೆ. ಇನ್ನು ಸೆಕೆಂಡ ಜನರೇಷನ್ನಿನವರು ಬಹಳ ಮಂದಿ ಇದ್ದಾರೆ ಬಿಡಿ.

ಇವರುಗಳಿಗೆ ನಮ್ಮ ಧನ್ಯವಾದಗಳನ್ನ ಹೇಳಲೇ ಬೇಕು. ಇವರುಗಳು ಯಾರೆಂದರೆ, ಮುಖ್ಯವಾಗಿ
೧. ಕೋಡೀ ನರಸಿಂಹ ಉಪಾಧ್ಯರು, ನಮ್ಮ ಅಪ್ಪಯ್ಯನನ್ನ ಬಾಲ್ಯದಲ್ಲಿ ಸಾಕಿದವರು.
೨. ಪಡುಕೆರೆ ಕೃಷ್ಣ ಉಪಾಧ್ಯರು, ನಮ್ಮ ಅಪ್ಪಯ್ಯನಿಗೆ ಗುಡ್ಡೀ ಶಾಲೆಯಲ್ಲಿ ಕೆಲಸವನ್ನ ಕೊಟ್ಟು ಸದಿಯನನ್ನ ಸದೀ ಮಾಸ್ತರ್ ಆಗಿ ಮಾಡಿದ್ದಕ್ಕೆ.
೩. ನಮ್ಮ ಅಣ್ಣ ಹಾಗೂ ಅಕ್ಕ ತಂಗಿಯರಿಗೆ. ಬೆಳಿಗ್ಗೆ, ಸಾಯಂಕಾಲ ಶಾಲೆ ಬಿಟ್ಟಾಗ ಗದ್ದೆಗಳಲ್ಲಿ ಗೊಬ್ರ ಹಾಗೂ ಶ್ಯಟ್ಟಿಯನ್ನ ಹೊತ್ತೂ, ಗದ್ದೆಗಳಲ್ಲಿ ಬಿತ್ತಿ, ನೆಟ್ಟಿ ನೆಡುವಲ್ಲಿ, ಕೊಯ್ಲನ್ನ ಕೊಯ್ಯುವಲ್ಲಿ, ಮನೆ ಕೆಲಸಗಳನ್ನ ಮಾಡುವಲ್ಲಿ, ಮುಡಿ ಕಟ್ಟುವಲ್ಲಿ, ತಿರಿ ಕಟ್ಟುವಲ್ಲಿ, ಹೋಟೆಲ್ ಹಾಗೂ ಅಂಗಡಿಯಲ್ಲಿ ಕೆಲಸವನ್ನ ಮಾಡಿ ಹಣ ಸಂಪಾದನೆಯನ್ನ ಮಾಡಿ ಅಪ್ಪಯ್ಯನಿಗೆ ತಮಗಾದಸ್ಟು ಹಣವನ್ನ ಕೊಟ್ಟು ಮಾನಸಿಕ ಸ್ಥಿರತೆಯನ್ನ ಕಾಪಾಡುವಲ್ಲಿ.
೪. ಊರವರಿಗೆ ನಮ್ಮ ಅಪ್ಪಯ್ಯನಿಗೆ ಸಾಕಸ್ಟು ಗೌರವ ನೀಡುವಲ್ಲಿ ಸಹಾಯವನ್ನ ಮಾಡಿದ್ದಕ್ಕೆ.
೫. ಗುಂಡ್ಮೀ ಸೋಮೈಯ್ಯ ಮೈಯರಿಗೆ, ಅವರು ನಮ್ಮ ಅಪ್ಪೈಯ್ಯನಿಗೆ ಬೆಂಗಾವಲಾಗಿ ನಿಂತದ್ದಕ್ಕೇ
೬. ಇನ್ನು ಕೇರಿಯ ಮಂದಿಗೆ, ಮಹಾಬಲ ಮಾಸ್ಟ್ರಿಗೆ ಮತ್ತು ಉಳಿದ ವ್ಯಕ್ತಿಗಳಿಗೆ ಮತ್ತು ಗಣ್ಯರಿಗೆ.

ಓಹೋ, ಕಥೆ ಬಹಳ ಹೆಚ್ಚಾಯ್ತು. ನಾನಿಲ್ಲಿಗೇ ನಿಲ್ಲಿಸುತ್ತೇನಪ್ಪಾ ಆಯ್ತಾ? ಬೈಯ್ಬೇಡಿ ನನ್ನನ್ನ. ಏನು ಇವನ್ ಅಪ್ಪನೊಬ್ಬನೇ ಸೈಯಾ ಊರಿನಲ್ಲಿ, ಬೇರವರಿಗೂ ಅಪ್ಪ ಇಲ್ಲ್ವಾ ಅಂತ. ನೀವೂ ಬರೀರಪ್ಪಾ, ಯಾರ್ಬೇಡಾ ಅಂದ್ರೂ? ಇಲ್ಲಾಂದ್ರೇ ನಟ್ರಾಜ ಉಪಾಧ್ಯರಿಗೆ ಹೇಳಿ, ಅವ್ರಿಗೊಳ್ಳೇ ಉಮ್ಮಸ್ ಉಂಟ್ ಕಂಡ್ರಿಯಾ. ಬಿಡ್ಬೇಡಿ. ಅವ್ರನ್ನ ಹಿಡ್ಕೊಳ್ಳೀ.  ಈ ಕಥೆಯನ್ನ ಓಡಿದ ಎಲ್ಲರಿಗೂ ಸದಿಯ ಮಾಸ್ತರ ಕಿರೀ ಮಗನು ಮೊದಲೇ ಮಾಡುವ ಧನ್ಯವಾದಗಳು.

ಬರೆದವರು

ಪಾರಂಪಳ್ಳೀ ಸುರೇಂದ್ರ ಉಪಾಧ್ಯ
ಸದೀ ಮಾಸ್ತರ ಕಿರೀ ಮಗ.
೦೨/೦೪/೨೦೧೬

Sunday, April 17, 2016

ಪರಶುರಾಮ ಕಥನಗಳ ನಿತ್ಯೋತ್ಸವ - ಸುರೇ೦೧೦ - ಇದೊಂದು ಹರಟೆ.

Original post at: https://www.facebook.com/permalink.php?story_fbid=1764642477091088&id=1705466946341975

