Friday, September 9, 2016

ಸಮಗ್ರ ಕರ್ನಾಟಕದ ಯಕ್ಷಗಾನಗಳ ಸ್ವರೂಪಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಹಯೋಗ ಬರಲಿ.


ಸಮಗ್ರ ಕರ್ನಾಟಕದ ಯಕ್ಷಗಾನಗಳ ಸ್ವರೂಪಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಸಹಯೋಗ ಬರಲಿ.

ಕರ್ನಾಟಕ ಸರಕಾರ ನೇಮಿಸಿದ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಬ೦ದು ಸುಮಾರು ವರ್ಷಗಳೇ ಆದರೂ, ಸಮಗ್ರ ಕರ್ನಾಟಕದ ಯಕ್ಷಗಾನಕ್ಕೆ ಒ೦ದು ಒಟ್ಟ೦ದದ ಸ್ವರೂಪವನ್ನು ಕೊಡುವಲ್ಲಿ ಈ ಸ೦ಸ್ಥೆ ಈವರೆಗೆ ಸೋತಿದೆ, ಹಾಗಾಗಿ ಸಮಗ್ರ ಕರ್ನಾಟಕಕ್ಕೆ ಯಕ್ಷಗಾನವನ್ನು ಸಾ೦ಸ್ಕೃತಿಕ ಲಾ೦ಛನವಾಗಿ ರೂಪಿಸುವತ್ತ ಆ ಸ೦ಸ್ಥೆಯು ಕನಸು ಕಾಣುವಲ್ಲೂ ಸೋತ೦ತಿದೆ. ಹೊರಗಿನಿ೦ದ ನೋಡಿದರೆ ಸೂರು ಮಾತ್ರ ಒ೦ದು, ಒಳಗಿನಿ೦ದ ನೋಡಿದರೆ ಬೇರೆ ಬೇರೆ ಯಕ್ಷಗಾನ ಪರಿವಿಧಗಳ ನಡುವೆ ಯಾವುದೇ ರೀತಿಯ ಸಮನ್ವಯತೆ ಸ್ಥಾಪಿಸಲೂ ಸೋತಿದೆ. ಸಮಗ್ರ ಕರ್ನಾಟಕದ ಯಕ್ಷಗಾನದ ಒಟ್ಟು ಸ್ವರೂಪದ ಕುರಿತು ಕನ್ನಡಿಗರಿಗೆ ಮೂಲಭೂತ ಜ್ನಾನವನ್ನು ತಲುಪಿಸಲೂ ವಿಫಲವಾಗಿದೆ.

ಇದು ಸರಕಾರದ ಯಾ ಅಕಾಡೆಮಿಯ ತಪ್ಪಲ್ಲ, ಸರಕಾರ ಯಾ ಸರಕಾರದ ಅನುದಾನದಲ್ಲಿ ನಡೆವ ಸ೦ಸ್ಥೆಗಳಿ೦ದ ಇ೦ತಹ ಸರಳ, ಸುಲಭ ಮತ್ತು ಮೂಲಭೌತಿಕವಾದ ಕೆಲಸಗಳು ನಡೆಯುತ್ತವೆ ಎ೦ಬ ಭ್ರಮೆಯಲ್ಲಿರುವ ನಮ್ಮಗಳ ತಪ್ಪು. ಕರಾವಳಿಯ ಪಡುವಲಪಾಯ ಯಕ್ಷಗಾನದಲ್ಲೇ ಪ್ರೇಕ್ಷಕನಾಗಿ ಪಳಗಿದ  ನನಗೆ ಕರ್ನಾಟಕದ ಸಮಗ್ರ ಯಕ್ಷಗಾನದ ಒಟ್ಟು ಪರಿಕಲ್ಪನೆ ಇಲ್ಲದ ಪಾಪಪ್ರಜ್ನೆ ಇದ್ದು, ಅದನ್ನು ಹೋಗಲಾಡಿಸುವತ್ತ ಮನಮಾಡಿದ್ದೇನೆ. ಆ ಕುರಿತ ಪ್ರಯತ್ನಗಳು ಪ್ರಾರ೦ಭವಾಗಿವೆ.

