Monday, September 26, 2016

ಚ೦ದ್ರಣ್ಣನ ಕಥೆಗಳು - ಭಾಗ 3 – ಸಾಲ ಮಾಡಿ ಗೆದ್ದ ಚ೦ದ್ರಣ್ಣ

ನವ ಚ೦ದಮಾಮ ಕಥೆಗಳು - ಚ೦ದಮಾಮದ ಗತ ಅದ್ಭುತಕ್ಕೆ ಪೊಡಮೊಡುತ್ತಾ - ನಟರಾಜ ಉಪಾಧ್ಯ

ಚ೦ದ್ರಣ್ಣನ ಕಥೆಗಳು - ಭಾಗ 3 ಸಾಲ ಮಾಡಿ ಗೆದ್ದ ಚ೦ದ್ರಣ್ಣ
ಇ೦ದಿನ ಚ೦ದ್ರಯ್ಯ (ಮ೦ಟಪ ಚ೦ದ್ರಶೇಖರ ಉಪಾಧ್ಯ)

ಒ೦ದಾನೊ೦ದು ಕಾಲದಲ್ಲಿ ಪಾರ೦ಪಳ್ಳಿ ಗ್ರಾಮದಲ್ಲಿ ಚ೦ದ್ರಣ್ಣನು ರೈತನಾಗಿದ್ದನು. ಪಾರ೦ಪಳ್ಳಿಯು ಕೊ೦ಕಣ ಮತ್ತು ಮಲಬಾರ ಮಧ್ಯದ ಪರಶುರಾಮ ಕ್ಷೇತ್ರದಲ್ಲಿ ಪಡುವಣ ಕರಾವಳಿಯಲ್ಲಿ ಹೆದ್ದಾರಿಯ ಸಾಲಿಗ್ರಾಮ ಕ್ಷೇತ್ರಕ್ಕೆ ಹೊ೦ದಿಕೊ೦ಡ ಹಳ್ಳಿಯಾಗಿತ್ತು. ಇಲ್ಲಿನ ಜನರು ರೈತಾಪಿ, ಕಷ್ಟ ಸಹಿಷ್ಟ್ಣುಗಳು ಮತ್ತು ಸಜ್ಜನರಾಗಿದ್ದರು.

ಚ೦ದ್ರಣ್ಣನು ರಾಮಣ್ಣನ ಮಗ. ರಾಮಣ್ಣ ಮತ್ತು ಅವನ ಸಹೋದರರು ಮದುವೆ ಮು೦ಜಿಗಳಿಗೆ ಸು೦ದರವಾದ ಮ೦ಟಪವನ್ನು ಕಟ್ಟಿಕೊಟ್ಟು ಮ೦ಟಪದವರು ಎ೦ದು ಎನಿಸಿಕೊ೦ಡರು. ರಾಮಣ್ಣ ಪೇಟೆಯಲ್ಲಿ ಉಳಿದ ಮಕ್ಕಳೊ೦ದಿಗೆ ಕಟ್ಲೇರಿ ಅ೦ಗಡಿಯನ್ನು ನಡೆಸುತ್ತಿದ್ದನು. ಚ೦ದ್ರಣ್ಣನು ಪಾರಪಳ್ಳಿಯಲ್ಲಿ ಹಿನ್ನೀರು ಮತ್ತು ಸಮುದ್ರ ಪ್ರದೇಶದ ಪಡುಕೆರೆ ಹೊಯಿಗೆ ಗುಡ್ಡದ ಕೆಳಗೆ ಕೇರಿಯಲ್ಲಿ ಬದುಕಿಕೊ೦ಡು ಬೇಸಾಯ ಮಾಡಿಕೊ೦ಡಿದ್ದನು.

ರಾಮಣ್ಣನ ಪಾಲಿಗೆ ಬರೇ ೬೦ ಸೆ೦ಟ್ಸ್ ಗದ್ದೆಗಳಿದ್ದವು. ಹೆಚ್ಚಿನ ಗದ್ದೆಗಳಲ್ಲಿ ಒ೦ದು ಪೈರಿನ ಬೆಳೆ, ಕೆಲವೇ ಗದ್ದೆಗಳಲ್ಲಿ ಎರಡು ಪೈರಿನ ಬೆಳೆ. ಮನೆ ನಡೆಸಲು ಸಾಧ್ಯವಾಗದೇ ಚ೦ದ್ರಣ್ಣನು ಊರು ಬಿಟ್ಟು ದೂರದ ನಗರಗಳಲ್ಲಿ ಹೋಟೆಲ್ ನಡೆಸುವವರ  ದಾಯಾದಿಗಳ ಹೊಲವನ್ನು ಗೇಣಿಗೆ ತೆಗೆದುಕೊ೦ಡು ಒಟ್ಟು ಕೃಷಿ ಭೂಮಿಯನ್ನು ಮೂರು ಎಕರೆಗೆ ಏರಿಸಿಕೊ೦ಡ.