ನಾವೆಲ್ಲಾ ಬೆಳಿಗ್ಗೆ, ಬೆಳಿಗ್ಗೆ ೫ ಗಂಟೆಗೇ ಚನ್ನಮ್ಮನ ಕೆರೆ ಅಚ್ಚುಕಟ್ಟು ಪಾರ್ಕಿನಲ್ಲಿ, ಒಂದು ಗಂಟೆ ಜಿಮ್ ಮತ್ತು ವಾಕ್ ಮಾಡಲು, ನಾವೊಂದು ೬ ಜನಾ ರಿಟಾಯರ್ಸೀಗಳು ಅಲ್ಲಿ ದಿನಾಲೂ ಸೇರ್ತೇವೆ. ಅಲ್ಲೇ ಹಾಕಿದಂತಹ ಬೆಂಚ್ ಮೇಲೆ ಒಂದ್ ಗಂಟೇ ವಾಕ್ ಮತ್ತು ಜಿಮ್ ಆದ್ಮೇಲೆ, ನಾವ್ಗಳು ಕುಳಿತ್ಕೊಳ್ತಿದ್ವೀ. ಹಾಂಗೆ ಕುಳಿತ್ಕೊಂಡವರಿಗೇ, ನಮ್ಮ ಕಿವಿಗಳೆಲ್ಲಾ ಪಕ್ಕದ್ ಬೆಂಚಿನ ಮೇಲೆ ಕುಳಿತಿದ್ದ ಇಬ್ಬರು ಹೆಂಗಸರು ಮಾತನಾಡುವುದರ ಕಡೆ ಹೋಯ್ತ್ ಕಾಣಿ!. 
ಒಬ್ಬಳು ಹೇಳ್ತಿದ್ಲೂ:- “ ಅಲ್ಲಾ ನಮ್ಮ ಎದಿರುಗಡೆ ಮನೆಯವರ ಮಗನಿಗೆ ಮೊನ್ನೆ ಮೊನ್ನೆ ಮದುವೆ ಆಯ್ತು ಮಹಾರಾಯ್ತೀಯಾ. ಆ ಹೆಣ್ ಎಂತಾ ಘಾಟಿ ಗೊತ್ತಾ? ಬಂದ ಹತ್ತೇ ದಿವ್ಸಕ್ಕೆ ಆ ಕಂಜೂಸ್ ಬಡ್ಡೀ ಮಗನನ್ನ ಗರ್ಕ್ ಅಂತ ತನ್ ಕಡೆಗೆ ತಿರ್ಸ್ಕೊಂತೇ!. ಛಳಿ ಅಂತಿಲ್ಲಾ, ಬೇಸಿಗೆ ಅಂತಿಲ್ಲಾ, ಅವ್ರು ಮನೆಯಲ್ಲಿರುವವರ್ಗೇ ಏಸೀ ನಡಿತಾನೇ ಇರುತ್ತೇ!. ಅದೂ ಬೆಳಿಗ್ಗೆ ೧೦ ಗಂಟೀ ವರ್ಗೂ. ಅಂದ್ರೆ, ಅದ್ ಏಳುವುದೇ ೧೦ ಗಂಟೀ ಅಂತ್ ಆಯ್ತು. ಅಲ್ಲಾ ಹಾಂಗ್ ಎದ್ರೇ, ಕಾಫ಼ಿ ಮಾಡ್ವೋರ್ ಯಾರ್? ತೀಡೀ ಮಾಡೋರ್ ಯಾರ್? ನಂಗಂತೂ ಅರ್ಥ್ವೇ ಆಗ್ತಾ ಇಲ್ಲ ಮಹಾರಾಯ್ತೀಯಾ. ಹಾಂಗಾರೆ ಆ ಹೆಣ್ಣಿಗ್ ಚಳಿ ಗಿಳಿ ಆತ್ತಿಲ್ಲ್ಯಾ ? ಭಾಪ್ರೇ ಬಾಪ್. ಅವ್ರ್ ಕಡೆಯವರ್ ಒಂದ್ ೫ ಜನಾ ಗಂಡ್ಸ್ರ್ ಮತ್ತ್ ಇಬ್ರ್ ಹೆಂಗ್ಸ್ರೂ ಮೊನ್ನೆ ಬಂದ್, ಇಡೀ ಮನೀ ನೋಡ್ತಿದ್ರು!. ನೋಡಿದ್ ಮೇಲೆ, ಈ ನಮ್ಮ ಮನಿಗ್ ವಾಸ್ತು ದೋಷ ಉಂಟು. ಅಡ್ಗೇ ಮನೆ ಆಗ್ನೇಯದಲ್ಲಿರ್ಕ್, ಅದ್ ಕುಬೇರ್ನ್ ಮೂಲೆಯಲ್ಲಿದೆ ಕಾಣಿ. ದಕ್ಷಿಣ ಏರ್ ಇದ್ದ್, ಉತ್ತ್ರಾ ತಗ್ಗಿರ್ಕ್, ಅದ್ ನಿಮ್ಮನಿಯಲ್ಲಿಲ್ಲಾ ಅಂತ ಒಂದೆರಡು-ಮೂರ್ ಪೋಯಿಂಟ್ಸ್ ಹೇಳ್ತಾ ಹೋದ್ರ್ ಕಾಣಿ. ನಾವ್ ನಮ್ಮನೀ ಬಾಲ್ಕನಿಯಲ್ಲಿ ಕುಳಿತಿರೋದ್ರಿಂದಾ, ಇದೆಲ್ಲಾ ನಮ್ಗೂ ಕೇಳ್ಸ್ತಿತ್. ಈ ಮನಿಯಲ್ಲಿ ನಮ್ಮ ಹೆಣ್ಣ್ ಇರ್ಲಿಕ್ ಬಹಳ ಕಸ್ಟ ಆಗುತ್ತೇ! ಅವ್ಳಿಗ್ ಶಾಂತಿ ಇರ್ಲಿಕ್ ಇಲ್ಲಾ ಅಂತ ಆ ಹೆಣ್ಣಿನ್ ಮನೀಯವ್ರ್ ಹೇಳುದಾ ಮಹಾರಾಯ್ತಿಯಾ? ಅಬ್ಬಾ ಅವ್ರ್ ಧೈರ್ಯಾ ಕಾಣಿ!. ಹೆಚ್ಚಿನಂಶ್ ಅವ್ರ್ ಕೋಟ್ಯಾಧೀಶ್ರ್ ಇರ್ಬೇಕಂತ್ ನಗನ್ಸಿತ್. ಅದ್ಕೇ ಏನ್ ಮಾಡ್ವಾ ಅಂದ್ರೆ, ನೀವ್ ಅರ್ಧ, ನಾವ್ ಅರ್ಧಾ ಹಣಾ ಹಾಕ್ವಾ. ಈ ಮನಿಯನ್ ಅಳ್ದ್, ಬೇರೆ ಕಟ್ಟಿಸ್ವಾ, ಅಂತ ಹೇಳಿದ್ರ್. ಇದಕ್ಕೇನಂತ್ರೀ? ಅಂತ ಕೇಳುವುದೇ? ಅದ್ಕ್, ನನ್ನ ಮಿತ್ರೆ ಸಂಧ್ಯಾ ಹೇಳಿದ್ಲ್, ನಮ್ಮ ಮನೇಲೀ ಅಡ್ಗೇ ಮನೇಗ್ ಮಾತ್ರ ವಾಸ್ತು ಇಲ್ಲ. ಆದ್ರೆ ನಾವ್ ಇದ್ರಲ್ಲೇ ದೊಡ್ಡದ್ ಆಯ್ತುಕಾಣಿ! ಹಾಂಗೂ ನಿಮ್ಮಸ್ಟ್ ದೊಡ್ಡವ್ರ್ ಅಲ್ದೇ ಇದ್ರೂ , ಸಮಾಜಕ್ಕೊಂದ್ ದೊಡ್ಡವ್ರೂ ಆಯ್ತೆನ್ನುದಾ ಆ ಹೆಂಗ್ಸೂ!. ನಿಮ್ಮ ಹೆಣ್ಣಿಗ್ ಬೇಕಾದ್ರೇ ಬೇರೆ ಮನೆ ಕಟ್ಟಿ ಕೊಡೀನೇ , ಅದ್ ಈ ಮನಿಯಲ್ಲಿರ್ಬೇಕಾದ್ ಅಗತ್ಯವಿಲ್ಲಾ ಅನ್ನುವುದಾ ಆ ಹೆಂಗ್ಸ್!? ಅಬ್ಬ ಅವ್ಳ ಧೈರ್ಯವೇ!. ಈ ನನ್ನ ಮಿತ್ರೆ ಇದ್ದಾಳಲ್ಲಾ, ಸಂಧ್ಯಾರಾಣಿ, ಅವ್ಳ್ ಮಗ ಮದ್ವೇಗಿಂತಾ ಮುಂಚೇ , ಅಪ್ಪಾ ಪೇಪರ್ ಮಾರಿದ್ ದುಡ್ಡನ್ನ ಇವ್ನ್ ಜೇಬಿಗ್ ಹಾಕೊಂತಿದ್ದ್ನೇ! ಆತ ಒಂದು ಚಾಯ್ ಗೀಯ್ ಕುಡೀತ್ತಿರ್ಲಿಲ್ಲೇ. ಕೆಲ್ಸುಕ್ಕೂ ಹಾಗೆಯೇ, ಗಾಡಿ ಇದ್ರೂ, ಪೆಟ್ರೋಲ್ ಖರ್ಚಾತ್ ಅಂತಾ, ಬಸ್ನಲ್ಲೇ ಮಾನ್ಯತಾ ಟೆಕ್ಪಾರ್ಕಿಗ್ ಹೋಗ್ತಿದ್ನೇ! ಒಂದ್ ಹೋಟ್ಲೀಗ್ ಹೋಗ್ತಿರ್ಲಿಲ್ಲ್ಯೇ. ಅದೇ ಈಗ ಕಾಣ್ಕ್, ಹೆಂಡ್ತೀನ್ ಕರ್ಕೊಂಡ್, ಕೂರ್ಸ್ಕಂಡ್ ಹೋಪುದ್ ಸ್ಟೈಲ್ ಏನ್, ಕಣ್ಣಿಗೊಂದ್ ಕೂಲಿಂಗ್ ಗ್ಲಾಸ್ ಹಾಕಿ, ಮಿಲಿಟರೀ ಶೂ ಧರ್ಸ್ಕೊಂಡ್, ತಲೀಗೊಂದ್ ಹೆಲ್ಮೆಟ್ ಹಾಕ್ಕೊಂಡ್, ಕಿವಿಗೊಂದ್ ಫೋನ್ ಸುರ್ಕೊಂಡ್ ಸರ್ರ್ ಅಂತ ಮೋಟೋರ್ ಬೈಕ್ನಲ್ಲಿ ಹೋಪೂ ಝಾಪ್ ಏನ್? , ಅಬ್ಬೀಗಂತೂ ಜೋರ್ ಮಾಡೂಕ್ ಶುರು ಮಾಡಿದ್ನೇ. ಮನೀಗ್ ಲೇಟ್ ಬರೂದ್ ಏನ್! ಒಳ್ಳೇ ಡ್ರೆಸ್ ಮಾಡೂದ್ ಏನ್? ಅಬ್ಬಾ ! ಕಾಣ್ಕ್ ಅವ್ನ ಸ್ಟೈಲೇ, ಸ್ಟೈಲ್!. ಇದೆಲ್ಲಾ ಈ ಉಪಾಯ್ದ್ರೇ ಮಾಡಿರುವುದೆನ್ನಿ(ಇದನ್ನೆಲ್ಲಾ ಅಲ್ಲೇ ಪಕ್ಕದ್ ಬೆಂಚ್ಮೇಲೆ ನಾವೆಲ್ಲ್ ಕೇಳ್ತಿದ್ದೇವೆ ಎಂಬ ಪ್ರಿಜ್ನಾನವೂ ಅವ್ರಿಗಿಲ್ಲಾ, ಹೋಗ್ಲೀ). ಹುಡ್ಗೀ ಕುಂಡ್ಲೀ ಮತ್ ಹುಡ್ಗನ್ ಕುಂಡ್ಲೀ ಜೊತೀ ಮೇಚ್ ಮಾಡಿ ಕೋಟ್ಟವ್ರೇ ಈ ನಮ್ಮ ಉಪಾಯ್ದ್ರು. ಅದೇನೋ ೩೬ ಕ್ ೨೩ ಪೋಯಿಂಟ್ಸ್ ಬರುತ್ ಅಂಬ್ರ್! ಆದ್ರೆ ಅವ್ರ್ ಮಾತ್ರಾ, ಜಾತ್ಕ ಹೇಳ್ಸ್ಕಂಡದ್ದೆಕ್ಕೆ, ಇವ್ರಿಗ್ ಹೊದೂಕ್ ಒಂದ್ ಕಂಬ್ಳಿ ಕೊಟ್ರ್ ಅಂತ್ ಮಾಡಿ. ಈ ಬ್ಯಾಸ್ಗಿಯಲ್ ಅದ್ ಕೆಲ್ಸ್ಕ್ ಬರ್ತದಾ? ಇರ್ಲಿ ಬಿಡಿ. ಈಗ ಮೊನ್ನೆ ಮೊನ್ನೇ ಆ ಹೆಣ್ಣಿನ್ ಕಡೆಯವ್ರು, ಹೇಳ್ತಿದ್ರ್:- ಅವ್ರ್ ರಾಜಾಜೀ ನಗ್ರದೊಳ್ಗೇ, ಒಂದ್ ಆ ಹೆಣ್ಣೀನ್ ಹೆಸ್ರಿನ ಮನಿ ಇವ್ನಿಗ್ ಕೊಡ್ತಾರಂತೇ ಅಂತ ಹೇಳಿ ತನ್ನ ಕಥಿಯನ್ನ್ ಅಲ್ಲೇ ನಿಲ್ಸಿದ್ಲೂ ಅನ್ನಿ.
