Wednesday, May 25, 2016

ಜುಲಾಯಿಯಲ್ಲಿ ಸಾಮಗರ 'ಸಂಯಮಂ' ತಾಳಮದ್ದಲೆ ತಿರುಗಾಟದ ತಯಾರಿ - ಹರಿಕೃಷ್ಣ ಹೊಳ್ಳ ಜಿ.


(ಶ್ರೀ ಹರಿಕೃಷ್ಣ ಹೊಳ್ಳರು ಬ್ರಹ್ಮಾವರ ಶ್ರೀನಿಕೇತನ ಹೈಸ್ಕೂಲಿನಲ್ಲಿ ಅಧ್ಯಾಪಕರು, ಪ್ರವೃತ್ತಿಯಲ್ಲಿ ಯಕ್ಷಗಾನ ಬಡಗುತಿಟ್ಟಿನ ಭಾಗವತರು, ಯಕ್ಷಗಾನಕ್ಕಾಗಿ ಸೇವಾ ಮನೋಭಾವದಲ್ಲಿ ಸದಾ ತಲ್ಲೀನರು, ಯಕ್ಷಗಾನ ಪ್ರಸಂಗಸಂಚಯದಲ್ಲಿ ಮುಡಿಪಾದವರು, ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ಹೆಚ್ಚಿನ ಗಹನವಾದ ಬರವಣೆಗೆಯನ್ನು ನಾವು ನಿರೀಕ್ಷಿಸಬಹುದು! ಮುಖಪುಸ್ತಿಕೆಯಲ್ಲಿನ ಅವರ ಈ ಬರಹವನ್ನು ಅವರ ಅನುಮತಿ ಮೇರೆ ಪರಶುರಾಮ ಕ್ಷೇತ್ರದ ನಿತ್ಯೋತ್ಸವದ ಇನ್ನೊಂದು ಆರತಿಯಾಗಿ ಮತ್ತೆ ಇಲ್ಲಿ ಕಾಣಿಸಲಾಗಿದೆ.)

------------------------------------------------------------------------------------------------------------------

