Monday, May 9, 2016

ಪರಶುರಾಮಸೃಷ್ಟಿಯ ನಿತ್ಯಕಥನ - ಎಸ್ಸೆಮ್ ಹೆಗ್ಡೆ - ೦೦೧ - ಯಕ್ಷಗಾನ ನಡೆದುಬಂದ ದಾರಿ - ನಾನು ಕಂಡಂತೆ

ಪರಶುರಾಮಸೃಷ್ಟಿಯ ನಿತ್ಯಕಥನ - ಎಸ್ಸೆಮ್ ಹೆಗ್ಡೆ - ೦೦೧ - ಯಕ್ಷಗಾನ ನಡೆದುಬಂದ ದಾರಿ - ನಾನು ಕಂಡಂತೆ

(ಶೇಷಗಿರಿ ಹೆಗ್ಡೆ, ಸಿದ್ಧಾಪುರ ಇವರು ಗುರು ಶಿಷ್ಯರು ವಾಟ್ಸ್ಯಾಪ್ ಸಮೂಹದಲ್ಲಿ ಬರೆದು ಬರುತ್ತಿರುವುದು - ಲೇಖಕರ ಅನುಮತಿ ಮೇರೆಗೆ ಮತ್ತೆ ಈ ವೇದಿಕೆಯಲ್ಲಿ ಪ್ರಸಾರ!)


ಯಕ್ಷಗಾನದ ಬಗೆಗೆ ನನ್ನ ಒಂದು ವೈಯ್ಯಕ್ತಿಕ ಅನಿಸಿಕೆ .
ಹಿಂದಿನ ಕಾಲದಲ್ಲಿ ಆಟ ಅದ್ಭುತವಾಗಿಯೂ ,ಆರ್ಭಟವಾಗಿಯೂ
ನಡೆಯುತ್ತಿತ್ತು ಎಂದು ನಾವು ಕೇಳಿದ್ದೇವೆ ಅಗಿನ ಪರಿಸ್ತಿತಿ ಹಾಗಿತ್ತು .
ಮೈಕ್ ವ್ಯವಸ್ಥೆ ಇಲ್ಲದ ಕಾರಣ ಭಾಗವತರು ಹಾಗೂ ಕಲಾವಿದರು
ಸಭೆಗೆ ಕೇಳುವಷ್ಟು ಕಂಠತ್ರಾಣದಿಂದ ಹಾಡ್ಬೇಕಿತ್ತು -ಮಾತಾಡಬೇಕಿತ್ತು .
ಆಗ ಅವರ ತ್ರಾಣ ನಾಭಿಯಿಂದ ಬರುತ್ತಿತ್ತು. ಪಂಜಿನ ಹಾಗೂ ಗ್ಯಾಸ್ ಲೈಟ್
ಬೆಳಕಿನ ವ್ಯವಸ್ಥೆ . ಇಲ್ಲಿ ಪಾತ್ರಗಳು ಪಾತ್ರಗಳಾಗಿಯೇ ಪ್ರೇಕ್ಷಕರಿಗೆ ಕಾಣುತ್ತಿತ್ತು .
