Wednesday, June 15, 2016

ವಿದ್ವಾನ್ ಗಣಪತಿ ಭಟ್ಟರೊಂದಿಗೆ ಯಕ್ಷಗಾನ ಕಲಾಬದುಕಿನ ಸುತ್ತಮುತ್ತ ಒಂದು ಸಂವಾದ

ವಿದ್ವಾನ್ ಗಣಪತಿ ಭಟ್ಟರೊಂದಿಗೆ ಯಕ್ಷಗಾನ ಕಲಾಬದುಕಿನ ಸುತ್ತಮುತ್ತ ಒಂದು ಸಂವಾದ

ಶಾಸ್ತ್ರೀಯ ಸಂಗೀತದ ಜ್ನಾನದ ಭದ್ರ ನೆಲೆಗಟ್ಟಿನಲ್ಲಿ ಯಕ್ಷಗಾನದ ಭಾಗವತಿಗೆಯ ರಾಗ ಮತ್ತು ಮಟ್ಟುಗಳನ್ನು ಚೆನ್ನಾಗಿ ಅರಿತು ಅವಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾ ಅಪೂರ್ವ ಶೈಲಿಯಲ್ಲಿ ಹಾಡುತ್ತಾ ಬಂದಿರುವ ಗಟ್ಟಿ ಭಾಗವತರು ವಿದ್ವಾನ್ ಗಣಪತಿ ಭಟ್ಟರು. ಯಕ್ಷಗಾನದಲ್ಲಿ ಅವರ ಕಲಾಜೀವನ ಮೂಡಿ ಬಂದ ಬಗೆ, ಅದು ಅನೇಕ ರೀತಿಗಳಲ್ಲಿ ಅರಳಿ ನಿಂದ ಬಗೆ, ಇಂದು ಅದು ಹೇಗೆ ತನ್ನ ಅಭಿವ್ಯಕ್ತಿಯ ಸುತ್ತ ಹೊಸತನ್ನು ಹುಡುಕುತ್ತಿದೆ, ಗಾನ ಆಖ್ಯಾನ ಎಂಬ ಹೊಸ ಕಲಾ ಪ್ರಕಾರದಲ್ಲಿ ಅವರು ಇತ್ತೀಚೆಗೆ ತೊಡಗಿಕೊಂದ ಬಗೆ, ಮುಂದಿನ ದಿನಗಳಲ್ಲಿ ಏನನ್ನು ಸಾಧಿಸುವ ತುಡಿತ ಅದಕ್ಕಿದೆ ಇವೆಲ್ಲದರ ಸುತ್ತ ಒಂದು ಸಂವಾದ.

ಸಂವಾದದ ಬೇರೆ ಬೇರೆ ಪ್ರಶ್ನೋತ್ತರಗಳಿಗೆ ಕೆಳಗಿನ ಕೊಂಡಿಗಳನ್ನು ಒತ್ತಿ

೧. ಯಕ್ಷಗಾನ ಕಲಿಕೆ

೨. ವೃತ್ತಿಪರನಾಗಿ ವೃತ್ತಿಮೇಳಗಳಿಗೆ ಬಂದ ಬಗೆ

೩. ಗಾನ ಆಖ್ಯಾನ ಕಲಾ ಪ್ರಕಾರದಲ್ಲಿ ಗಿರಿಜಾ ಕಲ್ಯಾಣದ ಒಂದು ಹಾಡು

೪. ಗಾನ ಆಖ್ಯಾನ ಕಲಾ ಪ್ರಕಾರದಲ್ಲಿ ಶನೀಸ್ಚರ ಕಥೆಯಲ್ಲಿ ರಾಜಾ ವಿಕ್ರಮಾದಿತ್ಯನಿಂದ ಶನಿಸ್ತುತಿ - ಕನಕದಾಸ ಕೃತಿ - ಸಕಲಗೃಹಬಲ ನೀನೇ ಸರಸಿಜಾಕ್ಷಾ....

೫. ತಾನು ಸರ್ವಾಭರಣ ಧರಿಸುತ - ಗಾನ ಆಖ್ಯಾನ ಶೈಲಿ ಮತ್ತು ಯಕ್ಷಗಾನ ಶೈಲಿ ಎರಡರಲ್ಲೂ

೬. ಉತ್ತರಾದಿ ಶೈಲಿಯಲ್ಲೊಂದು ಹಾಡು

೭. ತೆಂಕಿನ ಭಾಗವತಿಕೆ ನಿಮ್ಮಿಂದ ಏಕೆ ಇಲ್ಲ?