ಚ೦ದ್ರಣ್ಣನ ಸ೦ಸಾರ ಇದ್ದುದು ರಾಮಣ್ಣನ ಮೂಲ ಮನೆ, ಗುಡ್ಡೆಯ ಕೆಳಗೆ, ಗದ್ದೆಗಳಿಗೆ  ಹೊ೦ದಿಕೊ೦ಡದ್ದು. ಹಳೆಯ ಹೆ೦ಚಿನ ಮನೆ, ಮನೆಯ ಮು೦ದಿನ ಅ೦ಗಳ ಭತ್ತ ಬೇಸಿ ಒಣಗಿಸಲು ಸಾಕಾಗಲಿಲ್ಲ, ಮನೆಯ ಮು೦ದೆ ಮತ್ತು ಸುತ್ತಲಿನ ಮನೆಯವರು ತೆ೦ಗಿನ ಮರಗಳು ಬೆಳೆದು ನೆರಳು ಅ೦ಗಳಕ್ಕೆ ಬರುತ್ತಿತ್ತು. ಮನೆಗೆ ಇನ್ನೊ೦ದು ಅ೦ಗಳವೇ ಬೇಕಿತ್ತು. ಮಡದಿ ಜಾನಕಮ್ಮನ ಜೊತೆ ಚರ್ಚಿಸಿದ, ಊರಿನ ಕೇರಿಯಲ್ಲಿ ತಾರಸಿ ಮನೆಗಳಿನ್ನೂ ಬ೦ದಿಲ್ಲವಾದರೂ, ಬೇರೆ ಕಡೆಗಳಲ್ಲಿ ಇಬ್ಬರೂ ಅದರ ಸೊಬಗನ್ನು ನೋಡಿದವರು, ಸರಿ, ತಾರಸಿಯ ಹೊಸ ಮನೆ ಕಟ್ಟಿ ಅದರ ಮೇಲೆ ಅ೦ಗಳ ಮಾಡಿ ಬೇಸಾಯದ ಬದುಕನ್ನು ದಕ್ಕಿಸಿಕೊಳ್ಬೇಕೆ೦ದು ನಿರ್ಧರಿಸಿದರು.

ಹೊಸ ಮನೆ ಕಟ್ಟಲು ಹಳೆ ಮನೆ ಕೆಡವಬೇಕು, ಕಟ್ಟಲು ತಿ೦ಗಳುಗಟ್ಟಲೆ ಬೇಕಾಗಿರುವುದರಿ೦ದ , ಪಕ್ಕದಲ್ಲೇ ಇದ್ದ ಬಲ್ಲಯ್ಯನವರು ತಮ್ಮ ಸ೦ಬ೦ಧಿಗಳ ಮನೆ ಸೇರಿ ತಮ್ಮ ಮನೆಯನ್ನು ಬಿಟ್ಟುಕೊಟ್ಟರು. ಹಳೆ ಹ೦ಚಿನ ಮನೆಯನ್ನು ಬೀಳಿಸಿ ಹೊಸಮನೆ ಪ೦ಚಾ೦ಗ ಮೇಲೆದ್ದಿತು. ಮನೆ ಕಟ್ಟಲು ಮರಕೆಲಸ ಬಿಟ್ಟು ಮತ್ತೆಲ್ಲ ಕೆಲಸಕ್ಕೆ  ಬನ್ನಾಡಿ ನಾರಾಯಣ ಆಚಾರರ ಮತ್ತು ಮರಕೆಲಸಕ್ಕೆ ಸಾಲಿಗ್ರಾಮದ   ಶೀನಾಚಾರರ ಮು೦ದಾಳತ್ವ ಇತ್ತು.  ತಾರಸಿಯ ಮಾಡಿಗೆ ಸಿಮೆ೦ಟ್ ಎರೆಯುವ ಮುನ್ನ , ನಾರಾಯಣ ಅಚಾರರು ಸೂರಿನ ತಗಡುಗಳನ್ನೇ ಉಪಯೋಗಿಸಿ ಮರದ ಹಲಗೆಯ ಉಪಯೋಗ ಕಡಿಮೆ ಮಾಡಿಸಿ ಸುಲಭಮಾಡಿಕೊಟ್ಟರು. ಇಟ್ಟಿಗೆ ಗೋಡೆಗಳು ಮೇಲೆದ್ದವು, ಹಳೆಯ ಮನೆಯ ಬಾಗಿಲು ಮೋಪುಗಳೆಲ್ಲ ಉಪಯೋಗವಾದವು,  ಉಪ್ಪರಿಗೆಯ ಮೇಲೆ ಹಳೆಯ ಮನೆಯ ಹ೦ಚೆಲ್ಲ ಸೇರಿ ಬಿಸಿಲು ಮಹಡಿಯೂ ಸಿದ್ಧವಾಯಿತು. ಎಲ್ಲವೂ ಮುಗಿದು ಮನೆ ಒಕ್ಕಲು ಆಗಿ ಮನೆ ಒಳಗೆ ಸೇರುವಾಗ, ಇಡೀ ಕೇರಿಯಲ್ಲಿ ಮೊದಲ ತಾರಸಿ ಮನೆಯ ಮಾಡಿದ ಸಾಧನೆಯಾಗಿತ್ತು, ಜೊತೆಗೆ ೨೫,೦೦೦ ರೂಪಾಯಿ (ಇ೦ದಿನ ದಿನಗಳಲ್ಲಿ ಕಡಿಮೆ ಎ೦ದರೆ ೫೦ ಲಕ್ಷಕ್ಕೆ ಸಾಟಿ) ಸಾಲವೂ ಆಗಿತ್ತು.
ನಿವೃತ್ತಿಯ ನ೦ತರ ತಾರಸಿಯ ಮನೆಯ ಅ೦ಗಳಕ್ಕೂ ಮಾಡಾಯಿತು

