Wednesday, May 25, 2016

ಹೂವಿನ ಕೋಲು - ಹರಿಕೃಷ್ಣ ಹೊಳ್ಳ ಜಿ.

ಹೂವಿನ ಕೋಲು

ಕರ್ನಾಟಕದ ಕರಾವಳಿಯು ಯಕ್ಷಗಾನದ ತವರೂರು. ಆದರೂ ಕೂಡ ಇಲ್ಲಿ ವರ್ಷವಿಡೀ ಯಕ್ಷಗಾನದ ಬಯಲಾಟಗಳು ಇರುವುದಿಲ್ಲ. ಇದಕ್ಕೆ ಕಾರಣ ಇಲ್ಲಿನ ಅಧಿಕ ಮಳೆ. ಮೇ ತಿಂಗಳಿನಲ್ಲಿ ಬಯಲಾಟದ ಮೇಳಗಳೆಲ್ಲ ತಮ್ಮ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಮತ್ತೆ ನವೆಂಬರಿನಲ್ಲಿ ಪುನಹ ತಿರುಗಾಟಕ್ಕೆ ಹೊರಡುತ್ತವೆ. ಮಳೆಗಾಲದ ಈ 6 ತಿಂಗಳ ಅವಧಿಯಲ್ಲಿ ಕಲಾವಿದರಿಗೆ ಇತ್ತ ಯಕ್ಷಗಾನವೂ ಇಲ್ಲದೇ ಅತ್ತ ಕುಲಕಸುಬನ್ನೂ ನಡೆಸಲಾಗದೇ, ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕಲಾವಿದರು ತಮ್ಮ ಜೀವನೋಪಾಯಕ್ಕಾಗಿ ತಾಳಮದ್ದಲೆ, ಹೂವಿನಕೋಲು ಮತ್ತು ಚಿಕ್ಕಮೇಳಗಳನ್ನು ಆರಂಭಿಸಿರಬಹುದೆಂದು ಅನ್ನಿಸುತ್ತದೆ.
ಹೂವಿನಕೋಲು ಕಲಾಪ್ರಕಾರವು ಮೇಲ್ನೋಟಕ್ಕೆ ತಾಳಮದ್ದಲೆಯನ್ನೇ ಹೋಲುತ್ತದಾದರೂ, ಅವುಗಳ ನಡುವೆ ತುಂಬಾ ವ್ಯತ್ಯಾಸಗಳಿವೆ. ಹೂವಿನಕೋಲು ಪ್ರದರ್ಶನವು ತಾಳಮದ್ದಲೆಯಂತೆ ತಾಸುಗಟ್ಟಲೆ ನಡೆಯುವುದಿಲ್ಲ, ಕೇವಲ 10-15 ನಿಮಿಷಗಳಲ್ಲಿ ಮುಗಿಯುತ್ತದೆ. ಹೂವಿನಕೋಲು ಪ್ರದರ್ಶನವು ನವರಾತ್ರಿ ದಿನಗಳಿಗೆ ಮಾತ್ರ ಸೀಮಿತವಾಗಿದ್ದರೆ, ತಾಳಮದ್ದಲೆ ಹಗಲುರಾತ್ರಿ ಎನ್ನದೇ ಮಳೆಗಾಲವಿಡೀ ಪ್ರದರ್ಶಿತಗೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಹೂವಿನಕೋಲಿನಲ್ಲಿ ಭಾಗವಹಿಸುವವರು ಚಿಕ್ಕ ಮಕ್ಕಳು. ಸಾಮಾನ್ಯವಾಗಿ ಇಬ್ಬರು ಹುಡುಗರು ಸಮವಸ್ತ್ರದೊಂದಿಗೆ ತಲೆಯಮೇಲೆ ಬಿಳಿಯ ಟೋಪಿ ಧರಿಸಿಕೊಂಡು ಅರ್ಥಧಾರಿಗಳ ಪಾತ್ರ ನಿರ್ವಹಿಸುತ್ತಾರೆ. ಆದರೆ, ಇತ್ತೀಚೆಗೆ ಹುಡುಗಿಯರೂ ಕೂಡಾ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಾತ್ರವಲ್ಲದೇ 4-5 ಮಕ್ಕಳು ಸೇರಿ ಸುಮಾರು ಅರ್ಧಗಂಟೆ ಪ್ರದರ್ಶನ ನೀಡಿದ್ದೂ ಇದೆ.
ಒಂದು ಹೂವಿನಕೋಲು ತಂಡದಲ್ಲಿ ಭಾಗವತರು, ಮದ್ದಳೆಗಾರರು, ಶ್ರುತಿವಾದಕರು ಮತ್ತು ಇಬ್ಬರು ಮಕ್ಕಳು ಸೇರಿ ಸುಮಾರು 5 ಜನ ಇರುತ್ತಾರೆ. ಚೆಂಡೆವಾದಕರು ಇರುವುದಿಲ್ಲ. ಸಾಮಾನ್ಯವಾಗಿ ಯಕ್ಷಗಾನ ಕಲಾವಿದರು ತಮ್ಮ ಮನೆಯ ಮಕ್ಕಳಿಗೇ ಸ್ವಲ್ಪ ತರಬೇತಿ ಕೊಟ್ಟು , ನವರಾತ್ರಿ ದಿನಗಳಲ್ಲಿ ತಿರುಗಾಟಕ್ಕೆ ಹೊರಡುತ್ತಾರೆ. ಇದರಿಂದ ಅಲ್ಪ ಸ್ವಲ್ಪ ಸಂಪಾದನೆಯೂ ಆಗುತ್ತದೆ, ಜತೆಯಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ, ಯಕ್ಷಗಾನದ ಶ್ರುತಿ, ಲಯಗಳಿಗೆ ಸರಿಯಾಗಿ ಅರ್ಥ ಹೇಳುವ ತರಬೇತಿಯೂ ದೊರೆತಂತಾಗುತ್ತದೆ.