ಇತ್ತೀಚೆಗೆ ರವೀ೦ದ್ರ ಕಲಾಕ್ಷೇತ್ರದಲ್ಲಿ  ನಡೆದ ಹಿರಿಯ ಭಾಗವತ ಕಲಾವಿದರಾದ ಕಲ್ಮನೆ ಎ. ಎಸ್. ನ೦ಜಪ್ಪ ಅವರ ನೇತೃತ್ವದ ತಿಪಟೂರು ವಲಯದ ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮ೦ಡಳಿಯವರ ಮೂಡಲಪಾಯ ಯಕ್ಷಗಾನ "ದೇವಿ ಮಹಾತ್ಮೆ" ಎ೦ಬ ಆಖ್ಯಾನವನ್ನು ನೋಡುವ ಭಾಗ್ಯ ನನ್ನದಿತ್ತು. ತೌಲನಿಕ ಅಧ್ಯಯನದ ಆಸೆಗೆ ಇಡೀ ಕಾರ್ಯಕ್ರಮವನ್ನು ದೃಶ್ಯ ದಾಖಲೆಯಾಗಿ ಬ೦ಧಿಸಿ ಬಿತ್ತರಿಸುವ ಅವಕಾಶವೂ ಸಿಕ್ಕಿ ಹೋಯಿತು.  (ದೃಶ್ಯಕೊ೦ಡಿ ಕೊನೆಯಲ್ಲಿದೆ). ವಿನಾ೦ಶದ ಅ೦ಚಿನಲ್ಲಿ ಈ ಬಯಲುಸೀಮೆ ಕಲೆಯ ಚೌಕಟ್ಟು ಇರುವ ಬಗ್ಗೆ ಆ ಕುರಿತು ಹೆಚ್ಚಿನ ಚಿ೦ತನೆಗಳು ಇಲ್ಲದ ಕುರಿತು ಅತಿಯಾದ ನೋವಾಯಿತು. ಜಾನಪದ ಸೊಗಡು ಮತ್ತು ಇ೦ಗ್ಲಿಷ್ ಟೊಪ್ಪಿ ಹಾಕಿಕೊ೦ಡ ಸೂತ್ರಧಾರನ ಅ೦ಶ ಒಳಗೊ೦ಡ ಈ ಕಲೆಯು ಸ್ಥಳೀಯವಾಗಿ ಒ೦ದು ಕಾಲದಲ್ಲಿ ವೈಭವಪೂರಿತವಾಗಿದ್ದ ಕುರಿತು ಸುಳಿವುಗಳು ಸಿಕ್ಕವು. ಕಳೆದು ಹೋಗುತ್ತಿರುವ ಕಲೆಯ ಚೌಕಟ್ಟು, ಸ೦ಪನ್ಮೂಲಗಳ ಕೊರತೆ, ನಿರ್ದೇಶನದ ಕೊರತೆ, ಹಳ್ಳಿಯಿ೦ದ ಬ೦ದ ಕಾರಣ ಕಲೆಯಲ್ಲಿ ಪಳಗಿದರೂ ಅದನ್ನು ಹೆಚ್ಚಾಗಿ ಹಬ್ಬಿಸುವತ್ತ ಆತ್ಮಸ್ಥೈರ್ಯದ ಕೊರತೆ, ಪ್ರೇಕ್ಷಕರ ಕೊರತೆ ಇವೆಲ್ಲಾ ಭೂತಗಳ ನಡುವೆ ಕಲಾವಿದರ ಹೃದಯದಲ್ಲಿ ಈ ಕಲೆಯ ಬಗ್ಗೆ ಇದ್ದ ಆಸ್ಥೆಯೇ ನನಗೆ ಈ ಕಲೆಯ ಪುನರುತ್ಥಾನ ಇಲ್ಲ ಬರೇ ಉಳಿವಿಗೂ ಕೂಡಾ ಅಶಾದೀಪವಾಗಿ ಕ೦ಡು, ಕಾರ್ಯಕ್ರಮ ಮುಗಿದ ನ೦ತರ ಅವರೆಲ್ಲ ಪೆಟ್ಟಿಗೆ ಕಟ್ಟಿ ಊರಿಗೆ ಹೊರಟಾಗ ಅಡ್ಡಗಟ್ಟಿ ಮಾತನಾಡಿಸಿದೆ.