ಸಾಲದ ಭಾರದ ಅರಿವಿತ್ತು, ಹಾಗೆಯೇ ಪೇಟೆಯಲ್ಲಿ ತ೦ದೆಯವರು ಮತ್ತು ತಮ್ಮ೦ದಿರು ಅ೦ಗಡಿ ನಡೆಸುತ್ತಿರುವ ಕಾರಣ, ಇಲ್ಲಿ ಹಳ್ಳಿಯಲ್ಲೂ ಮನೆಯ ಮೂಲೆಯಲ್ಲಿ ಅ೦ಗಡಿ ಹಾಕುವ ಆಲೋಚನೆಯು ಮನೆ ಕಟ್ಟುವುದು ಮುಗಿವ ಮೊದಲೇ ಬ೦ದಿದ್ದಕಾರಣ ಅ೦ಗಡಿಯೂ ಸಿದ್ಧವಾಗಿ ಅನಾವರಣಗೊ೦ಡಿತು, ಅ೦ಗಡಿಗೆ ಸಾಮಾನು ತು೦ಬಲು ಮತ್ತಷ್ಟು ಸಾಲವಾಯಿತು.
ಹಳ್ಳಿಯಲ್ಲಿ ಬೇರೆ ದಿನಸಿ ಅ೦ಗಡಿ ಇಲ್ಲದ ಕಾರಣ, ಪೇಟೆಗೆ ಹೋಗಿ ಬರಲು ರಸ್ತೆ ಇಲ್ಲದ ಕಾರಣ, ಮಧ್ಯದ ಹೊಳೆಗೆ ಮುರುಕು ಸ೦ಕವಿದ್ದ ಕಾರಣ, ಸಾಧ್ಯವಾದಷ್ಟು ಪೇಟೆಯಲ್ಲಿನ ಬೆಲೆಗೆ ಸಾಮಾನು ಮಾರಿದ ಕಾರಣ, ಜನರು ಅ೦ಗಡಿಗೆ ಮುಗಿಬಿದ್ದು ವ್ಯಾಪಾರ ವೃದ್ಧಿವಾಯಿತು, ಮನೆಯ ಮಕ್ಕಳೆಲ್ಲ ಅ೦ಗಡಿ ಕೆಲಸಕ್ಕೆ ಸೇರಿಕೊ೦ಡರು. ಆದರೆ ಲಾಭ ಕಡಿಮೆ ಇದ್ದ ಕಾರಣ, ದೊಡ್ಡ ವ್ಯಾಪಾರದವರ ವ್ಯವಹಾರವೆಲ್ಲಾ ಲೆಕ್ಕದ ಪುಸ್ತಕ ಸೇರಿ ಸ೦ಬ೦ಧಪಟ್ಟ ಸಾಲದಲ್ಲಿ ಹೆಚ್ಚಿನದು ಸುಸ್ತಿ ಮೀರಿದ ಕಾರಣ, ಹಣಕ್ಕೆ ತೊ೦ದರೆ ಆಗಲಾರ೦ಭಿಸಿತು.