ಹೂವಿನ ಕೋಲು ಎಂದೇ ಕರೆಯಲ್ಪಡುವ, ಮೇಲ್ನೋಟಕ್ಕೆ ಟೇಬಲ್ ಫ್ಲವರನ್ನು ಹೋಲುವ ಅಲಂಕಾರಿಕ ವಸ್ತುವನ್ನು ಮಕ್ಕಳು ತಮ್ಮ ಮುಂದಿಟ್ಟುಕೊಂಡು, ಪರಸ್ಪರ ಅಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ಪ್ರದರ್ಶನದ ಪ್ರಾರಂಭದಲ್ಲಿ ಮಕ್ಕಳೇ "ನಾರಾಯಣಾಯ ನಮೊ ನಾರಾಯಣಾಯ . . . . " ಎಂಬ ಮಹಾನವಮಿಯ ಚೌಪದಿಯ 4-5 ಸೊಲ್ಲುಗಳನ್ನು ಹಾಡುತ್ತಾರೆ. ಅನಂತರ ಭಾಗವತರು ನೇರವಾಗಿ ಪ್ರಸಂಗದ ಪದ್ಯಗಳನ್ನು ಹೇಳುತ್ತಾರೆ. ಮಕ್ಕಳು ಆ ಪದ್ಯಗಳಿಗೆ ಅರ್ಥ ಹೇಳುತ್ತಾರೆ. ಮೊದಲಿಗೆ ಗಣಪತಿ ಪೂಜೆಯ ಪದ್ಯವಾಗಲೀ, ಕೊನೆಯಲ್ಲಿ ಮಂಗಳ ಪದ್ಯವಾಗಲೀ ಹಾಡುವ ಕ್ರಮ ಇಲ್ಲ. ಆದರೆ, ಇತ್ತೀಚೆಗೆ ಕೆಲವರು ಅವುಗಳನ್ನೂ ಹಾಡುತ್ತಿದ್ದಾರೆ. ಅದು ಅಪರಾಧವಲ್ಲ ಬಿಡಿ. ಅಷ್ಟೇ ಅಲ್ಲದೇ, ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸಲು ಭಾಗವತರು ಮತ್ತು ಮಕ್ಕಳು ಸೇರಿ ಕೋಲಾಟದ ಪದ್ಯಗಳನ್ನು ಹಾಡುವುದೂ ಉಂಟು. ಮಕ್ಕಳು ಕುಳಿತಲ್ಲಿಯೇ  ತಾಳಕ್ಕೆ ಸರಿಯಾಗಿ ಕೋಲು ಹೊಡೆಯುತ್ತಾರೆ.
ಹೀಗೆ ಯಕ್ಷಗಾನ ಆಧಾರಿತ ಈ ಹೂವಿನಕೋಲು ಕಲೆ ಇತ್ತೀಚೆಗೆ ನಶಿಸುತ್ತಿರುವುದನ್ನು ಕಂಡು, ಅದನ್ನು ಪ್ರೋತ್ಸಾಹಿಸುವ ಸಲುವಾಗಿ ಅಲ್ಲಲ್ಲಿ ಹೂವಿನಕೋಲು ಸ್ಪರ್ಧೆಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಅಲ್ಲದೇ ಶಾಲಾಮಕ್ಕಳೂ ಕೂಡಾ ಇದರಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ. ಯಕ್ಷಗಾನ ಬಯಲಾಟ ಆಕಾಡೆಮಿಯು, ಯಕ್ಷಗಾನದ ಒಂದು ಉಪಕಲೆಯಾಗಿರುವ ಈ ಹೂವಿನಕೋಲಿನ ಪುನಶ್ಚೇತನಕ್ಕೆ ಮುಂದಾದರೆ ಇನ್ನೂ ಒಳ್ಳೆಯದು.


( ಚಿತ್ರದಲ್ಲಿ ತಂಡವೊಂದು ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು )

ಲೇಖನ : ಹರಿಕೃಷ್ಣ ಹೊಳ್ಳ ಜಿ.
‘ಹಂಸ’- ಪಾಂಡುರಂಗನಗರ,
ಬ್ರಹ್ಮಾವರ.

No comments:

Post a Comment