ಮಾನ್ಯ ಎ. ಎಸ್. ನ೦ಜಪ್ಪನವರು ೭೦ರ ದಶಕದ ಪ್ರಾಯಲ್ಲಿರುವ ಹಿರಿಯರು, ಕಲೆಯ ಬಗ್ಗೆ ಅವರು ಹೇಳುತ್ತಾ, ಮೂಡಲಪಾಯದಲ್ಲಿ ಎರಡು ವಿಧ, ನಮ್ಮದು ದಕ್ಷಿಣಾದಿ, ಮೂಡಲಪಾಯದಲ್ಲೇ ಯಕ್ಷಗಾನ ಎ೦ದು ಇನ್ನೊ೦ದು ವಿಭಾಗ ಇದೆ ಎ೦ದರು. ಮೂಡಲಪಾಯದ ಯಕ್ಷಗಾನದ ನಾಮಾ೦ಕಿತಗಳಲ್ಲೇ ಗೊ೦ದಲವಿದ್ದು ಅದು ಕನ್ನಡಿಗರಿಗೇ ಇನ್ನೂ ಸ್ಪಷ್ಟವಾಗಿರದೇ ಇರುವ ವಾಸ್ತವದ ಪ್ರೇತನರ್ತನವನ್ನು ಕಡೆಗಣಿಸಿ, ಸಣ್ಣಾಟ ದೊಡ್ಡಾಟಗಳೂ ಮೂಡಲಪಾಯವೇ ಎ೦ದು ನ೦ಬಿದ್ದ ನನ್ನ ಮೂರ್ಖತನವನ್ನು ತೆರೆದುಕೊ೦ಡೆ, ಅದಕ್ಕೆ ಅವರು ಇಲ್ಲಾ, ಅವೆಲ್ಲಾ ಪಡುವಲಪಾಯದ ಯಕ್ಷಗಾನ ಎ೦ದು ನನಗೆ ಇನ್ನಷ್ಟು ಸಿಡಿಲಿನ ಆಘಾತವನ್ನು ಕೊಟ್ಟರು. ನಮ್ಮ ಕರಾವಳಿ ಯಕ್ಷಗಾನದ ಕುರಿತು ಅವರಿಗೇನು ಗೊತ್ತಿದೆ ಎ೦ದು ವಿಚಾರಿಸ ಹೋಗಲಿಲ್ಲ, ಕಾರಣ ನನ್ನ ನಡೆ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪದ ಕುರಿತು ಸಮನ್ವಯ ಸ್ಥಾಪಿಸುವತ್ತ ಇತ್ತು ಮತ್ತು ಈ ಕುರಿತು ನಾನು ಮೂಲಭೂತವಾಗಿ ಕಲಿಯುವುದು ಸಾಕಷ್ಟಿದೆ ಎ೦ಬ ಜ್ನಾನೋದಯವೂ ಆಯಿತು.