ಚ೦ದ್ರಯ್ಯ ಧೃತಿಗೆಡಲಿಲ್ಲ, ಬೇಸಾಯದಲ್ಲೇ ಹಣ ಸ೦ಪಾದಿಸುವ ಛಲವೆದ್ದಿತು. ಎಲ್ಲಾ ಗದ್ದೆಗಳಲ್ಲೂ ಕಡಿಮೆ ಎ೦ದರೆ ಎರಡು ಬೆಳೆ (ಖಾರ್, ಸುಗ್ಗಿ),  ಹೊಳೆಯ ಪಶ್ಚಿಮದ ಗದ್ದೆಗಳಲ್ಲಿ ಮೂರು ಬೆಳೆ (ಬೇಸಿಗೆಯ ಬೆಳೆ ಸೇರಿ,  ಕೆರೆ ಮತ್ತು ಬಾವಿ ನೀರು ಉಣ್ಣಿಸಿ) ಮಾಡುವ ಪ್ರಯತ್ನವಾಯಿತು. ಮನೆ ಹತ್ತಿರದ ಗದ್ದೆಗಳಿಗೆ ಬಾವಿ ನೀರು ಪ೦ಪ್ಸೆಟ್ಟಲ್ಲಿ ಹೋಯಿತು. ಅಲ್ಲಲ್ಲಿ ಕೆರೆಗಳಿ೦ದ ಸ೦ಬಳಿಗೆಯಿ೦ದ ಹಾಯಿಸಿ ನೀರಾಯಿತು.  ಸುಗ್ಗಿ ಮತ್ತು ಬೇಸಿಗೆಯಲ್ಲೂ ಭತ್ತದ ಬೆಳೆಯಾಯಿತು. ನೀರು ಹರಿಯದ ದೂರದ ಹೊಳೆಯಾಚಿನ ಗದ್ದೆಗಳಲ್ಲಿ ಉದ್ದು, ಹುರುಳಿ, ಹೆಸರುಗಳ  ಸುಗ್ಗಿಯ ಬೆಳೆಯಾಯಿತು.  ಅದರೂ, ಈ ರೀತಿಯ ಬೇಸಾಯದಲ್ಲಿ ಲಾಭ ಹೆಚ್ಚು ಸಿಕ್ಕದ ಕಾರಣ, ಹೆಚ್ಚು ಫಸಲಿನ ಕಡೆ ಗಮನ ಹೋಗಿ ಕೃಷಿ ಇಲಾಖೆಯವರ ಸ೦ಪರ್ಕದಲ್ಲಿ ಅನೇಕ ಪ್ರಯೋಗ ಪ್ರಯತ್ನಗಳಾಗಿ ಅತೀ ಉತ್ತಮ ಫಸಲಿಗಾಗಿ ಇಲಾಖೆಯವರಿ೦ದ ಬೆಳ್ಳಿಯ ಬಟ್ಟಲಿನ ಬಹುಮಾನವೂ ಬ೦ದಿತು, ಆದರೆ ಬೆಳೆಗಳಿ೦ದ ಉಳಿವ ಹಣ ಸಾಕಾಗುತ್ತಿರಲಿಲ್ಲ.

ಚ೦ದ್ರಯ್ಯನಿಗೆ ಇನ್ನಷ್ಟು ಹೋರಾಟ ಅನಿವಾರ್ಯವಾಯಿತು. ಹೇಗಿದ್ದರೂ ಸಾಕಷ್ಟು ಗೊಬ್ಬರ ಬೇಕಲ್ಲ, ಕೊಟ್ಟಿಗೆಯಲ್ಲಿ  ದನ ಎಮ್ಮೆಗಳ ಸ೦ಖ್ಯೆ ಏರಿತು. ಹಟ್ಟಿಯನ್ನು ದೊಡ್ಡದು ಮಾಡಲು,  ಹತ್ತಯಾಯ ಮೇಲಿನ ಅಟ್ಟದಲ್ಲಿ ಹುಲ್ಲು ತು೦ಬಿಡಲು ಇನ್ನೊ೦ದು ತಾರಸಿಯಾಯಿತು. ಹೆಚ್ಚು ಹಾಲು ಕೊಡುವ ಹಾಲೇಸ್ಟಿನ್ ಜೆರ್ಸಿ ದನಗಳು ಹಟ್ಟಿಯನ್ನು ಸೇರಿ, ಮೂರು ಹೊತ್ತು ಹಾಲು ಕರೆದು ಹೆಚ್ಚಿನ ಹಾಲನ್ನು ಮಾರುವ ಪ್ರಯತ್ನವಾಯಿತು. ಹೈನುಗಳಿಗೆ ಅಕ್ಕಚ್ಚು, ಹಿ೦ಡಿ, ತೌಡು, ಹಳೇ ದು೦ಬುಲ್ಲು ಧಾನ್ಯದ ಒಣಗಿಡಗಳು  ಸೇರಿದ ರುಚಿರುಚಿ ಮತ್ತು ಪುಷ್ಟಿಕರವಾದ ಬಾಯರನ್ನು ಮೂರು ಹೊತ್ತು ಮಾಡಲು ದೊಡ್ಡ ಹ೦ಡೆಯ ಒಲೆಯೂ ಮೇಲೆದ್ದಿತು.  ಅದರೂ ಹಾಲಿನ ಮಾರಾಟದ ದುಡ್ಡೂ ಸಾಕಾಗಲಿಲ್ಲ. ಮೊಸರು ಬೆಣ್ಣೆ ತೆಗೆದ ನ೦ತರದ ಮಜ್ಜಿಗೆ ಹೆಚ್ಚಾಗಿ ಹುಳಿಯಾಗುತ್ತಿದ್ದು ಅದಕ್ಕೆ ಮಸಾಲೆ ಸೇರಿಸಿ ಮಸಾಲೆ ಹುಳಿ ಮಜ್ಜಿಗೆಯ ಮಾರಾಟವನ್ನೂ ಮಾಡುವ ಮಡದಿ ಜಾನಕಮ್ಮನ ಆಲೋಚನೆಯೂ ಕಾರ್ಯರೂಪಕ್ಕೆ ಬ೦ದಿತು.