೮. ತಾಳಮದ್ದಲೆ ಮತ್ತು ಗಾನ ವೈವಿಧ್ಯ ಪ್ರಕಾರಗಳ ಕುರಿತು

೯. ಕಿರಿಯ ಭಾಗವತರಿಗೊಂದು ಕಿವಿಮಾತು

೧೦. ಯಕ್ಷಗಾನದ ಮುಮ್ಮೇಳ, ಮೇಳದ ಯಜಮಾನರು, ನಿಯೋಜಕರು ಮತ್ತು ಪ್ರೇಕ್ಷಕರ ಕುರಿತು

೧೧. ಮುಂದಿನ ಯೋಜನೆಗಳು, ಆಶೋತ್ತರಗಳು, ಕನಸುಗಳು

ವಿದ್ವಾನ್ ಗಣಪತಿ ಭಟ್ಟರ ಭಾಗವತಿಗೆಯಲ್ಲಿ ಒಂದು ಪೂರ್ಣ ಪ್ರಸಂಗ - ಸತ್ಯವಾನ ಸಾವಿತ್ರಿ

Monday, June 13, 2016

ಏಕವ್ಯಕ್ತಿ ಯಕ್ಷಗಾನಯಾನದ ಸುತ್ತ ವಿದ್ವಾನ್ ಗಣಪತಿ ಭಟ್ಟರೊಂದಿಗೆ ಸಂವಾದ

ಏಕವ್ಯಕ್ತಿ ಯಕ್ಷಗಾನಯಾನದ ಸುತ್ತ ವಿದ್ವಾನ್ ಗಣಪತಿ ಭಟ್ಟರೊಂದಿಗೆ ಸಂವಾದ


ಮಂಟಪ ಪ್ರಭಾಕರ ಉಪಾಧ್ಯರ ಸುತ್ತ ಶತಾವಧಾನಿ ಡಾ. ಗಣೇಶರು ಪರಿಕಲ್ಪಿಸಿ, ಸಾಹಿತ್ಯ ರಚಿಸಿ ನಿರ್ದೇಶಿಸಿದ ಏಕವ್ಯಕ್ತಿ ಯಕ್ಷಗಾನವು ಒಂದು ಸ್ತ್ರೀವೇಷವನ್ನು ಆಧರಿಸಿಕೊಂಡು ಯಕ್ಷಗಾನದ ಶಾಸ್ತ್ರೀಯ ಅಂಶಗಳನ್ನು ಎತ್ತಿಹಿಡಿದು ಯಕ್ಷಗಾನಕ್ಕೆ ಯಕ್ಷಗಾನದ ಒಳಗೆ, ಹೆಚ್ಚಾಗಿ ಯಕ್ಷಗಾನದ ಹೊರಗೆ ಇನ್ನೂ ಹೆಚ್ಚಿನ ಶಾಸ್ತ್ರೀಯ ಮಾನ್ಯತೆ ಕೊಡಿಸುವತ್ತ ಅಭೂತಪೂರ್ವ ಯಶಸ್ಸನ್ನು ಕಂಡಿರುವುದು ಪ್ರಜ್ನಾವಂತ ಪ್ರೇಕ್ಷಕರಲ್ಲಿ ಈವಾಗಲೇ ಮನೆಮಾತಾಗಿದೆ.

ಡಾ. ಗಣೇಶರ ಪ್ರಯತ್ನಕ್ಕೆ ನ್ಯಾಯ ಒದಗಿಸುವತ್ತ ಏಕವ್ಯಕ್ತಿ ತಂಡದ ಎಲ್ಲರ ಪರಿಶ್ರಮ ಮತ್ತು ಕಾಣಿಕೆ ಸಾಕಷ್ಟು ಸೇರಿದೆ. ಡಾ. ಗಣೇಶರ ಏಕವ್ಯಕ್ತಿ ಯಕ್ಷಗಾನದ ಸೃಷ್ಟಿಗೆ ಮೂಲ ಸ್ಫೂರ್ತಿಯಾದ ಮಂಟಪರ ಅನುಭವ, ಅಭಿವ್ಯಕ್ತಿ ಕುರಿತು ಸಾಕಷ್ಟು ವಿಚಾರ ಮತ್ತು ಸಂವಾದಗಳು ಈವಾಗಲೇ ಬಂದುಹೋಗಿವೆ.  

ಏಕವ್ಯಕ್ತಿ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ನ್ಯಾಯ ಒದಗಿಸಿದ ವಿದ್ವಾನ್ ಗಣಪತಿ ಭಟ್ಟರು ಕರ್ನಾಟಕೀ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ಪರಿಣತರು. ಶಾಸ್ತ್ರೀಯ ನೆಲೆಗಟ್ಟಿನ ಆಧಾರದಲ್ಲಿ ಅವರು ಸಮೂಹ ಯಕ್ಷಗಾನದ ಭಾಗವತಿಗೆಯಲ್ಲಿ ಏಕವ್ಯಕ್ತಿ ಯಕ್ಷಗಾನದ ಅನುಭವದ ಮೊದಲೇ ಸಂಗೀತದ ಸಾಮರ್ಥ್ಯ ಮತ್ತು ಚೆಲುವನ್ನು ಮೂಡಿಸಿದವರು. ಅವರ ಶಾಸ್ತ್ರೀಯ ಗಾಯನದ ಸಾಮರ್ಥ್ಯವೇ ಅವರನ್ನು ಏಕವ್ಯಕ್ತಿ ಯಕ್ಷಗಾನಕ್ಕೆ ಎಳೆದು ತಂದಿತು.

ಗಣೇಶರಂತಹ ಮೇರು ಪ್ರತಿಭೆಯ ಪ್ರಾಮಾಣಿಕ ಪ್ರಯತ್ನಕ್ಕೆ ನ್ಯಾಯ ಒದಗಿಸುತ್ತಾ ಹಿನ್ನಲೆ ಗಾಯನದ ವಿಭಾಗದಲ್ಲಿ ಜಯಶೀಲರಾಗಿ ತಮ್ಮ ಗಾಯನದ ಮೂಲಕ ಪ್ರೇಕ್ಷಕರನ್ನು ಮುಟ್ಟಿ ರಂಜಿಸಿ ಮೆಚ್ಚಿಸಿದವರು ವಿದ್ವಾನ್ ಗಣಪತಿ ಭಟ್ಟರು. ಈ ಯಶಸ್ಸಿನ ಹಿಂದೆ ಮತ್ತು ಮುಂದೆ ಅವರ ತಪಸ್ಸು, ಅಭಿವ್ಯಕ್ತಿ ಮತ್ತು ಅನುಭವಗಳ ಸುತ್ತ ಒಂದು ದೃಶ್ಯ ಸಂವಾದ, ನಾಲ್ಕು ಭಾಗಗಳಲ್ಲಿ!

ಭಾಗ ೧:

ಭಾಗ ೨:

ಭಾಗ ೩:

ಭಾಗ ೪:

ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಗಾಯನದ ಕೆಲವು ತುಣುಕುಗಳಿಗೆ ಕೆಳಗಿನ ಕೊಂಡಿಯನ್ನು ಒತ್ತಿ!
ಏಕವ್ಯಕ್ತಿ ಯಕ್ಷಗಾನದ ಹಿನ್ನಲೆ ಗಾಯನದ ಕೆಲವು ತುಣುಕುಗಳು

Thursday, June 9, 2016

ಅಂಬರಕೇರಿಸಿದ ಬಿಂಬಗಳು


ಚಿತ್ರ: ಇಂಟರ್ನೆಟ್ ಕೃಪೆ
https://www.facebook.com/mevlana/photos/a.424140758184.199763.64655903184/10154136236973185/?type=3&theater

ಕಾಡಿನ
ಕೂಸುಗಳ
ಬಿಂಬಗಳು
ಅಂಬರದ
ಚಂದಿರನಂತೆ
ಬೆಳಗಲು
ಕರಿಕಲ್ಪನೆಗಳು
ಗರಿಗೆದರಿ
ಕನಸುಗಳ
ನವಿಲಾಗಿ
ನವಿರಾಗಿ
ನಲಿನಲಿದು
ನಾಳೆಯ
ನವ ನಡೆಯ
ನಾದವ
ನೂದುವ
ಕಿನ್ನರಿಯ
ಕೈಗಿತ್ತು
ನಾಭಿಯಿಂ
ನೆಗೆವ
ಓಂಕಾರದ
ಒರತೆಯನೆಬ್ಬಿಸಿ
ಮಮತೆಯ
ಮಲ್ಲಿಗೆಯ
ಮುದವಿತ್ತು
ಬತ್ತಿದ ನೆಲದಲಿ
ನಗೆಮುತ್ತುಗಳ ಬಿತ್ತಿ
ಹೆಮ್ಮರದ ಬದುಕು
ಮೊಳೆಯಲು
ಪ್ರೇಮದ ಮಳೆ
ಮಾಗುವ
ಮುಗಿಲಿಗೆ
ಮುದವಿಡುವ
ಮದ್ದು ಅರೆದಿತ್ತು

Tuesday, June 7, 2016

ಜೂನ್ ೨೫ರಂದು ಶಿವಮೊಗ್ಗದಲ್ಲಿ ಮತ್ತೊಂದು ಯಕ್ಷಸಾಹಸ



ಅಭ್ಯುದಯ (ರಿ) ಮತ್ತು ಮಂಟಪ ಕುಟುಂಬದವರ ಜಂಟಿ ಸಂಯೋಜನೆಯಲ್ಲಿ ಶಿವಮೊಗ್ಗದಲ್ಲಿ ಮತ್ತೊಂದು ಉಚಿತ ಪ್ರವೇಶದ ಅಪರೂಪದ ಆಟ ಜೂನ್ ೨೫ ಸಂಜೆಗೆ.

ಈ ಬಾರಿಯ ವಿಶೇಷವೆಂದರೆ ಸಂಪ್ರದಾಯಬದ್ಧವಾಗಿ ಪೂರ್ಣ ಪ್ರಮಾಣದಲ್ಲಿ ಪ್ರಸಂಗ ಸಾಹಿತ್ಯದ ಎಲ್ಲಾ ಪದ್ಯಗಳಿಗೂ ನ್ಯಾಯ ಕೊಟ್ಟು ಪ್ರದರ್ಶನವಿಟ್ಟಿರುವುದು.

ಶ್ರೀ ದೇವಿದಾಸ ವಿರಚಿತ ಬಬ್ರುವಾಹನ ಕಾಳಗದ ಪ್ರಸಂಗವಿರುತ್ತದೆ. ಕುವೆಂಪು ರಂಗಮಂದಿರದಲ್ಲಿ ಸಂಜೆ ನಾಲ್ಕು ಗಂಟೆಗೆ ಪ್ರಾರಂಭವಗುವ ಆಟವು ೪-೫ ಗಂಟೆಗಳ ಕಾಲ ಸಾಗುವ ಸಾಧ್ಯತೆ ಇದೆ.

ಅನಧಿಕೃತ ವರದಿಯ ಪ್ರಕಾರ ಪಾತ್ರವರ್ಗ ಈ ರೀತಿ ಇದೆ.