ಯಕ್ಷಗಾನ ಬಯಲಾಟಗಳಿಗೆ ಮೇಳಗಳು ಇರುವಂತೆ, "ಸಂಚಾರಿ ಯಕ್ಷಗಾನ ಮಂಡಳಿ" (ಸಂಯಮಂ) ಎಂಬುದು ತಾಳಮದ್ದಲೆಯ ಒಂದು ಮೇಳ. ಇದು 1990ರಲ್ಲಿ ಶ್ರೀ ವಾಸುದೇವ ಸಾಮಗರಿಂದ ಸ್ಥಾಪಿತವಾದ ಒಂದು ಸಂಸ್ಥೆ. ಬಹುಶಃ ಈ ರೀತಿಯಲ್ಲಿ ತಾಳಮದ್ದಲೆಗಾಗಿ ಮೇಳ ಕಟ್ಟಿಕೊಂಡವರು ಇವರೇ ಪ್ರಥಮ ಇರಬೇಕು.ಆರಂಭದಲ್ಲಿ ಇದರಲ್ಲಿ ಪದ್ಯಾಣಗಣಪತಿ ಭಟ್, ತೆಕ್ಕಟ್ಟೆ ಆನಂದ ಮಾಸ್ಟರ್, ರಾಮದಾಸ ಸಾಮಗರು , ಅಳಿಕೆ ರಾಮಯ್ಯ ರೈ ಮೊದಲಾದ ಘಟಾನುಘಟಿ ಕಲಾವಿದರು ಇದ್ದಿದ್ದರು. ನಡುವೆ ಕೆಲವು ವರ್ಷ ಸ್ಥಗಿತಗೊಂಡು ಈಗ ಹೊಸ ರೂಪದೊಂದಿಗೆ, ಸ್ವಂತ ಪರಿಕರಗಳೊಂದಿಗೆ, 'ಸಂಯಮಂ(ರಿ)' ಆಗಿ ಪುನಹ ತಿರುಗಾಟ ಮಾಡುತ್ತಿದೆ.
(Photo courtesy: http://www.daijiworld.com/images1/savi_070511_samaga8.jpg)
ವಾಸುದೇವ ಸಾಮಗರ ಬಗ್ಗೆ ಹೇಳಲು ನಾನಲ್ಲ , ಬೇರೆ ಯಾರೂ ಶಕ್ತರಲ್ಲ. ಅವರ ಬಗ್ಗೆ ಹೇಳಿದರೆ ಅದು ನಾಲ್ಕಾರು ಜನ ಕುರುಡರು ಆನೆಯೊಂದನ್ನು ಮುಟ್ಟಿನೋಡಿಕೊಂಡು ವರ್ಣಿಸಿದಂತೆ ಆದೀತು ಅಷ್ಟೆ. ಅವರು ತೆಂಕು ಹಾಗೂ ಬಡಗು ಎರಡೂ ತಿಟ್ಟುಗಳಲ್ಲಿ , ಎಲ್ಲಾ ರೀತಿಯ ವೇಷಗಳನ್ನೂ ಮಾಡಿದವರು , ಹರಿಕತೆ ದಾಸರೂ ಆಗಿರುವುದರಿಂದ ರಾಗ ಜ್ಞಾನವನ್ನೂ ಉಳ್ಳವರು , ತಾಳಮದ್ದಲೆಯಲ್ಲಿಯೂ ಕೂಡಾ ಎಲ್ಲಾರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲವರು. ಅಂತಹ ಬಹುಮುಖ ಪ್ರತಿಭೆಯ ವಾಸುದೇವ ಸಾಮಗರ ಕನಸಿನ ಕೂಸು ಈ 'ಸಂಯಮಂ'.
ಕರಾವಳಿ ಮಾತ್ರವಲ್ಲದೇ ಮಲೆನಾಡಿನಲ್ಲಿಯೂ ಕೂಡಾ, ಮಳೆಗಾಲದಲ್ಲಿ ಅಲ್ಲಲ್ಲಿ ತಾಳಮದ್ದಲೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಕೆಲವು ಕಟ್ಟುಪಾಡುಗಳಿವೆ. ಅವುಗಳಲ್ಲಿ ಕಾಲಮಿತಿ ಪ್ರಮುಖವಾದುದು - ಸುಮಾರು ಮೂರರಿಂದ ಮೂರುವರೆ ಗಂಟೆಗಳ ತಾಳಮದ್ದಲೆ. ಎರಡನೇದಾಗಿ ಪಾತ್ರಮಿತಿ - ಕೇವಲ ನಾಲ್ಕೇ ಜನ ಅರ್ಥಧಾರಿಗಳು. ಹೆಚ್ಚು ಪಾತ್ರಗಳಿರುವ ಪ್ರಸಂಗವಾದರೂ ಅವರೇ ನಾಲ್ಕು ಜನ ನಿಭಾಯಿಸುವರು. ಅತಿಥಿ ಕಲಾವಿದರಿಗೆ ಇಲ್ಲಿ ಆಸ್ಪದ ಇಲ್ಲವಾದರೂ ಕೆಲವೊಮ್ಮೆ ಸಂಘಟಕರ ಸ್ನೇಹಕ್ಕೆ ಕಟ್ಟುಬಿದ್ದು ಒಬ್ಬಿಬ್ಬರನ್ನು ಸೇರಿಸಿಕೊಂಡದ್ದೂ ಇದೆ, ಹೆಚ್ಚು ಸಮಯದ ತಾಳಮದ್ದಲೆ ಮಾಡಿದ್ದೂ ಇದೆ. ಮತ್ತೆ ಆಪತ್ಕಾಲಕ್ಕೆ ಬೇರೆಯವರನ್ನು ಸೇರಿಸಿಕೊಂಡದ್ದೂ ಇದೆ. ಹೀಗೆ ಕೆಲವು ಬಾರಿ ಭಾಗವತರಿಗೆ ಅನಾನುಕೂಲವಾದಾಗ, ನಾನೂ ಕೂಡಾ ಹೋಗಿದ್ದೆ. ಇನ್ನು ಅವರದ್ದೇ ಆದ ಸಮವಸ್ತ್ರ , ಅವರದೇ ಸ್ಟೇಜ್ , ಅವರದೇ ಮೈಕ್ , ಅವರದೇ ಹ್ಯಾಲೋಜಿನ್ ಲೈಟ್ , ಅವರದೇ ಜನರೇಟರ್ , ಅವರದೇ ವಾಹನ ... ಹೀಗೇ ಎಲ್ಲವೂ ಅವರದ್ದೇ ವ್ಯವಸ್ಥೆ. ಯಾವುದಕ್ಕೂ ಸಂಘಟಕರನ್ನು ಕೇಳಲಿಕ್ಕಿಲ್ಲ. ಸಂಘಟಕರಿಗೆ ಕಿರುಕುಳ ಉಂಟಾಗಬಾರದು ಎಂಬುದೇ ಅವರ ಉದ್ದೇಶ. ದೂರದ ಊರಾದರೆ ಸರಳವಾದ ವಸತಿ ವ್ಯವಸ್ಥೆಯೊಂದನ್ನು ಕೇಳಿಯಾರು ಮತ್ತು ಹೋಟೆಲ್ ಇಲ್ಲದ ಊರಾದರೆ ಆಹಾರವನ್ನು ಬಯಸಿಯಾರು ಅಷ್ಟೆ.
ಇದು ಸಾಮಗರ ನಿರ್ದೇಶನಕ್ಕೆ ಒಳಪಟ್ಟ ಸಂಸ್ಥೆ. ಇಲ್ಲಿ ಸಮಯಮಿತಿ ಇರುವ ಕಾರಣ ಅರ್ಥಗಾರಿಕೆಗೂ ಸಾಮಗರ ನಿರ್ದೇಶನ ಇದೆ. ತಾಳಮದ್ದಲೆಗೆ ಮೊದಲು ಮತ್ತು ನಂತರ ಕಲಾವಿದರೊಳಗೆ ಅವಲೋಕನದ ಕ್ರಮ ಇದೆ, ಒಳಿತು ಕೆಡುಕುಗಳ ಚರ್ಚೆ ಇದೆ. ಕೆಲವೊಮ್ಮೆ ಭಾಗವತಿಕೆಗೂ ನಿರ್ದೇಶನವಿದೆ. ಅದಕ್ಕೆ ಬೇಕಾಗಿ ಪ್ರಸಂಗಗಳನ್ನು ಎಡಿಟ್ ಮಾಡಿಕೊಂಡು ಎಪ್ಪತ್ತು ಪ್ರಸಂಗಗಳ ಒಂದು ಪುಸ್ತಕವನ್ನೂ ಕೂಡಾ ಅವರು ಮಾಡಿಟ್ಟುಕೊಂಡಿದ್ದಾರೆ. ಇಂದು ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಅವರ ಆ ಪುಸ್ತಕವನ್ನೇ ಬಳಸುತ್ತಿದ್ದಾರೆ. ಯಕ್ಷಗಾನದಲ್ಲಿ ಬಹು ಬೇಡಿಕೆ ಇರುವ ಪುಸ್ತಕ ಅದು. ಈ ವರ್ಷ ಇನ್ನೂ ಹತ್ತಾರು ಪ್ರಸಂಗಗಳನ್ನು ಸೇರಿಸಿ , ಅ ಪುಸ್ತಕವನ್ನು ಮರು ಮುದ್ರಣ ಮಾಡಲು ಹೊರಟಿದ್ದಾರೆ. ಅ ಪುಸ್ತಕದಲ್ಲಿರುವ ಪ್ರಸಂಗಗಳಲ್ಲದೇ ಬೇರೆ ಪ್ರಸಂಗಗಳನ್ನೂ ಕೂಡಾ ಅವರು ಆಡುತ್ತಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಖರ್ಚಿನ ಮಿತಿ ಇರುವುದು. ಸಂಘಟಕರಿಗೆ ಹೊರೆಯಾಗಬಾರದೆಂಬ ಕಾರಣಕ್ಕಾಗಿ ಕಡಿಮೆ ಖರ್ಚಿನಲ್ಲಿ ತಾಳಮದ್ದಲೆ ಮಾಡುತ್ತಿದ್ದಾರೆ. ಬಹುಶಃ ಈ ಮುಂದಿನ ಮಳೆಗಾಲದಲ್ಲಿ ಅವರ ವೀಳ್ಯ ಎಂಟು ಸಾವಿರಕ್ಕೆ ಏರಬಹುದೋ ಏನೋ ಅಷ್ಟೆ , ಅದಕ್ಕಿಂತ ಖಂಡಿತಾ ಹೆಚ್ಚಾಗಲಿಕ್ಕಿಲ್ಲ. ನಮ್ಮಲ್ಲಿ ತಾಳಮದ್ದಲೆ ಮಾಡಿಸಿದಾಗ ಒಮ್ಮೆ ಸ್ವಲ್ಪ ಹೆಚ್ಚಿಗೆ ಹಣ ಕೊಟ್ಟಾಗ ಅವರು ಆ ಹೆಚ್ಚಿಗೆ ಹಣವನ್ನು ವಿನಯ ಪೂರ್ವಕವಾಗಿ ಹಿಂತಿರುಗಿಸಿ ಕೊಟ್ಟು ಹೋಗಿದ್ದರು. ಇತ್ತೀಚಿನ ದಿನಗಳಲ್ಲಿ ನಡೆಯುವ ಬೇರೆ ತಾಳಮದ್ದಲೆಗಳಲ್ಲಿ ಕೇವಲ ಒಬ್ಬ ಕಲಾವಿದನಿಗೆ ಕೊಡುವ ಸಂಭಾವನೆ ಹಣದಲ್ಲಿ ಸಾಮಗರ ಇಡಿ ತಾಳಮದ್ದಲೆ ನಡೆಯುತ್ತದೆ.
ಸೂರಾಲು ರವಿಕುಮಾರ್, ಹೆಬ್ರಿ ಗಣೇಶ್ ಕುಮಾರ್ , ಗಜಾನನ ಹೆಗಡೆ ಇವರೆಲ್ಲ 'ಸಂಯಮಂ'ನಿಂದಲೇ ಬೆಳಕಿಗೆ ಬಂದ ಭಾಗವತರು. ಅದೇರೀತಿ, ಅನೇಕ ಅರ್ಥಧಾರಿಗಳನ್ನು ಕೂಡಾ ಸಾಮಗರು ಬೆಳೆಸಿದ್ದಾರೆ. ಅವರನ್ನೆಲ್ಲಾ ಪಟ್ಟಿ ಮಾಡಲು ಸಾಧ್ಯವಿಲ್ಲ , ಏಕೆಂದರೆ ಸಂಖ್ಯೆ ಅಷ್ಟು ಹೆಚ್ಚಿಗೆ ಇದೆ. ಕಳೆದ ವರ್ಷ ಪೂಕಳ ಲಕ್ಷ್ಮೀನಾರಾಯಣ ಭಟ್ಟರು ಮತ್ತು ನಿಟ್ಟೂರು ಅನಂತ ಹೆಗಡೆಯವರು (ಇನ್ನೋರ್ವರ ಹೆಸರು ನೆನಪಿಲ್ಲ) 'ಸಂಯಮಂ'ನ ಖಾಯಂ ಕಲಾವಿದರಾಗಿದ್ದರು. ಪ್ರೊ. ಎಂ.ಎ.ಹೆಗಡೆ , ಡಾ.ವೈಕುಂಠ ಹೇರಳೆ ಮೊದಲಾದವರು ಆಪತ್ಕಾಲದ ಅರ್ಥಧಾರಿಗಳಾಗಿದ್ದರು. ಈ ವರ್ಷವೂ ಜುಲಾಯಿಯಲ್ಲಿ ಸಾಮಗರ 'ಸಂಯಮಂ' ರಥ ತಿರುಗಾಟವನ್ನು ನಡೆಸಲು ತಯಾರಿ ನಡೆಸುತ್ತಿದೆ.



 'ಸಂಯಮಂ' ತಂಡದ ತಾಳಮದ್ದಲೆಯನ್ನು ಯೋಜಿಸಲಾಸಕ್ತರು ಶ್ರೀಯುತ ವಾಸುದೇವ ಸಾಮಗರನ್ನು ಚರವಾಣಿ  9448624370ಯಲ್ಲಿ ಸಂಪರ್ಕಿಸಬಹುದು!

No comments:

Post a Comment