ಸರಿ ಮೊತ್ತೊಬ್ಬಳ್ ಕತೀ ಶುರುವಾಯ್ತ್ ಕಾಣಿ!. ಅವ್ಳ್ ಇದ್ದವ್ಳ್ ಹೇಳಿದ್ಲೂ, ಅಯ್ಯೋ, ನನ್ನ ಸಂಬಂಧಿಕ್ರ್ ಕತೀ ನೀನ್ ಏನ್ ಕೇಳ್ತಿಯೋ? ಆ ಹೆಣ್ ಎಂಬೀಬಿಸ್ ಡಿಗ್ರೀ ಮಾಡ್ಕೊಂಡಿತ್. ಅವ್ಳಿಗ್ ಏನ್ ರೋಗ್ ಬಡೀತೋ ಎನೋ ಗೊತ್ತಿಲ್ಲೆ, ರಿಕ್ಷಾ ಡ್ರೈವರ್ ಜೊತೆ ಓಡೀ ಹೋದ್ಲಂತೇ ಮ್ಹಾರಾಯ್ತೀಯಾ!, ಅದೇನೋ ನಮ್ಜಾತಿ ಅಲ್ವಂತೇ,ಅಡ್ಡ್ ಜಾತೀಯಂತೇ! ಆ ಜಾತಿಯವ್ರ್ ಜೊತೆಯಲ್ಲಿ ಅವ್ಳ್ ಓಡಿಹೋಗಿ ಅಲ್ಲೆಲ್ಲೋ ಮದುವೆ ಕೂಡಾ ಮಾಡ್ಕಂಡ್ಲಂತೇ!. ಇದಾಗಿ ೫ ವರ್ಷ ಆಯ್ತ್ ಕಾಣಿ. ನಮ್ಮನಿಯವ್ರ್ ಹತ್ರ ಅವ್ಳ್ ೩ ವರ್ಷದ್ ಮಗಳ್ ಜಾತ್ಕಾ ಬಂತ್ ಕಾಣಿ. ನಮ್ಮನಿಯವ್ರಿಗೇನ್ ಗೊತ್? ಇವ್ರ್ ಇದ್ದದ್ ಇದ್ದ್ ಹಾಂಗೇ ಎಲ್ಲಾ ಹೇಳಿದ್ರ್. ಅವ್ಳಿಗ್ “ನಿಂಗೇ ಪಿತೃ ಶ್ರಾಪ ಉಂಟೆಂದ್ ಹೇಳಿ, ಗಯಾಕ್ ಹೋಗಿ, ವಿಷ್ಣು ಪಾದದ್ ಮೇಲೆ ಪಿಂಡ ಇಟ್ ಬರ್ಲಿಕ್ ಹೇಳಿದ್ರ್. ಆದ್ರೆ ಒಂದ್ ಮಾತ್, ನಿನ್ ಗಂಡಾ ಎಲ್ಲಿಯಾದ್ರೂ ಬೇರಿ ಜಾತಿ ಗೀತಿ ಆಗಿದ್ರೇ, ನಂಗ್ ಗೊತ್ತಿಲ್ಲಾ!. ಅದ್ನ ಹೇಂಗ್ ಮಾಡ್ತೀಯೋ ನೀನ್ ಕಾಣ್. ಅದ್ಕೇ ಅವ್ಳ್ ಬಿಕ್ಕಿ ಬಿಕ್ಕಿ ಹೇಳಿದ್ಲ್ ಅಂತೇ. ಅಯ್ಯೋ ನಾನು ಮತ್ ಅವ್ರೂ ಬೇರಿ ಆಗಿ ೨ ವರ್ಷಾ ಆಯ್ತೂ ಅಂತಾ. ಈಗ್ ನಂಗೆರಡು ಹೆಣ್ಮಕ್ಳೂ ಇದ್ರ್. ನಾನ್ ಏನ್ ಮಾಡ್ಬೇಕೋ ಅಂತ ನಂಗೊತ್ತಿಲ್ಲೇ ಅಂತ ಹೇಳ್ತಿದ್ಲೂ ಅಂತ ನಮ್ಮ್ ಯಜ್ಮಾನ್ರೂ ನಂಗ್ ಹೇಳಿದ್ರು. ಆಮೇಲ್ ಏನ್ ಆಯ್ತೆಂತ ನನ್ ಕೇಳ್ಬೇಡಿ. ಈ ಮಕ್ಳಿಗ್ ಅದೇನೋ ಗಾದಿ ಮಾತ್ ಹೇಳ್ತಾರಲ್ಲ, ಗಂಡ್ಸೀಗ್ ಮೀಸಿ ಬಪ್ ಹೊತ್ತಿಗ್, ಹೆಂಗ್ಸೀಗ್ ಮುಟ್ ಆಗಿ ೧೮ ವರ್ಷಾ ಹಿಡಿಯೋಕ್ ಹೊತ್ತೀಗೆ, ದೇಶ ಕಾಣ್ಸೋದಿಲ್ವಂತೇ. ಹಾಂಗೇ ಆಯ್ತ್ ಕಾಣಿ ಅಂತಾ ತನ್ ಮಾತನ್ನ ಅಲ್ಲೇ ನಿಲ್ಸಿದ್ಲ್. ಹೋಯ್ ಅಲ್ಲೀಗ್ ಆವತ್ತಿನ ನಮ್ಮ್ ಬೆಳಿಗ್ಗಿನ ವಾಕಿಂಗ್ ಸಮ್ಯಾ ಮುಗೀತ್ ಕಾಣಿ. ನಾವ್ ಎಸ್ ಎಲ್ ವೀ ಕಡೇ ಇಡ್ಲಿ ವಡಾ ತಿನ್ಲಿಕ್ ಹೊರ್ಟ್ವೀ!. ಆದ್ರೇ ಅಲ್ ನನ್ ಸ್ನೇಹಿತಾ ಕಾಶಿ ಸಿಕ್ದಾ ಕಾಣಿ. ನಾನ್ ಎಣ್ಸ್ಕೊಂಡೇ, ಹೋ ಇವತ್ ಇವ್ನ್ ಬೇರೆ ರೀಲ್ ಬಿಡ್ಲಿಕ್ ಶುರು ಮಾಡ್ತಾನೆ. ಇನ್ ನಾವ್ಗಳು ಮನೀಗ್ ಹೋಪೊತ್ಥಿಗ್ ಮಧ್ಯಾಹ್ನ೧ ಗಂಟೀ ಗ್ಯಾರಂಟೀ ಅಂತ ಎಣಿಸಿ ಅವ್ನಿಗೂ ಸೇರಿ ಇಡ್ಲಿ ವಡಾ ಆರ್ಡರ್ ಮಾಡಿದೆ ಅನ್ನಿ.
ತಿಂಡೀ ನಾವೆಲ್ಲಾ ತಿಂದ್ ಆದ್ ಮೇಲೆ ಬೈ ಟೂ ಕಾಫಿ ಆರ್ಡರ್ ಮಾಡಿ ಅದನ್ನೂ ಪೂರ್ಣಗೊಳಿಸಿ, ಅಲ್ಲೇ ಇದ್ದಂತಹ ಬೀ.ಡೀ. ಯೇ ಪಾರ್ಕಿನತ್ತ ಕಾಲನ್ನ ಹಾಕಿತು. ಅಲ್ಲೊಂದು ಮರದ್ ಅಡಿ, ತಂದಂತಹ ಬಟ್ಟೇ ಹಾಸಿ, ಅದ್ರ್ ಮೇಲೆ ಇಸ್ಪೀಟ್ ಪ್ಯಾಕನ್ನ ಬಿಚ್ಚಿ ಎಲೆಯನ್ನ ಮೇಲೆ ಕೆಳ್ಗೆ ಕಲಿಸ್ಲಿಕ್ ಶುರು ಮಾಡ್ತ್ ಕಾಣಿ. ಅಸ್ಟ್ರಲ್ಲಿ ನಮ್ಮ ಕಾಶಿಯ ಕಥೆ ಶುರುವಾಯ್ತು ಕಾಣಿ. ಹ್ವಾ ಸುರೇಂದ್ರ ನಿಂಗ್ ಈ ವಿಷ್ಯ ಗೊತ್ತಾನಾ? ಅಂದ ಕಾಶಿ.
ಅದಕ್ ನಾ ಹೇಳ್ದೇ, ಅಲ್ಲ್ವಾ ಮಹಾರಾಯಾ ನೀ ಹೇಳ್ದ್ರೇ ತಾನೇ ನಂಗ್ ಗೊತ್ತಾಗೋದೂ ಅಂತಾ?
ಅಲ್ವೋ ಆ ಏಕ್ಸಿಸ್ ಬ್ಯಾಂಕಿನ್ ಚೇರ್ಮೇನ್ ಕಾರಂತ್ರ್ ಮಗ್ಳ್ದ್ ನಾಳೆ ಮದುವೆ ಅಂದ್ರೇ ಇವತ್ ಮುರ್ದ್ ಬಿತ್ತಂತ್ ಕಾಣ್ ಮಾರಾಯಾ! ಅದೂ ನಮ್ ಗುರೂ ನರ್ಸಿಂಹನ್ ಕಲ್ಯಾಣ್ ಮಂಟ್ಪ್ದೊಳ್ಗೇನೇ. ಬೀಗರ್ ಎದ್ರೇ ಈ ಹೇಸಿಗೇ ಕೆಲ್ಸಾ ನಡ್ದ್ ಹೋಯ್ತ್ ಕಾಣ್!. ಹಾಂಗಾರ್ ಅಸ್ಟ್ ದೊಡ್ಡ್ ಪೋಸ್ಟ್ನಲ್ ಇದ್ದ್ ಆ ಪ್ರಾಣೀಗ್ ಅಸ್ಟು ಗೊತ್ತಾಗೋದಿಲ್ವಾ ಮಾರಾಯ? ಅಂದ. 
ನಾನ್ ಏನ್ ಹೇಳ್ತೀಯೋ, ಆ ಹೆಣ್ಣನ್ ಕೊಡೋದ್ ನಮ್ಮ್ ಸಂಬಂಧದಲ್ಲೇ ಮಹಾರಾಯ!. ಏನಾಯ್ತೋ? ಬೇಗ್ ಬೊಗ್ಳೋ ಅಂದೇ ಕ್ಯೂರಿಯಾಸಿಟಿ ತಡ್ಲಿಕ್ ಆಗ್ದೇ.
ಕಾಶೀ ಹೇಳ್ದ, ಅಲ್ಲೋ ಮಹಾರಾಯ ಆ ಹೆಣ್ಣ್ ಇಸ್ಟ್ ದಿವ್ಸಾ ಏನ್ ಮಾಡ್ತಿತ್ತೋ?. ಅದ್ಕ್ ಕಲೀಯೊಪ್ಪತ್ಥಿಗೇ ಲವ್ ಇತ್ತಂಬ್ರ್ ಮಹಾರಾಯಾ? ಅಂದಾ. ನಾನ್ ಅವ್ನ್ ಮಾತ್ ಕೇಳಿದ್ನೋ ಇಲ್ವೋ , ಸೀದ್ ಸ್ಕೋಟರ್ ತೆಕ್ಕೊಂಡ್ ಗುರು ನರ್ಸಿಂಹನ್ ಛತ್ರಕ್ ಹೋದೇ ಕಾಣಿ. ಅಲ್ಲ್ ಎಲ್ಲಾ ಜನ್ರ್ ಎಲ್ಲಾ ಸೇರ್ಕೊಂಡಿದ್ರ್. ಹ್ಯಾಂಗಿದ್ರೂ ಆವತ್ತಿನ್ ರಾತ್ರಿ ಒಂದು ಗೆಟ್ ಟುಗೆದರ್ ನಮ್ಮ ಕಾರಂತ್ರ್ ಕಡೆಯಿಂದ್ ಇತ್ ಅನ್ಮಾಡಿ!. ನಾನ್ ಸೀದಾ ಹೆಣ್ಣೀನ್ ಕೋಣಿಯೊಳ್ಗೇ ಹೋದೆ. ಅಲ್ಲಿ ಕಾರಂತ್ರೂ, ಕಾರಂತ್ರ್ ಹೆಂಡ್ತಿಯೂ, ಅವ್ರ್ ಸ್ವಲ್ಪ ಆತ್ಮೀಯ ನೆಂಟ್ರೂ ಎಲ್ಲಾ ಮುತ್ಗೆ ಹಾಕ್ಕೊಂಡಿದ್ರು. ನಾನ್ ಅವ್ರನೆಲ್ಲಾ ತಳ್ಕೊಂಡ್ ಸೀದಾ ಒಳ್ಗೇನೇ ನುಗ್ಗಿದೇ. ನನ್ ನೋಡಿ ಕಾರಂತ್ರ್ ಅಯ್ಯೋ ಮಹಾರಾಯ್ರೇ ನನ್ ಮಗ್ಳ್ ಹೀಂಗ್ ಮಾಡಿದ್ಲೂ ಅಂತ ಗೋಳ್ ಅಂತ್ ಕೂಗಿದ್ರು. ಆದ್ರೆ ಅವ್ರ್ ಅತ್ತದ್ದು ಕಣ್ ಒರ್ಸೋ ವಿದ್ಯೇ ಅಂತ್ ಆಮೇಲ್ ಗೊತ್ತಾಯ್ತ್ ಬಿಡಿ. 
ನಾ ಕೇಳ್ದೇ ಯಾಕ್ ಕಾರಂತ್ರೇ ಹೀಂಗ್ ಮಾಡಿದ್ರೀ/ ಬರೀ ಹೇಸ್ಗೆ ಆಯ್ತಲ್ಲೇ ಅಂದೆ. 
ಅದಕ್ಕ್ ಅವ್ರೂ ತಮ್ ಧ್ವನಿ ಸೇರ್ಸೀ ಹೌದ್ ಮಹಾರಾಯ್ರೇ, ಈ ರೀತಿ ಮಾಡ್ತಾಳೆಂದ್ ನಂಗೂ ಗೊತ್ತಿರ್ಲಿಲ್ಲೇ ಅಂದ್ರ್. 
ಯಾವ್ದುಕ್ಕೂ ಸುಮ್ನಿರಿಯೇ. ಆದ್ ಆಗಿ ಹೋಯ್ತ್ ಅಂದೇ.
ಅಯ್ಯೋ, ನನ್ ೬೦೦೦೦.೦೦ ರೂಪಾಯಿ ಛತ್ರಕ್ ಕಟ್ಟಿರೋದ್ ವೇಸ್ಟ್ ಆಯ್ತಲ್ಲೇ ಮಹಾರಾಯ್ರೇ. ಯಂತಾ ಮಾಡೋದೂ ಅಂತ ಗೊಳ್ಳೆಂದ್ ಅತ್ರ್ ನೋಡಿ. ಅದನ್ ನೋಡಿ, ನಾನ್ ಹೋಯ್ ಅದನ್ನ್ ನಿಮ್ಗೆ ಆ ಹಂದೇರ್ ಹತ್ರ ಮಾತಾಡಿ ನಿಮ್ಗ್ ವಾಪಾಸ್ ಬರ್ವ್ ಹಾಂಗ್ ಮಾಡ್ಸ್ತನೇ. ಈಗ ನೀವ್ ಸುಮ್ಕಿರಿ ಅಂದೆ . ಅವ್ರೂ ಸುಮ್ಕಿದ್ರ್. ಸರಿ ಎಲ್ಲ್ರನ್ನ ಕಳ್ಸಿ ನಾನ್ ಕೂಡಾ ಮನಿಯಒಳ್ಗೆ ಕಾಲಿಟ್ ಹೆಂಡ್ತೀಗ್ ಎಲ್ಲಾ ವಿವರ್ಸಿದೆ. ಅದಕ್ ನನ್ ಹೆಂಡ್ತೀ ಹೇಳಿದ್ಲ್, ಅಯ್ಯೋ ಆ ಬೇವರ್ಸೀಗ್ ಕಾಲೇಜ್ನಲ್ಲೇ ಯಾವ್ದೋ ಹುಡ್ಗನ್ ಜೊತೇ ಲವ್ ಉಂಟಂತೇ ಮಹಾರಾಯ್ರೇ. ಅದ್ಯಾಕ್ ನಾಳೆ ಮದ್ವೇ ಅಂದ್ರೇ ಇವತ್ ಬ್ಯಾಡಾ ಅಂತ್ ಹೇಳಿದ್ಲೋ ಗೊತ್ತಿಲ್ಯೇ. ಒಟ್ಟಾರೆ ಬರೀ ಹೇಸಿಕೆ ಆಯ್ತಸ್ಟೇ. ಬಿಡಿ ಬಿಡಿ. ಆ ಯಪ್ಪ್ನ. ಮೊದ್ಲಿನ್ ಹೆಂಡ್ತೀ ಆ ಹೇರ್ಳೆಯವರ್ ಮಗ್ಳಂತೇ. ಅವ್ಳ್ ಸತ್ ಹೋದ್ ಮೇಲೆ, ಅದ್ಯಾವ್ದೋ ಮೇಡ್ರಾಸ್ನಲ್ಲಿ ಒಂದ್ ಮುಂಡಿಯನ್ನ ಕಟ್ಕೊಂಡ್ರಂತೇ. ಅವ್ಳನ್ಕಟ್ಕಂಡ್ ಮೇಲಿಯೇ ,ಈ ನಿಮ್ ಕಾರಂತ್ರೂ ದೊಡ್ಡ್ ಪೋಸ್ಟೀಗ್ ಹೋದ್ರಂತೇ ಕಾಣಿ! “ಯಥಾ ರಾಜಾ ತಥಾ ಪ್ರಜಾ” ಅಂತ ನನ್ ಹೆಂಡ್ತೀ ತನ್ಗ್ ಗೊತ್ತಿರುವ ಒಂದು ಗಾದೀ ಮಾತನ್ ಕೂಡಾ ಹೇಳಿದ್ಲ್ ಅನ್ನಿ!. ಈಗ ಮದ್ವೇ ಬ್ಯಾಡಾ ಅಂತ್ ಹೇಳ್ತಲ್ಲಾ!. ಆ ವಡು ಹುಡ್ಗೀ, ಮೊದ್ಲಿನ್ ಹೆಂಡ್ತೀ ಮಗ್ಳಂತೇ ಅಂತೆ ಕಾಣಿ. ಹೀಗಂತ್ ಹೇಳಿದ್ದ್ ನಂಗ್ ಆ ಭಟ್ಟನ್ ಹೆಂಡ್ತಿಯೇ. ಅಧೇಂಗ್ ಭಟ್ಟನ್ ಹೆಂಡ್ತೀಗ್ ಈ ಸಮಾಚಾರವೆಲ್ಲಾ ಗೊತ್ತಿತೋ, ನಂಗೊತ್ತಿಲ್ಲೇ? ಬೇರೆ ವಿಷ್ಯಾ ನನ್ನನ್ ಕೇಳ್ಬೇಡಿ. ನಾನ್ ತಿಳ್ಕೊಂಡೇ, ಕಾಂಬುಕ್ ಮಿಣ್ಣಕ್ ಇದ್ಲ್ ನನ್ ಹೆಂಡ್ತೀ. ಆದ್ರೇ ಅವ್ಳಿಗ್ ಗೊತ್ತಿರೋ ವಿಷ್ಯಾ ನಂಗ್ ಗೊತ್ತಿಲ್ಲ್ಯೇ. ನನ್ಕಿಂತ್ ಹೆಚ್ಚಿಗ್ ಎಲ್ಲಾ ಗೊತ್ತಿತ್! ಅಂತ ಮನ್ದೊಳ್ಗೇ ಅವ್ಳನ್ನ್ ಹೊಗ್ಳಿಕೊಂಡೇ ಅನ್ನೀ. ಸರೀ ಬೆಳ್ಗಾಯ್ತು. ಮತ್ ನಮ್ಮ್ ವಾಕಿಂಗ್ ಚೆನ್ನಮ್ಮನ್ ಕೆರೇ ಪಾರ್ಕಿನತ್ತ ಮರುದಿವ್ಸಾ ಬೆಳಿಗ್ ೫ ಗಂಟೀಗ್ ಶುರುವಾಯ್ತ್ ಕಾಣಿ!. ೧ ಗಂಟೀ ಆದ್ ಮೇಲೆ ಯಥಾ ಪ್ರಕಾರ ಆ ಕಲ್ಬೇಂಚ್ ಮೇಲೆ ಕುಳಿತ್ ನಮ್ಮ ತಲೆ ಹರ್ಟೇ ಮಾತ್ಕತೇ ಶುರುವಾಯ್ತೆನ್ನಿ!. ಇವತ್ತೇನಪ್ಪಾ ಅಂತಾ ಇರ್ವಾವಾಗಾ, ಆ ನಮ್ ಪ್ರಸಾದ್ ಒಂದ್ ಬೋಂಬ್ ಇಟ್ಟಾ ಕಾಣೀ ಮಹಾರಾಯ್ರೇ! ಅದೆಂತ ಅಂತ ಕೇಳ್ತ್ರೀ? ಈಗ ಹೇಳ್ತೀನಿ ನೋಡಿ.
ಏ ಉಪಾಧ್ಯಾ, ಆ ಶ್ರೀಧರ್ ರಾವ್ ಇದ್ನಾಲ್ಲಾ, ಅವ್ನ್ ಅಣ್ಣನ್ ಮಗಾ ಹೆಚ್.ಡಿ.ಎಫ಼.ಸೀ ಬ್ಯಾಂಕ್ನಲ್ಲಿ ವೈಸ್ ಪ್ರಸಿಡೆಂಟ್ ಕಾಣೋ. ಅವ್ನಿಗೊಂದ್ ಹೆಣ್ ಗೊತ್ತಾಯ್ತ್. ಸರೀ ಮೊನ್ನೆ ಆಗಸ್ಟ್ ೧೫ ಕ್ ಮದ್ವೇ ಮಾಡಿದ್ರಂತೇ. ಬ್ಯಾಡಾ ಫಜೀತಿ. ಮದ್ವೇ ಮನೀನಲ್ಲೇ ದೊಡ್ಡ್ ಗಲಾಟೆ ಎದ್ ಹೋಯ್ತ್. ಅವ್ರ್ ಕಡೇ ಪೂರೋಹಿತ್ರ್ ಇಬ್ರ್ ಊಟ ಗೀಟ್ ಮಾಡ್ದೇನೇ ಮದೀ ಮಂಟ್ಪಾ ಬಿಟ್ ಹೊರ್ಟೇ ಹೋದ್ರಂಬ್ರ್. ಅದೂ ಹೋಗ್ಬೇಕಾದ್ ಮುಂಚೇ ಅವ್ರ್ ಶಾಪಾ ಹಾಕೀ ಹೋದ್ರಂತೇ ಕಾಣೋ!. ಅವ್ನ ಹೇಳಿದ್ ತರಾ ನೋಡಿದ್ರೇ, ನಾನ್ ತಿಳ್ಕೊಂಡೇ ಹಂಗಾದ್ರೇ ಈ ಮದ್ವೇ ಸಕ್ಸಸ್ ಆಗೋದೇ ಇಲ್ಲಾ ಅಂತಾ! ಇದ್ ನನ್ನಪ್ಪ್ ಹೇಳಿದ್ ಮಾತ್. ಮದ್ವೇ ಮನೀನಲ್ಲಿ ಗಲಾಟೇ ಆಗೋದೇ, ವಾಲ್ಗದವ್ರ್ ಜೊತೇನಲ್ಲಿ, ಆಡುಗೆಯವ್ರ್ ಜೊತೇನಾಲ್ಲಿ, ಶ್ರಿಂಗಾರ್ ಮಾಡುವವರ್ ಜೊತೇನಲ್ಲೀ ಹೀಗೆ ನಡೆಯುತ್ತೆ ಮತ್ತು ನಡೆಯಲು ಸಾಧ್ಯವೂ ಉಂಟು. ಕಾರಣ ಇದನ್ನೆಳ್ಲಾ ಮೊದ್ಲೇ ಮಾತನಾಡಿ ಇಡ್ಬೇಕಂತೇ. ಮದ್ವೇ ಆದ್ ಮೇಲೆ ಅಥ್ವಾ, ಮದ್ವೇ ಮಂಟ್ಪಾದೊಳ್ಗೇ ಮಾತನಾಡ್ಲೇ ಬಾರ್ದು ಅಂತ ನಮ್ಮಪ್ಪ ನಂಗ್ ಹೇಳ್ತಿದ್ರು.!. ಈ ತರಾ ಜಗ್ಳಾ, ಗಿಗಳಾ ಮಾಡಿದ್ರೂ ಅನ್ನಿ, ಆ ಮದಿ ಅಸ್ಟಕ್ಕಸ್ಟೇ. ಮುಂದೆ ಅದ್ ಬರ್ಕತ್ ಬರ್ಲಿಕ್ಕಿಲ್ಲಾ ಅಂತ ನಮ್ ಅಪ್ಪ್ ಸದೀ ಮಾಸ್ಟ್ರೂ ಹೇಳ್ತಿದ್ದದ್ ಜ್ನಾಪ್ಕಾ. ಈ ಗಲಾಟೀ ಯಾಕ್ ಆಯ್ತೋ ಮಾರಾಯಾ ಅಂತ ಪ್ರಸಾದನ್ ಕೇಳ್ದೇ. ಅದಕ್ ಅವ್ನ್ ಹೀಂಗ್ ಹೇಳ್ದಾ ಕಾಣೀ. ಅದೇನೋ ನಿಮ್ಕಡೇ ಉಡುಪಿಯವ್ರಿಗೆಲ್ಲಾ ಹುಡ್ಗೀಗ್ ಮದ್ವೆಯಲ್ಲಿ ಎರ್ಡ್ ಕರಿಮಣೆ ಶಾಸ್ತ್ರ್ವಂತೇ. ನಿಮ್ ಕ್ವಾಟ್ದವ್ರಿಗ್ ಒಂದೇ ಕರಿಮಣಿ ಅಂತೆ ಕಾಣೋ. ಅದ್ ಹೌದೂ ಅಂದೇ ನಾನು. ಅದೇನೋ ಹೆಣ್ಣಿನ್ ಕಡೀ ಅವ್ರ್ ಇನ್ನೊಂದ್ ಕರಿಮಣೆ ತರ್ಲಿಲ್ಲಾ ಅಂತ ಹೇಳಿ, ನಿಮ್ಮ ಕರಿಮಣೆಯನ್ನೇ ವಾಪಾಸ್ ಕೊಡ್ತೇನೆಂತ್ ಹೇಳಿ ನಿಮ್ಮ ಕಡೇ ಒಬ್ಬ ಪುರೋಹಿತನ ಕೈಯಲ್ಲಿ ತೆಗ್ದ್ಕೊಂಡ್ ಹೋದ್ರಂತೇ. ಹಾಂಗ್ ಆ ಕರ್ಮಿಣೆಯನ್ನ ಹೆಣ್ಣಿನ್ ಕಡೇ ಪೂರೋಹಿತ್ರಿಗ್ ಕೊಡ್ವಾಗ , ನಿಮ್ ಕಡೇ ಪುರೋಹಿತ್ರು ಒಂದ್ ಶರತ್ತನ್ನ ಹಾಕಿದ್ರಂತೇ. ಅದೇನೆಂದ್ರೇ, ಅವ್ರು ಮತ್ತೇ ಈ ಕರ್ಮಿಣೆಯನ್ನ, ವಾಪಾಸ್ಆ ಪೂರೋಹಿತ್ರಿಗೇ ಕೊಡ್ಬೇಕಂತ್ ಹೇಳಿದ್ರಂತೇ ಮಾರಾಯಾ! ಆದ್ರೆ ಅವ್ರ್ ಹೇಳಿದ್ ಹಾಂಗ್ ಅವ್ರ್ ಕೊಡ್ಲಿಲ್ಲೇ. ಆ ತೆಕೊಂಡ್ ಹೋದ್ ಕರೀಮಣೆಯನ್ನ್ ಈ ಶ್ರೀಧರ್ ರಾವ್ ಅಣ್ಣನಿಗ್ ಕೊಟ್ರಂತೇ. ಸರಿ ಅಸ್ಟಕ್ಕೇ ದೊಡ್ಡ ಕಾಳ್ಗವೇ ಆಯ್ತೂ ಅಂತ ಹೇಳಿದ್ರು ಕಾಣೋ. ಆ ಸ್ರೀಧರ್ ರಾವ್ ಅಣ್ಣನ ಅಳಿಯನಂತೂ ಕಾಣ್ಕಂಬ್ರ್. ಅವ್ರಿಗೆ ಹೊಡೀಲಿಕ್ಕೇ ಹೋದ್ರಂತೋ?
ಈಗ ಏನ್ ಆಯ್ತೋ? ಮದ್ವೇ ಆಯ್ತೋ ಇಲ್ವೋ?
ಅದ್ಕ್ಕೆ ಪ್ರಸಾದ್ ಹೇಳ್ದಾ, ಅಯ್ಯೋ ಮದ್ವೇನೂ ಆಯ್ತು. ಮದ್ವೇ ಆದ್ ೩ ತಿಂಗ್ಳಿಗ್ ಡೈವೋರ್ಸ್ ಕೂಡಾ ನಡೀತಂತೋ! ಆ ಹುಡ್ಗೀಗ್ ಯಾವ್ದೋ ಹಂಗ್ಳೂರ್ ಕಡೇ ಮದ್ವೇ ಕೂಡಾ ಅಯ್ತಂತೇ ಮಾರಾಯ ಅಂದಾ!. ಅವ್ಳೀಗ್ ಒಂದು ೧ ತಿಂಗ್ಳ್ ಹೆಣ್ಮಗೂ ಕೂಡಾ ಆಯ್ತೆಂತ್ ಮೊನ್ನೆ ಮೊನ್ನೆ ಹೇಳ್ದ ಕಣೋ ಅಂತ ಹೇಳಿ ತನ್ನ ಕಥೆಯನ್ನ ಮುಗಿಸ್ದಾ ಅನ್ನಿ.
ನಾನ್ ತಿಳ್ಕೊಂಡೇ ಅಯ್ಯೋ ಈ ಪ್ರಪಂಚವೇ? ಎಂತೆಂತಾ ಕಥೀ ನಡೀತಿರ್ತದೆ ಈ ಕಲಿಯುಗದಲ್ಲೀ ಅಂತ ಮತ್ತೆ ಇಡ್ಲೀ ,ವಡಾ ತಿನ್ಲಿಕ್ ಇವತ್ ಮೈಯಾಸಿಗ್ ಹೊಟ್ವೀ ಕಂಡ್ರ್ಯಾ.
ಬರೆದವರು ಪಾರಂಪಳ್ಳೀ ಸುರೇಂದ್ರ ಉಪಾಧ್ಯರು
ಹವ್ಯಾಸೀ ಜ್ಯೋತಿಷ್ಯಗಾರರೂ, ರೇಕೀ ಮಾಸ್ಟರ್ ಕೂಡಾ. ೧೪-೦೪-೨೦೧೬