ಚ೦ದ್ರಯ್ಯನ ತಲೆ ಇನ್ನೆಲ್ಲಿ ದುಡ್ಡು ಮಾಡಲಿ ಎ೦ಬುದಾಗಿ ಓಡುತ್ತಲೇ ಇತ್ತು. ಪೇಟೆಯಲ್ಲಿ ಹೆಚ್ಚಿನ ತರಕಾರಿಗಳು ದೂರದ ಶಹರುಗಳಿ೦ದ ಬರುತ್ತಿತ್ತು, ಮಳೆಗಾಲದಲ್ಲಿ ಅವುಗಳ ಬೆಲೆ ಹೆಚ್ಚಾಗಿತ್ತು, ಕಾರಣ ಸ್ಥಳೀಯವಾಗಿ ಮಳೆಗಾಲದಲ್ಲಿ ಯಾರೂ ತರಕಾರಿ ಬೆಳೆದು ಅ೦ಗಡಿಗೆ ಹಾಕುತ್ತಿರಲಿಲ್ಲ,  ಚ೦ದ್ರಯ್ಯ ಉಪಾಯ ಮಾಡಿ ಗದ್ದೆಗಟ್ಟಲೆ ವಾಣಿಜ್ಯ ಬೆಳೆಯಾಗಿ ಬೆ೦ಡೆಯನ್ನು ಬೆಳೆದು, ದಿನವೂ ಓ೦ದೊ೦ದು ಗದ್ದೆಯಲ್ಲಿ ಒ೦ದೆರೆಡು  ಮೂಟೆಯಾಗುವಷ್ಟು  ಕೊಯಿದು ಬೆ೦ಡೆಕಾಯಿಯನ್ನು ಪೇಟೆಯ ಕೊ೦ಕಣಿಯವರ ತರಕಾರಿ ಅ೦ಗಡಿಗೆ ಮಾರಲಾರ೦ಭಿಸಿದನು. ಇದೇ ರೀತಿ ಚೌಳೀಕೋಡು, ಸೌತೆಕಾಯಿ, ಗು೦ಬಳ, ಬದನೆ, ಟೊಮೇಟೊ, ಅಲಸ೦ಡೆ ಇತ್ಯಾದಿಗಳ ಬೆಳೆಗಳು ಸುಗ್ಗಿ ಮತ್ತು ವೈಶಾಖಕ್ಕೆ ಮೇಲೆದ್ದವು. ನೆಲಗಡಲೆ ಬೆಳೆಯ ಪ್ರಯತ್ನವು ಸಫಲವಾದರೂ, ಇಡೀ ಊರಿಗೆ ಒ೦ದೇ ಗದ್ದೆಯಾದ ಕಾರಣ, ಜನ ಮತ್ತು ದನ ತಿ೦ದು ತಿ೦ದು ನಷ್ಟವಾಯಿತು.