ಮೊದಲನೇ ಕಲಾವಿದ ಭಾಗವತನಗಿದ್ದು ,ಆತನ ನಿರ್ದೇಶನದಲ್ಲಿ ಆಟ ನಡೆಯುತ್ತಿತ್ತು.ಆಗ ಪ್ರೇಕ್ಷಕರೂ ಸಹ ಕಲಾವಿದರೊಂದಿಗೆ ಕಲಾವಿದರಾಗಿ, ಭಾಗವತ ನಡೆಸುವ ದೋಣಿಯಲ್ಲಿ ತಾವೂ ಪ್ರಯಾಣಿಕರಾಗಿ ಸಹಕರಿಸುತ್ತಿದ್ದರು.(ಕಲಾವಿದರ ಜೊತೆ ಪ್ರೇಕ್ಷಕರೂ ಕೆಲವೊಂದು ಸಂಧರ್ಭಕ್ಕೆ ಸ್ಪಂದಿಸುತ್ತಿದ್ದರು ಎಂದು  ಅಜ್ಜ ದಿ.
ಬೆಳಸಲಿಗೆ ಗಣಪತಿ ಹೆಗಡೆಯವರು ಹಿಂದಿನ ಕಾಲದ ಯಕ್ಷಗಾನದ ಮಾತು ಬಂದಾಗಹೀಗೆ ಹೇಳುತ್ತಿದ್ದರು. ಉದಾಹರಣೆಗೆ - ಬನ್ನಿರೈ ಸಂಸಾರ ಸಾಗರವ ದಾಂಟುವರು।ಬನ್ನಿರೈ ಮೋಕ್ಷಕಾಂಕ್ಷಿಗಳು। ಎಂದು ಅತಿಕಾಯ ಹೇಳುವಾಗ, ನೀವು ಮುಂದಾಗಿ ನಾವು ಹಿಂದಿನಿಂದ ಬರುತ್ತೇವೆ ಎಂದು ಪ್ರೇಕ್ಷಕರು ಕೂಗಿಹೇಳುತ್ತಿದ್ದರಂತೆ(ಇದನ್ನು ನಾನು   ಸಣ್ಣವನಿದ್ದಾಗ ತಾಳಮದ್ದಳೆಯಲ್ಲಿ ಕೇಳಿದ್ದೆನೆ) ಮತ್ತೆ ಆಗ ಹಣ ಮಾಡುವ ಗಳಿಸುವ ಉದ್ದೇಶಕ್ಕೆ ಯಕ್ಷಗಾನ ಬಳಕೆಯಾಗುತ್ತಿರಲಿಲ್ಲ. ಒಂದು ಮಾತು ಽಅಗ ಜನ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಕಸ್ಟವೂ ಇತ್ತು ಎಂದು ಕೇಳಿದ್ದೇನೆ . ಮಾತು ನಾಳೆ ಮುನ್ದುವರಿಯುವುದು........