ಪರಶುರಾಮ ಸೃಷ್ಟಿ ಕಥನಗಳ ನಿತ್ಯೋತ್ಸವ - ಪಾ.ನ.ಉ. ೦೦೧೧ - ಸದಿ ಮಾಸ್ತ್ರ ಕಥಿ - ಭಾಗ ೫

Original post at: https://www.facebook.com/notes/nataraja-upadhya/%E0%B2%B8%E0%B2%A6%E0%B2%BF-%E0%B2%AE%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0-%E0%B2%95%E0%B2%A5%E0%B2%BF-%E0%B2%AD%E0%B2%BE%E0%B2%97-%E0%B3%AB-%E0%B2%85%E0%B2%82%E0%B2%A4%E0%B2%BF%E0%B2%AE/10154772108422738
ಸದಿ ಮಾಸ್ತ್ರ ಕಥಿ - ಭಾಗ ೫ (ಅಂತಿಮ)
Photo Courtesy: Sri Surendra Upadhya, s/o Sadi Mastar (Shreeman Subraya Upadhya)

ನಮ್ಮದು ಬೇಸಾಯದ ಮನೆ, ಜೊತೆಗೆ ಮನೆ ಕಟ್ಟಿದ ಸಾಲ ತೀರಲು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮನೆಯಲ್ಲೇ 

ದಿನಸಿ ಅಂಗಡಿ ಹೆಚ್ಚಿನದು.

 

ಬೇಸಾಯದ ಮನೆ ಅಂದ ಮೇಲೆ ಗಂಟಿ ಕಟ್ಕಂಬದೇ. ಹಾಲಿಗೆ ಎಮ್ಮಿ ದನ, ಗೆದ್ದಿ ಹೂಡುಕೆ ಕೋಣ ಇಪ್ಪುದೇ. ಗುಡ್ಡ ಹೆಚ್ಚ್ ದಿನ ಇಪ್ಪುದಿಲ್ಲ, ಮಾರಿ ಹೋತಿತ್! ಕೋಣ ಇದ್ರ್ ಶೀಲ ಮಾಡ್ಸು ಕೆಲ್ಸ, ಎಮ್ಮಿ ದನಕ್ ಗಬ್ಬ ಆಪುಕ್ ಕ್ವಾಟಕ್ ಹೋಯ್ ಇಂಜೆಕ್ಷನ್ ಹಾಕ್ಸು ಕೆಲ್ಸ. ಗಬ್ಬ ನಿಂತ್ ಮೇಲ್ ಕರು ಹಾಕು ದಿನ ಬತ್, ಒಂಭತ್ ತಿಂಗಳ್ ಕಾಯ್ಕ್. ಆಮೇಲ್ ದಿನಾ 

ಗಮನ ಇಡ್ಕ್, ಪಚ್ಚಲ್ ನೋಡಿ ಹೇಳ್ಲಕ್, ಇವತ್ತಾ ನಾಳಿಯಾ ಅಂತ್. ಕರು ಹಾಕಿಕೂಡ್ಲೇ ಎರಡ್ ಜಾಗ್ರತಿ ಮಾಡ್ಕ್. ಒಂದ್ ಕರುವಿಂದ್ ಬಿಳಿ ಉಗರ್ ಒಣುಗು ಮೊದ್ಲೇ ಕೆತ್ತಿ ನಡುಕೆ ಸುಲಭ ಮಾಡಿ ಕೊಡುದು. ಇನ್ನೊಂದ್ ತಾಯಿದ್ ಕಸ ಬೀಳುದ್ ಕಾಯುದ್, ತಾಯಿ ಕಸ ತಿನ್ನು ಸಾಧ್ಯತೆ ಇತ್, ಕಸ ತಿಂದ್ರ್ ಹಾಲು ಕೊಡುದು ಗೋವಿಂದ, ಹಾಂಗಾಯ್! ಕಸ ಬಿದ್ ಮೇಲ್ ನಾಯಿ ತಿನ್ನದಿದ್ದಾಂಗ್ ಹುಗಿಕ್, ನಾವ್ ನಮ್ ಗೊಬ್ರ ಗುಂಡಿಲೇ ಹುಗುದ್ 

ಕಲ್ತ್ಕಂತ್.

 

 

ನಮ್ಮನಿಲ್ ಹೆಚ್ ಹಾಲ್ ಕೊಡು ದನಗಳೇ ಇಪ್ಪುದ್. ಒಂದ್ ಹಾಲೆಸ್ಟೀನ್ ದನ ದಿನಕ್ ೨೫ ಲೀಟರ್ ಹಾಲ್ ಕೊಡುದ್ ಇದ್ದಿತ್ತ್, ದಿನಕ್ ಮೂರ್ ಸರಿ ಕರ್ದರೂ ಹಾಲ್ ಹರ್ಕಂಡ್  ಬಪ್ಪಾಂಗ್. ಇಂಥಾ ಒಂದ್ ದನ ಗಬ್ಬ ಕಟ್ಟಿ ಕರು ಹಾಕು ದಿನ ಬಂತ್. ರಾತ್ರಿನೇ ಕರು ಹಾಕತ್ ಅಮಿಗ್ ಆಯ್ತ್. ಅಪ್ಪಯ್ಯ ರಾತ್ರಿ ೧೨ ಗಂಟಿಗೇ  ಹೋಯ್ ಕಾಂತ್ರ್ ಕರು ಹೊರ ಬಪ್ ಸನ್ನಿ ಆಯ್ತ್. ಗರ್ಭದ ಚೀಲ ಒಡ್ದ್ ಕರುವಿನ ಮುಖ ಕಾಂಬು ಸುರುವಾಯ್ತ್. ರಾತ್ರಿ ಎರಡ್ ಗಂಟಿ ಆದ್ರೂ ಕರು ಹೊರಗ್ ಬರ್ಲಿಲ್ಲ, ಕರುವಿನ ಮುಖ ಎರಡ್ ಕಾಲ್ ಮಾತ್ರ ಸ್ವಲ್ಪ ಹೊರಗ್ ಬಂದ್ ನೇತ್ಕಾಡ್ಕಂಡಿತ್, ತಾಯಿ ಆಕಡಿ ಈಕಡಿ ಒಂದೇ ಸಮ್ನಿ ತಿರ್ಗುದು, ಅದ್ಕೂ ನೋವ್ ತಡ್ಕಂಬಕ್ ಆಪುದಲ್ಲ!

 

 

ನಮ್ಮ ಅಪ್ಪಯ್ಯಂಗ್ ಎಲ್ಲಾ ಕೆಲ್ಸ ಬತ್, ಆದ್ರ್ ಇದ್ ಮಾತ್ರ ಸಲ್ಪ ಫಜೀತಿ ಆಯ್ತ್. ಇನ್ನೆಂತ ಮಾಡುದ್, ಸದಿಮಾಷ್ಟ್ರನ್ನೇ ಏಳ್ಸುದ್. ಅವರ್ ಮನಿಗ್ ಹೋಯ್ ಅವರನ್ ಏಳ್ಸಿ ಕರ್ಕಂಬಪ್ಪತಿಗೆ ರಾತ್ರಿ ಎರಡೂವರಿ ಗಂಟಿ. ಸದಿ ಮಾಷ್ಟ್ರದ್ ಒಂದ್ ಕುಸಕ್ ಇಲ್ಲಾ, "ಹಾಂ ಹಾಃ, ಬಂದೆ ಬಂದೆ ಬಂದೆ", ಬಂದೇ ಬಿಟ್ರ್, ಒಂದ್ ಸರಿ ಕಂಡ್ರ್, ಹೀಂಗ್ ಮಾಡುದ್ ಅಂದ್ರ್. ಮುಖ ಮತ್ತ್ ಕಾಲ್ ಒಟ್ಟಿಗೇ ಎಳ್ದ್ರೆ, ಕರುಗೆ ಪೆಟ್ ಆಪುದಿಲ್ಲ ಅಂದ್ರ್. ನಾವ್ ಅಪ್ಪ ಮಕ್ಳ್ ಸೇರಿ ಕರುವಿನ್ ಮುಖ ಕಾಲ್ ಹಿಡ್ಕಂಡ್ ನಿಧಾನ ಸಲ್ಪ ಸಲ್ಪ ಎಳ್ದ್ 

ಮೇಲ್ ಕೊನೆಗೇ ಒಂದೇ ಸರಿ ಕರು ಹೊರ ಬಂದ್, ಹಾಕಿದ್ ಹುಲ್ಲಿನ್ ಮೇಲ್ ಬಿದ್ ಮೇಲ್ ಅಯ್ಯಬ್ಬಾ! ಗಂಟಿ ಮೂರ್ ಆಯಿತ್. ಸದಿ ಮಾಷ್ಟ್ರಿಗ್ ಒಂದ್ ಬಿಸಿ ಹಾಲೋ ಕಾಪಿಯೋ ಕೊಡುಕ್ ಇನ್ನೂ ಬೆಳಗ್ ಆಯಿಲ್ಲ, ಅವರ್ ಹಾಂಗೇ ಮಿಣ್ಣಗ್ ಹೋಯ್ ಮನಿಲ್ ಮತ್ ಮನ್ಕಂಡ್ರ್! ನಮ್ಮ ಅಮ್ಮನಿಗ್ ಸಂಭ್ರಮ ತಡುಕ್ ಎಡಿಯ, ದೊಡ್ಡ್ ಕಪ್ ಕರು, ಹೆಣ್ ಬೇರೆ. ಕರು ಹೆಚ್ ದೊಡ್ಡದ್ ಆಪುಕೆ ಹೋಯ್ ಇಷ್ಟ್ ರಾಮಾಯಣಾ ಆದ್, ಸದಿ ಮಾಷ್ಟ್ರ್ ಬಪ್ಕೋಯ್ ಎಲ್ಲಾ ಸಸೂತ್ರ, ಅರ್ಧ ರಾತ್ರಿ ಡಾಕ್ಟ್ರನ್ ಹುಡ್ಕಂಡ್ ಕ್ವಾಟಕ್ ಹೋಪು ತಾಪತ್ರಯ ತಪ್ಪತ್ (ಫೋನ್ ಇಲ್ಲಾ)!