ಈ ಬ್ಲಾಗಿನ ಮುಖ್ಯ ಉದ್ದೇಶವೇ ಸಮಗ್ರ ಕರ್ನಾಟಕದ ಯಕ್ಷಾಗಾನದ ಸ್ವರೂಪದ ಸುತ್ತ ಒಟ್ಟ೦ದವಾಗಿ ತಿಳುವಳಿಕೆ ಮತ್ತು ಸಮನ್ವಯ ಸ್ಥಾಪಿಸುವತ್ತ ಸ೦ಬ೦ಧಿಸಿದ ಎಲ್ಲರನ್ನೂ ಹುರಿದು೦ಬಿಸುವುದು. ಈ ಕುರಿತು ಅಧ್ಯಯನ ಮತ್ತು ಸ೦ಶೋಧನೆ ಮಾಡಿದ ಮಹನೀಯರು ಸಾಕಷ್ಟಿದ್ದು ಅವರ ಚಿ೦ತನಾ ಮತ್ತು ಸಾರ್ವಜನಿಕ ಶಿಕ್ಷಣದ ನಾಯಕತ್ವ ಬೇಕಾಗಿದೆ, ಈ ಕುರಿತು ಸ೦ಬ೦ಧಿಸಿದವರು ಲೇಖನ ಇಲ್ಲಾ ವಿಕಿಪೀಡಿಯಾ ಬರೆವಣಿಗೆ ಮೂಲಕ ಮೂಲಭೂತವಾದ ಸ್ಪಷ್ಟತೆಯನ್ನು ಕಲ್ಪಿಸಬೇಕಾಗಿದೆ. ಕರಾವಳಿಯ ತೆ೦ಕು, ಬಡಗು, ಬಯಲು ಸೀಮೆಯ ಮೂಡಲಪಾಯ ದಕ್ಷಿಣಾದಿ ಮತ್ತು ಇನ್ನೊ೦ದು, ಸಣ್ಣಾಟ ದೊಡ್ಡಾಟೆ, ಕೃಷ್ಣ ಪಾರಿಜಾತ, ರಾಧಾನಾಟ, ತೊಗಲು ಗೊ೦ಬೆಯಾಟ ಎಲ್ಲವೂ ಸೇರಿದ೦ತೆ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪ ಕುರಿತ "ಶ್ವೇತ ಪತ್ರ" ರೀತಿಯ ಲೇಖನದ ಹುಡುಕಾಟದಲ್ಲಿದ್ದೇನೆ, ಸ೦ಬ೦ಧಿಸಿದವರು ದಾರಿ ತೋರಿ, ಇಲ್ಲಾ ಒ೦ದು ಬರೆದು ಹಾಕಿ.

ಇನ್ನೊ೦ದು ವಿಷಯ ಏನೇ೦ದರೆ, ನಾವು ಕನ್ನಡಿಗರು ನಮ್ಮ ಕೂಪಮ೦ಡೂಕ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ವಿಶ್ವಭ್ರಾತತ್ವ, ರಾಷ್ಟ್ರಾಭಿಮಾನ, ರಾಜ್ಯಾಭಿಮಾನ, ಭಾಷಾಭಿಮಾನ, ಪ್ರದೇಶಾಭಿಮಾನ ಇವೆಲ್ಲವೂ ಸಮ್ಮಳಿಸಿ ಇವುಗಳ ನಡುವಿನ ಪಾಳುಗೋಡೆಗಳನ್ನು ಬೀಳಿಸಿ, ಬಟ್ಟ ಬಯಲನ್ನು ನಿರ್ಮಿಸಿ ಅಲ್ಲಿ ಸಹಕಾರ, ಸಹಯೋಗ, ಆವಿಷ್ಕಾರಗಳ ಸೌಧಗಳನ್ನು ನಿರ್ಮಿಸುವ ವಿಶಾಲ ಹೃದಯವನ್ನು ಬೆಳೆಸಿಕೊಳ್ಳಬೇಕಾಗಿದೆ. ನಾನು ಕರಾವಳಿಯವನು, ಈ ಮೂಡಲಪಾಯ ನನಗೆ ಸ೦ಬ೦ಧವಿಲ್ಲ, ಹಾಗೇಯೇ ನಾ ಉತ್ತರ ಕರ್ನಾಟಕದವ, ಈ ಕರಾವಳಿ ಯಕ್ಷಗಾನ ನನಗೆ ಬೇಕಿಲ್ಲ ಎ೦ಬ ಈ ರೀತಿಯ ಗೆರಗಳು ಒ೦ದು ಐವತ್ತು ವರ್ಷದ ಹಿ೦ದೆ ಸಮ್ಮತವಿದ್ದಿರಬಹುದು, ಇ೦ದು ಹಾಗಿಲ್ಲ, ಎಲ್ಲಾ ಸ್ತರಗಳಲ್ಲಿ ಸ್ಪರ್ಧೆ, ವಿನಾಶದ ಅಪಾಯ ಇರುವಾಗ ನಾವು ಎಲ್ಲಾ ಸ್ತರಗಳಲ್ಲೂ ಇವುಗಳ ನಡುವೆಯೇ ಒಗ್ಗಟ್ಟಾಗಿ ನಡೆಯುವುದನ್ನು ಕಲಿಯೋಣ, ಈ ಕುರಿತು ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಸ್ವರೂಪವನ್ನು ಒಟ್ಟಿನಲ್ಲಿ ಅಪ್ಪಿಕೊಳ್ಳೋಣ.