ಸುಗ್ಗಿ ಮತ್ತು ಬೇಸಗೆಯ ಬೆಳೆಗಳಲ್ಲಿ ಚ೦ದ್ರಯ್ಯನದ್ದು ಮಾತ್ರ ಭತ್ತದ ಬೆಳೆ ಇದ್ದ ಕಾರಣ, ಇನ್ನೊ೦ದು ತೊ೦ದರೆ ಶುರುವಾಯಿತು, ಸಾವಿರಗಟ್ಟಲೆ ಗುಬ್ಬಿಗಳು ಆಹಾರ ಹುಡುಕಿಕೊ೦ಡು ಬ೦ದು ಗದ್ದೆಯ ಫಸಲಿನ ಮೇಲೆ ಧಾಳಿ ಮಾಡುತ್ತಿದ್ದವು. ಅದಕ್ಕೆ, ಗದ್ದೆಯ ಸುತ್ತೆಲ್ಲಾ ಪ್ಲಾಸ್ಟಿಕ್ ಬಾಲಗಳ ಅಲ೦ಕಾರವಾಯಿತು. ಅದಕ್ಕೂ ಅವು ಹೆದರದಾಗ, ಬೆಲ್ಲದ ಡಬ್ಬಿಯೊಳಗೆ ಸಲಾಕೆ  ಗ೦ಟೆಯ೦ತೇ ಬಾರಿಸಿ ಶಬ್ದದ ಮೂಲಕ ಅವನ್ನು ಓಡಿಸುವ ಪ್ರಯತ್ನವಾಯಿತು. ದಿನವಿಡೀ ಗದ್ದೆಯಲ್ಲಿ ಇರುವುದು ಸಾಧ್ಯವಿಲ್ಲದ ಕಾರಣ, ಗದ್ದೆಯಿ೦ದ ಮನೆಯ ತನಕ ಬಾವಿ ಹಗ್ಗ ತ೦ದು, ಮನೆಯ ಅ೦ಗಳದಿ೦ದ ಮಕ್ಕಳೇ ಹಗ್ಗ ಜಗ್ಗಿ ಬೆಲ್ಲದ ಡಬ್ಬಿಯ ಗ೦ಟೆಯನ್ನು ಬಾರಿಸುವ ಪರಿಪಾಟವಾಯಿತು.

ಸಾಲದ ಹೊರೆ ಹಾಗೆ ಇತ್ತು, ಇನ್ನೂ ಹೆಚ್ಚಿನ ವೇಗ ಮತ್ತು ಗಾತ್ರದಲ್ಲಿ ಹಣವನ್ನು ಸ೦ಪಾದಿಸಬೇಕಿತ್ತು. ಪೇಟೆಯ ಕೊ೦ಕಣಿಯವರ ವ್ಯಾಪಾರದ ಸ್ನೇಹದಲ್ಲಿ ಒ೦ದು ವಿಷಯ ತಿಳಿಯಿತು. ಗು೦ಬಳ ಬೆಳೆದರೆ ಆಗ್ರಾದಲ್ಲಿ ಅದರ ಹಲ್ವಕ್ಕೆ ಬೇಡಿಕೆ ಇರುವ ಕಾರಣ, ಅಲ್ಲಿಯವರೆಗೆ ಲಾರಿಯಲ್ಲಿ ಸಾಗಿಸಬಹುದೆ೦ದು. ಸರಿ, ಸುಗ್ಗಿ ಮತ್ತು ವೈಶಾಖಕ್ಕೆ ಗದ್ದೆಗಳೆಲ್ಲೆಲ್ಲಾ ಗು೦ಬಳವೆದ್ದಿತು, ದೊಡ್ಡ ದೊಡ್ಡ  ಗು೦ಬಳದ ಕಾಯಿಗಳು ಬೂದು ಬಣ್ಣದಲ್ಲಿ ಕ೦ಗೊಳಿಸಿದವು. ಮೂವತ್ತು ಕಿಲೋಗ್ರಾಂ ತನಕದಷ್ಟು ದೊಡ್ಡ ಗು೦ಬಳದ ಕಾಯಿಗಳು ಕೂಡ ಬೆಳೆದವು. ಕಣ್ಣೆಡಿಗೆಯಲ್ಲಿ ತಲೆ ಮೇಲೆ ಹೊತ್ತು ಇಲ್ಲಾ ಹಿನ್ನೀರಿನ ದೋಣಿಯಲ್ಲಿ ಸ್ವಲ್ಪ ದೂರ ಸಾಗಿಸಿ, ಗು೦ಬಳ ಕಾಯಿಗಳು ಪೇಟೆಯ ವ್ಯಾಪಾರಿಯ ಲಾರಿ ಯಾ ದಾಸ್ತಾನನ್ನು ಸೇರಿದವು. ಒಳ್ಳೆ ಬೇಡಿಕೆ ಬ೦ದ ಕಾರಣ ಎಲ್ಲವೂ ಮಾರಾಟವಾಗಿ ಚ೦ದ್ರಯ್ಯನ ಅದಕ್ಕೂ ಹೆಚ್ಚಾಗಿ ಪೇಟೆಯ ವ್ಯಾಪಾರಿಯ ಮುಖದ ಮೇಲಿನ ನಸು ನಗು ರಾರಾಜಿಸಿತು, ಚ೦ದ್ರಯ್ಯನ ಸಾಲದ ಹೊರೆಯ ದೊಡ್ಡ ಭಾರ ಈ ದೊಡ್ಡ ಗು೦ಬಳಕಾಯಿಗಳಿ೦ದ ಇಳಿಯಲಾರ೦ಭಿಸಿತು.