 

 

ಸದಿ ಮಾಷ್ಟ್ರದ್ ದನ ಕರುದ್ ವಿಷ್ಯದಲ್ ಸಿದ್ಧ ಹಸ್ತ, ಸಣ್ಣಾ ಪುಟ್ಟದ್ ಎಲ್ಲಾ ನಾಟಿ 

ಔಷಧದಲ್ಲೇ ಆತ್, ಡಾಕ್ಟ್ರ್ ಬಪ್ಪುಲೊರಿಗೆ ಇಲ್ಲಾ ಡಾಕ್ಟ್ರ್ ಬರ್ದಿದ್ ಹಾಂಗ್. ಗಂಡಸ್ ಆಪುಕೋಯ್ ಹೆಂಗಸರ್ ಹೆರುಕ್ ಒಂದ್ ಕರಿಲಿಲ್ಲ, ಇಲ್ದಿದ್ರ್ ಅದೂ ಆತಿತ್ತೋ ಏನೋ, ಮಿಡ್ಬಾಯಿ ಕೆಲ್ಸಕ್ ಸಿಕ್ತಿದ್ರ್! ಇನ್ನ್ ಮನ್ಷರಿಗೂ ಸಣ್ ಮಟ್ಟಕ್ ಔಷಧಿ ಹೇಳ್ತಿದ್ರ್. ಕೆಲವ್ ಖಾಯಿಲಿಗೆ ಅವ್ರ್ ಕೇಣ್ಕಾತ್, "ಹೂಸ್ ಹ್ಯಾಂಗಿತ್" ಅಂತ್,  ಪ್ರಶ್ನಿಗ್ ಎಲ್ಲಾ ಉತ್ತರ ಕೊಡು ಧೈರ್ಯ ಇಲ್ದಿರೋ ಹೆಂಗಸ್ರ್ ಔಷಧಿ ಕೇಂಬುಕ್ ಹೋತಿಲ್ಲ!

 

 

ಶಾಲಿ ಕೆಲ್ಸ ಬಿಟ್ ಮೇಲ್ ಸದಿ ಮಾಷ್ಟ್ರನ್ ಗದ್ದಿ ಬದಿ ಹೆಚ್ಚ್ ಕಾಂಬುಕ್ ಆತಿತ್. ಎಂದಿನ್ ಬ್ಯಾಸಾಯ ಅಲ್ದೇ ತರ್ಕಾರಿದ್ ಒಂದ್ ಸಣ್ ಗದ್ದಿ ಇತ್. ಅಲ್ ಎಲ್ಲ ಕೆಲ್ಸ ಅವ್ರದ್ದೇ, ಕಳಿ ಕೀಳುದ್ ಸೇರಿ. ಬೆಳಿಗ್ ೧೧ ಗಂಟಿವರಿಗೂ ಗದ್ದಿ ಕೆಲ್ಸವೇ, ಕಡಿಗ್ ಸ್ನಾನ, ಪೂಜಿ,

ಊಟ, ನಿದ್ರಿ, ಕಾಫಿ, ಪ್ಯಾಟಿಗ್ ಹೋಪುದ್, ಊರಿನ್ ಬೇರೆ ಬೇರೆ ಹರ್ಬ್, ಪುರ್ಸೊತ್ತಿಲ್ಲ!

 

 

ನಾವ್ ಹೈಸ್ಕೂಲಿಗ್ ಬಪ್ಪತಿಗೆ ನಮ್ ಅಜ್ಜಯ್ಯ ಎಲ್ಲಾ ಬಿಟ್ ವೈರಾಗ್ಯದ್ ಆಧ್ಯಾತ್ಮ 

ಮಾಡ್ತೆ ಅಂತ್ ಮನಿ ಬಿಟ್ ಶ್ರಂಗೇರಿಗ್ ಹೋಯ್, ಅಲ್ ಇಪ್ಪೋರಿಗ್ ಇವ್ರದ್ ಸರಿ ಬರ್ದೇ ಮಡ್ರಾಸ್ ಮಗ್ಳ್ ಮನಿಗ್ ಹೋದವ್ರನ್ ನಮ್ 

ಅಪ್ಪಯ್ಯ ಮನಿಗ್ ಕರ್ಕಂಬಂದ್ ನಮ್ಮನಿಲೇ ಆಧ್ಯಾತ್ಮ ಮಾಡಿ ಅಂಬುದನ್ ಮನ್ಸಿಲ್ಲದ್ 

ಮನ್ಸಲ್ ಒಪ್ಪಿ, ಆಧ್ಯಾತ್ಮ ಮತ್ ನಮ್ ಅಂಗಡಿಗ್ ಎಲ್ಲಾ ತೂಕ ಮಾಡಿ ಪಟ್ಟಣ ಮಾಡು 

ಕೆಲ್ಸ ಅಲ್ದೇ  ಸಿಕ್ಕಿಯವ್ರಿಗ್ ಕೆಲ್ಸ ಊಟದ್ ಮಧ್ಯೆ ಆಧ್ಯಾತ್ಮದ್ ಬೋಧನೆ ಅವ್ರದ್ ಜೋರಾಗಿತ್. ಅವ್ರ್ ಓದು ಪುಸ್ತಕ ಎಲ್ಲಾ ಅದ್ವೈತದ್, ಸಾಯಿಬಾಬಂದ್ ಮ್ಯಾಗಜಿನ್, ಸಾಂಖ್ಯಶಾಸ್ತ್ರ ಹೀಂಗಿಂದ್ ಕಗ್ಗಂಟ್, ಭಗವದ್ಗೀತಿ ಇತ್ಯಾದಿ ಇತ್ಯಾದಿ. ನಮಗ್ ಹೈಸ್ಕೂಲಲ್ ಸಿಕ್ಕಿದ್ ಪರೀಕ್ಷೆ ಎಲ್ಲ ಕಟ್ಟು ಹುಚ್. ಹಿಂದಿ ಪರೀಕ್ಷಿ, ಸಂಸ್ಕೃತದಲ್ ಹಾಂಗಿದೇ ಪರೀಕ್ಷಿ ಎಲ್ಲಾ ಎಸ್ಸೆಸ್ಸೆಲ್ಸಿ ಮುಗುದ್ರೊಳ್ಗ್  ಲೆವಲ್ ಒರಿಗಿದ್ 

ಎಲ್ಲಾ ಕಟ್ಟಿ ಪಾಸಾಯಿತ್. ನಾ ಪಿಯುಸಿಗ್ ಬಪ್ಪತಿಗೆ ಉಡುಪಿ ಮಠದವ್ರದ್ ಒಂದ್ ಭಗವದ್ಗೀತೆದ್ ಪರೀಕ್ಷಿ ಇತ್, ನಾವೆಲ್ಲ ಕಟ್ಟಿ ಕೂತ್ಕಂತ್. ಅದ್ರದ್ದೇ ಒಂದ್ ಪುಸ್ತಕ ಇತ್, ಅದನ್ ಓದಿದ್ರೆ ತಲಿ 

ಹನ್ನೆರೆಡಾಣಿ ಆಪಂಗಿತ್. ನಾ ಎಂತ ಮಾಡ್ಯೆ ಅಂದ್ರ್, ನಮ್ಮಜ್ಜಯ್ಯ ಹೇಳಿದ್ ಅಷ್ಟೂ ಸೇರ್ಸಿ, "ಆತ್ಮ ಪರಮಾತ್ಮ ಎರಡೂ ಬೇರೆ ಬೇರೆ" ಅಂಬ ಮಸಾಲಿ ಮಾತ್ರ ಬದ್ಲಾಯ್ಸಿ, ಬರು ಪೇಪರ್ ಜಾಸ್ತಿ ಕೇಂಡ್ ಕೇಂಡ್ ಬರ್ದ್ ಬರ್ದ್ ಹಾಕಿಯೇ, ನಮ್ಮಲ್ ಎಲ್ಲರೂ ಸೆಕಂಡ್ ಕ್ಲಾಸ್ ಪಾಸ್, ನಾ ಒಬ್ನೇ ಫಷ್ಟ್ ಕ್ಲಾಸ್ ಪಾಸ್, ನಮ್ಮಜ್ಜಯ್ಯನ್ ಸರ್ಕ್ ಬರ್ದ್, ಪುಸ್ತಕದ್ ಬದ್ನಿ ಕಾಯ್ ಬರಿದೇ, ಪರೀಕ್ಷೆ ತಿದ್ದಿಯವ್ರಿಗ್ ಬರದ್ ಎಷ್ಟ್ ಅರ್ಥ ಆಯ್ತೋ ಇಲ್ವೋ, ಬಡ್ಡಿ ಮಗ ಸುಮಾರ್ ಬರಿಕಾರೆ ಮಾರ್ಕ್ ಕೊಡ್ಕೆ ಅಂತ್ ಕೊಟ್ಟಿರ್ಕ್!

 

 

ಸದಿ ಮಾಷ್ಟ್ರ್ ನಂಗ್ ಲೌಕಿಕದಲ್ ಭಾರೀ ಮೆಚ್ಚಿಗಿ ಆದವ್ರ್. ಇತ್ ನಮ್ ಅಜ್ಜಯ್ಯ, "ಮಾರಾಯ, ನಂಗೆಲ್ಲ ೭೦ ದಾಟಿದ್ ಮೇಲ್ ಆಧ್ಯಾತ್ಮ ತಾಗಿದ್, ನಿಂಗ್ ನಲ್ವತ್ರಲ್ಲೇ ತಾಗತ್" ಅಂತ ವರವೋ ಶಾಪವೋ ಕೊಟ್ಟವ್ರ್, ಅವ್ರ್ ಹ್ಯಾಂಗಿದ್ರೂ ಹೇಳಿದ್ದೇ ಹೇಳಿ ನಮ್ ತಲಿ ತಿಂಬವ್ರ್, ಸುಮ್ನೇ ಕೇಳು ಬದ್ಲ್ ನಾ ಅಡ್ಡ್ ಕೊಕ್ಕಿ ಪ್ರಶ್ನಿ ಎಲ್ಲಾ ಹಾಕಿ, ಅವ್ರ್ ಆಧ್ಯಾತ್ಮದ್ ಜ್ನಾನ ಸರಿ ಇತ್ ಅಂತ್ ಗೊತ್ತಾದವ, ನಡತಿಲೂ ತಿಳದ್ದನ್ ಮಾಡುವವರೇ. ಹಾಂಗಾಯ್, ಆಧ್ಯಾತ್ಮದ್ ನಮ್ ಅಜ್ಜಯ್ಯ ಲೌಕಿಕದ್ ಸದಿ ಮಾಷ್ಟ್ರ್ ಒಟ್ಟಾದ್ರ್ ಹ್ಯಾಂಗಿತ್ ಕಾಂಬಾ 

ಅಂಬ್ ಕುತೂಹಲ ನಂದ್.