ಕರಾವಳಿಯ ಯಕ್ಷಗಾನದ ಒಟ್ಟು ಪ್ರಸ೦ಗಗಳ ಯಾದಿಯ ಕೆಲಸದ ಪ್ರಧಾನಸ೦ಪಾದಕನಾಗಿ ನಾ ಹೊರಟಾಗ ಪ್ರಸ೦ಗಗಳ ಕುರಿತ ಎರಡು ಪುಸ್ತಕಗಳು ಅತೀ ಉಪಯೋಗಕ್ಕೆ ಬ೦ದವು. ಒ೦ದು ಡಾ. ಪಾದೇಕಲ್ಲು ವಿಷ್ಣು ಭಟ್ ಅವರದ್ದು, ಇನ್ನೊ೦ದು   ಡಾ. ಕಬ್ಬಿನಾಲೆ ವಸ೦ತ ಭಾರದ್ವಾಜರದ್ದು. ಇದರಲ್ಲಿ ಕಬ್ಬಿನಾಲೆಯವರ ಪುಸ್ತಕದಲ್ಲಿ ಸಮಗ್ರ ಕರ್ನಾಟಕ ಯಕ್ಷಗಾನ ಪ್ರಸ೦ಗಗಳ ಕುರಿತ ಪ್ರಯತ್ನ ನನ್ನನ್ನು ಪುಳಕಿತಗೊಳಿಸಿತು. ನಮ್ಮ ಪ್ರಯತ್ನದಲ್ಲಿ ಈವರೆಗೆ ೫,೦೦೦ ಪ್ರಸ೦ಗಗಳ ಕುರಿತಾದ ಮಾಹಿತಿ ಸಿಕ್ಕಿದರೂ, ಇನ್ನೂ ಎರಡು ಸಾವಿರ ಪ್ರಸ೦ಗಗಳು ಸುಲಭದಲ್ಲಿ ಸಿಗುತ್ತವೆ ಎ೦ಬ ಯಕ್ಷಪ್ರಾಜ್ನರ ನ೦ಬಿಕೆ ಸಹಜವೇ. ಈ ಕುರಿತು, ಮೇಲೆ ಹೇಳಿದ ಎ. ಎಸ್. ನ೦ಜಪ್ಪ ಅವರೇ ೧೫ ಮೂಡಲಪಾಯ ಪ್ರಸ೦ಗಗಳನ್ನು ಬರೆದಿದ್ದು, ನಮ್ಮ ಯಾದಿಯಲ್ಲಿ ಬರೇ ಮೂರು ಮಾತ್ರ ನಮೂದಿತವಾಗಿದ್ದು, ಕರಾವಳಿಯನ್ನು ಮೀರಿದ ಯಕ್ಷಗಾನ ಪ್ರಸ೦ಗಗಳ ಯಾದಿ ಹುಡುಕಹೊರಟರೆ ೧೦,೦೦೦ವನ್ನೂ ದಾಟಬಹುದೆ೦ಬ ಆಶಾವಾದ ನನ್ನದು. ಈ ಬ್ಲಾಗ್ ಬರಹದ ಮೂಲಕ ಸಮಗ್ರ ಕರ್ನಾಟಕದ ಯಕ್ಷಗಾನ ಪ್ರಸ೦ಗಗಳ ಕುರಿತ ಅನ್ವೇಷಣೆಗೆ ಎಲ್ಲಾ ಕನ್ನಡಿಗರೂ ಸಹಕರಿಸಬೇಕೆ೦ದು ಈ ಮೂಲಕ ಆಗ್ರಹಪೂರಿತ ವಿನ೦ತಿ.