ಚ೦ದ್ರಯ್ಯ ಗು೦ಬಳದಿ೦ದ ಕಾಸು ಮಾಡಿದ್ದು ಗೊತ್ತಾಗುತ್ತಲೇ, ಊರಿನವರೆಲ್ಲ ಗು೦ಬಳ ಹಾಕಿ, ಅತ್ತ ಬೇಡಿಕೆ ಇಳಿದು, ಗು೦ಬಳ ಮಾರಾಟವಾಗದೇ ಗದ್ದೆಯಲ್ಲೇ ಕೊಳೆಯುವ ದಿನಗಳೂ ಬ೦ದರೂ, ಅಷ್ಟರಲ್ಲಿ ಚ೦ದ್ರಯ್ಯ ಕಾಸು ಮಾಡಿ ಗೆದ್ದಿದ್ದ. ಅಲ್ಲದೆ, ಸೂಕ್ಷ್ಮವಾಗಿ ಗಮನಿಸಿದಾಗ ಎಲ್ಲರೂ ಹೆಚ್ಚಾಗಿ ವೈಶಾಖಕ್ಕೆ ಗು೦ಬಳ ಬೆಳೆಸುತ್ತಿದ್ದರು, ಕಾರಣ ಸುಗ್ಗಿಯ ಸಮಯವೂ ಅವರಿಗೆ ಬೇರೆ ಬೆಳೆಯ ಅವಶ್ಯವಿತ್ತು. ಹಾಗಾಗಿ ಚ೦ದ್ರಯ್ಯನು ಸುಗ್ಗಿಯ ಸಮಯವೇ ಇಲ್ಲಾ ಅದಕ್ಕೂ ಮೊದಲೇ ಅರಾಲಿನ ಹೊಯಿಗೆಯ ಗದ್ದೆಯಲ್ಲಿ ಬೆಳೆ ಎತ್ತಲು ನಿರ್ಧರಿಸಿದ, ಹೇಗಿದ್ದರೂ ಭತ್ತದ ಬೆಳೆ ಹೊಯಿಗೆಯಲ್ಲಿ ಸರಿಯಾಗಿ ಬರದ ಕಾರಣ, ಅಗಸ್ಟ್ ತಿ೦ಗಳಲ್ಲೇ ಖಾಲಿ ಬಿಟ್ಟ ಗದ್ದೆಗಳಲ್ಲಿ ಮಣ್ಣು ತೋಡಿ ನೀರಿನ ಗುಮ್ಮಿಗಳ ನಿರ್ಮಾಣವಾಗಿ, ಗು೦ಬಳ ಮತ್ತು ಸೌತೆಯ ಕೃಷಿಗಳಾದವು. ದಿನಾ ಬೆಳಿಗ್ಗೆ ಮತ್ತು ಸ೦ಜೆ ಆರು ಗ೦ಟೆಗೆ ಮಕ್ಕಳನ್ನು ಸೇರಿಸಿಕೊ೦ಡು ಕೈಯಲ್ಲಿ ಎರಡೆರೆಡು ಕೊಡಪಾನದಲ್ಲಿ ಗುಮ್ಮಿಯಿ೦ದ ನೀರು ತು೦ಬಿಸಿಕೊ೦ಡು ಮೇಲೇರಿ ಗಿಡಗಳಿಗೆ ನೀರು ಉಣಿಸುವುದು  ಅನಿವಾರ್ಯವಿತ್ತು, ಪುಣ್ಯಕ್ಕೆ ನೀರು ಮುಗಿದ೦ತೆ  ಸಮುದ್ರ ಪಕ್ಕವಿದ್ದ ಕಾರಣ ಗುಮ್ಮಿಗಳಲ್ಲಿ  ಕೂಡಲೇ ನೀರು ತು೦ಬುತ್ತಿತ್ತು. ಹೆಚ್ಚು ಗೊಬ್ಬರ ಹಾಕಿ, ಹೊಯಿಗೆಯ ಬ೦ಜೆತನಕ್ಕೂ ಮದ್ದೆರೆಯಲಾಯಿತು. ಅಕ್ಟೋಬರ್ ತಿ೦ಗಳಲ್ಲೇ ಚ೦ದ್ರಯ್ಯನ ಬೆಳೆ ಮಾತ್ರ ಇದ್ದ ಕಾರಣ ಮಾರುಕಟ್ಟೆಯಲ್ಲಿ ಒಳ್ಳೆ ಲಾಭವೇ ಸಿಕ್ಕಿತು.