ಹಿಮ್ಮೇಳ:

ಭಾಗವತರು: ಸರ್ವೇಶ್ವರ ಹೆಗಡೆ, ರಾಮಕೃಷ್ಣ ಹಿಲ್ಲೂರು
ಮದ್ದಲೆ: ಅನಂತಪದ್ಮನಾಭ ಫಾಠಕ್, ದೇವದಾಸ ರಾವ್
ಚೆಂಡೆ: ಶ್ರೀನಿವಾಸ ಪ್ರಭು

ಮುಮ್ಮೆಳ:

ಬಾಲಗೋಪಾಲ: ಗುರುರಾಜ ಐತಾಳ
ಪೀಠಿಕೆ ಸ್ತ್ರೀವೇಷ: ಮಂಟಪ ಸಹೋದರಿಯರಾದ ಮಾಧುರಿ ಮತ್ತು ಪ್ರಮದಾ

ಕಥಾನಕದಲ್ಲಿ:

ಅರ್ಜುನ: ಐರೋಡಿ ಗೋವಿಂದಪ್ಪ
ಚಿತ್ರಾಂಗದೆ: ಮಂಟಪ ಪ್ರಭಾಕರ ಉಪಾಧ್ಯ
ಬಬ್ರುವಾಹನ: ಆಲೂರು ನಾಗರಾಜ
ಉಲೂಪಿ: ಬೇಗಾರು ಶಿವಕುಮಾರ್
ಮಂತ್ರಿ: ಕೃಷ್ಣಮೂರ್ತಿ ಉರಾಳ
ಪ್ರದ್ಯುಮ್ನ: ಮಹಾಬಲ ನಾಯಕ್
ವೃಷಕೇತು: ಉಪ್ಪುಂದ ಸುಧಾಕರ
ಮಹಾಶೇಷ: ಬೆಳೆಯೂರು ಸಂಜಯ
ಕೃಷ್ಣ: ಮನೋಜ್ ಭಟ್
ಹಾಸ್ಯ: ಲಕ್ಷ್ಮಣ ಹೊಸಂಗಡಿ

ವೇಷ ಭೂಷಣ ಮತ್ತು ಪ್ರಸಾಧನ ಸಹಕಾರ: ಉರಾಳ ಬಳಗ, ಗೋವಿಂದ ಉರಾಳ, ರಾಜಶೇಖರ ಹಂದೆ

ಕಾಲ ಬದಲಾದಂತೆ ಯಕ್ಷಗಾನ ಪ್ರಸಂಗದ ಪದ್ಯಗಳನ್ನು ರಂಜನೆ ಮತ್ತು ಸಂಯೋಜನೆಗೆ ಅನುಕೂಲವಾಗುವಂತೆ ಮೊಟಕುಗೊಳಿಸುತ್ತಾ ಬಂದಿರುವುದರಲ್ಲಿ ಏಳುಬೀಳುಗಳಿವೆ. ಅದೇ ರೀತಿಿ ಇಡೀ ಪ್ರಸಂಗವನ್ನು ಸಾಹಿತ್ಯಕ್ಕೆ ೧೦೦ ಪ್ರತಿಶತ: ನ್ಯಾಯಕೊಟ್ಟು ಆಡಿಸುವುದರಲ್ಲಿ ಕಲಾ ಚೌಕಟ್ಟು ರಂಗ ಪ್ರಸ್ತುತಿ ಮತ್ತು ಪ್ರಸಂಗ ಕಥನದ  ಕುರಿತಾಗಿ ಹೆಚ್ಚಿನ ನ್ಯಾಯ ಸಿಗುವುದು ಖಂಡಿತವಾದರೂ ಅವಸರದ ಈ ಯುಗದಲ್ಲಿ ರಸ ಮತ್ತು ರಂಜನೆಯ ಮೇಲೆ ಯಾವ ರೀತಿಯ ಪರಿಣಾಮವಿರುತ್ತದೆ ಎಂಬುದು ಕುತೂಹಲಕಾರಿಯಾದ ಅಂಶವಾಗಿದೆ. ಈ ಕುತೂಹಲವೇ ಪ್ರಜ್ನಾವಂತ ಪ್ರೇಕ್ಷಕರನ್ನು ಈ ಕಾರ್ಯಕ್ರಮಕ್ಕೆ ಹೆಚ್ಚಿನಮಟ್ಟದಲ್ಲಿ ಸೆಳೆಯಲಿದೆ.

Sunday, June 5, 2016

ನಿಮ್ಮ ಸಹಾಯ ಇರಲಿ! -ಯಕ್ಷಗಾನದ ಸುತ್ತ ಪ್ರೇಕ್ಷಕನ ಧನಾತ್ಮಕ ಪ್ರಭಾವ ಹೆಚ್ಚಿಸುವತ್ತ ಒಂದು ಸಮೀಕ್ಷೆ!!


ಸಮೀಕ್ಷೆಗಾಗಿ, ಈ ಕೊಂಡಿಯನ್ನು ಒತ್ತಿರಿ.
https://docs.google.com/forms/d/1nt95v-omf0_tpv-q1Qgkez9wv_IJ827xCYHptRmI2oc/viewform

ಅಭೂತಪೂರ್ವ ಕಲೆಯಾದ ಯಕ್ಷಗಾನ ನಮ್ಮ ಬದುಕಿನ ಸೌಭಾಗ್ಯಗಳಲ್ಲೊಂದು. ಈ ಕಲೆಯ ಉಳಿವು ಬೆಳೆವಿಗೆ ಎಲ್ಲಾ ರೀತಿಯ ಹಕ್ಕುದಾರರು ಸಲ್ಲುತ್ತಿದ್ದಾರೆ. ನಮ್ಮ ಬದುಕಿನ ಬದಲಾವಣೆಯ ವಿದ್ಯಮಾನಗಳ ಸುತ್ತ ಯಕ್ಷಗಾನ ಪ್ರಪಂಚವೂ ಬದಲಾಗುತ್ತಿದೆ. ಈ ಬದಲಾವಣೆಯ ವಿದ್ಯಮಾನಗಳಲ್ಲಿ, ಕಾಳನ್ನು ಉಳಿಸಿ ಜೊಳ್ಳನ್ನು ಹಾರಿಸಿ ಕಲೆಯ, ಕಲಾಭಿವ್ಯಕ್ತಿಯ ಮತ್ತು ಕಲಾರಸಗ್ರಾಹಣವನ್ನು ಇನ್ನಷ್ಟು ಶ್ರೀಮಂತಗೊಳಿಸುವತ್ತ ಪ್ರೇಕ್ಷಕನ ಪಾತ್ರವೂ ಹಿರಿದು.