 

 

ನಮ್ ಅಜ್ಜಯ್ಯ ಸದಿ ಮಾಷ್ಟ್ರಿಗಿಂತ ಹತ್ರತ್ರ ಎಂಟ್ ಹತ್ ವರ್ಷ ದೊಡ್ಡವ್ರ್, ಹಾಂಗಾಯ್ ದೊಡ್ಡವ್ರ್ ಗೌರವ ಸದಿ ಮಾಷ್ಟ್ರ್ ಕೊಡುವವರೇ. ಒಂದೆರೆಡ್ ಮುಖಾಮುಖಿಲ್ 

ಕಂಡೆ, ನಮ್ಮಜ್ಜಯ್ಯನ್ ಆಧ್ಯಾತ್ಮದ್ ಪ್ಲೇಟಿಗ್ ಸದಿ ಮಾಷ್ಟ್ರದ್ ಒಂದೇ ಬಾಣ, "ನೀವ್ ಹೇಳುದ್ ಎಲ್ಲಾ ಸರಿ, ಆದ್ರ್ ಗ್ರಹಸ್ಥಾಶ್ರಮದಲ್ ಇದ್ದವ್ನಿಗ್ ಸನ್ಯಾಸ ಕೂಡದು, ಹಾಂಗಾಯ್ ನಿಮ್ದ್ ನಮ್ಗ್ ಅನ್ವಯಿಸುವುದಿಲ್ಲ" ಅಂತ್ ಒಂದೇ ಸರಿ ಬಾಯ್ ಕಟ್ಸಿ ಬಿಟ್ರ್. ನಮ್ ಅಜ್ಜಯ್ಯ ಸದಿ ಮಾಸ್ಟ್ರ್ ಹೋದ್ ಮೇಲ್ ನಂಗ್ ಹೇಳ್ತ್ರ್, "ಸದಿಯ ಭಾರೀ ಯೋಗ್ಯ, ಆದ್ರೂ  ವಯಸ್ಸಲ್ ಅವನಿಗೆ ಆಧ್ಯಾತ್ಮ ತಾಗುದಿಲ್ಲಾ, ಬೇಕುಗಳನ್ನ ಸಾಕುದ್ ಬಿಟ್ ಸಾಕು ಅಂಬುದನ್ ಸಾಕುಕ್ ಅವನ್ ಇನ್ನೂ ಕಲೀ ಬೇಕ್" ಅಂತ ಕೈತೊಳ್ಕಂಡ್ರ್. ಇವರಿಬ್ಬರೂ ಮನಿಲೋ ಇಲ್ಲಾ ಊಟಗಳಲ್ಲಿ ಮುಖಾಮುಖಿ ಆದಾಗ ನನ್ ಕುತೂಹಲ ಹೆಚ್, ಹ್ಯಾಂಗಿರತ್ ಇವ್ರಿಬ್ರದ್ ಅಂತ, ಕಾರಣ ಸದಿ ಮಾಷ್ಟ್ರ್ ಊಟಗಳಲ್ ಅಗ್ರ ಪಂಕ್ತಿಯವ್ರೇ! ಸಲಹೆ, ನಿರ್ವಹಣೆ, ಬೆಳಿಗ್ಗೆ ತರ್ಕಾರಿ ಕತ್ತರ್ಸುವುದ್ರಲ್ ಯಜಮಾನಿಕಿ, ಚೂರ್ಣಿಕಿ ಇತ್ಯಾದಿ. ನಮ್ಮಜ್ಜಯ್ಯ ಹಿರುಯವ್ರ್, ಆಧ್ಯಾತ್ಮದ್ ಗಾಳಿಯವ್ರ್, ವೈದಿಕ ಮಂತ್ರ ಹೇಳುವವರ್, ಮಾತ್ಗಿ ಅವ್ಕಾಶ ಸಿಕ್ಕಿರ್ ಬಿಡದಿರುವವರ್, ಇಬ್ರದ್ದೂ ಪ್ಲೇಟ್ ಒಂದಕ್ಕೊಂದ್ ತಾಳಿ ಇಲ್ಲ, ಹ್ಯಾಂಗಾತ್ ಅಂತ್ ಕಾಂಬಾ ಅಂತ್. ಸದಿ ಮಾಷ್ಟ್ರ್ ಬುದ್ಧಿವಂತ್ರ್, ಆಧ್ಯಾತ್ಮದ್ ಮಾತುಗಳ್ ಬಂದಾಗ ಬಾಯಿ ಬಿಡುದಿಲ್ಲ, ದೊಡ್ಡದಾಗಿ ಹಾ ಹಾ ಹಾ ಅಂತ್ ನಕ್ಕ್ ಬಿಟ್ ಕಣ್ ಮಿಟ್ಕಿಸಿ, ಕುತ್ತಿಗಿ ಹಾರ್ಸಿ ನಂಗೆಲ್ಲಾ ಸೂಚನೆ ಕೊಡ್ತಿದ್ರ್, ಎಲ್ಲಾ ಸರಿ ಆದ್ರ್ ಇದೆಲ್ಲಾ "ನಮ್ ಬದುಕಿನ ಸಿಲೆಬಸ್ಸಿಗೆ ಮೀರಿದ್" ಅಂತ. ಸದಿ ಮಾಷ್ಟ್ರ್ ತಮ್ಮ ನಿಲುವಿಗೂ ಅನ್ಯಾಯ ಆಗದೇ ಇದ್ ಹಾಂಗ್, ಹಿರಿಯರೊಬ್ಬರ ಜೊತಿಗಿನ ಭಿನ್ನಾಭಿಪ್ರಾಯವೂ ಕಟಿಪಿಟಿಯಾಗದ ಹಾಂಗ್ "ರಾಯಭಾರ" ಮತ್ ಹಾಸ್ಯದಲ್ ತಕ್ಕಂಡ್ ಹೋಪುದ್ ಇನ್ನೂ ಕಣ್ಣಿಗ್ ಕಟ್ಟಿಹಾಂಗ್ ಇತ್. ನಾ ಮಾತ್ರ ಸದಿ ಮಾಷ್ಟ್ರದ್ ಲೌಕಿಕ, ನಮ್ಮಜ್ಜಯ್ಯಂದ್ ಆಧ್ಯಾತ್ಮ ಎರಡಕ್ಕೂ ಒಟ್ಟಿಗೇ ಜೋತ್ ಬಿದ್ದ್ ನನ್ನದೇ ಆದ 

ತ್ರಿಶಂಕುವಿನಲ್ಲಿ ನೇತಾಡುದ್ ಕಲ್ತ್, ಅದೇ ನನ್ ಬದುಕಿನ ಉದ್ದಕ್ಕೂ ನಡ್ಕಂಡೇ ಬಂದ್,  ನೇತಾಡುದನ್ ಉಯ್ಯಾಲಿ ಮಾಡ್ಕಂಡ್ ಸಲ್ಪ್ ಹಾಯಾಗಿ ಇಪ್ಪುಕಾತ್ತಾ ಕಾಂತೆ ಅಷ್ಟೇ!

 

 

 

ಇಲ್ ಸದಿ ಮಾಷ್ಟ್ರ್ "ಬ್ವಾಡಿ ಲ್ಯಂಗ್ವೇಜ್" ನಲ್ ನಾ ಕಲ್ತ್ ದೊಡ್ ಅಂಶ ಏನೆಂದ್ರೆ, ಬದುಕಲ್ ಎಲ್ಲಾ ಗೆಲ್ಲುಕಾತ್ತಿಲ್ಲ, ಆದ್ರ್ "ಸಮನ್ವಯ" ಕಲೆಯನ್ ಕಲ್ತ್ಕಂಡ್ರ್ ಎಲ್ಲಾ ಸಲೀಸ್! ಇದ್ ದೊಡ್ಡ ಪಾಠ! ಸದಿ ಮಾಷ್ಟ್ರ್ ಆಸ್ತಿಕರೇ, ಲೌಕಿಕದಲ್ಲೂ ಮುಳುಗಿಯವ್ರೇ, ಎರಡನ್ನೂ ಚೆನ್ನಾಗಿ ಸಂಭಾಳಿಸಿ, ಸಮನ್ವಯದಲ್ಲಿ ಸಾಗುವಾಗ ವಿಪರೀತವಾಗುವುದನ್ನು ಗೆರೆಹಾಕಿಕೊಂಡು ಬಿಟ್ಟವರು, ತನಗೆ ಹೊಂದದ ವಿಚಾರಧಾರೆಗೆ ಸರಿ ಇಲ್ಲಾ ತಪ್ಪು ಅನ್ನದೇ ಜಾರಿಕೊಂಡು ಸ್ನೇಹದ 

ಸಂಬಂಧಕ್ಕೆ ಚ್ಯುತಿ ಬಾರದಂತೆ ಉಳಿಸಿಕೊಂಡು ಬೆಳೆಸಿಕೊಂಡವರು. ನಮ್ಮಜ್ಜಯ್ಯನೂ ಸದಿ ಮಾಷ್ಟ್ರ್ ಎದ್ರ್ ಆಧ್ಯಾತ್ಮದ್ ಪ್ಲೇಟ್ ಹಾಕುದ್ ಬಿಟ್ರ್, ಸದಿ ಮಾಷ್ಟ್ರ್ ಗೆರಿಗೆ ಬೆಲಿ ಕೊಟ್ರ್, ಅವ್ರ್ ಆಧ್ಯಾತ್ಮವೂ ನೈಜ ಆದ್ರಿಂದ! ಆಧ್ಯಾತ್ಮ ಬಿಟ್ ಬೇರೆ ವಿಷಯ ಇಬ್ರೂ ಮಾತಾಡುದ್ ಒಂದ್ ಚೆಂದವೇ ಇತ್.

 

ನಮ್ಮಜ್ಜಯ್ಯನ ಅಪ್ಪಯ್ಯನ ಕಾಲದಲ್, ಸದಿ ಮಾಷ್ಟ್ರ್ ಅಪ್ಪಯ್ಯನೂ ನಮ್ಮಜ್ಜಯ್ಯನ ಅಪ್ಪಯ್ಯನೂ ಇಲ್ಲಾ ಅವ್ರಿಗಿಂತ 

ಹಿಂದಿನವ್ರ್ ಜಗಳದಲ್ ಧರ್ಮಸ್ಥಳದ್ ದೇವ್ರನ್ ಕರ್ದ್ ಪರಸ್ಪರ ಊಟ ಬಿಟ್ 

ದಾಯಾದಿಗಳಾದ್ ಕಾರಣ,ನಮ್ ಮನಿಗಳ ಮಧ್ಯೆ ಎಷ್ಟೇ ಅನ್ಯೋನ್ಯತೆ ಇದ್ರೂ 

ಪರಸ್ಪರ ಊಟವಿಲ್ಲದೇ ಇರುದ್ ಕೊರತಿಯೇ. ನಮ್ಮನಿಲ್ ಪ್ರಯೋಜನ ಆದಾಗ, ಬೆಳಿಗ್ಗೆ ತರಕಾರಿ ಕತ್ತರ್ಸು ಗಲಾಟಿಲ್ ಸದಿ ಮಾಷ್ಟ್ರೇ ಮುಂದಿದ್ ತಿಂಡಿ ತಿನ್ಬಹುದೇ ಹೊರತ್, ಮಧ್ಯಾಹ್ನ ಊಟಕ್ಕಿಲ್ಲ, ಊಟಕ್ ಬಂದ್ ಉಪಚಾರ ಚೂರ್ಣಿಕೆ ಇದ್ರೂ ಉಂಬುವ ಹಾಂಗ್ ಇಲ್ಲ,  ಕೊರತೆ ತುಂಬುಕ್ ಒಂದ್ ಊಟದ್ ತಿಂಡಿದ್ ಸೇವೆ ಆತಿತ್,  ಸಿಸ್ಟಮ್ ನಮ್ಮ ಮನಿ ಈಚಿ ಗಣಪಯ್ಯ ಉಪಾಧ್ಯರ್ ಮನಿ ಜೊತಿಗೂ ಇಪ್ಪುದ್. ನಮ್ ಅಜ್ಜಯ್ಯ ಅಪ್ಪಯ್ಯ ಅಜಾತಶತ್ರುವಾಗಿ ಬದುಕಿಯವ್ರ್, ಹಾಂಗಾಯ್ ನಮ್ ನಮ್ ಮಧ್ಯ  ಊಟ ಇಲ್ದೇ ಇಪ್ ಕೊರತಿ ಊಟದ್ ನಂತ್ರದ್ 

 ತಿಂಡಿಯಲ್ ತುಂಬಿ ಬರ್ತಿತ್. ಆಧ್ಯಾತ್ಮದ್ ನಮ್ಮ ಅಜ್ಜಯ್ಯ ನಮ್ಮನಿಗ್ ಬಂದ್ ಮ್ಯಾಲ್, ಅವ್ರ ಶಿಫಾರಸ್ಸಲ್ಲೂ ಧರ್ಮಸ್ಥಳಕ್ ಹೋಗ್ದೇ (ಮಾರಾಯಾ, ದೇವ್ರ್ ಎಲ್ಲಾ ಕಡಿ ಇದ್ದಾನಲ್ಲ, ಧರ್ಮಸ್ಥಳಕ್ ಹೋಪುದೇನ್ ಬ್ಯಾಡ!), ಇಲ್ಲಿಂದ್ಲೇ ಮಾನಸಿಕವಾಗಿ ಕಿತ್ತ್ ಹಾಕಂತ್. (ಧರ್ಮಸ್ಥಳಕ್ ಹೋದಾಗ, ನಮ್ಮಮ್ಮ ಅಪ್ಪಯ್ಯ ಮಿಣ್ಣಗ್ ತಪ್ ಕಾಣಿಕಿ ಹಾಕಿ 

ಕಡ ತೀರ್ಸಿಕ್ ದೇವ್ರಿಗ್). ಇತ್ ರಮೇಶ್ ಉಪಾಯ್ದ್ರ್, ಸದಿ ಮಾಷ್ಟ್ರ್ ಮಗ ಊರಿಗ್ ಬಂದವ್ರೂ ಇದನ್ ಮೀರಿ ಬದುಕದನ್ ತೋರ್ಸಿ ಕೊಟ್ರ್, ಕ್ರಮೇಣ ನಾವ್ ಎಲ್ಲಾ ಮೀರಿ ಸಂಬಂಧಕ್ ಸರಿಯಾಯಿ ಊಟ ಮಾಡುಕ್ ಸುರು ಮಾಡ್ತ್.