ಒಂದನೆ ಹಂತದಲ್ಲಿ ಮೊದಲ ವೇಷಧಾರಿ ಭಾಗವತನಾಗಿದ್ದು, ಅದು ಎರಡನೇ ಹಂತಕ್ಕೆ ಮೇಳದ ಯಜಮಾನನ ಕೈಗೆ ಬಂತು. ವರ್ತಮಾನದಲ್ಲಿ ಯಕ್ಷಗಾನದಲ್ಲಿ ತುಂಬಾ ಬದಲಾವಣೆಗಳಾದವು. ಸುಲಭದಲ್ಲಿ ಕಟ್ಟಬಹುದಾದ ರೆಡಿಮೇಡ್ ವೇಷ ಬೂಷಣಗಳು ಬಂದವು.ಟ್ಯೂಬ್ ಲೈಟ್ ಬದಲಿಗೆ ಹೆಚ್ಚು ಪ್ರಕಾಶದ ಹೆಲೂಜಿನ್ ಬಲ್ಬುಗಳು ಬಂದವು. ಹಿಮ್ಮೆಳ ಹಾಗೂ ಮುಮ್ಮೇಳದ ಪ್ರತೀ ಕಲಾವಿದರಿಗೂ ಬೇರೆ  ಬೇರೆ ಟ್ಯೂನ್  - ವಿಶೇಷ ಎಫೆಕ್ಟ್ಸ್ ಕೊಡುವುದಕ್ಕೆ ಚಾನೆಲ್ ಮಿಕ್ಸರ್ ಗಳು  ಬಂದವು. ಅಂದರೆ ಕಲಾವಿದರ ಧ್ವನಿಯ ತ್ರಾಣ ನಾಭಿಯಿಂದ ಕಂಠಕ್ಕೆ ಬಂತು.ಇವು ಬಂದದ್ದೇ ಬಂದದ್ದು ಯಕ್ಷಗಾನದ ಒಂದು ಹಂತದ ಧಮ್ಮು ಕಡಿಮೆಯಾಯಿತು.ಈ ಹಂತದ ಮೊದಲ ದಶಕಕ್ಕೆ ಬದಲಾವಣೆಯ ಗಾಳಿ ಬಿರುಗಾಳಿಯಾಗಿ ಬೀಸಲಾರಂಭಿಸಿತು. ಇದರ ಹೊಡೆತಕ್ಕೆ ಹಳೆಯ ಪ್ರಸಂಗಗಳು,ರಾಗ -ತಾಳ-ಲಯಗಳು ತೂರಿ ಹೋಗಿ ಆ ಜಾಗಕ್ಕೆ ಹೊಸ ಪ್ರಸಂಗಗಳು ಬಂದವು. ಇದರೊಟ್ಟಿಗೇ ಕೊಂಟ್ರೆಕ್ಟುದಾರರು ಬಂದರು.  ಇಂತಿಷ್ಟು ತಾಸಿನ ಆಟಕ್ಕೆ ಇಷ್ಟು ಎಂದು ಎಂದು ನಿರ್ಧಾರವಾಗಿ, ಯಕ್ಷಗಾನ ಹಣ ಗಳಿಸುವ ಬಿಜಿನೆಸ್ಸ್ ಆಗಿ  ಮಾರ್ಪಾಡಾಯಿತು. ಯಕ್ಷಗಾನದ ಹಿಡಿತ ಮೇಳದ ಯಜಮಾನನ ಕೈಯಿಂದ ಜಾರಿ ಕೊಂಟ್ರೆಕ್ಟುದಾರರ ಕೈಗೆ ಬಂತು.ಆಟ ಹೇಗೇ ಆಗಲಿ ಯಜಮಾನರಿಗೆ ಹಣದ ಸಮಸ್ಯೆ ಇಲ್ಲದಂತಾಯಿತು. ಆಟಕ್ಕೆ ಹೋಗಲಿ ಬಿಡಲಿ ಟಿಕೆಟ್ಟು ಕೊಳ್ಳುವ ಪರಂಪರೆ ಇಲ್ಲಿಂದ ಶುರುವಾಯಿತು.
ಮುಂದುವರಿಯುವುದು ........