ಅಂತರ್ಜಾಲದಲ್ಲಿ ಸೇರಿರುವ ಯಕ್ಷಗಾನ ಅಭಿಮಾನಿ ಪ್ರೇಕ್ಷಕವರ್ಗದವರ ಧ್ವನಿಯನ್ನು ವಸ್ತುನಿಷ್ಟವಾಗಿ ಬಿತ್ತುವ ಮೂಲಕ ಸಮಗ್ರ ಯಕ್ಷಗಾನದ ವಿದ್ಯಮಾನಗಳಲ್ಲಿ ಪ್ರೇಕ್ಷಕನ ಸಾಧ್ಯತೆ ಬಾಧ್ಯತೆಯನ್ನು ಹೆಚ್ಚಿಸುವತ್ತ ಇದೊಂದು ಪ್ರಾಮಾಣಿಕ ಪ್ರಯತ್ನ!

ದಯವಿಟ್ಟು ಆಶಾವಾದದಿಂದ, ಧನಾತ್ಮಕವಾಗಿ ರಚನಾತ್ಮಕವಾಗಿ ಸ್ಪಂದಿಸಿ ಈ ಪ್ರಯತ್ನವನ್ನು ಯಕ್ಷಗಾನಕ್ಕಾಗಿ ಒಂದು ಅಭೂತಪೂರ್ವ ಪ್ರೇಕ್ಷಕನ ಕೊಡುಗೆಯಾಗಿ ಪರಿವರ್ತಿಸುವತ್ತ ನಿಮ್ಮ ಕಾಣಿಕೆಗೆ ಕೃತಜ್ನತೆಯ ನಮನಗಳು!

ಒಬ್ಬರು ಒಂದೇ ಬಾರಿ ಸಮೀಕ್ಷೆಗೆ ಉತ್ತರಿಸುವತ್ತ ನಿಮ್ಮ ಗೂಗಲ್ ಲಾಗಿನ್ ಬೇಕಾಗುತ್ತದೆ. ನಿಮ್ಮ ಗುರುತು ಸಂಪೂರ್ಣವಾಗಿ ಗೋಪ್ಯವಾಗಿ ಇರುವುದರಿಂದ ಯಾವುದೇ ಅಳುಕು ಮತ್ತು ಹಂಗಿಲ್ಲದೇ, ವಸ್ತುನಿಷ್ಟವಾಗಿ, ನಿಮ್ಮ ಆತ್ಮಸಾಕ್ಷಿಗೆ ಸಲ್ಲುವಂತೆ ಉತ್ತರಿಸುತ್ತೀರಿ ಎಂದು ನಂಬಿಕೆ.

ನಿಮ್ಮ ಉತ್ತರಗಳನ್ನು ಸಂಪಾದಿಸಲು ಸ್ವಲ್ಪ ಕಾಲ ಅವಕಾಶವಿರುತ್ತದೆ.

ಕನಿಷ್ಟ ಒಂದು ಸಾವಿರ ಮಂದಿಯಾದರೂ ಭಾಗವಹಿಸಲಿ ಎಂಬ ಪ್ರಾರ್ಥನೆ. ಸಮೀಕ್ಷೆಯ ಉತ್ತರಗಳನ್ನು ಸಂಪೂರ್ಣವಾಗಿ ಹಂತಹಂತವಾಗಿ ಬಿತ್ತರಿಸಿ ಅವುಗಳನ್ನು ಪರಿಶೀಲಿಸಿ ಪಾಠಗಳನ್ನು ಸಾರಲಾಗುವುದು!

ಸಮೀಕ್ಷೆಯಲ್ಲಿ ಭಾಗವಹಿಸುವವರಿಗೆ ಸಮೀಕ್ಷೆಯ ಸಾರಾಂಶವನ್ನು ನೋಡುವ ಅವಕಾಶವೂ ಇರುತ್ತದೆ.

ಸಮೀಕ್ಷೆಗಾಗಿ, ಈ ಕೊಂಡಿಯನ್ನು ಒತ್ತಿರಿ.
https://docs.google.com/forms/d/1nt95v-omf0_tpv-q1Qgkez9wv_IJ827xCYHptRmI2oc/viewform

ನಮನಗಳೊಂದಿಗೆ,
ನಟರಾಜ ಉಪಾಧ್ಯ

Thursday, June 2, 2016

ಪ್ರೇಮದ ನಿತ್ಯೋತ್ಸವಕ್ಕೊಂದು ಕರೆಯೋಲೆ!

ಪ್ರೇಮದ ನಿತ್ಯೋತ್ಸವಕ್ಕೊಂದು ಕರೆಯೋಲೆ!