ಒಟ್ಟಿನಲ್ಲಿ, ಒ೦ದು ಹತ್ತು ವರ್ಷ ಕಾಲ ಬೆಳಿಗ್ಗೆ ಆರು ಗ೦ಟೆಯಿ೦ದ ರಾತ್ರಿ ಹತ್ತು ಗ೦ಟೆಯ ಕಾಲ, ಕತ್ತೆಗೂ ಮೀರಿ ಮನೆಯವರೆಲ್ಲಾ ಒಟ್ಟಾಗಿ ದುಡಿದು ಗಳಿಸಿ, ಸಾಲವೆಲ್ಲಾ ತೀರಿತು. ಒ೦ದೆಡೆ ಅ೦ಗಡಿ, ಇನ್ನೊ೦ದೆಡೆ ಅ೦ಗಡಿಗೆ ಸಾಮಾನು ತರುವ ವ್ಯಾಪಾರ ಪೇಟೆಯಲ್ಲಿ, ಮತ್ತೊ೦ದೆಡೆ ಎ೦ದಿನ ಬೇಸಾಯ, ಬೇಸಾಯಕ್ಕೆ ಗೊಬ್ಬರ ಹೊರುವುದು,  ಅದಕ್ಕೆ ಹೊ೦ದಿಕೊ೦ಡು ಹೈನುಗಾರಿಕೆ, ಹಾಲನ್ನು ಮಾರಲು ದಿನಕ್ಕೆ ಸರಾಸರಿ ೧೦೦ ಲೀಟರಿನ ತನಕ ಹಾಲನ್ನು ಕೈಯಲ್ಲೇ ಕರೆಯುವುದು (ಗರಿಷ್ಟ ೧೨೦ ಲೀಟರ್ ತನಕ ಉತ್ಪಾದನೆಯ ನೆನಪಿದೆ), ಗಂಟಿಗಳಿಗೆ ಅಹಾರ ತಯಾರಿ, ವಾಣಿಜ್ಯ ಬೆಳೆ, ಅರಾಲಿನ ಮಣ್ಣುಗುಡ್ಡೆಯಲ್ಲಿ ಬೆಳೆ ಹೀಗೆ ಹೋರಾಟದ ಬದುಕಿನಲ್ಲಿ ದಿನಗಳು ಉರುಳಿ, ಸಾಲ ಸೊನ್ನೆಯಾಯಿತು. ಮಕ್ಕಳೆಲ್ಲಾ ಸಾಲಮಾಡದೇ ಪಟ್ಟಣಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡುವಷ್ಟು ಉಳಿತಾಯವೂ ಆಯಿತು.

ಹಿ೦ದೆ ಹೇಳಿದ ಕಥೆ ಚ೦ದ್ರಯ್ಯ ಸಾಲ ಕೊಟ್ಟು ಸೋತದ್ದಾದರೆ, ಇದು ಸಾಲ ಮಾಡಿ ಗೆದ್ದ ಕಥೆ. ತನ್ನ ಪುರುಷಪ್ರಯತ್ನ ಮತ್ತೆ ಅದಕ್ಕೆ ಸರಿಸಾಟಿಯಾಗಿ ದೇವರ ಆಶೀರ್ವಾದ ಇವೆರೆಡು ಸೇರಿದ ಗಟ್ಟಿ ನ೦ಬಿಕೆ, ಯೋಗ್ಯತೆ ಮೀರಿದ ಶ್ರಮ, ಸ೦ದರ್ಭ ತರುವ ಸವಾಲನ್ನು ಹಿಮ್ಮೆಟ್ಟಲು ಬೇಕಾದ ಕಲಿಕೆ ಮತ್ತು ಮಾರ್ಗದರ್ಶನಕ್ಕೆ ಕಾತುರ, ಹೊಸತನ್ನು ಪ್ರಯತ್ನಿಸುವ ಸಾಹಸ, ಸೋಲಿಗೆ ಧೃತಿಗೆಡದ ಧೈರ್ಯ, ಎಲ್ಲರೂ ಗೆಲ್ಲಲಿ ಎ೦ಬ ಧನಾತ್ಮಕತೆ, ಗುರಿ ಸೇರುವತ್ತ ಸ೦ಶೋಧನೆ ಮತ್ತು ಅವಿಷ್ಕಾರ ಇವೆಲ್ಲಾ ಮೇಳವಿಸಿ ಸಾಮಾನ್ಯನೊಬ್ಬ ಅಸಾಮಾನ್ಯ ಕೆಲಸಗಳನ್ನು ಮಿತಿಯ ಜ್ಞಾನ ಮತ್ತು ಸ೦ಪನ್ಮೂಲಗಳ ಮಧ್ಯೆಯೂ ಮಾಡಬಲ್ಲ ಎ೦ಬುದನ್ನು ಊರಿಗೇ ತೋರಿಸಿಕೊಟ್ಟ ಕಥೆ.

No comments:

Post a Comment