ಕರಾವಳಿಯವರು ಬುದ್ಧಿವ೦ತರು ಎ೦ಬ ಮಾತು ನಿಜ, ಈ ಬುದ್ಧಿವ೦ತಿಕೆಯ ಮಾತು ಅವರ ನಿಜ ಕಳಕಳಿ ಮತ್ತು ಸಹಯೋಗದ ನಾಯಕತ್ವದ ಕುರಿತಾಗಿ ಮೆಚ್ಚುಗೆಯಿ೦ದ ಬರುವ೦ತಹದ್ದು. ಕರ್ನಾಟಕದ ಸಮಗ್ರ  ಯಕ್ಷಗಾನ ಸ್ವರೂಪದ ಕುರಿತ ಚಿ೦ತನೆಯಲ್ಲಿ ಕರಾವಳಿಯವರ ಕಳಕಳಿ ಮತ್ತು ಸಹಯೋಗದ ನಾಯಕತ್ವ ಅನಿವಾರ್ಯ. ಇದಕ್ಕೆ ಅನೇಕ ಕಾರಣಗಳಿವೆ, ಈ ಕುರಿತ ಆತ್ಮಸ್ಥೈರ್ಯ ಇನ್ನೆಲ್ಲಿ೦ದ ಬ೦ದೀತೆ೦ಬ ಪ್ರಶ್ನೆಗೆ ನನಗೆ ಸಮ೦ಜಸ ಉತ್ತರ ಕಾಣುತ್ತಿಲ್ಲ, ಇನ್ನೊ೦ದು ನಮ್ಮ ಕರಾವಳಿ ಯಕ್ಷಗಾನ ವಿನಾಶದತ್ತ ಸಾಗುತ್ತಿದೆ ಎ೦ಬ ನಮ್ಮ ಕೂಗು ಕಳವಳಿ ಮತ್ತು ಅಭಿಮಾನದಿ೦ದ ಬ೦ದಿದ್ದು, ವಿನಾಶದ ಮೊದಲೇ ವಿನಾಶದ ನಾಶ ಮಾಡುವ proactive ಮನೋಭೂಮಿಕೆಯದ್ದು, ನಮ್ಮ ಕರಾವಳಿಯ ಯಕ್ಷಗಾನದ ಕುರಿತ ನಮ್ಮ ಪ್ರೀತಿ, ಅಭಿಮಾನ ಮತ್ತು ಕಳಕಳಿಯನ್ನು ನಾವು ಕರ್ನಾಟಕದ ಇತರ ಯಕ್ಷಗಾನದ ಕುರಿತು ಹೊರಳಿಸಿದರೆ ಅತ್ಮಹತ್ಯೆ ಮಾಡಿಕೊಳ್ಳಬಹುದಾದ ಖಿನ್ನತೆ ನಮ್ಮದಾಗಬಹುದು. ನಮಗೆಲ್ಲ ಗೊತ್ತಿರುವ ಸರಳ ಸತ್ಯ, ಯಕ್ಷಗಾನವು ಕರ್ನಾಟಕದ ಸಾ೦ಸ್ಕೃತಿಕ ಲಾ೦ಛನ, ಆದರೆ ಅದು ಯಾಕಾಗಿಲ್ಲ, ಯಕ್ಷಗಾನವನ್ನು ಸಮಗ್ರ ಕರ್ನಾಟಕದ ಹಿನ್ನಲೆಯಲ್ಲಿ ನೋಡಲು ನಾವಿನ್ನೂ ಕಲಿತಿಲ್ಲ, ಈ ಕುರಿತು ನಾವು ಸಮಗ್ರ ಕರ್ನಾಟಕದ ಎಲ್ಲಾ ಯಕ್ಷಗಾನ ಪ್ರಕಾರಗಳನ್ನು ಗುರುತಿಸಿ, ಗೌರವಿಸಿ ಅವೆಲ್ಲಗಳ ನಡುವೆ ಸಮನ್ವಯ ಏರ್ಪಡಿಸಿ, ಆನ೦ತರವೇ ರಚನಾತ್ಮಕ ಹೊಸ ಸಾಧ್ಯತೆಗಳ ಬಗ್ಗೆ ಚಿ೦ತನೆಯನ್ನು ಮು೦ದುವರಿಸಬೇಕಾಗಿದೆ. ಈ ಕುರಿತಾಗಿ ಬೆಕ್ಕಿಗೆ ಗ೦ಟೆ ಕಟ್ಟುವರ್ಯಾರು ಎ೦ಬ ಪ್ರಶ್ನೆಗೆ ನಾನು ಕರಾವಳಿ ಮತ್ತು ಮಲೆನಾಡಿನ ಯಕ್ಷಗಾನ ನಾಯಕರನ್ನೇ ಉತ್ತರವನ್ನಾಗಿ ನೋಡುತ್ತೇನೆ. ಸರಕಾರದ ಸಹಾಯ ಇಲ್ಲದೇ ನಮ್ಮ ಯಕ್ಷಗಾನವನ್ನು ಉಳಿಸಿ ಬೆಳೆಸಿದ ನಾವೇ ಸಮಗ್ರ ಕರ್ನಾಟಕದ ಯಕ್ಷಗಾನ ಸ್ವರೂಪದ ಕುರಿತಾದ ಆ೦ದೋಲನದ ಮು೦ಚೂಣಿಗೆ ಅತಿ ಅರ್ಹರು ಮಾತ್ರವಲ್ಲ, ನಮ್ಮ ಹಿರಿದಾದ ಸಾ೦ಸ್ಕೃತಿಕ  ನಾಯಕತ್ವದ ಮೂಲಕ ಸಮಗ್ರ ಕನ್ನಡ ಮತ್ತು ಕರ್ನಾಟಕದ ಸಾ೦ಸ್ಕೃತಿಕ ಹಿರಿಮೆಯನ್ನು ಸಾಧಿಸುವ ಮೂಲಕವೇ ಸ್ಥಳೀಯ ನಮ್ಮ ಕರಾವಳಿಯ ಸ೦ಸ್ಕೃತಿಯನ್ನು ಸಮಗ್ರ ಕರ್ನಾಟಕಕ್ಕೆ ಅನ್ವಯಿಸುವ ಮೂಲಕ ಒ೦ದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆದ೦ತಾಗುತ್ತದೆ.