ಆದರ್ಶದ
ದಾರಿದೀಪವು
ಸಾಧನೆಯ
ಹಾದಿಗೆ
ಕರೆತಂದರೂ
ದಾರಿ ದುರ್ಗಮ
ಏಳು ಬೀಳು
ಅಪಘಾತ ಗಾಯ
ಖಂಡಿತ
ಒಪ್ಪು ತಪ್ಪುಗಳ
ನಡುವೆ
ಮೌಲ್ಯಗಳ ಗೊಂದಲ

ಬೊಗಳುವವರು
ಕಾಲೆಳೆವರು
ಎದೆಗೆ ಬೆನ್ನಿಗೆ
ಚೂರಿ ಹಾಕುವರನೇಕ
ಭೀತಿ ಗೊಂದಲ
ಸಂಶಯ ಅಧೀರತೆ
ತುಂಬಿ ರಾಜಿನಾಮೆಯ
ಅಂಟು ಕಾಲಿಗಂಟಿ
ಮುಂದಡಿ ಹಿಂದಡಿ
ಇಡಲಾಗದ
ಬಯಲಿನ
ಬೆರ್ಚಪ್ಪನಂತೆ
ಜೀವಚ್ಛವ
ಬದುಕು ದುರ್ಭರ

ಕರಾಳ ಕತ್ತಲಲೂ
ಮಿನುಗುತಿದೆ
ನನ್ನ ನಿನ್ನೊಳಗಿನ
ಪ್ರೀತಿಯ ನಂದಾದೀಪ
ಧನಾತ್ಮಕ ಚಿಂತನೆಯ
ಎಣ್ಣೆಯಲದು ಬೆಳಗಲು
ನಂಬಿಕೆಯ ಬತ್ತಿ
ಹೊಸೆಯಲೇಬೇಕು

ಪ್ರೀತಿಯ
ಬೆಳಕಕಲೊಂದಾಗಿ
ಮುಂದಡಿ ಇಡೋಣ
ದಿನದಿನದ ವ್ಯವಹಾರವು
ಅನ್ಯೋನ್ಯ ಸಂಬಂಧದ
ಹೆಮ್ಮರವಾಗಲು
ಸ್ನೇಹದ ಸಾರ
ಸೋರೋಣ
ಪವಿತ್ರ ಪ್ರೇಮವು
ಹಣ್ಣಾಗಿ ಕೈಸೇರಲು
ಸಾಧಾರಣ ನಡೆಯೇ
ನೃತ್ಯದ ಲೀಲೆಯಾಗಿ
ನಿರಂತರ
ನಿತ್ಯೋತ್ಸವ

ಸುತ್ತಲಿನ ಮೆರವಣಿಗೆ
ಮೈಲುಗಟ್ಟಲೆ ಮೀರಿ
ಮೆರೆಯಲು
ಸೇವೆಯೆಂಬ
ಪಲ್ಲಕಿಯನೇರಿ
ಸಾಗರಿಕೆ ಅಭಿವ್ಯಕ್ತಿಯ
ಕೂಡಲು
ಮದುವೆಯ ದಿಬ್ಬಣಕೆ
ಭಾಜಾಭಜಂತ್ರಿ
ಮೊಳಗಲು
ಆಶಾವಾದದ
ಗರ್ನಾಲಿನಲಿ
ಪೈಶಾಚಿಕ
ಪಿಡುಗಗಳು
ಪರಾರಿ

ನಾ ನಡೆವ ದಾರಿಯೇ
ಸಾಫಲ್ಯದ ಸೋಪಾನವಾಗಿ
ಸಾಧನೆಯ ಸಾಹಸವು
ಹಿಡಿಕಡ್ಡಿಯಷ್ಟು
ಹಗುರವಾಗಿ
ಸುತ್ತ ಸೇರಿದ
ಸೋತು ನಲುಗಿ
ದೈನ್ಯತೆ ತುಂಬಿದ
ಬಾಡಿದ ಕಣ್ಣುಗಳಲಿ
ಬಣ್ಣಗಳು ಚಿತ್ತಾರವಾಗಿ
ಮಿಂಚಲು
ಮೆರವಣಿಗೆಯು
ಮರಿಗಳಾಗಿ
ದಿಬ್ಬಣಗಳು
ಅನಂತವಾಗಲಿ

ಅಖಿಲ ಕರ್ನಾಟಕದ ಉದ್ದಗಲಗಳಲ್ಲಿ ಯಕ್ಷಗಾನದ ದಿಗ್ವಿಜಯಕ್ಕೆ ಮತ್ತೆ ಸಹಕರಿಸಿ!


ಯಕ್ಷಗಾನ ಕರ್ನಾಟಕದ ಹೆಮ್ಮೆಯ ಕಲೆ. ನಾಡಿನ ಸಾಂಸ್ಕೃತಿಕ ಲಾಂಛನ.

ಕರಾವಳಿ ಮತ್ತು ಮಲೆನಾಡಿನಲ್ಲಿ ಮೆರೆವ ಪಡುವಲಪಾಯ ಯಕ್ಷಗಾನ ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆ ಊರಿ ದೇಶಾಂತರವೂ ಆಗಿದ್ದು ಸಂತಸದ ವಿಷಯ. ಬಯಲು ಸೀಮೆಯಲ್ಲಿ ಮನೆಮಾತಾಗಿದ್ದ ಮೂಡಲಪಾಯ ಯಕ್ಷಗಾನ ವಿನಾಶದ ಅಂಚಿನಲ್ಲಿರುವುದು ಖೇದಕರ. ಆ ನಿಟ್ಟಿನಲ್ಲಿ ಪಡುವಲಪಾಯ ಯಕ್ಷಗಾನ ಕರ್ನಾಟಕದ ಉದ್ದಗಲಕ್ಕೆ ಹರಡುವುದು ಅನಿವಾರ್ಯ, ಆ ಮೂಲಕ ಮೂಡಲಪಾಯದ ಪುನ:ಶ್ಚೇತನಕ್ಕೂ ಚಾಲನೆ ಸಿಗುವಲ್ಲಿಯೂ ಅದು ಸಹಕರಿಸಲಿ.