ಯಾವಾಗ ವೃತ್ತಿ ಮೇಳಗಳ ಒಪ್ಪಂದದ ಆಟ ಶುರು ಆಯಿತೋ  ಯಕ್ಷಗಾನದ ಗುಣಮಟ್ಟ ಕಡಿಮೆಯಾಗತೊಡಗಿತು. ಆಟ ಹೇಗಾದ್ರು ತಮ್ಮ ಗಳಿಕೆಗೆ ತೊಂದ್ರೆ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದರು. ಇದರಿಂದ  ಯಕ್ಷಪ್ರಿಯರು ಅತಂತ್ರರಾದರು. ಇದೇ ಕಾಲಕ್ಕೆ ಮೇಳದ  ಕಲಾವಿದರಲ್ಲಿ ಭಿನ್ನಾಭಿಪ್ರಾಯ ಬಂದದ್ದರಿಂದ ಯಾರು ಮೊದಲನೇ ಕಲಾವಿದ ಯಾರು ಎರಡನೇ ಕಲಾವಿದ ಎಂದು ತೀರ್ಮಾನಿಸುವಲ್ಲಿ ಯಜಮಾನರು ಸೋತರು. ಇಲ್ಲಿಂದ  ಬಹುತೇಕ   ಹಿರಿಯ ಪ್ರಸಿದ್ಧ  ಕಲಾವಿದರದ್ದೇ ಒಂದೊಂದು ಮೇಳ ತಲೆ ಎತ್ತಿತು. ವೃತ್ತಿ  ಮೇಳಗಳಿಗೆ ಇದರಿಂದಾಗಿ ಪೌರಾಣಿಕ ಪ್ರಸಂಗಗಳನ್ನು  ರೈಸುವುದು ದುಸ್ತರವಾಯಿತು. ಸಾಮಾಜಿಕ ಕಥೆಗಳನ್ನು ರಂಗಕ್ಕೆ ತರುವ ಸಾಹಸ ಮಾಡಬೇಕಾಯಿತು.ಅಲ್ಲಿಂದ ಹೊಸಕಥೆಗಳ ಮಹಾಪೂರವೇ ಹರಿದು ಕೆಲಕಾಲ ಮಿಂಚಿದವು. ಇಂತಹ ಪ್ರಸಂಗದ ಪದ್ಯಗಳಲ್ಲಿ ಸತ್ವ ಇಲ್ಲದ ಕಾರಣ ಚಲನಚಿತ್ರ ಸಂಗೀತದ ಎಲ್ಲಾ ಎಫೆಕ್ಟ್ ಗಳನ್ನು ಇಲ್ಲಿ ಪ್ರಯೋಗ ಮಾಡಿದರು. ಪ್ರಮುಖವಾದದ್ದು ಎಕೋ ಎನ್ನುವ ಎಫೆಕ್ಟ್ .ಇದು ಆ ಕಾಲಕ್ಕೆ ಪ್ರಸಿದ್ದಿಗೆ ಬಂದ ಹಿಮ್ಮೇಳ ವೈಭವ
ಎಂಬ ಹೆಸರಲ್ಲಿ ನಡೆಯುವ ಕೇವಲ ಹಾಡುಗಾರಿಕೆಯೇ ಪ್ರಧಾನವಾದ ಕಾರ್ಯಕ್ರಮದಲ್ಲಿ, ಇಲ್ಲಿ ಮಾತಾಡುವ ಯಾ ಅರ್ಥ ಹೇಳುವ ಪ್ರಕ್ರಿಯೆ ಇಲ್ಲದೆ ಇರುವುದರಿಂದ ಇರುವುದರಿಂದ ಯಶಸ್ಸನ್ನೂ ಕಂಡಿತು. ಆದರೆ ರಂಗದಲ್ಲಿ ಇದು ಒಂದು ರೀತಿಯ ಭ್ರಮಾಲೋಕವನ್ನು ಸೃಷ್ಠಿಸಿರೂ . ಇದರ ಪ್ರಭಾವಕ್ಕೆ ಇದರ ಜೊತೆ ಶ್ರುತಿ ಸೇರಿಸಲಾರದೇ ಮುಮ್ಮೇಳದವರು ಮುಗ್ಗರಿಸಿ ಬಿದ್ದರು. ಹಾಡುವಾಗಿನ ಆರ್ಭಟ ಮತಾಡುವಲ್ಲಿ ಇಲ್ಲದೆ ಹೋದಾಗ ಪ್ರೇಕ್ಶಕರಿಂದ ಧ್ವನಿ ವರ್ಧಕದವರ ಬಗ್ಗೆ ಅಸಮಾದಾನ ಉಂಟಾಯಿತು. ಈರ್ವರಲ್ಲಿ ಗಲಾಟೆ ಆದದ್ದೂ ಇಲ್ಲದಿಲ್ಲ. ಆದರ್ಶ ನೀತಿಪಾಠಗಳಿಲ್ಲದ  ಕಾಲ್ಪನಿಕ ಕಥೆಗಳು ನಿಜ ಯಕ್ಷಗಾನದ  ಸೊಗಡು - ಅಬ್ಬರವನ್ನು ನಿರೀಕ್ಷಿಸಿ ಬರುವ ಯಕ್ಷಪ್ರಿಯರ ಹಸಿವನ್ನು ತಣಿಸಲಾಗದೇ ಸೋತವು.
ಮುಂದುವರಿಯುವುದು.....