 

 

ಸದಿ ಮಾಷ್ಟ್ರ್ ಶ್ರಾದ್ಧ ಸೆಪ್ಟೆಂಬರ್ ಹತ್ರ ಬತ್. ಅವ್ರ್ ಮಕ್ಳೆಲ್ಲಾ ಸೇರಿ ಯೋಗೀಶ್ ಉಪಾಧ್ಯರ್ ಮನಿಲ್ ಭರ್ಜರಿ ಶ್ರಾದ್ಧ ಮಾಡ್ಸತ್ರ್. ಅಡಿಗಿ ಸಕತ್ ಇರತ್, ಸದಿ ಮಾಷ್ಟ್ರ್ ಇದ್ರೆ ಬಾಯ್ ಚಪ್ಪರ್ಸ್ಕಂಡ್ ತಿಂಬುದ್ ಅಲ್ದೇ ಒತ್ತಾಯಕ್ ಹಾಕ್ಸಿ 

ಘಂ ಗೈಲ್ ಮಾಡುವ್ ಹಾಂಗೇ ಇರ್ತ್. ಸದಿ ಮಾಷ್ಟ್ರದ್ ಶ್ರಾದ್ಧ, ಸದಿ ಮಾಷ್ಟ್ರಿಗ್ ಸಲ್ಲು ಹಾಂಗ್ ಶ್ರಾದ್ಧ ಎರಡೂ ಸೇರಿ ನನಗಂತೂ ಹಬ್ಬ, ನಮ್ಮನ್  ಹಳೆಯದ್ ಊಟ ಇಲ್ಲದ್ ಗೆರಿ ಮೀರಿ ಕರುದ್ ಇನ್ನೂ ದೊಡ್ಡದ್, ನಾ ಹೋಪುದ್ ತಪ್ಸ್ಕಂಬುದೇ ಇಲ್ಲ,  ಉಂಬುಕ್ ಮದ್ಲ್ ಸದಿ ಮಾಷ್ಟ್ರನ್ ನೆನಸ್ಕಂಡ್ ಕಪ್ಪ ಕೊಡದೇ ಇದ್ರ್  

ಅಪೂರ್ವದ್ ಊಟ ಸೇರ್ಲಿಕ್ ಇಲ್ಲ, ಮೈಗ್ ಹಿಡಿಲಿಕ್ ಇಲ್ಲ!

 

 

 

ನನ್ ಬದುಕಲ್ ನಮ್ಮೂರಿನವ್ರ್ ಪ್ರಭಾವ ನನ್ ಮೇಲ್, ನಮ್ಮ ಅಪ್ಪ ಅಮ್ಮ ಅಜ್ಜಯ್ಯಂದ್, ಕೋಟೇಶ್ವರ ಅಜ್ಜ ಅಜ್ಜಿದ್, ಸದಿ ಮಾಷ್ಟ್ರದ್, ಅದ್ರ್ ಮೇಲ್ ಶಿವರಾಮ ಕಾರಂತರದ್. ವಾಸುದೇವ ಕಾರಂತ್ರದ್ ಪುಸ್ತಕ ಎಲ್ಲಾ ಓದಿದ್ದೆ, ವಿಚಾರ ಎಲ್ಲಾ ಸರಿ, ಯಾವ್ದೂ ತಾಗ್ಲಿಲ್ಲ, ಇದಕ್ ಕಾರಣ, ಶಿವರಾಮ ಕಾರಂತ್ರಿಗಿಂತ, ಸದಿ ಮಾಷ್ಟ್ರದ್ "ಲೌಕಿಕ ಮತ್ತು ದೇವರ ಸಂಬಂಧಗಳ ನಡುವಿನ ಸಮನ್ವಯ" ಕ್ಕೆ ಮೀರಿದ್ದನ್ ಕೈಬಿಡುವ ಬುದ್ಧಿವಂತಿಕೆಯೇ!

 

 

 

 

 

ನಾನೀಗ ಯೋಚಿಸುವುದು, ಸದಿ ಮಾಷ್ಟ್ರ್ ಬದುಕು ಮತ್ ಶಿವರಾಮ ಕಾರಂತ್ರ ಬದುಕಲ್ಲಿ ಮಾನಸಿಕ ಸ್ತರದಲ್ಲಿ 

ವ್ಯತ್ಯಯ ಬಿಟ್ರೆ, ಇಬ್ಬರ ಬದುಕೂ ಅತೀ ಅಪ್ಯಾಯಮಾನವಾದದ್ದೇ, ಒಬ್ಬ ಮನುಷ್ಯನನ್ನ ನಾವು ಬರೇ ಸಾಧನೆಯಲ್ಲಿ ಗುರುತಿಸುವುದಕ್ಕಿಂತ ಆತನ ಬದುಕಿನಲ್ಲಿ, ಅವನ ಇತಿಮಿತಿಯಲ್ಲಿ ಆತ ಬದುಕಿದ ಕಲೆಗೆ ಕಪ್ಪ ಕೊಡುವುದಾದರೆ, ಇಬ್ಬರಿಗೂ ಒಂದೇ ಮಣೆ ಹಾಕುವುದು ಅನಿವಾರ್ಯ!

 

 

 

ನಮ್ ಕೇರಿಲೇ ಇನ್ನೊಬ್ರು ದೊಡ್ಡ್ ಮಾಷ್ಟ್ರ್, ಮಹಾಬಲ ಉಪಾಧ್ಯರ್. ಅವರ್ ಸದಿ ಮಾಷ್ಟ್ರಿಗಿಂತ ಹೆಚ್ಚಿನ ಘನತೆ, ಗಾಂಭೀರ್ಯ, ಉದಾರತೆಯವರಾದರೆ, ಸದಿ ಮಾಷ್ಟ್ರದ್ ಸಮನ್ವಯ, ಜೀವನ ಉಲ್ಲಾಸ, ಸ್ನೇಹ, ರಾಯಭಾರ, ಸಮಾಜಸೇವೆ ಇತ್ಯಾದಿಗಳಿಂದ ಅವ್ರಿಗೆ ಸರಿ ಸಮಾನ ಆದವರು. ನನಗೆ ಸದಿ ಮಾಷ್ಟ್ರೇ ಮೊದಲ ಮಾಷ್ಟ್ರ್ ಆದ ಕಾರಣ, ಸದಿ ಮಾಷ್ಟ್ರ ಕಥೆಯ ಮೂಲಕವೇ ಮಹಾಬಲ ಮಾಷ್ಟ್ರಿಗೆ ನನ್ನ ಪ್ರಣಾಮ ಮತ್ತು 

ಧನ್ಯತೆಯ ಧನ್ಯವಾದ ದೀನತೆಯಲ್ಲಿ.

 

 

 

ಸದಿಮಾಷ್ಟ್ರ ವಿಷಯದಲ್ಲಿ ದೀನತೆ ಇಲ್ಲಾ, ಕಾರಣ ಎಲ್ಲವನ್ನೂ ಮೀರಿದ ಸ್ನೇಹವನ್ನು ಎಲ್ಲರಿಗೂ ಕೊಟ್ಟವರು, ಅಸಮಾನತೆಯ  ಸ್ನೇಹದಲ್ಲಿ ಸಮಾನತೆಯ ಸಮನ್ವಯವನ್ನು ನೈಜವಾಗಿ ಮೆರೆಸಿದವರು.  ಸ್ನೇಹವನ್ನೇ ಇಂದು ಎಲ್ಲರಿಗೂ, ಮನೆಯ ಸುತ್ತಿನ ಗತಿಯಿಲ್ಲದ ನಾಯಿ ಬೆಕ್ಕುಗಳಿಗೂ, ಮನೆಯ ಮೇಲಿನ ಕಾಡಿಗೆ ಸ್ನೇಹದಲ್ಲಿ ಬರುವ ಹುಳ ಹುಪ್ಪಟೆ, ಚಿಟ್ಟೆ, ಜೇನು, ಹಕ್ಕಿ,

ಅಳಿಲು, ಬಾವಲಿ, ಮಂಗಗಳಿಗೂ ಭಿಕ್ಷುಕರಿಗೂ ಧಾರೆ ಎರೆಯುವುದು ನಾ ಕೊಡುವ ಕಿರಿದಾದ ಗುರು ಕಾಣಿಕೆ, ಇಲ್ಲಾ ನನ್ನಿಂದ ಎಂದಿಗೂ ಮುಲಾಜಿಲ್ಲದೇ ಕೊಡಿಸುವ ಸದಿ ಮಾಷ್ಟ್ರ ಕೊನೆಯಿಲ್ಲದ ಕರಾಮತ್ತು!

 

 

ಜೀವನೋಲ್ಲಾಸ, ನಂಬಿಕೆ, ಆತ್ಮ ವಿಶ್ವಾಸ, ಪ್ರೀತಿ, ಸ್ನೇಹ, ಸಮನ್ವಯ ಇತ್ಯಾದಿ ಎಲ್ಲವೂ ಸೇರಿದ ಪಂಚಕಜ್ಜಾಯವೇ ಸದಿ ಮಾಷ್ಟ್ರು, ಅದನ್ನ ಸವಿದವರು ಮಾಡಬೇಕಾದ್ದು ಇಷ್ಟೇ, ತಮ್ಮಲ್ಲೂ ಅದೇ ಪಂಚಕಜ್ಜಾಯವನ್ನ ತಯಾರಿಸಿ ಸದಾ ಹಂಚುವುದು!

 

 

 

ನಮ್ಮ ಬದುಕು, ಸಂಸ್ಕೃತಿ, ಸಂಬಂಧ, ಮನೋಭಾವ ಎಲ್ಲಾ ಬದಲಾಗುತ್ತಲೇ ಇದೆ, ಇರಲಿ,  ಪಂಚಕಜ್ಜಾಯ ಮಾತ್ರ ನಮ್ಮ ಬದುಕಲ್ಲಿ ಸದಾ ಇರಲಿ, ಪಂಚಕಜ್ಜಾಯ ಇಲ್ಲದೇ ಹೋದಲ್ಲಿ ಸದಿ ಮಾಷ್ಟ್ರರರ ಸವಿ ನೆನಪು ಅದನ್ನು 

ಮತ್ತೆ ಮತ್ತೆ ಹುಟ್ಟಿಸುತ್ತಲೇ ಇರಲಿ!

 

 

 

(ಮುಗಿಯಿತು,  ಕಥೆಯನ್ನು ಹೇಳಿದವರಿಗೆ, ಕೇಳಿದವರಿಗೆ, ಕೇಳಿಸಿದವರಿಗೆ ಸದಿಮಾಸ್ತರರ ಆಶೀರ್ವಾದ ಮತ್ತು ಅವರು ನಂಬಿದ ದೇವರ ಕೃಪಾಕಟಾಕ್ಷದ ಸಿರಿವಂತಿಕೆ ಸದಾ ಸಿಗಲಿದೆ!)