ಕರ್ನಾಟಕದ ಮೂಲೆಮೂಲೆಗೆ ಯಕ್ಷಗಾನವನ್ನು ಒಯ್ಯುವುದರಲ್ಲಿ ಪ್ರವಾಸಿ ಯಕ್ಷಗಾನ ಮಂಡಳಿಯ ಪಾತ್ರ ಬಹು ಹಿರಿದು. ಆಯಾ ಊರುಗಳಲ್ಲಿ ನೆಲೆನಿಂತ ಯಕ್ಷಗಾನ ಅಭಿಮಾನಿಗಳ  ಸಹಾಯದಲ್ಲಿ ಪ್ರವಾಸಿ ಯಕ್ಷಗಾನದ ಆಟಗಳು ಮೊದಮೊದಲು ನಿಗದಿಯಾಗುವುದಿದ್ದರೂ  ಸ್ಥಳೀಯವಾಗಿ ಯಕ್ಷಗಾನಕ್ಕೆ ಹೊಸ ಪ್ರೇಕ್ಷಕರ ಮತ್ತು ಪೋಷಕರ ನಿರ್ಮಾಣದಲ್ಲಿ ಈ ಆಟಗಳ ಪ್ರಭಾವ ಸಾಕಷ್ಟಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕದ ಉದ್ದಗಲಕ್ಕೂ ಸಾಗಿ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಪ್ರದರ್ಶನ ಕೊಡುತ್ತ ಬಂದಿರುವ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಈ ನಿಟ್ಟಿನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದೆ.

ಉತ್ತಮ ಕಲಾವಿದರನ್ನು ಸೇರಿಸಿಕೊಂಡು ನಿರ್ವಹಣೆಯ ವೆಚ್ಚವನ್ನು ಸರಿತೂಗಿಸಿಕೊಂಡು ಲಾಭದ ಆಸೆಯಿಲ್ಲದೇ ಉಳಿದ ಹಣವನ್ನು ಕಲಾವಿದರಿಗೆ ಹಂಚುವ ಮೂಲಕ ಪ್ರದರ್ಶನದ ಭಾರವನ್ನು ವ್ಯವಸ್ಥಾಪಕರಿಗೆ ಕಡಿಮೆ ಮಾಡಿಸಿ ಹೆಚ್ಚು ಹೆಚ್ಚು ಊರುಗಳಲ್ಲಿ ಹೆಚ್ಚಿನ ಆಟಗಳ ನಿಗದಿ ಮಾಡಿಸುವಲ್ಲಿ ಈ ಮೇಳದವರು ಸಹೃದಯತೆಯಿಂದ ಸಹಕರಿಸುವುದು ಈ ಮೇಳದ ಹೆಗ್ಗಳಿಕೆಗಳಲ್ಲೊಂದು.

ಈ ವರ್ಷವೂ ಶ್ರೀ ಹಾಲಾಡಿ ರಾಘವೇಂದ್ರ ಮೈಯ್ಯ ಮತ್ತು ಶ್ರೀ ಕೋಡಿ ವಿಶ್ವನಾಥ ಗಾಣಿಗರ ಜಂಟಿ ಸಾರಥ್ಯದಲ್ಲಿ ಜುಲೈ ಇಪ್ಪತ್ತರಿಂದ ಈ ಮೇಳದ ತಿರುಗಾಟ ಪ್ರಾರಂಭವಾಗಲಿದೆ. ಕರ್ನಾಟಕದ ಉದ್ದಗಲದಲ್ಲಿ ಯಕ್ಷಗಾನದ ದಿಗ್ವಿಜಯಕ್ಕೆ ಹೊರಟ ಈ ಮೇಳವು ಒಂದು ನಿರ್ದಿಷ್ಟ ಮಾರ್ಗದಲ್ಲಿ ಸಾಗುವ ಮೂಲಕ ಕಾರ್ಯಕ್ರಮದ ಯೋಜನೆಯ ಶ್ರಮ ಮತ್ತು ಖರ್ಚನ್ನು ಕಡಿಮೆ ಮಾಡಿಸುವುದಲ್ಲದೇ ಪ್ರತಿ ದಿನವೂ ಹೊಸಹೊಸ ಊರಿನಲ್ಲಿ ಆಟವು ನಡೆವಂತೆ ಸಹಕರಿಸುವಲ್ಲಿ ಸ್ಥಳೀಯ ವ್ಯವಸ್ಥಾಪಕರು ಮೇಳವನ್ನು ಕೂಡಲೇ ಸಂಪರ್ಕಿಸಬೇಕಾಗಿ ಕೋರಿಕೆ.