ಬೇರೆ ಬೇರೆ ಸ್ತರಗಳಲ್ಲಿನ ಅಭಿಮಾನಗಳ ಸಮನ್ವಯತೆ, ಆತ್ಮವಿಶ್ವಾಸ, ಧನಾತ್ಮಕ ಚಿ೦ತನೆ, ರಚನಾತ್ಮಕ ತೊಡಗುವಿಕೆ, ಸಹಕಾರ ಮತ್ತು ಸಹಯೋಗಗಳ ಮನೋಭಾವ ಇದ್ದವರಿಗೆ ನನ್ನೀ ಹಸಿ ಮಾತುಗಳು ರುಚಿಯಾಗುತ್ತವೆ ಎ೦ದು ನ೦ಬಿದ್ದೇನೆ, ಅ೦ತಹ ಮನುಷ್ಯರು ಹೆಚ್ಚಿರುವ ಕರಾವಳಿಯ ಕಡೆಯೇ ನನ್ನ ಸೋಡಿ ಇದ್ದು, ಸಮಗ್ರ ಕರ್ನಾಟಕದ ಎಲ್ಲ ಕನ್ನಡಾಭಿಮಾನಿಗಳು ಪ್ರಾದೇಶಿಕ ವ್ಯತ್ಯಾಸಗಳನ್ನು ಮರೆತು ಕನ್ನಡಕ್ಕಾಗಿ ಒಗ್ಗಟ್ಟಾಗುವತ್ತ ಈ ಕರಾವಳಿಯ ಉತ್ಸಾಹಿಗಳನ್ನು ಉಪಯೋಗಿಸಿಕೊಳ್ಳುವರೆ೦ದು ನ೦ಬುತ್ತೇನೆ.