ಸತತ ಅಭ್ಯಾಸದ ಕೊರತೆಯಿಂದ  ಮಾತಾಡುವಲ್ಲಿ ರಂಜಿಸಲಾಗದ( ಕಥೆಗೆ ಎಷ್ಟು ಬೇಕೂ ಅಷ್ಟನ್ನೇ ಮಾತಾಡಿದ್ರು ಯಕ್ಷಗಾನಕ್ಕೆ ಸಾಕಿತ್ತು) ಅನೇಕರು ಏನಾದ್ರು ಮಾಡಿ ತಮ್ಮತನ ಉಳಿಸಿಕೊಳ್ಳಲು ಹಾಡಿದ್ದನ್ನೇ ಪದೆ ಪದೇ  ಹಾಡಿಸಿ (ಮೂರು ನಾಲ್ಕು ಬಾರಿ ರಿಪೀಟ್ ಆದರೆ ಸರಿ. ಇಷ್ಟು ಬೇಕೇ ಬೇಕು) ಹೆಚ್ಹು ಕುಣಿಯುವುದು ಕುಣಿತದಲ್ಲಿ ಹೊಸತನ್ನು ತರುವ ಸಾಹಸ ಮಾಡಿದರು. ಇದರಿಂದ ಯಕ್ಷಗಾನೇತರರೂ ಸಹ ಯಕ್ಷಗಾನದತ್ತ ಆಕರ್ಶಿತರಾದದ್ದು  ಮಾತ್ರ ಸತ್ಯ. ಗಳಿಕೆಯ ದೃಷ್ಟಿಯಲ್ಲಿ ಮೇಳಗಳಿಗೆ ಅನುಕೂಲಾವಾದದ್ದೂ ಅಷ್ಟೇ ಸತ್ಯ. ಶ್ರುತಿ ತಪ್ಪಿದರೂ  ಚಪ್ಪಾಳೆಗೇನೂ ಕೊರತೆಯಾಗಲಿಲ್ಲ.( ಯಕ್ಷಗಾನ ಸರ್ವಾಂಗ ಸುಂದರ ಕಲೆ ಆದ್ದರಿಂದ  ಪರಂಪರೆಯಿಂದ ಬಂದ ಕುಣಿತವೇ ಸಾಕು ಹೊಸತೇನೂ ಬೇಕಿಲ್ಲ.) ಇದು ಎಲ್ಲಿಯವರೆಗೆ ಬಂತು ಅಂದರೆ ಯಕ್ಷಗಾನ - ದೊಂಬರಾಟ - ಸರ್ಕಸ್ಸು  ಈ ಮೂರೂ ಪ್ರಾಕಾರಗಳನ್ನು  ಒಂದೇ ವೇದಿಕೆಯ ಮೇಲೆ ನೋಡುವ ಸುಯೋಗ ಬಂದದ್ದು ಮಾತ್ರ ಯಕ್ಷಪ್ರಿಯರ ದೌರ್ಭಾಗ್ಯ. ಯಕ್ಷಗಾನ ಪರಂಪರೆಗೆ ಅದರ ಘನತೆ ಗೌರವಕ್ಕೆ ಧಕ್ಕೆ ಬಾರದ ಬದಲಾವಣೆಗಳು ಕಾಲಕಾಲಕ್ಕೆ ಆದರೆ ಸ್ವಾಗತಾಹ್ರವೇ ಹೌದು. ಈಗಿನ ಯಕ್ಷಗಾನ ಯಾಕೆ ರಂಜಿಸುವುದಿಲ್ಲ ಎನ್ನುವುದರ ಬಗ್ಗೆ ನಾಳೆ ಹೇಳುವೆ ......

(ಇನ್ನೂ ಇದೆ, ಮೂಲವೇದಿಕೆಯಲ್ಲಿ  ಮೂಡಿ ಬಂದಂತೆ ಇಲ್ಲಿ ಲಗತ್ತಿಸಲಾಗುವುದು)

No comments:

Post a Comment