ಅಖಂಡ ಕರ್ನಾಟಕದ ಯಕ್ಷಗಾನ ಪ್ರೇಮಿಗಳ ಅಪರಿಮಿತ ಪ್ರೋತ್ಸಾಹ ಮತ್ತು ಸಹಕಾರಕ್ಕೆ ಕೃತಜ್ನತಾಪೂರ್ವಕ ನಮನದೊಂದಿಗೆ:

ಶ್ರೀ ಹಾಲಾಡಿ ರಾಘವೇಂದ್ರ ಮೈಯ್ಯ: 9141732977
ಶ್ರೀ ಕೋಡಿ ವಿಶ್ವನಾಥ ಗಾಣಿಗ: ‍9880895334


Wednesday, June 1, 2016

ದೊಡ್ಡಾಟದೊಳಗಣ ಸಣ್ಣಾಟ


Image courtesy:
https://s-media-cache-ak0.pinimg.com/236x/72/6e/4b/726e4b6d7d537498de325b54d8955a23.jpg

ದೊಡ್ಡಾಟದೊಳಗಣ ಸಣ್ಣಾಟ

ಮೊಗೆದಷ್ಟೂ
ಆಳವಾಗುತ್ತಾ ಹೋಗಿ
ಮತ್ತಷ್ಟು ನೀರು ತುಂಬುವ
ಕೆರೆಯಂತೆ ಈ ಬದುಕು
ಹಾಗೇ ಬಿಟ್ಟರೆ ಬರೀ ಬರಡು

ದಡ ಮತ್ತು ತಳದ
ನಡುವೆ ಸ್ತರಗಳಲಿ
ಹರಡಿದೆ ವಿಧವಿಧದ
ಲೋಕಗಳು
ಅಲ್ಲಲ್ಲಿ ಇರಲು ಅಲ್ಲಲ್ಲೇ ಸಲ್ಲು
ಒಂದೆಡೆ ನಿಂತರೆ ನಿಲ್ಲು
ಇಲ್ಲಾ ಎಲ್ಲೆಡೆ ನಡೆದಾಡು

ಕೆರೆಯೊಳಗಿನ
ಕತ್ತಲೆಯ ಆಳಕ್ಕೆ
ಕೊನೆಯಿಲ್ಲ
ದಡದಾಚೆಯ ದಿಗಂತ
ಅಷ್ಟ ದಿಕ್ಕುಗಳಲ್ಲೂ
ಅನಂತ

ಕೈಗೆಟಕದೇ
ಬಾಯ್ತೆರೆದ ಬಾನು
ನಿತ್ಯ ನೃತ್ಯದ
ನಿರಂತರ ಸಂಗಾತಿ
ರವಿ ಶಶಿ ವರುಣರನಿತ್ತು
ಸಲಹುವ ತಾಯಿ
ಕೊನೆಯಿಲ್ಲದ ಕಲ್ಪನೆಯ
ಕೂಸುಗಳನ್ನಿತ್ತು
ಕಾಡುವ ಮಾಯಾವಿ

ಹುಟ್ಟಿದೆ, ಸಾಯಲಿಕ್ಕಿದೆ
ಹುಟ್ಟು ಸಾವಿನ ನಡುವೆ
ನಾನೇನೂ ಮಾಡಬಲ್ಲೆ
ಏನ ಏಕೆ ಮಾಡಲಿ
ಎಂಬ ಪ್ರಶ್ನೆಗೆ ಉತ್ತರ
ಎಲ್ಲವೂ, ಇಲ್ಲಾ ಏನಿಲ್ಲವೂ

ಊಟ ಓಟ ಕಾಟಗಳ
ನಡುವೆ ನನ್ನಿರುವೇ
ಒಂದು ಸವಾಲು
ಮರೆತುಹೋಗಿದೆ
ಮುದಕೊಡುವ
ನನ್ನಾಟವು

ನಾ ಎಷ್ಟೇೆ
ಎಳೆದರೂ
ಬೆಳೆದರೂ
ಮುಗಿಯದು
ಈ ಮೈದಾನವು
ಆಟಕೆ ಮೀರದೆ
ಮೇಯುವುದೇ
ಮೊದಲ ವಿಧಾನವು

ಸೋಲುಗೆಲುವು
ಕೂಡಿಸಿ ತೂಗಿಸಿ
ಆಟದಲೇ
ಸಾಗಿದರೆ
ಕೈಗೆಟುಕುವುದು
ನವನವೀನ ಸವಾಲು

ಅನಂತ ನಿರಂತರವ
ಒಡಲಿನಲಿ ತುಂಬಿದ
ಭಗವಂತನ ಅನುಭೂತಿ
ನನ್ನೊಡಲಲಿರಲು
ಕ್ಷಣಿಕದ ಕುನ್ನಿಯ ಮಿತಿಯ
ನಾನು ನನ್ನಲ್ಲೇ ಕರಗಿ
ಉಳಿವುದೇ ಎಲ್ಲದರ
ಅಳಿವು ಉಳಿವು ಬೆಳವಿಗೆ
ಸಾಕ್ಷಿಯಾಗಿ ಸಲ್ಲುವ ಸೇವೆಯು!

ಅನಂತದಲಿ ಶೂನ್ಯ
ಶೂನ್ಯದಲಿ ಅನಂತ
ಕ್ಷಣಿಕದಲಿ ನಿರಂತರ
ನಿರಂತರದಲಿ ಕ್ಷಣಿಕ
ಬೆಳಕಲ್ಲಿ ತುಂಬಿದ ಕತ್ತಲು
ಕಾರ್ಗತ್ತಲಲೂ ಬೆಳಗುವ ಬೆಳಕು

ವೈರುಧ್ಯಗಳು ಕೂಡಿ
ಕರಗಿ ಉಳಿವುದೇ
ಬಿಂದುವಾದರೂ
ಸಾಗರದಲೊಂದಾಗಿ
ಮೆರೆವ ಮಹತ್ತರವು!