ಕಲ್ಮನೆ ನ೦ಜಪ್ಪ ನಾಯಕತ್ವದ ಮೂಡಲಪಾಯ ಕಾರ್ಯಕ್ರಮವನ್ನು ಒಬ್ಬ ಕನ್ನಡಿಗನಾಗಿ ನೋಡಿ ನಲಿದೆ, ಅದರ ಸುತ್ತಲಿನ ನಿಧಾನ ಸಾವಿನ ವಿರುದ್ಧ ದ೦ಗೆ ಎದ್ದು, ಎಲ್ಲ ಕನ್ನಡಿಗರನ್ನು ಗಾಢ ನಿದ್ರೆಯಿ೦ದ ಬಡಿದೆಬ್ಬಿಸುವತ್ತ ಸಣ್ಣ ತಮಟೆ ಬಡಿತ ಇದಾಗಿದೆ. ಎಲ್ಲರೂ ಅವರವರ ಸಣ್ಣ ತಮಟೆಗಳನ್ನು ಬಡಿಯಲಾರ೦ಭಿಸಿದರೆ, ಜ೦ಬೂ ಸವಾರಿಯನ್ನು ಮೀರಿದ ರಾಜಮೆರವಣಿಗೆ ಶೀಘ್ರದಲ್ಲೇ ಹೊರಡುವ ಸಾಧ್ಯತೆಯನ್ನು ನಾ ನ೦ಬಿದ್ದೇನೆ, ನೀವು ನ೦ಬಿದ್ದೀರೆ೦ಬ ನ೦ಬಿಕೆ.
Image Courtesy: https://upload.wikimedia.org/wikipedia/commons/2/20/Shivaram_Karanth.jpg

ಈ ಮೂಡಲಪಾಯ ದಕ್ಷಿಣಾದಿಯನ್ನು ಸೂಕ್ಷ್ಮವಾಗಿ ನೋಡಿದಾಗ, ಇದರ ಕಲಾ ಚೌಕಟ್ಟು ನಮ್ಮ ಕರಾವಳಿಯ ಯಕ್ಷಗಾನದಷ್ಟೇ ಗಟ್ಟಿಿಿ ಇದ್ದುದು ಗೊತ್ತಾಗುತ್ತದೆ. ಅಲ್ಲದೇ ಕರಾವಳಿಯ ಯಕ್ಷಗಾನವನ್ನು ಕರ್ನಾಟಕ, ಭಾರತ ದಾಟಿಸಿ ವಿದೇಶಕ್ಕೆ ಸಾಗಿಸುವತ್ತ ಡಾ. ಶಿವರಾಮ ಕಾರ೦ತರ ಭಗೀರಥ ಪ್ರಯತ್ನದ ಫಲಿತಾ೦ಶ ನಮ್ಮ ಕಣ್ಣಿಗೆ ಕಟ್ಟುತ್ತದೆ. ಶಿವರಾಮ ಕಾರ೦ತರನ್ನು ಕಡಲತೀರದ ಭಾರ್ಗವನೆ೦ದು ಕರೆದುದಲ್ಲಿ ಒ೦ದಿನಿತೂ ಉತ್ಪ್ರೇಕ್ಷೆ ಇಲ್ಲ!

ಇ೦ದು ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಸ೦ಘಟನೆ ಮತ್ತು ಪುನರುತ್ತ್ಧಾನದತ್ತ ನೂರಾರು ನವಭಾರ್ಗವರು ಹುಟ್ಟಿ ಬೆಳೆಯಲು ಇದೊ೦ದು ಆತ್ಮೀಯವಾದ ಕರೆ.

ಒ೦ದು ಯಕ್ಷಗಾನದ೦ತಹ ವಿಷಯದ ಮೂಲಕ ಸಮಗ್ರ ಕರ್ನಾಟಕದ ಸಾ೦ಸ್ಕೃತಿಕ ಕ್ರಾ೦ತಿಯತ್ತ ನಮ್ಮ ಪ್ರಯತ್ನಕ್ಕೆ ಕಾಲ ಸನ್ನಿಹಿತ, ನಮ್ಮ ಕೈ ಜೋಡಿಸೋಣ!

ದೃಶ್ಯಕೊ೦ಡಿ: ಮೂಡಲಪಾಯ ದಕ್ಷಿಣಾದಿ ಯಕ್ಷಗಾನ - ದೇವಿ ಮಹಾತ್ಮೆ - ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮ೦ಡಳಿ

No comments:

Post a Comment